ಚಿತ್ರಗಳು : ಆಗಸ್ಟ್ ಮಳೆ, ಭೂ ಕುಸಿತದ ಬಳಿಕ ಕೊಡಗು
ಮಡಿಕೇರಿ, ಸೆಪ್ಟೆಂಬರ್ 02 : ಮಡಿಕೇರಿಯಲ್ಲಿ ಮಳೆ ಸ್ವಲ್ಪ ಕಡಿಮೆ ಆಗಿದ್ದು ಜಿಲ್ಲಾಡಳಿತ ಮನೆಹಾನಿಯ ಸಮೀಕ್ಷೆ ಆರಂಭಿಸಿದೆ. ಮಳೆ ಮತ್ತು ಭೂ ಕುಸಿತದಿಂದ ಅಪಾರ ನಷ್ಟ ಅನುಭವಿಸಿದ ಕೊಡಗು ಜಿಲ್ಲೆಗೆ ಸರ್ಕಾರ ಮೊದಲ ಹಂತದಲ್ಲಿ 115 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ಆಗಸ್ಟ್ನಲ್ಲಿ ಸುರಿದ ಮಳೆ, ಭೂ ಕುಸಿತದಿಂದ ಕೊಡಗು ಜಿಲ್ಲೆಯಲ್ಲಿ ಅಪಾರವಾದ ಹಾನಿಯಾಗಿದೆ. ಭೂ ಕುಸಿತದಿಂದ ಹಲವು ಮನೆಗಳು ಕುಸಿದಿದ್ದು, ಜಿಲ್ಲಾಡಳಿತ ಮನೆ ಹಾನಿಯ ಸಮೀಕ್ಷೆ ಆರಂಭಿಸಿದೆ. 740ಕ್ಕೂ ಅಧಿಕ ಮನೆಗಳು ಕುಸಿದಿವೆ ಎಂದು ಅಂದಾಜಿಸಿವೆ.
ಕೊಡಗಿನಲ್ಲಿ ಇನ್ನೂ ನಡೆಯುತ್ತಿದೆ ಪರಿಹಾರ ಕಾರ್ಯ
ಗಾಳಿಬೀಡು, ಮಕ್ಕಂದೂರು, ಕೆ.ನಿಡುಗಣೆ, ಗರ್ವಾಲೆ, ಮದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಪಾರವಾದ ಹಾನಿಯಾಗಿದೆ. ಬೆಳೆ ಹಾನಿ, ಮನೆ ಹಾನಿಯ ಸಮೀಕ್ಷೆಯ ಜೊತೆ ಗ್ರಾಮೀಣ ರಸ್ತೆಗಳ ದುರಸ್ಥಿ ಕಾರ್ಯವನ್ನು ಕೈಗೊಳ್ಳಲಾಗಿದೆ.
ಕೊಡಗು ಪ್ರಕೃತಿ ವಿಕೋಪಕ್ಕೆ 'ಕೈಲ್' ಮುಹೂರ್ತ ಸಂಭ್ರಮ ಬಲಿ!
ಮಡಿಕೇರಿ-ಸಂಪಾಜೆ ಮತ್ತು ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯನ್ನು ದುರಸ್ಥಿ ಮಾಡುವ ಕುರಿತು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಗಡಿ ರಸ್ತೆ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ಗಳ ಜೊತೆ ಸಭೆ ನಡೆಸಿದರು....
ಮಹಾಮಳೆಯಿಂದ ನಲುಗಿದ ಊರಲ್ಲಿ ಸೂತಕದ ಕಳೆ
ರಸ್ತೆ, ಮನೆ ಹಾನಿ ವೀಕ್ಷಣೆ
ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತಿಕ್ ಮತ್ತು ಹಿರಿಯ ಅಧಿಕಾರಿಗಳ ತಂಡ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾದ ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬೆಟಗೇರಿ ಜಹಾಂಗೀರ್ ಪೈಸಾರಿ ರಸ್ತೆ, ಹೆಬ್ಬಟಗೇರಿ ದೇವಸ್ತೂರು ರಸ್ತೆ ಮತ್ತು ದೇವಸ್ತೂರು ಕಾಲೂರು ರಸ್ತೆ, ದೇವಸ್ತೂರು ಮಂದಾಲ್ ಪಟ್ಟಿ ಕಾಲೂರು ರಸ್ತೆಗಳನ್ನು ವೀಕ್ಷಿಸಿದರು.
ಆಹಾರ ಕಿಟ್ ವಿತರಣೆ
ಕೊಡಗು ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ವಿಶೇಷ ಆಹಾರ ಕಿಟ್ ಗಳನ್ನು ಬಿಡುಗಡೆ ಮಾಡಿದೆ. ಜಿಲ್ಲಾಡಳಿತ 1950 ವಿಶೇಷ ಆಹಾರ ಕಿಟ್ ಗಳನ್ನು ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿ ಗಳಿಗೆ ವಾಹನಗಳಲ್ಲಿ ಕಳುಹಿಸಿದೆ.
ಆಗಸ್ಟ್ 31ರ ತನಕ 9,622 ಕುಟುಂಬಗಳಿಗೆ ಕಿಟ್ಗಳನ್ನು ವಿತರಣೆ ಮಾಡಲಾಗಿದೆ. ಮಡಿಕೇರಿಯ 5,224, ಸೋಮವಾರಪೇಟೆಯ 2092, ವಿರಾಜಪೇಟೆ ತಾಲೂಕಿನ 2,306 ಕಿಟ್ಗಳನ್ನು ವಿತರಣೆ ಮಾಡಲಾಗಿದೆ.
ಬಸ್ ಸೌಲಭ್ಯ ಆರಂಭ
ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸೂರ್ಲಬ್ಬಿ, ಮಂಕ್ಯ, ಕುಂಬಾರಗಡಿಗೆ, ಕಿಕ್ಕರಳ್ಳಿ ಗ್ರಾಮಕ್ಕೆ ಮಿನಿ ಬಸ್ ಸೌಲಭ್ಯ ಆರಂಭಿಸಲಾಗಿದೆ. ಸೋಮವಾರಪೇಟೆ ಬಸ್ ನಿಲ್ದಾಣದಿಂದ ಹೊರಡುವ ಬಸ್ ನಂತರ ಅದೇ ಮಾರ್ಗವಾಗಿ ಸೋಮವಾರಪೇಟೆಗೆ ವಾಪಸ್ ಆಗಲಿದೆ.
ಮಡಿಕೇರಿ ನಗರದಲ್ಲಿ ಪೌರ ಕಾರ್ಮಿಕರು ರಸ್ತೆಯ ಸ್ವಚ್ಚತೆಯಲ್ಲಿ ತೊಡಗಿದ್ದಾರೆ. ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಮೊದಲು ದುರಸ್ಥಿ ಮಾಡಲು ಜಿಲ್ಲಾಡಳಿತ ಗಮನ ಹರಿಸಿದೆ.
ರಸ್ತೆ ದುರಸ್ಥಿ ಕಾರ್ಯ
ಕೆ.ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಟ್ಟಗೇರಿ, ದೇವಸ್ತೂರು, ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲೂರು ಮುಂತಾದ ಗ್ರಾಮಗಳ ರಸ್ತೆಯನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ.
ಮಡಿಕೇರಿ ತಾಲೂಕಿನ ಗಾಳಿಬೀಡು-ಕಾಲೂರು ಅಯ್ಯಪ್ಪ ದೇಗುಲ ರಸ್ತೆ ದುರಸ್ಥಿ ಕಾರ್ಯವನ್ನು ಮಾಡಲಾಗುತ್ತಿದೆ.
ಸೆ.3ರ ತನಕ ಅವಕಾಶ
ಮಳೆ, ಭೂ ಕುಸಿತದಿಂದ ಹಾನಿಗೊಳಗಾದ ವಿವರಗಳನ್ನು ಸಲ್ಲಿಸಲು ಸೆ.3ರ ತನಕ ಅವಕಾಶ ನೀಡಲಾಗಿದೆ. ಕುಟುಂಬದ ಮುಖ್ಯಸ್ಥರು/ಸದಸ್ಯರು ನಿಗದಿತ ನಮೂನೆಯಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಲೆಕ್ಕಿಗರಿಗೆ ಸಲ್ಲಿಸಲು ಸೂಚಿಸಿದೆ.
ಭೂ ಕುಸಿತ ಮತ್ತು ಭಾರೀ ಮಳೆಯಿಂದ ಹಾನಿಗೀಡಾಗಿದ್ದ ಜೋಡುಪಾಲ ಮತ್ತು 2ನೇ ಮೊಣ್ಣಂಗೇರಿ ಬಳಿ ರಸ್ತೆ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ.