ದೆಹಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರ ಪತ್ತೆ: ಕೊಡಗು ಡಿಸಿ
ಮಡಿಕೇರಿ, ಎಪ್ರಿಲ್ 01: ದೆಹಲಿಯ ಧಾಮಿ೯ಕ ಸಭೆಯಲ್ಲಿ ಕೊಡಗು ಜಿಲ್ಲೆಯಿಂದ ಪಾಲ್ಗೊಂಡಿದ್ದವರ ಮಾಹಿತಿ ಪಡೆಯಲಾಗಿದ್ದು, ಜಿಲ್ಲೆಯಿಂದ ಭಾಗವಹಿಸಿದ್ದ 11 ಜನರನ್ನು ವಿಳಾಸದೊಂದಿಗೆ ಪತ್ತೆಹಚ್ಚಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ಹೇಳಿದರು.
ಜಿಲ್ಲಾಡಳಿತದ ತಂಡವು ಅವರ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, 11 ಜನರ ಪೈಕಿ 05 ಜನರು ದೆಹಲಿಯಲ್ಲಿ ಕ್ವಾರಂಟೈನ್ ನಲ್ಲಿ ಇದ್ದಾರೆ ಮತ್ತು ಇನ್ನೂ 05 ಜನರು ಹೊರಜಿಲ್ಲೆಗಳಲ್ಲಿ ವಾಸವಿದ್ದು, ಈ ಬಗ್ಗೆ ಸಂಬಂಧಪಟ್ಟ ಜಿಲ್ಲೆಗಳಿಗೆ ಮಾಹಿತಿ ನೀಡಲಾಗಿದೆ ಎಂದರು.
ಉಳಿದ 01 ಪ್ರಕರಣದಲ್ಲಿ ಮಾತ್ರ ವ್ಯಕ್ತಿಯು ಈ ಜಿಲ್ಲೆಯಲ್ಲಿ ವಾಸವಿದ್ದು, 14 ದಿನಗಳ ಕ್ವಾರಂಟೈನ್ ಅವಧಿ ಮುಗಿದಿರುತ್ತದೆ. ಅದಾಗ್ಯೂ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್ ನಲ್ಲಿಡಲು ತೀರ್ಮಾನಿಸಲಾಗಿದೆ.
ಆದ್ದರಿಂದ ಈ ಬಗ್ಗೆ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಆದರೂ ನಮ್ಮ ಪರಿಶೀಲನೆಯಿಂದ ದೆಹಲಿ ಧಾಮಿ೯ಕ ಸಭೆಯಲ್ಲಿ ಪಾಲ್ಗೊಂಡಿದ್ದವರು ಬಿಟ್ಟು ಹೋಗಿದ್ದಲ್ಲಿ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಲು ಕೋರಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್. ಕೆ ಜಾಯ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.