ಅತಿವೃಷ್ಠಿ ಅನಾಹುತ ಎದುರಿಸಲು ಕೊಡಗು ಜಿಲ್ಲಾಡಳಿತ ಸನ್ನದ್ಧ !
ಮಡಿಕೇರಿ, ಮೇ.07:ಕಳೆದ ಬಾರಿಯ ಮುಂಗಾರು ಕೊಡಗಿನಲ್ಲಿ ಅನಾಹುತ ಸೃಷ್ಟಿಸಿರುವ ಕಾರಣ ಈ ಬಾರಿ ಮುಂಗಾರು ಮುನ್ನವೇ ಜಿಲ್ಲಾಡಳಿತ ಸನ್ನದ್ಧವಾಗಿದ್ದು, ಒಂದು ವೇಳೆ ಅತಿವೃಷ್ಠಿವುಂಟಾದಲ್ಲಿ ಅದನ್ನು ಎದುರಿಸಲು ಬೇಕಾದ ಎಲ್ಲ ರೀತಿಯ ಪರಿಹಾರೋಪಾಯಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಸೂಚಿಸಿದ್ದಾರೆ.
ಮಡಿಕೇರಿಯಲ್ಲಿ ನೋಡಲ್ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಸಮಿತಿಯ ಕಾರ್ಯ ನಿರ್ವಹಣೆಯ ಕುರಿತಂತೆ ಸಭೆ ನಡೆಸಿದ ಅವರು ಈ ವರ್ಷದ ಮುಂಗಾರು ವೇಳೆ ಜಲಪ್ರವಾಹ ಸಂಭವಿಸಿದರೆ ಅದರಿಂದ ಭೂಕುಸಿತ ಹಾಗೂ ಪ್ರವಾಹ ಎದುರಿಸಲು ಈಗಿನಿಂದಲೇ ಅಗತ್ಯ ತಯಾರಿ ಮಾಡಿಕೊಳ್ಳುವ ಸಲುವಾತಿ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆ ಹಾಗೂ ಸೂಕ್ಷ್ಮ ಪ್ರದೇಶಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದು ಎಲ್ಲರೂ ತಮಗೆ ವಹಿಸಿರುವ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿ ಕರ್ತವ್ಯ ನಿರ್ವಹಿಸುವಂತೆ ಹೇಳಿದ್ದಾರೆ.
ಮತ್ತೆ ಬಂತು ಮಳೆಗಾಲ : ಕೊಡಗು ನಿರಾಶ್ರಿತರಿಗೆ ಮನೆ ಸಿಗುವುದೇ?
ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ಮುಂಗಾರು ಮಳೆ ಆರಂಭವಾಗುವುದರಿಂದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕು. ಜೂ.1 ರಿಂದ ಆ.31 ರವರೆಗೆ ರಜೆ ಪಡೆಯುವಂತಿಲ್ಲ, ಈ ಮೂರು ತಿಂಗಳಲ್ಲಿ ಸಮಸ್ಯೆಗಳಿದ್ದಲ್ಲಿ, ತುರ್ತು ಸಂದರ್ಭದಲ್ಲಿ ಮಾತ್ರ ಕೇಂದ್ರ ಸ್ಥಾನದಿಂದ ಅನುಮತಿ ಪಡೆದು ಹೊರಡಬೇಕು.
ಒಂದು ವಾರದೊಳಗೆ ವರದಿ ನೀಡಬೇಕು
ಪ್ರಕೃತಿ ವಿಕೋಪ ಎದುರಿಸುವ ಸಂಬಂಧ ಸೂಕ್ಷ್ಮ ಪ್ರದೇಶಗಳ 32 ಗ್ರಾ.ಪಂ.ವ್ಯಾಪ್ತಿಗೆ ನಿಯೋಜಿಸಿರುವ ನೋಡೆಲ್ ಅಧಿಕಾರಿಗಳು ತಮ್ಮ ಗ್ರಾ.ಪಂ.ವ್ಯಾಪ್ತಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಒಂದು ವಾರದೊಳಗೆ ವರದಿ ನೀಡಬೇಕು.
ಚಿತ್ರಗಳು : ಕೊಡಗು ಸಂತ್ರಸ್ತರಿಗೆ ಕಟ್ಟುತ್ತಿರುವ ಮನೆಗಳು ಹೇಗಿವೆ?
ಸಭಾ ನಡಾವಳಿಯ ವರದಿ ಸಲ್ಲಿಸಬೇಕು
ಹಾಗೆಯೇ ಉಪ ಸಮಿತಿಯು ತಮ್ಮ ಹಂತದಲ್ಲಿ ಸಭೆ ನಡೆಸಿ ಸಭಾ ನಡಾವಳಿಯ ವರದಿ ಸಲ್ಲಿಸಬೇಕು, ನೋಡಲ್ ಅಧಿಕಾರಿಗಳು ತಮ್ಮ ಹಂತದಲ್ಲಿ ಸಭೆ ನಡೆಸಿ ಪಿಡಿಒ, ಗ್ರಾಮ ಲೆಕ್ಕಿಗರು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಸಮುದಾಯ ಪ್ರತಿನಿಧಿಗಳ ತಂಡ ರಚಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು.
ಕೊಡಗಿನವರನ್ನು ಕಾಡುತ್ತಿದೆ ಹತ್ತಾರು ಸಮಸ್ಯೆಗಳು..!
ಬೀಳುವ ಮರಗಳನ್ನು ತೆರವುಗೊಳಿಸಬೇಕು
ನಗರ, ಪಟ್ಟಣ, ಗ್ರಾ.ಪಂ.ಮಟ್ಟದಲ್ಲಿ ಚರಂಡಿ ಸ್ವಚ್ಛಗೊಳಿಸುವುದು, 65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವುದು, ಜಾನುವಾರುಗಳ ರಕ್ಷಣೆ, ಮನೆಗಳ ಪರಿಸ್ಥಿತಿ ಮತ್ತಿತರ ಬಗ್ಗೆ ಮಾಹಿತಿ ಸಂಗ್ರಹಿಸಿ ನೀಡಬೇಕು. ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆಗಳು ಪ್ರತ್ಯೇಕವಾಗಿ ಟಾಸ್ಕ್ಪೋರ್ಸ್ ರಚನೆ ಮಾಡಬೇಕು. ತಮ್ಮ ಹಂತದಲ್ಲಿ ಅಗತ್ಯ ಜೆಸಿಬಿ, ಜೀಪುಗಳನ್ನು ಕಾಯ್ದಿರಿಸಿಕೊಳ್ಳಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ರಸ್ತೆ ಹಾಗೂ ಸೇತುವೆ ಬದಿ ಬೀಳುವ ಮರಗಳನ್ನು ತೆರವುಗೊಳಿಸಬೇಕು.
ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಆದೇಶ
ಅಂಗನವಾಡಿ, ಶಾಲಾ-ಕಾಲೇಜುಗಳಲ್ಲಿ ಮಕ್ಕಳ ರಕ್ಷಣೆಗೆ ಗಮನಹರಿಸಬೇಕು. ಪರಿಹಾರ ಕೇಂದ್ರಗಳು ಸೇರಿದಂತೆ ಆಸ್ಪತ್ರೆಗಳಲ್ಲಿ ವೈದ್ಯರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಅಗ್ನಿ ಶಾಮಕ, ಗೃಹ ರಕ್ಷಕ ದಳ ವಿಭಾಗಕ್ಕೆ ಅವಶ್ಯಕವಾಗಿ ಬೇಕಿರುವ ಸಾಮಗ್ರಿ-ಸಲಕರಣೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಸಭೆಯಲ್ಲಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಜಿ.ಪಂ.ಸಿಇಓ ಕೆ.ಲಕ್ಷ್ಮಿಪ್ರಿಯಾ ಅವರು ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ಅಗತ್ಯ ತಯಾರಿ ಮಾಡಿಕೊಳ್ಳುವ ಬಗ್ಗೆ ಹಲವು ರೀತಿಯ ಸಲಹೆ ನೀಡಿದ್ದಾರೆ.