ಕೊಡಗು : ನಿರಾಶ್ರಿತರ ತಾತ್ಕಾಲಿಕ ಶೆಡ್ ಹೀಗಿದೆ ನೋಡಿ
ಮಡಿಕೇರಿ, ಸೆಪ್ಟೆಂಬರ್ 06 : ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಳೆ, ಗುಡ್ಡ ಕುಸಿತದಿಂದಾಗಿ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಜಿಲ್ಲಾಡಳಿತ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿಕೊಡಲು ಕಾರ್ಯ ಪ್ರವೃತ್ತವಾಗಿದೆ.
ತಾತ್ಕಾಲಿಕ ಶೆಡ್ ಮಾದರಿ ಸಿದ್ಧವಾಗಿದೆ, ಶೆಡ್ ನಿರ್ಮಾಣಕ್ಕೆ 4ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಲಾಗಿದೆ. ಆದರೆ, ಎಲ್ಲಿ ಶೆಡ್ ನಿರ್ಮಿಸಲಾಗುತ್ತದೆ? ಎಂಬುದು ಇನ್ನೂ ಅಂತಿಮಗೊಂಡಿಲ್ಲ. ಸಾವಿರಕ್ಕೂ ಅಧಿಕ ಜನರು ಇನ್ನೂ ಸಂತ್ರಸ್ತರ ಕೇಂದ್ರದಲ್ಲಿಯೇ ವಾಸವಾಗಿದ್ದಾರೆ.
ಚಿತ್ರಗಳು : ಕೊಡಗಿನ ಈ ರಸ್ತೆಗಳ ಗುರುತು ಹಿಡಿಯುವಿರಾ?
ತಾತ್ಕಾಲಿಕ ಶೆಡ್ ಮಾದರಿಯನ್ನು ಜಿಲ್ಲಾಡಳಿತ ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿ ಸಾರ್ವಜನಿಕರ ಪ್ರದರ್ಶನಕ್ಕೆ ಇಟ್ಟಿದೆ. ಜಿಲ್ಲೆಯಲ್ಲಿ ಮನೆ ಕಳೆದುಕೊಂಡವರು ತಾತ್ಕಾಲಿಕ ಶೆಡ್ ಹೇಗಿರಲಿದೆ? ಎಂದು ವೀಕ್ಷಣೆ ಮಾಡಬಹುದಾಗಿದೆ.
ಕೊಡಗಿನ ಮಳೆ ನಿಂತರೂ 726 ಕುಟುಂಬಗಳು ಇನ್ನೂ ನೆಲೆ ಕಂಡಿಲ್ಲ
1504 ಸಂತ್ರಸ್ಥರು ಇನ್ನೂ ಸಂತ್ರಸ್ತರ ಕೇಂದ್ರದಲ್ಲಿ ವಾಸ ಮಾಡುತ್ತಿದ್ದಾರೆ. ಸುರಕ್ಷಿತ ಸ್ಥಳಗಳಲ್ಲಿ ಅವರಿಗೆ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿಕೊಡಲಾಗುತ್ತದೆ. ಕೊಡಗಿನ ಪರಿಸ್ಥಿತಿ ಹೇಗಿದೆ? ಚಿತ್ರಗಳಲ್ಲಿ ನೋಡಿ...
ಚಿತ್ರಗಳು : ಕೊಡಗಿನಲ್ಲಿ ಸರಳವಾಗಿ ಕೈಲ್ ಮೂರ್ತ ಹಬ್ಬ ಆಚರಣೆ
ಎಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ?
ಕೊಡಗು ಜಿಲ್ಲಾಡಳಿತ ಸುಂಟಿಕೊಪ್ಪ ಹೋಬಳಿಯ ಗರಗಂದೂರು ಬಳಿ 7 ಎಕರೆ, ಕೆ.ನಿಗುಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಎಕರೆ, ಬಿಳಿಗೇರಿ ಬಳಿ 3.70 ಎಕರೆ ಜಾಗವನ್ನು ತಾತ್ಕಾಲಿಕ ಶೆಡ್ ನಿರ್ಮಿಸಲು ಗುರುತಿಸಲಾಗಿದೆ.
ಜಂಬೂರು ಗ್ರಾಮದ ಬಳಿಯೂ ತಾತ್ಕಾಲಿಕ ಶೆಡ್ ನಿರ್ಮಿಸಲು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಎಲ್ಲಿ ಶೆಡ್ ನಿರ್ಮಾಣವಾಗಲಿದೆ? ಎಂಬುದು ಇನ್ನೂ ಅಂತಿಮವಾಗಿಲ್ಲ.
ಮಾದರಿ ಮನೆಗಳ ನಿರ್ಮಾಣ
'ಕೊಡಗಿನಲ್ಲಿ ಅತಿವೃಷ್ಟಿಯಿಂದ ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದು, ದೇಶದಲ್ಲೇ ಮಾದರಿಯಾಗುವಂತಹ ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ' ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
716 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಅಂದಾಜಿಸಲಾಗಿದೆ. 404 ಮನೆಗಳು ಭಾಗಶಃ ಹಾನಿಯಾಗಿವೆ. 32 ಗ್ರಾಮಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. 10 ಗ್ರಾಮಗಳಲ್ಲಿ ಭೂ ಕುಸಿತ ಉಂಟಾಗಿದೆ.
ಅಧಿಕಾರಿಗಳ ಸಭೆ
ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ ವಿ.ಅನ್ಬುಕುಮಾರ್ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ಸಂತ್ರಸ್ತರ ಪುನರ್ವಸತಿ ಕ್ರಮಗಳ ಕುರಿತು ಪರಾಮರ್ಶೆ ನಡೆಸಿದರು.
ಐಎಎಸ್ ಅಧಿಕಾರಿಗಳಾದ ಚಾರುಲತ ಸೋಮಾಲ್, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮತ್ತು ಜಿಲ್ಲಾ ಪಂಚಾಯತ್ ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ಮುಂತಾದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಎಷ್ಟು ಜನ ಸಂತ್ರಸ್ತರು?
ಕೊಡಗು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ನೀಡಿರುವ ಮಾಹಿತಿಯಂತೆ ಮಡಿಕೇರಿಯ 11 ಸಂತ್ರಸ್ತ ಕೇಂದ್ರಗಳಲ್ಲಿ 419 ಕುಟುಂಬ, ಸೋಮವಾರಪೇಟೆಯ 3 ಕೇಂದ್ರಗಳಲ್ಲಿ 193 ಕುಟುಂಬ ಸೇರಿ ಜಿಲ್ಲೆಯ 14 ಪರಿಹಾರ ಕೇಂದ್ರದಲ್ಲಿ 612 ಕುಟುಂಬಗಳು ಆಶ್ರಯ ಪಡೆದಿವೆ.
751 ಪುರುಷರು, 753 ಮಹಿಳೆರು ಸೇರಿ 1504 ಜನರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಕೇಂದ್ರಗಳಲ್ಲಿರುವ ಜನರ ಮನೋಸ್ಥೈರ್ಯ ಹೆಚ್ಚಿಸಲು ಯೋಗ, ಪ್ರಾಣಾಯಾಮ ಮುಂತಾದ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.