300 ಜನರನ್ನು ಸಂಪರ್ಕಿಸಿದ್ದ ಕೊಡಗಿನ ಕೊರೊನಾ ಪೀಡಿತ
ಮಡಿಕೇರಿ, ಮಾರ್ಚ್ 20: ಕೊಡಗಿನಲ್ಲಿ ಮೊನ್ನೆಯಷ್ಟೆ ಪತ್ತೆಯಾದ ಕೊರೊನಾ ಸೋಂಕಿತ ವ್ಯಕ್ತಿ ಆಸ್ಪತ್ರೆಗೆ ದಾಖಲಾಗುವುದಕ್ಕೂ ಮೊದಲು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 300 ಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿದ್ದಾನೆ ಎನ್ನುವ ಅಘಾತಕಾರಿ ಮಾಹಿತಿ ಇದೀಗ ಬಹಿರಂಗವಾಗಿದೆ.
ಮಾರ್ಚ್ 15 ರಂದು ದುಬೈನಿಂದ ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಬಂದು, ಬಳಿಕ ಕೊಡಗಿಗೆ ಬಂದಿದ್ದ ವ್ಯಕ್ತಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಪರೀಕ್ಷಾ ವರದಿ ಬಂದ ನಂತರ ಗುರುವಾರ ಸೋಂಕು ಇರುವುದು ಖಚಿತವಾಗಿತ್ತು. ನಂತರ ಸೋಂಕಿತ ವ್ಯಕ್ತಿಯ ಪ್ರಯಾಣದ ಜಾಡು ಹಿಡಿದು ತನಿಖೆ ನಡೆಸಿದ ಜಿಲ್ಲಾಡಳಿತಕ್ಕೆ ಶಾಕಿಂಗ್ ಮಾಹಿತಿ ಸಿಕ್ಕಿದೆ.
ಕಲಬುರಗಿಯ ವೃದ್ಧನ ಟ್ರಾವೆಲ್ ಹಿಸ್ಟರಿ ಬೆಚ್ಚಿಬೀಳಿಸುತ್ತೆ
ಈ ವ್ಯಕ್ತಿಯು 300 ಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿದ್ದಾನೆ ಎಂದು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ಮಾಹಿತಿ ನೀಡಿದ್ದಾರೆ.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ
ಅಲ್ಲದೇ ಕೊಂಡಂಗೇರಿಯ ನಿವಾಸಿಗಳೆಲ್ಲರಿಗೂ ಹೋಂ ಕ್ವಾರಂಟೈನ್ ನಲ್ಲಿರಿಸಲಾಗಿದ್ದು, ಅವರೆಲ್ಲರೂ ಮನೆ ಬಿಟ್ಟು ಹೊರಗೆ ಬರದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿದ್ದೇವೆ ಎಂದರು.
ಗ್ರಾಮದ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ವಾಹನ ಹಾಗೂ ಪ್ರತ್ಯೇಕ ಕೊಠಡಿಗಳಲ್ಲಿ ಬಿಇಓ ನೇತೃತ್ವದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಶಾಲಾ ಶಿಕ್ಷಕರು ವ್ಯಕ್ತಿಯ ನೇರ ಸಂಪರ್ಕ ಹೊಂದಿದ್ದರು. ನೇರ ಸಂಪರ್ಕದಲ್ಲಿದ್ದ ಶಿಕ್ಷಕರ ಜೊತೆಗೆ ಆ ಶಾಲೆಗಳ ಎಲ್ಲಾ ಶಿಕ್ಷಕರಿಗೂ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು
ಬೆಂಗಳೂರಿನಿಂದ ಮಡಿಕೇರಿಗೆ ಪ್ರಯಾಣ
KA19-F-3170 ಸಂಖ್ಯೆಯ ಕೆಎಸ್ಆರ್ಟಿಸಿ ರಾಜಹಂಸ ಬಸ್ನಲ್ಲಿ ಬೆಂಗಳೂರಿನಿಂದ ಮಡಿಕೇರಿಗೆ ಸೋಂಕಿತ ವ್ಯಕ್ತಿ ಪ್ರಯಾಣ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ರಾತ್ರಿ 11:33ಕ್ಕೆ ಈ ಬಸ್ ಬೆಂಗಳೂರಿನ ಸ್ಯಾಟ್ ಲೈಟ್ ಬಸ್ ನಿಲ್ದಾಣದಿಂದ ಪ್ರಯಾಣ ಆರಂಭಿಸಿದೆ. ವಿರಾಜಪೇಟೆ, ಮರ್ನಾಡ್ ಮಾರ್ಗವಾಗಿ ಈ ಬಸ್ ಸಾಗಿದೆ. ಈ ಬಸ್ನಲ್ಲಿ ಪ್ರಯಾಣ ಮಾಡಿದವರು ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಎಂದು ತಿಳಿಸಲಾಗಿದೆ.
ಕೊಡಗು ಜಿಲ್ಲೆಗೆ ಕಾಲಿಟ್ಟ ಕೊರೊನಾ: ಕರ್ನಾಟಕದಲ್ಲಿ ಒಟ್ಟು 15 ಕೇಸ್
ಸೋಂಕಿತ ಮನೆಯಿಂದ 5 ಕಿಮೀ ಸೂಕ್ಷ್ಮ ವಲಯ
ಕೊಡಗಿನಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾದ ಕಾರಣ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಹೋಟೆಲ್, ರೆಸಾರ್ಟ್, ಹೋಮ್ ಸ್ಟೇ, ರೆಸ್ಟೋರೆಂಟ್ ಗಳನ್ನು ಬಂದ್ ಮಾಡುವಂತೆ ಆದೇಶಿಸಲಾಗಿದೆ. ಸದ್ಯಕ್ಕೆ, ಜಾತ್ರೆ, ಸಮಾರಂಭ, ಪಾರ್ಟಿ ಏನು ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ. ಇದರ ಬೆನ್ನಲ್ಲೇ ಸೋಂಕಿತ ಓಡಾಟ ನಡೆಸಿದ್ದ ಕೊಂಡಂಗೇರಿಯ ಸ್ವಗೃಹದ ಸುತ್ತ 75 ಮನೆಗಳಿರುವ ಪ್ರದೇಶವನ್ನು ಅತೀ ಸೂಕ್ಷ್ಮ ಹಾಗೂ ಅಲ್ಲಿಂದ ಐದು ಕಿ.ಮೀ ವ್ಯಾಪ್ತಿಯನ್ನು ಸೂಕ್ಷ್ಮ ವಲಯಗಳು ಎಂದು ಘೋಷಿಸಿದ್ದೇವೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ 217 ಕೊರೊನಾ ಸೋಂಕಿತರು
ಈ ವಿಮಾನದಲ್ಲಿ ಬಂದಿದ್ದ ಎಲ್ಲರೂ ಒಮ್ಮೆ ಕೊರೊನಾ ಪರೀಕ್ಷೆಗೆ ಒಳಪಡಿ ಎಂದು ಸರ್ಕಾರ ವಿನಂತಿಸಿಕೊಂಡಿದೆ. ಇದುವರೆಗೂ ಕರ್ನಾಟಕದಲ್ಲಿ ಒಟ್ಟು 15 ಜನರಲ್ಲಿ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ 11, ಕಲುಬುರ್ಗಿಯಲ್ಲಿ 3, ಮಡಿಕೇರಿಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಭಾರತದಲ್ಲಿ ಒಟ್ಟು 217 ಕೇಸ್ ವರದಿಯಾಗಿದೆ. ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಹಾಗು ಪಂಜಾಬ್ನಲ್ಲಿ ತಲಾ ಒಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.