ಛೆ, ಎಂಥ ದುರಂತ! ಮನೆ ಪಕ್ಕದ ಬೆಟ್ಟ-ಗುಡ್ಡಗಳೇ ಮೃತ್ಯುಕೂಪವಾಗಿ...
ಮಡಿಕೇರಿ, ಆಗಸ್ಟ್ 20: ಮನೆ ಹಿಂದಿನ ಬರೆ(ಗುಡ್ಡ) ತಮ್ಮ ಮನೆಗೆ ತಡೆಗೋಡೆಯಾಗಿ ನಿಲ್ಲುತ್ತದೆ ಎಂದು ಅವರೆಲ್ಲರೂ ನಂಬಿದ್ದರು ಅದು ಆಗಲೇ ಇಲ್ಲ.
ತಮ್ಮ ಮನೆ ಹಿಂದಿನ ಬೆಟ್ಟಗಳು ಮೃತ್ಯುವಾಗಿ ಮನೆಗೆ ಅಪ್ಪಳಿಸುತ್ತದೆ ಎಂದು ಅವರು ನಿರೀಕ್ಷೆಯೇ ಮಾಡಿರಲಿಲ್ಲ. ಇದೀಗ ಯಾರೂ ತಮ್ಮ ಕನಸು ಮನಸಲ್ಲೂ ನೆನೆಸದ ಭಾರೀ ದುರಂತವೊಂದು ಕೊಡಗಿನಲ್ಲಿ ನಡೆದು ಹೋಗಿದೆ.
ಊರಿಗೆ ಊರೇ ಕುಸಿದು ಅಕ್ಷರಶಃ ನರಕವಾಗಿರುವ ಕಾಲೂರು, ಹಮ್ಮಿಯಾಲ, ತಂತಿಪಾಲ, ಹಟ್ಟಿಹೊಳೆ, ಮುಟ್ಲು, ಜೋಡುಪಾಲ, ಮೇಘತ್ತಾಳ ಹೀಗೆ ಸುಮಾರು 15 ಗ್ರಾಮಗಳ ಪಾಡು ಯಾರಿಗೂ ಬೇಡ. ಮನೆಗಳು ನೆಲಸಮವಾಗಿವೆ.
ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
ತಾವೇ ಮಾಡಿದ ಕಾಫಿ ತೋಟಗಳು ಮಣ್ಣಿನ ಪಾಲಾಗಿವೆ. ರಸ್ತೆಗಳು ದುರಸ್ತಿ ಮಾಡಲಾರದಂತೆ ಕುಸಿದು ಹೋಗಿವೆ. ಸಣ್ಣಪುಟ್ಟ ಹೊಳೆ, ತೊರೆಗಳು ರೌದ್ರಾವತಾರ ತಾಳಿ ಸಿಕ್ಕಿ ಸಿಕ್ಕಿದನ್ನೆಲ್ಲ ಕೊಚ್ಚಿಕೊಂಡು ಹೋಗಿದೆ. ಬಹಳಷ್ಟು ಮಂದಿಗೆ ಹೊರಗೆ ಏನಾಗುತ್ತಿದೆ ಎಂಬುದು ಗೊತ್ತಾಗುವ ವೇಳೆಗೆ ಅವರ ಬದುಕೇ ಸರ್ವನಾಶವಾಗಿ ಹೋಗಿದೆ. ಈಗ ಅವರ ಬದುಕು ನರಕಸದೃಶ!
ಇವತ್ತು ಎಲ್ಲವನ್ನು ಕಳೆದುಕೊಂಡು ನಿರಾಶ್ರಿತವಾದವರೆಲ್ಲ ಶ್ರಮಜೀವಿಗಳು ಸದಾ ಪ್ರಕೃತಿಯೊಂದಿಗೆ ಬೆಳೆದವರು. ಬೆಳಗ್ಗಿನಿಂದ ಸಂಜೆವರೆಗೆ ತೋಟ, ಗದ್ದೆ ಅಂಥ ಸದಾ ದುಡಿಯುತ್ತಾ ತಾವು ಬೆಳೆದ ಕಾಫಿ, ಕರಿಮೆಣಸು, ಭತ್ತದಿಂದ ಬದುಕು ಕಟ್ಟಿಕೊಂಡವರು. ಅವರು ತಮ್ಮ ದುಡಿಮೆಯನ್ನು ನಂಬಿದರೇ ಹೊರತು ಯಾರ ಮುಂದೆಯೋ ಕೈಚಾಚಿರಲಿಲ್ಲ.
ಮಳೆಗಾಲ ಎದುರಿಸಲು ಸಿದ್ಧರಾಗಿದ್ದರು
ಮಡಿಕೇರಿ ಪಟ್ಟಣದಿಂದ ಸುಮಾರು ಹತ್ತಿಪ್ಪತ್ತು ಕಿ.ಮೀ. ದೂರದಲ್ಲಿ ತಮ್ಮ ತೋಟದಲ್ಲಿ ಒಂಟಿಯಾಗಿ ಮನೆಕಟ್ಟಿಕೊಂಡು ತಮ್ಮದೇ ಕುಟುಂಬದೊಂದಿಗೆ ತಲತಲಾಂತರದಿಂದ ಬದುಕು ಸಾಗಿಸುತ್ತಾ ಬಂದಿದ್ದರು. ವಾರಕ್ಕೊಮ್ಮೆ ಮಡಿಕೇರಿಯಲ್ಲಿ ನಡೆಯುವ ಸಂತೆಗೆ ಬಂದು ಅಗತ್ಯ ವಸ್ತುಗಳನ್ನು ಮನೆಗೆ ಕೊಂಡೊಯ್ದು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಮಳೆಗಾಲ ಎಂಬುದು ಅವರ ಪಾಲಿಗೆ ಪ್ರತಿವರ್ಷವೂ ಸಂಕಷ್ಟವನ್ನೇ ಹೊತ್ತು ತರುತ್ತಿತ್ತು. ಜೋರು ಮಳೆ ಸುರಿದು ಹೊಳೆ ಉಕ್ಕಿ ಹರಿದರೆ ಗ್ರಾಮವೇ ಸಂಪರ್ಕ ಕಳೆದುಕೊಳ್ಳುತ್ತಿತ್ತು. ಇದರ ಅರಿವಿದ್ದುದರಿಂದಲೇ ಕನಿಷ್ಟ ಒಂದು ತಿಂಗಳಿಗಾಗುವಷ್ಟು ಅಗತ್ಯ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಇಂತಹದೊಂದು ಮುಂಜಾಗ್ರತಾ ಕ್ರಮವನ್ನು ಹಿಂದಿನಿಂದಲೂ ಇಲ್ಲಿನ ಜನ ಮಾಡಿಕೊಂಡು ಬಂದಿದ್ದರು.
ಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗ
ಪ್ರಕೃತಿ ಜೊತೆ ಬೆರೆತು ಬದುಕಿದವರು!
ಇವತ್ತು ಜಲಪ್ರಳಯವಾಗಿರುವ ಸುಮಾರು 15 ಗ್ರಾಮಗಳು ಒಂದು ಕಾಲದಲ್ಲಿ ಕುಗ್ರಾಮವೇ ಆಗಿದ್ದವು. ಇಲ್ಲಿಗೆ ರಸ್ತೆ, ವಿದ್ಯುತ್ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳೇ ಇಲ್ಲಿ ಇರಲಿಲ್ಲ. ಅಂತಹ ದಿನಗಳಿಂದಲೂ ಇಲ್ಲಿನವರು ಪ್ರಕೃತಿಯೊಂದಿಗೆ ಬೆರೆತು ಬದುಕಿ ಬಂದಿದ್ದರು. ಕಳೆದೆರಡು ದಶಕಗಳ ಬಳಿಕ ಈ ವ್ಯಾಪ್ತಿಯಲ್ಲಿ ಅದರಲ್ಲೂ ಕೆ.ಜಿ.ಬೋಪಯ್ಯ ಅವರು ಈ ಭಾಗದಿಂದ ಆರಿಸಿ ಬಂದ ನಂತರ ಇಲ್ಲಿನ ಗ್ರಾಮಗಳಲ್ಲಿ ಒಂದಷ್ಟು ಅಭಿವೃದ್ದಿಯಾಯಿತು ಎಂದರೆ ತಪ್ಪಾಗಲಾರದು. ಈ ವ್ಯಾಪ್ತಿಯಲ್ಲಿ ಇನ್ನೂ ಕೂಡ ವಿದ್ಯುತ್ ಸಂಪರ್ಕವಿಲ್ಲದೆ ಹೀನಾಯ ಬದುಕು ಸಾಗಿಸುತ್ತಿರುವ ಜನರೂ ಇದ್ದಾರೆ. ಅದು ಏನೇ ಇರಲಿ ತಾವು ಇದ್ದ ಜಾಗದಲ್ಲಿ ದುಡಿಯುತ್ತಾ ಬದುಕು ಕಂಡುಕೊಂಡಿದ್ದರು.
ಕೊಡಗಿನ ಜಲಪ್ರಳಯಕ್ಕೆ ಕೊಳ್ಳೇಗಾಲದ ಊರುಗಳು ನೀರುಪಾಲು!
ಮಳೆ ತಂದಿದ್ದು ಮಹಾಸಂಕಟ
ಈ ಗ್ರಾಮಗಳ ಜನ ತಮ್ಮ ಬದುಕಿನ ಇಷ್ಟು ವರ್ಷಗಳಲ್ಲಿ ಧಾರಾಕಾರ ಮಳೆಯನ್ನು ನೋಡಿದ್ದಾರೆ. ಅದನ್ನು ಎದುರಿಸಿ ಬದುಕಿದ್ದಾರೆ. ಆದರೆ ಈ ಸಾರಿ ಸುರಿದಿದ್ದು ಬರೀ ಮಳೆಯಲ್ಲ. ಅದು ಮಹಾಮಳೆ. ಅದು ತಂದಿದ್ದು ಮಹಾಸಂಕಟವನ್ನು. ಇನ್ನು ರಿಪೇರಿಯೇ ಆಗಲಾರದೇನೋ ಎಂಬಂಥ ಬದುಕನ್ನು!
ಇಲ್ಲಿನ ಪ್ರದೇಶಗಳು ಗುಡ್ಡದಿಂದ ಕೂಡಿವೆ. ಹೀಗಾಗಿ ತಮಗೆ ನೀರು, ಸಂಪರ್ಕದ ಅನುಕೂಲವಿರುವ ಕಡೆಗಳಲ್ಲಿ ಭೂಮಿಯನ್ನು ಅಗೆದು ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಹೀಗೆ ಮಣ್ಣು ತೆಗೆದು ಅಡಿಪಾಯ ಹಾಕುವಾಗ ಹಿಂಬದಿಯಲ್ಲಿ ಗುಡ್ಡ(ಕೊಡಗಿನವರು ಬರೆ ಎನ್ನುತ್ತಾರೆ) ನಿರ್ಮಾಣವಾಗುವುದು ಸಹಜ. ಸಾಮಾನ್ಯವಾಗಿ ಇಂತಹ ಬರೆಗಳು ಬಹಳಷ್ಟು ಮನೆಗಳ ಹಿಂದೆ ಇವೆ. ಇಂತಹ ಬರೆಗಳು ಮುಂದೊಂದು ದಿನ ತಮ್ಮ ಮನೆ, ಬದುಕನ್ನೇ ನಾಶ ಮಾಡಿಬಿಡುತ್ತದೆ ಎಂಬುದು ಬಹುಶಃ ಯಾರಿಗೂ ಗೊತ್ತೇ ಆಗಿರಲಿಲ್ಲ. ಆದರೆ ಆಶ್ಲೇಷ ಮಳೆ ಅಂತಹವೊಂದು ದುರಂತವನ್ನೇ ತಂದೊಡ್ಡಿ ಹೋಗಿದೆ. ಮಳೆ ಒಂದಷ್ಟು ಕಡಿಮೆಯಾದಂತೆ ಈಗ ಕಂಡು ಬರುತ್ತಿದ್ದರೂ ಇದ್ದಕ್ಕಿದ್ದಂತೆ ಸುರಿಯುವ ಮಳೆ ಯಾವಾಗ ಏನನ್ನು ಕಸಿದು ಬಿಡುತ್ತದೆಯೋ ಎಂಬುದನ್ನು ಹೇಳಲಾಗುತ್ತಿಲ್ಲ. ಈಗಾಲೂ ಗುಡ್ಡಗಳು ಅಲ್ಲಲ್ಲಿ ಕುಸಿಯುತ್ತಲೇ ಇವೆ.
ಜಿಲ್ಲೆಯಲ್ಲಿ 3120 ಸಂತ್ರಸ್ತರ ರಕ್ಷಣೆ
ರಕ್ಷಣಾ ಪಡೆಗಳು ತಮ್ಮ ಕಾರ್ಯಾಚರಣೆಯನ್ನು ಮುಂದುವರೆಸಿ ಬೆಟ್ಟಗಳ ಮೇಲೆ ಸಂಪರ್ಕ ಕಡಿದುಕೊಂಡು ಸಂಕಷ್ಟದಲ್ಲಿ ಸಿಲುಕಿಕೊಂಡವರನ್ನು ಪತ್ತೆಹಚ್ಚುವ ಕಾರ್ಯವನ್ನು ಮಾಡುತ್ತಲೇ ಇದ್ದಾರೆ. ಇವರೊಂದಿಗೆ ಸ್ಥಳೀಯರು, ಸ್ವಯಂಸೇವಕರು ಪೊಲೀಸರು, ಎನ್ಸಿಸಿ ಮೊದಲಾದವರು ಕೈಜೋಡಿಸಿ ರಕ್ಷಿಸುವ ಕಾರ್ಯ ನಡೆಸುತ್ತಿದ್ದಾರೆ. ಮಳೆಯ ಕಾರಣದಿಂದ ಜತೆಗೆ ರಸ್ತೆ, ಬೆಟ್ಟ ಕುಸಿದ ಕಾರಣದಿಂದ ಮನೆಗಳನ್ನು ಹುಡುಕುವುದು ಕೂಡ ಕಷ್ಟವಾಗಿದೆ. ಯಾರು ಎಲ್ಲಿದ್ದಾರೆ? ಏನಾಗಿದ್ದಾರೆ? ಎಂಬ ಮಾಹಿತಿಯೇ ಇಲ್ಲವಾಗಿದೆ. ಸಂಪರ್ಕಕ್ಕೆ ಸಿಗದ ತಮ್ಮವರಿಗಾಗಿ ಕುಟುಂಬಸ್ಥರು ಮಮ್ಮಲ ಮರುಗುತ್ತಿದ್ದಾರೆ.
ಕೊಡಗಿನಲ್ಲಿ ಅಂದು ನಡೆದದ್ದು ಜಲಪ್ರಳಯದ ಮುನ್ಸೂಚನೆಯಾಗಿತ್ತಾ?
ಸಂಕಷ್ಟದಲ್ಲಿ 50 ಸಾವಿರ ಜನ!
ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ನೀಡಿರುವ ಮಾಹಿತಿ ಪ್ರಕಾರ ಸುಮಾರು 50 ಸಾವಿರ ಜನ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಈ ಪೈಕಿ ಸುಮಾರು 4 ಸಾವಿರ ಜನರು ವಿವಿಧ ಪ್ರದೇಶಗಳಲ್ಲಿ ಸಂಪರ್ಕ ಕಳೆದುಕೊಂಡಿದ್ದಾರಂತೆ. ಕಳೆದ ನಾಲ್ಕು ದಿನಗಳ ತೀವ್ರ ಮಳೆಯಿಂದಾಗಿ ಸಾವಿರಾರು ಮನೆಗಳು ಹಾನಿಯಾಗಿದ್ದು, 07 ಜನರು ಮೃತಪಟ್ಟಿದ್ದಾರೆ ಎಂಬುದು ಅವರು ನೀಡಿರುವ ಮಾಹಿತಿ.
ಜಿಲ್ಲೆಯಾದ್ಯಂತ ಇದುವರೆಗೆ ಒಟ್ಟು 3120 ಸಂತ್ರಸ್ತರನ್ನು ರಕ್ಷಿಸಿದ್ದು, ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಒಟ್ಟು 41 ಪರಿಹಾರ ಕೇಂದ್ರಗಳನ್ನು ತೆರೆದಿದ್ದು, ಈ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಊಟೋಪಚಾರ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ, ಹಾಸಿಗೆ ಮತ್ತು ಹೊದಿಕೆ ಮತ್ತಿತರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಮುಕ್ತ ಮನಸ್ಸಿನಿಂದ ನೆರವು ನೀಡಿ
ಕಳೆದ ಐದಾರು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಅತಿವೃಷ್ಟಿಗೆ ಒಳಗಾದವರನ್ನು ರಕ್ಷಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದ್ದು, ವಿವಿಧ ಭಾಗಗಳಿಗೆ ಉನ್ನತ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಪರಿಹಾರ ಕೇಂದ್ರ ಸೇರಿದಂತೆ ಯಾವುದೇ ರೀತಿಯ ಕುಂದು ಕೊರೆತೆಗಳಿಗೆ ಸಂಬಂಧಿಸಿದಂತೆ ಮಡಿಕೇರಿ ತಾಲೂಕಿಗೆ ಸಂಬಂಧಿಸಿದಂತೆ ವಸತಿ ಇಲಾಖೆಯ ಆಯುಕ್ತರಾದ ಅನ್ಬುಕುಮಾರ್ (9449892000), ಕುಶಾಲನಗರ ವ್ಯಾಪ್ತಿಗೆ ಎಡಿಜಿಪಿ ಭಾಸ್ಕರರಾವ್ (9980915100), ವಿರಾಜಪೇಟೆ ತಾಲೂಕಿಗೆ ಸಂಬಂಧಿಸಿದಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತಾರಾಜು (94565486110) ಅವರನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ.
ಕೊಡಗು ದುರಂತ: ನಷ್ಟದ ಲೆಕ್ಕ ಹಾಕೋಕೆ ವಾರವೇ ಬೇಕಂತೆ!
ಸಾಂತ್ವನದ ಹಸ್ತ ಸಂತ್ರಸ್ತರ ಮೇಲಿರಲಿ
ರಾಜ್ಯ ವಿವಿಧ ಭಾಗಗಳಿಂದ ಪರಿಹಾರ ಕೇಂದ್ರಗಳಿಗೆ ಆಹಾರ ಸೇರಿದಂತೆ ಹಲವು ರೀತಿಯ ಸಾಮಾಗ್ರಿಗಳು ಬರುತ್ತಿದ್ದು, ಆಹಾರ ಸೇರಿದಂತೆ ಯಾವುದೇ ರೀತಿಯ ಸಾಮಾಗ್ರಿ, ವಸ್ತುಗಳನ್ನು ನಗರದ ಜಿಲ್ಲಾಡಳಿತ ಭವನದ ನೆಲ ಮಹಡಿ, ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮಿಗೆ ನೇರವಾಗಿ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಬಸವರಾಜು (8105204059), ಶ್ರೀಷ (9972995353), ಮಲ್ಲೇಶ್ (9743168840)ಇವರನ್ನು ಸಂಪರ್ಕಿಸಬಹುದಾಗಿದೆ.