ಕೊಡಗಿನಲ್ಲಿ ಮಾ.31 ರವರೆಗೆ ನಿಷೇಧಾಜ್ಞೆ ಮುಂದುವರಿಕೆ : ಡಿಸಿ
ಮಡಿಕೇರಿ, ಮಾರ್ಚ್ 22: ಮಾರ್ಚ್ 22 ರ ರಾತ್ರಿ 12 ಗಂಟೆವರೆಗೆ ಐಪಿಸಿ 144 ಜಾರಿಯಲ್ಲಿದ್ದು, ಮಾರ್ಚ್ 31 ರವರೆಗೆ ಎಂದಿನಂತೆ 144(3) ಮುಂದುವರೆಯಲಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ಹೇಳಿದರು.
ಮಡಿಕೇರಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ 144(3) ಮುಂದುವರೆಯಲಿದೆ. ಸಾರ್ವಜನಿಕರಿಗೆ ಅಗತ್ಯವಾದ ದಿನ ಬಳಕೆಯ ವಸ್ತುಗಳಾದ ದಿನಸಿ ಅಂಗಡಿ, ಹಾಲು, ಹಣ್ಣು ತರಕಾರಿ, ಬ್ಯಾಂಕ್ಗಳು, ಎಟಿಎಂ, ಇಂದಿರಾ ಕ್ಯಾಂಟಿನ್ ತೆರೆದಿರುತ್ತವೆ.
ಹೋಟೆಲ್, ಹೋಂ ಸ್ಟೇಗಳು, ಲಿಕ್ಕರ್ ಶಾಪ್ ಗಳು ಹಾಗೂ ಸರ್ಕಾರಿ ಹಾಗೂ ಖಾಸಗಿ ಬಸ್ಗಳೂ ಬಂದ್ ಆಗಲಿದ್ದು, ಅದರ ಜೊತೆಗೆ ಜಿಲ್ಲೆಯ ಗಡಿ ಭಾಗಗಳನ್ನು ಬಂದ್ ಮಾಡಲಾಗುವುದು ಎಂದರು.
""ಜಿಲ್ಲಾ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿದ್ದ 8 ಜನರಲ್ಲಿ ನಾಲ್ವರಿಗೆ ನೆಗೆಟಿವ್ ಬಂದಿದ್ದು, ಇನ್ನೂ ನಾಲ್ಕು ಜನರ ವರದಿಯನ್ನು ನಿರಿಕ್ಷಿಸುತ್ತಿದ್ದೇವೆ. ವಿದೇಶಗಳಿಂದ ವಾಪಸ್ಸಾಗಿರುವ 247 ಮಂದಿಯನ್ನು ಹೋಂ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಸ್ಟೇಟ್ ಸರ್ವಲೆನ್ಸ್ ಟೀಂ ಕೂಡಾ ಕೊರೊನಾ ಪೀಡಿತನ ಜೊತೆ ರಾಜಹಂಸ ಬಸ್ಸಿನಲ್ಲಿ ಪ್ರಯಾಣಿಸಿದ್ದವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ'' ಎಂದು ಹೇಳಿದರು.
ಕೊರೊನಾ ಭೀತಿ ಇರುವುದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಸರ್ಕಾರಿ ನೌಕರರನ್ನು ಅನಿವಾರ್ಯ ಪರಿಸ್ಥಿಯಲ್ಲಿ ಇರಿಸಬೇಕಾದ್ದರಿಂದ ಯಾರೂ ಜಿಲ್ಲೆ ಬಿಟ್ಟು ಹೊರಗೆ ಹೋಗುವುದು ಬೇಡ ಎಂದರು.
ವಿದೇಶಗಳಿಂದ ಮರಳಿದವರ ಕೈಗೆ ಮುದ್ರೆ ಹಾಕಲಾಗುತ್ತಿದೆ. ಗಾಳಿಬೀಡು ಗ್ರಾಮದಲ್ಲಿ ಒಂದು ಪ್ರಕರಣ ಬಂದಿದ್ದರಿಂದ ಜಿಲ್ಲಾಡಳಿತವೇ ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಇಂತಹ ವ್ಯವಸ್ಥೆಯನ್ನು ಜಿಲ್ಲಾಡಳಿತದ ಟಾಸ್ಕ್ ಪೊರ್ಸ್ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ವೈದ್ಯರು ಹಾಗೂ ನರ್ಸ್ಗಳ ಕೊರತೆ ಎದುರಾಗಿದ್ದು, ಮೆಡಿಕಲ್ ಹಾಗೂ ಪ್ಯಾರಾ ಮೆಡಿಕಲ್ ಕೋರ್ಸ್ ಮುಗಿಸಿ ಮನೆಯಲ್ಲೇ ಇರುವವರು ಸ್ವಯಂ ಪ್ರೇರಿತರಾಗಿ ಬಂದು ಸೇವೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮೋಹನ್ ಕುಮಾರ್ ಇದ್ದರು.