ಕೊಡಗಿಗೆ ಹರಿದು ಬರುತ್ತಿದೆ ಪರಿಹಾರದ ಮಹಾಪೂರ...
ಮಡಿಕೇರಿ, ಆಗಸ್ಟ್ 22: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ನಿರಾಶ್ರಿತರಾಗಿರುವವರಿಗೆ ಪ್ರಾರಂಭಿಸಲಾಗಿರುವ ಪರಿಹಾರ ಕೇಂದ್ರಗಳಿಗೆ ರಾಜ್ಯದ ಎಲ್ಲ ದಿಕ್ಕುಗಳಿಂದಲೂ ಪರಿಹಾರ ಸಾಮಗ್ರಿಗಳ ನೆರವಿನ ಮಹಾಪೂರವೇ ಹರಿದು ಬರುತ್ತಿದೆ.
ಪರಿಹಾರ ಕೇಂದ್ರಗಳಲ್ಲಿ ಊಟೋಪಹಾರದ ವ್ಯವಸ್ಥೆ, ವಾಸ್ತವ್ಯದ ವ್ಯವಸ್ಥೆ ಹಾಗೂ ಪರಿಹಾರ ಸಾಮಗ್ರಿಗಳ ಪೂರೈಕೆ ಮಾಡಲಾಗುತ್ತಿದ್ದು, ಇಂತಹ ಪರಿಹಾರ ಕೇಂದ್ರಗಳಲ್ಲಿ ಇರದ ನಿರಾಶ್ರಿತರಿಗೂ ಆಯಾ ಗ್ರಾಮ ಪಂಚಾಯತಿಗಳ ಮೂಲಕ ಪರಿಹಾರ ಸಾಮಗ್ರಿ, ಆಹಾರ ಸಾಮಗ್ರಿಗಳನ್ನು ಸಮರ್ಪಕವಾಗಿ ಪೂರೈಸುವ ಕಾರ್ಯ ನಿರಂತರವಾಗಿ ಸಾಗಿದೆ.
ಬಿಸ್ಕೆಟ್ ಗಿಂತ ಬದುಕು ಕಟ್ಟಿಕೊಳ್ಳಬೇಕು, ಕೊಡಗು ಸಂತ್ರಸ್ತರ ಮನವಿ
ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಡಿಕೇರಿ ತಾಲೂಕು ಹೆಚ್ಚಿನ ಹಾನಿ ಅನುಭವಿಸಿದೆ. ಇದರಿಂದಾಗಿ ಸಂತ್ರಸ್ತರಾದವರಿಗೆ ಎಲ್ಲ ಜಿಲ್ಲಾಡಳಿತಗಳು ಪರಿಹಾರ ಸಾಮಗ್ರಿಗಳನ್ನು ಪಡೆಯಲು ಆಯಾ ಜಿಲ್ಲೆಗಳಲ್ಲಿ ಸೂಕ್ತ ವ್ಯವಸ್ಥೆ ಕೈಗೊಂಡಿವೆ.
ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
ಇದರ ಜೊತೆಗೆ ಹಲವಾರು ಸಂಘ ಸಂಸ್ಥೆಗಳು, ಸಂಘಟನೆಗಳು ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ಕೊಡಗು ಜಿಲ್ಲೆಗೆ ರವಾನಿಸುವ ಕಾರ್ಯವನ್ನು ಮಾಡಿರುವುದು, ಕನ್ನಡಿಗರ ಒಗ್ಗಟ್ಟಿಗೆ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿದೆ.
ಮಡಿಕೇರಿಯಲ್ಲಿ ಹೆಚ್ಚು ಹಾನಿ
ಭಾರಿ ಮಳೆಯಿಂದ ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡು ಸಂತ್ರಸ್ತರಾದವರಿಗೆ ಜಿಲ್ಲೆಯಲ್ಲಿ ಒಟ್ಟು 51 ಪರಿಹಾರ ಮತ್ತು ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ.
ಅತಿ ಹೆಚ್ಚು ಹಾನಿ ಮಡಿಕೇರಿ ತಾಲೂಕಿನಲ್ಲಿ ಸಂಭವಿಸಿದ್ದು, ಇಲ್ಲಿನ ಗಾಳಿಬೀಡು, ಕರ್ಣಂಗೇರಿ, ಮಕ್ಕಂದೂರು, ಜೋಡುಪಾಲ, ಕಾಟಕೇರಿ, ಹೊದವಾಡ ಐಕೊಳ, ಮಡಿಕೇರಿ ನಗರ ಸೇರಿ ವಿವಿಧೆಡೆ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ.
ಸಾಮಗ್ರಿ ಒದಗಿಸಲು ಕ್ರಮ
ಅದೇ ರೀತಿ ಸೋಮವಾರ ಪೇಟೆ ಮತ್ತು ವಿರಾಜಪೇಟೆ ತಾಲೂಕಿನಲ್ಲಿಯೂ ಪರಿಹಾರ ಮತ್ತು ಪುನರ್ವಸತಿ ಕೇಂದ್ರವನ್ನು ತೆರೆದು, ಸಂತ್ರಸ್ತರಿಗೆ ಊಟೋಪಹಾರ, ವಾಸ್ತವ್ಯ, ಆರೋಗ್ಯ ತಪಾಸಣೆ, ಮಾನಸಿಕ ಸ್ಥೈರ್ಯ ತುಂಬುವ ಕಾರ್ಯಕ್ರಮದ ಜೊತೆಗೆ ಅಗತ್ಯ ಪರಿಹಾರ ಸಾಮಗ್ರಿಗಳನ್ನೂ ವಿತರಣೆ ಮಾಡಲಾಗುತ್ತಿದೆ.
ರಾಜ್ಯದಲ್ಲೆಡೆಯಿಂದ ಸ್ವೀಕರಿಸಲಾಗುತ್ತಿರುವ ನೆರವಿನ ಸಾಮಗ್ರಿಗಳನ್ನು ಪುನರ್ವಸತಿ ಕೇಂದ್ರಗಳಲ್ಲಿ ಇರದ ನಿರಾಶ್ರಿತರಿಗೂ ಕೂಡ ಸಮರ್ಪಕವಾಗಿ ವಿತರಿಸಲು ಕೊಡಗು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಕೊಡಗು ದುರಂತ: ನಷ್ಟದ ಲೆಕ್ಕ ಹಾಕೋಕೆ ವಾರವೇ ಬೇಕಂತೆ!
ಗ್ರಾ.ಪಂಚಾಯಿತಿಗಳಿಗೆ ಹೊಣೆ
ದಾಸ್ತಾನು ಕೇಂದ್ರಗಳಿಂದ ನೆರವು ಸಾಮಗ್ರಿಯನ್ನು ಪಡೆದು ಗ್ರಾಮ ಪಂಚಾಯತಿಗಳ ಮೂಲಕ ಪೂರೈಸಲು ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ಪಿಡಿಒಗಳಿಗೆ ಜವಾಬ್ದಾರಿ ನೀಡಲಾಗಿದೆ.
ಸಿಬ್ಬಂದಿಗಳು ದಾಸ್ತಾನು ಕೇಂದ್ರಗಳಲ್ಲಿ ಸಾಮಗ್ರಿಗಳ ಬೇಡಿಕೆ ಪಟ್ಟಿಯಂತೆ ಸಾಮಗ್ರಿಗಳನ್ನು ಪಡೆದು, ವಾಹನದ ವಿವರದೊಂದಿಗೆ ರಿಜಿಸ್ಟರ್ನಲ್ಲಿ ನಮೂದಿಸಿ, ಸಹಿ ಮಾಡಿ ಪಡೆದುಕೊಂಡು ಹೋಗುತ್ತಿದ್ದಾರೆ. ಈ ರೀತಿ ಪಡೆದ ಸಾಮಗ್ರಿಗಳನ್ನು ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ನಿಜವಾದ ಸಂತ್ರಸ್ತರಿಗೆ ಸಮರ್ಪಕವಾಗಿ ಪೂರೈಕೆ ಮಾಡಲಾಗುತ್ತಿದೆ.
ಸಾ.ರಾ. ಮಹೇಶ್ ಪರಿಶೀಲನೆ
ಸೋಮವಾರದಂದು ಸುಮಾರು 25 ಗ್ರಾಮ ಪಂಚಾಯತಿಗಳ ಮೂಲಕ ಪರಿಹಾರ ಸಾಮಗ್ರಿಗಳನ್ನು ಸಂತ್ರಸ್ತರಿಗೆ ಪೂರೈಕೆ ಮಾಡಲಾಗಿದೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವರಾದ ಸಾ.ರಾ. ಮಹೇಶ್ ಮಂಗಳವಾರ ಜಿಲ್ಲಾಡಳಿತ ಭವನದ ದಾಸ್ತಾನು ಕೇಂದ್ರಕ್ಕೆ ಖುದ್ದು ಭೇಟಿ ನೀಡಿ, ದಾಸ್ತಾನು ಸ್ವೀಕಾರ ಹಾಗೂ ವಿತರಣೆ ಕಾರ್ಯವನ್ನು ಪರಿಶೀಲಿಸಿ, ಅಧಿಕಾರಿ, ಸಿಬ್ಬಂದಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದ್ದಾರೆ.
ವೈರಲ್ ವಿಡಿಯೋ:ಕೊಡಗಿನ ಕಣ್ಣೀರಿಗೆ ಮಿಡಿದ ಇನ್ಫೋಸಿಸ್ ಸುಧಾಮೂರ್ತಿ
ಆಹಾರ, ಅಗತ್ಯ ವಸ್ತುಗಳ ಪೂರೈಕೆ
ಈಗಾಗಲೇ ರಾಜ್ಯದೆಲ್ಲೆಡೆಗಳಿಂದ ಪರಿಹಾರ ಸಾಮಗ್ರಿಗಳನ್ನು ಹೊತ್ತ ವಿವಿಧ ಬಗೆಯ ವಾಹನಗಳು ಕೊಡಗು ಜಿಲ್ಲೆಯತ್ತ ಧಾವಿಸುತ್ತಿವೆ.
ಪರಿಹಾರ ಸಾಮಗ್ರಿ ದಾಸ್ತಾನು ಕೇಂದ್ರಗಳಲ್ಲಿ ಈವರೆಗೆ ಅತಿ ಹೆಚ್ಚು ಸ್ವೀಕೃತವಾಗಿರುವ ಸಾಮಗ್ರಿಗಳೆಂದರೆ ಹಾಲು (ಬಹುದಿನ ಬಾಳಿಕೆ ಬರುವ), ಅಕ್ಕಿ, ಬಿಸ್ಸೆಟ್, ಬ್ರೆಡ್, ಬನ್, ರಸ್ಕ್ ಇವು ಹೆಚ್ಚು, ಹೆಚ್ಚು ಪೂರೈಕೆಯಾಗಿದೆ. ಇದಲ್ಲದೆ, ಬ್ಲಾಂಕೆಟ್ಸ್, ಬೆಡ್ಶೀಟ್ಸ್, ಸ್ಯಾನಿಟರಿ ನ್ಯಾಪ್ಕಿನ್ಸ್, ಟೂತ್ ಬ್ರಶ್, ಟೂತ್ ಪೇಸ್ಟ್, ಸೋಪು, ಕ್ಯಾಂಡೆಲ್ಸ್, ಮ್ಯಾಚ್ಬಾಕ್ಸ್, ಟವೆಲ್ಸ್, ನೀರಿನ ಬಾಟಲ್, ಹ್ಯಾಂಡ್ ಗ್ಲೌಸ್, ಶೂಗಳು, ಅಕ್ಕಿ, ಗೋಧಿ, ಸಕ್ಕರೆ, ಫ್ರೂಟ್ ಜ್ಯೂಸ್ ಟೆಟ್ರಾ ಪ್ಯಾಕ್, ಹಣ್ಣುಗಳು, ಉಡುಪುಗಳು, ಚಾಪೆಗಳು ಸೇರಿದಂತೆ ಹಲವಾರು ಬಗೆಯ ಸಾಮಗ್ರಿಗಳನ್ನು ಉದಾರವಾಗಿ ನೀಡುತ್ತಿದ್ದಾರೆ.
ದಾಸ್ತಾನುಗಳಿಗೆ ನೇರವಾಗಿ ತಲುಪಿಸಿ
ಸಂತ್ರಸ್ತರಿಗಾಗಿ ನೆರವು ನೀಡಬಯಸುವವರು ಇತರೆ ಸಂಘ ಸಂಸ್ಥೆಗಳಿಗೆ ನೀಡುವುದರ ಬದಲಾಗಿ, ಜಿಲ್ಲಾಡಳಿತ ಸ್ಥಾಪಿಸಿರುವ ದಾಸ್ತಾನು ಕೇಂದ್ರಗಳಿಗೆ ನೀಡುವುದು ಸೂಕ್ತ. ಅಂತಹವರು ನೇರವಾಗಿ ಕೊಡಗು ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಅಥವಾ ಮಲ್ಲೇಶ್- 9743168840, ಶ್ರೀಷಾ- 9972995353. ಬಸವರಾಜು- 8105204059 ಇವರನ್ನು ಸಂಪರ್ಕಿಸಲು ಸೂಚಿಸಲಾಗಿದೆ.