ಮಾಂದಲ್ ಪಟ್ಟಿಯಲ್ಲಿ ಪ್ರವಾಸಿಗರಿಂದ ಸುಲಿಗೆ ಮಾಡಿದರೆ ಹುಷಾರ್!
ಮಡಿಕೇರಿ, ನವೆಂಬರ್ 9: ಮಾಂದಲ್ ಪಟ್ಟಿ ಪ್ರವಾಸಿ ತಾಣವಾಗಿ ಪ್ರವಾಸಿಗರು ಬರುವುದು ಹೆಚ್ಚುತ್ತಿದ್ದಂತೆಯೇ ಅವರನ್ನು ಕರೆದೊಯ್ಯುವ ವಿಚಾರಕ್ಕೆ ಜೀಪು ಚಾಲಕರ ನಡುವೆ ಪೈಪೋಟಿ ಏರ್ಪಟ್ಟು ಗಲಾಟೆ ಆರಂಭವಾಗಿತ್ತು. ಮತ್ತೊಂದೆಡೆ ಜೀಪು ಚಾಲಕರು ಪ್ರವಾಸಿಗರನ್ನು ಸುಲಿಗೆ ಮಾಡುವುದು ಎಗ್ಗಿಲ್ಲದೆ ನಡೆಯುತ್ತಿತ್ತು. ಇದೀಗ ಇದಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಮುಂದಾಗಿದೆ.
ಜಿಲ್ಲಾಡಳಿತ ಇದೀಗ ಜೀಪು ನಿಲುಗಡೆ ಸ್ಥಳ ಹಾಗೂ ಬಾಡಿಗೆ ನಿಗದಿ ಮಾಡಿ ಸಂಚಾರಕ್ಕೆ ಅನುಮತಿ ನೀಡಿದ್ದು, ನಿಯಮ ಉಲ್ಲಂಘನೆ ಮಾಡಿದಲ್ಲಿ ಸಂಚಾರ ರದ್ದು ಪಡಿಸುವ ಎಚ್ಚರಿಕೆಯನ್ನೂ ನೀಡಿದೆ. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪಿ ಅವರ ಉಪಸ್ಥಿತಿಯಲ್ಲಿ ಪ್ರವಾಸಿ ಜೀಪು ಮಾಲಿಕರು, ಗ್ರಾಮಸ್ಥರು, ಗ್ರಾ.ಪಂ. ಅಧಿಕಾರಿಗಳನ್ನು ಒಳಗೊಂಡ ಸಭೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು ಪರಿಶೀಲಿಸಿ ಅನುಮತಿ ನೀಡುವ ಹಳದಿ ಬಣ್ಣ ಹೊಂದಿರುವ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಕೊಡಗಿನಲ್ಲಿ ಭೂಮಿಯೊಳಗಿಂದ ಪದೇ ಪದೇ ವಿಚಿತ್ರ ಶಬ್ದ! ಕಾರಣ ಬಿಚ್ಚಿಟ್ಟ ತಜ್ಞರು
ಬಾಡಿಗೆ ಜೀಪುಗಳು ನಗರದ ಜೀಪು ನಿಲ್ದಾಣದಿಂದಲೇ ಹೊರಡಬೇಕು. ಅಲ್ಲದೆ ರಸ್ತೆಯುದ್ದಕ್ಕೂ 30-40 ಕಿ.ಮೀ ವೇಗದಲ್ಲಿಯೇ ಚಲಿಸಬೇಕು ಎಂಬ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮಡಿಕೇರಿ ಜೀಪು ನಿಲ್ದಾಣದಿಂದ ಹೊರಡುವ ಜೀಪುಗಳಿಗೆ ರೂ. 1100 ಹಾಗೂ ಮಾಂದಲ್ ಪಟ್ಟಿ ಗೇಟ್ ಬಳಿಯಿಂದ ಒಳಗಡೆ ಕರೆದೊಯ್ಯಲು ರೂ.300 ಮಾತ್ರ ಬಾಡಿಗೆ ಪಡೆಯಬೇಕಿದೆ.
ಪ್ರವಾಸಿಗರನ್ನು ಕರೆದೊಯ್ಯುವ ಎಂಟು ಆಸನ ಸಾಮರ್ಥ್ಯ ಮೀರದ ಸಾರಿಗೆ ಜೀಪ್ ಗಳಿಗೆ ಮಡಿಕೇರಿ ಬಸ್ ನಿಲ್ದಾಣದಿಂದ ಮಾಂದಲ್ ಪಟ್ಟಿಯ ಪ್ರವೇಶ ದ್ವಾರದವರೆಗೆ ವಯಾ ರಾಜಾಸೀಟು-ಕೆ ನಿಡುಗಣೆ ಮೂಲಕ ರೂ.800, ಮಡಿಕೇರಿ ಬಸ್ ನಿಲ್ದಾಣದಿಂದ ಮಾಂದಲ್ ಪಟ್ಟಿಯ ಪ್ರವೇಶ ದ್ವಾರದವರೆಗೆ ವಯ ರಾಜಸೀಟು-ಎಫ್.ಎಂ.ಕೆ.ಎಂ.ಸಿ. ಕಾಲೇಜು-ಕೋಳಿಗೂಡು-ಕಾಲೂರು ಮಾರ್ಗ ರೂ.800, ಮಾಂದಲ್ ಪಟ್ಟಿಯ ಪ್ರವೇಶ ದ್ವಾರದಿಂದ ಮಾಂದಲ್ ಪಟ್ಟಿಯ ಪ್ರೇಕ್ಷಣಿಯ ಸ್ಥಳದವರೆಗೆ ರೂ.300., ಮಡಿಕೇರಿ ಬಸ್ ನಿಲ್ದಾಣದಿಂದ ಅಬ್ಬಿಫಾಲ್ಸ್ ವರೆಗೆ ವಯಾ ರಾಜಾಸೀಟು-ಕೆ ನಿಡುಗಣೆ ರೂ.400, ಮಡಿಕೇರಿ ಬಸ್ ನಿಲ್ದಾಣದಿಂದ ಮಾಂದಲ್ ಪಟ್ಟಿಯ ಪ್ರವೇಶದ್ವಾರದವರೆಗೆ ವಯಾ ರಾಜಸೀಟು-ಕೆ.ನಿಡುಗಣೆ-ಅಬ್ಬಿಫಾಲ್ಸ್ ರೂ.1000. ಮಡಿಕೇರಿ ಬಸ್ ನಿಲ್ದಾಣದಿಂದ ಮಾಂದಲ್ ಪಟ್ಟಿಯ ಪ್ರೇಕ್ಷಣೀಯ ಸ್ಥಳದವರೆಗೆ ವಯಾ ರಾಜಸೀಟು-ಕೆ ನಿಡುಗಣೆ-ರೂ.1100, ಮಡಿಕೇರಿ ಬಸ್ ನಿಲ್ದಾಣದಿಂದ ಮಾಂದಲ್ಪಟ್ಟಿ ಪ್ರೇಕ್ಷಣೀಯ ಸ್ಥಳದವರೆಗೆ ವಯಾ ರಾಜಾಸೀಟು-ಕೆ.ನಿಡುಗಣೆ-ಅಬ್ಬಿಫಾಲ್ಸ್-1300 ರೂ ದರ ನಿಗದಿಪಡಿಸಲಾಗಿದೆ.
ಇಂದಿನಿಂದ 3 ದಿನಗಳ ಕಾಲ ಕೊಡಗು ಪ್ರವಾಸಿ ಉತ್ಸವ: ಈ ಬಾರಿಯ ವಿಶೇಷತೆಗಳೇನು ಗೊತ್ತೇ?
ಈ ನಿಯಮವನ್ನು ಉಲ್ಲಂಘಿಸಿ ಪ್ರವಾಸಿಗರಿಂದ ಹೆಚ್ಚಿನ ದರ ವಸೂಲಿ ಮಾಡಿದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.