ಕೊಡಗು ಜಿಲ್ಲಾಡಳಿತ ಮುಂಗಾರು ಎದುರಿಸಲು ಸನ್ನದ್ಧ
ಮಡಿಕೇರಿ, ಮೇ 20; ಕೊಡಗು ಜಿಲ್ಲೆಯಲ್ಲಿ ಜೂನ್ ಮೊದಲ ವಾರದಲ್ಲಿಯೇ ಮುಂಗಾರು ಮಳೆ ಆರಂಭವಾಗುವ ಸಾಧ್ಯತೆ ಇರುವುದರಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅಧಿಕಾರಿಗಳ ಸಭೆ ನಡೆಸಿ ಮುಂಗಾರು ಮಳೆಯ ವೇಳೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಒಂದಷ್ಟು ಸಲಹೆ ಸೂಚನೆಗಳನ್ನು ನೀಡಿದರು.
ಜೂನ್ ಮೊದಲ ವಾರದಲ್ಲಿ ಬೆಂಗಳೂರಿಗೆ ಮುಂಗಾರು ಪ್ರವೇಶ, ಹೇಗಿರಲಿದೆ ಮಳೆ
ಸೂಕ್ಷ್ಮ ಪ್ರದೇಶಗಳಲ್ಲಿ ಅಗತ್ಯ ಮುನ್ನೇಚ್ಚರಿಕೆ ವಹಿಸಬೇಕು. ಮಳೆ ಹಾನಿ ತಡೆಯುವ ನಿಟ್ಟಿನಲ್ಲಿ ಮುಂಚಿತವಾಗಿ ಲಿಖಿತವಾಗಿ ಕುಟುಂಬಗಳಿಗೆ ಮಾಹಿತಿ ನೀಡಬೇಕು, ಕಂದಾಯ ಪೊಲೀಸ್, ಪಂಚಾಯತ್ ರಾಜ್, ಅರಣ್ಯ, ಸೆಸ್ಕ್, ಲೋಕೋಪಯೋಗಿ ಹೀಗೆ ಹಲವು ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಮಳೆ ಹಾನಿ ಬಗ್ಗೆ ಕಾಲಕಾಲಕ್ಕೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕರಾವಳಿಯಲ್ಲಿ ಮತ್ತೆ ಮಳೆ ಅಬ್ಬರ; ಜೂನ್ 1ರಂದು ಕೇರಳಕ್ಕೆ ಮುಂಗಾರು ಪ್ರವೇಶ ನಿರೀಕ್ಷೆ
ಇನ್ನು ಸೂಕ್ಷ್ಮ ಪ್ರದೇಶಗಳಲ್ಲಿನ ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸುವುದು, ಸ್ಥಳೀಯ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸುವುದು, ಸೂಕ್ಷ್ಮ ಪ್ರದೇಶಗಳಿಗೆ ಎನ್ಡಿಆರ್ಎಫ್ ತಂಡ ಭೇಟಿ ನೀಡುವುದು, ಪರಿಹಾರ ಕೇಂದ್ರ ಅಗತ್ಯವಿದ್ದಲ್ಲಿ ತೆರೆಯುವುದು, ಹೀಗೆ ಹಲವು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು.
ಈ ಬಾರಿಯೂ 'ಸಾಮಾನ್ಯ ಮುಂಗಾರು': ಹವಾಮಾನ ಇಲಾಖೆ
ರಸ್ತೆ, ಸೇತುವೆ, ಮನೆ ಹಾನಿ ಬಗ್ಗೆ ಛಾಯಾಚಿತ್ರ ಸಹಿತ ತಕ್ಷಣವೇ ಮಾಹಿತಿ ನೀಡುವುದು, ಬರೆ ಕುಸಿತ ಉಂಟಾದಲ್ಲಿ ಹಾಗೂ ರಸ್ತೆ ಅಥವಾ ವಿದ್ಯುತ್ ಕಂಬಕ್ಕೆ ಮರ ಬಿದ್ದಲ್ಲಿ ತೆರವುಗೊಳಿಸುವ ಕಾರ್ಯ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಹಶೀಲ್ದಾರ್ ಗೋವಿಂದರಾಜು ಮಾತನಾಡಿ, "ಮುಂಗಾರು ಸಂಬಂಧ ಸೋಮವಾರಪೇಟೆ ತಾಲ್ಲೂಕಿನಲ್ಲಿ ಅಗತ್ಯ ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸೂಕ್ಷ್ಮ ಪ್ರದೇಶಗಳ 775 ಕುಟುಂಬಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಕುಶಾಲನಗರ ನೆಲ್ಯಹುದಿಕೇರಿ, ಮಾದಾಪುರ, ಗರ್ವಾಲೆ, ಸೂರ್ಲಬ್ಬಿ ಮತ್ತಿತ್ತರ ಕಡೆಯಲ್ಲಿ ಪ್ರವಾಹ ಉಂಟಾಗಲಿದ್ದು, ಈ ಪ್ರದೇಶದಲ್ಲಿನ ಜನರಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಭಾರೀ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವುದರಿಂದ ಸೀಮೆಎಣ್ಣೆ ಪೂರೈಸಬೇಕಿದೆ" ಎಂದು ಹೇಳಿದರು.
ಇದೇ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಮಾತನಾಡಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸವವರಿಗೆ ತರಬೇತಿ ನೀಡುವುದು ಮತ್ತಿತ್ತರ ಸಂಬಂಧ ಅಗತ್ಯ ಕ್ರಮಕೈಗೊಳ್ಳುವಂತೆ ಸಲಹೆ ನೀಡಿದರೆ, ನೋಡಲ್ ಅಧಿಕಾರಿ ಶಿವು ಬಾದಾಮಿ ಅವರು ಕೂಡಿಗೆ ಮತ್ತು ಸುಂಟಿಕೊಪ್ಪದಲ್ಲಿ ಗೋಶಾಲೆ ತೆರೆಯುವ ಬಗ್ಗೆ ಮಾಹಿತಿ ನೀಡಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ, ನಾಚ್ಚಪ್ಪ, ಹೋಬಳಿ ಮಟ್ಟದ ನೋಡಲ್ ಅಧಿಕಾರಿ ಕೆ.ಟಿ.ದರ್ಶನ, ಬಾಲಕೃಷ್ಣ ರೈ, ಶ್ರೀಧರ್, ಸಲೀಂ, ಲಿಂಗರಾಜು, ನೆಹರು ಇತರರು ತಮ್ಮ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಸಂಬಂಧ ಕೈಗೊಳ್ಳಲಾದ ಮುನ್ನೇಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
Recommended Video
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಡಿವೈಎಸ್ಪಿ ಶೈಲೇಂದ್ರ ಕುಮಾರ್, ಎನ್ಡಿಆರ್ಎಫ್ ತಂಡದ ಪ್ರಮುಖರಾದ ಬಬ್ಲು ವಿಶ್ವಾಸ್, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಅನನ್ಯ ವಾಸುದೇವ್ ಸಭೆಯಲ್ಲಿದ್ದರು.