ಕೊಡಗು ಜಿಲ್ಲಾಡಳಿತದಿಂದ ಹೊರ ಹೋಗಲು, ಬರಲು ಪಾಸ್ ವಿತರಣೆ
ಮಡಿಕೇರಿ, ಮಾರ್ಚ್ 23: ಕೊರೊನಾ ಸೋಂಕು ತಡೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಅನ್ವಯ ಕೊಡಗು ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲ ಚೆಕ್ ಪೋಸ್ಟ್ ಗಳಲ್ಲೂ ಕಟ್ಟುನಿಟ್ಟಿನ ತಡೆ ಹಾಕಲಾಗಿದೆ. ಅಗತ್ಯ ವಸ್ತುಗಳ ವಾಹನಗಳನ್ನು ಮಾತ್ರ ಪರಿಶೀಲನೆ ನಡೆಸಿ ಒಳಗೆ ಬಿಡಲಾಗುತ್ತಿದೆ.
ಈಗಾಗಲೇ ಸಾರಿಗೆ ಬಸ್ ಸೇವೆ ಸ್ಥಗಿತಗೊಂಡಿದ್ದು ಅಲ್ಲಲ್ಲಿ ಆಟೋಗಳ ಸಂಚಾರ ಕಂಡುಬರುತ್ತಿದೆ. ಕುಶಾಲನಗರ-ಮೈಸೂರು, ಶನಿವಾರಸಂತೆ-ಹಾಸನ, ವಿರಾಜಪೇಟೆ ಸಂಪರ್ಕ ಕಲ್ಪಿಸುವ ಕುಟ್ಟ ಮತ್ತು ಮಾಕುಟ್ಟ ಗಡಿ, ದಕ್ಷಿಣ ಕನ್ನಡ -ಮಡಿಕೇರಿ ಗಡಿ ಸಂಪಾಜೆಯಲ್ಲಿ ಬಂದ್ ಮಾಡಲಾಗಿದ್ದು, ಇನ್ನು 10 ದಿನಗಳ ಕಾಲ ವಾಹನ ಸಂಚಾರವನ್ನು ಸ್ಥಗಿತಗೊಳಿಸಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ.
ಕೊಡಗಿನಲ್ಲಿ ಮಾ.31 ರವರೆಗೆ ನಿಷೇಧಾಜ್ಞೆ ಮುಂದುವರಿಕೆ : ಡಿಸಿ
ಪಿಯುಸಿ ಪರೀಕ್ಷೆ ಮುಂದಕ್ಕೆ ಹಾಕಿರುವುದರಿಂದ ಜಿಲ್ಲೆಯ ವಿದ್ಯಾರ್ಥಿಗಳು ತಮ್ಮ ಹುಟ್ಟೂರಿಗೆ ಆಗಮಿಸಲು ಇಚ್ಛಿಸುವವರು ಸೂಕ್ತ ದಾಖಲೆಗಳನ್ನು ಜಿಲ್ಲಾಡಳಿತಕ್ಕೆ ನೀಡಿ ಅನುಮತಿ ಪಡೆಯಬಹುದಾಗಿದೆ. ಚೆಕ್ ಪೋಸ್ಟ್ ಗಳಲ್ಲಿ ತುರ್ತು ಆರೋಗ್ಯ ನಿಮಿತ್ತ ಹೊರ ಹೋಗುವ ನಾಗರಿಕರಿಗೆ ಪಾಸ್ ಗಳನ್ನು ವಿತರಣೆ ಮಾಡಲಾಗುತ್ತಿದೆ. ಇನ್ನು ಉಳಿದಂತೆ ವಾಣಿಜ್ಯ ವಹಿವಾಟು ಸ್ಥಗಿತಗೊಂಡಿದ್ದು, ಅಗತ್ಯವಾದ ವಸ್ತುಗಳನ್ನು ಮಾರಾಟ, ಔಷಧೀಯ ಸೇವೆ, ಆಸ್ಪತ್ರೆ, ತರಕಾರಿ, ಹಾಲು ಮಾರಾಟಕ್ಕೆ ಅನುಮತಿ ನೀಡಲಾಗಿದೆ.