ಸಾಮಾಜಿಕ ಜಾಲತಾಣದತ್ತ ಕೊಡಗು ಕಾಂಗ್ರೆಸ್ ಪಕ್ಷ
ಮಡಿಕೇರಿ, ಆಗಸ್ಟ್ 18: ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷ ಸಂಘಟನೆ ಮತ್ತು ಪ್ರಚಾರಕ್ಕಾಗಿ ಸಾಮಾಜಿಕ ಜಾಲವನ್ನು ಸಮರ್ಥವಾಗಿ ಬಳಸಿಕೊಳ್ಳುವತ್ತ ಹೆಜ್ಜೆ ಹಾಕಿರುವುದು ಬೆಳಕಿಗೆ ಬಂದಿದೆ.
ಹಿಂದೆ ರಾಜಕೀಯ ಪಕ್ಷಗಳು ಮತದಾರರ ಮನೆಬಾಗಿಲು ತಟ್ಟಿ ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದರು. ಪ್ರತಿ ಊರಿನಲ್ಲಿಯೂ ಕಾರ್ಯಕರ್ತರ ತಂಡವನ್ನು ಕಟ್ಟುತ್ತಿದ್ದರು. ಕಾರ್ಯಕರ್ತರ ಪಡೆ ದೊಡ್ಡದಾದಷ್ಟು ಪಕ್ಷ ಗೆಲುವಿಗೆ ಹತ್ತಿರವಾಗುತ್ತಿತ್ತು.
ಆದರೆ ಕಳೆದ ಕೆಲವು ದಶಕಗಳಿಂದ ಮತದಾರರ ನೋಟ ಬದಲಾಗಿದೆ. ಪ್ರತಿ ಚುನಾವಣೆ ನಡೆದಾಗಲೂ ಯುವ ಮತದಾರರು ಸೇರ್ಪಡೆಯಾಗುತ್ತಲೇ ಇದ್ದಾರೆ. ಇವರನ್ನು ತಲುಪುವುದು ರಾಜಕೀಯ ಪಕ್ಷಗಳ ಮುಖಂಡರಿಗೆ ಸವಾಲು ಆಗಿದೆ. ಏಕೆಂದರೆ ಈ ಯುವ ಮತದಾರರ ಪೈಕಿ ಹೆಚ್ಚಿನವರು ಸದಾ ಒಂದಲ್ಲ ಒಂದು ರೀತಿಯ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಅವರೆಲ್ಲರೂ ಸದಾ ಸಾಮಾಜಿಕ ಜಾಲತಾಣಗಳಲ್ಲಿಯೇ ಸಕ್ರಿಯ ಆಗಿರುವುದರಿಂದ ಅವರನ್ನು ತಲುಪಬೇಕಾದರೆ ಸಾಮಾಜಿಕ ಜಾಲತಾಣವೇ ರಾಜಮಾರ್ಗವಾಗಿದೆ.
ರಾಜಕೀಯ ಮುಖಂಡರಿಗೆ ವರದಾನವಾಯ್ತು!
ಬದಲಾದ ಕಾಲಘಟ್ಟದಲ್ಲಿ ರಾಜಕೀಯ ಮುಖಂಡರು ಜನರ ಮುಂದೆ ಬರುವುದಕ್ಕಿಂತ ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಮಾಡುವ ಟ್ವೀಟ್ಗಳು ಸುದ್ದಿಯಾಗುತ್ತಿವೆ, ಚರ್ಚೆಯಾಗುತ್ತವೆ. ಹೀಗಾಗಿ ಇತ್ತೀಚೆಗಿನ ವರ್ಷಗಳಲ್ಲಿ ಪ್ರತಿ ರಾಜಕೀಯ ಪಕ್ಷವು ಕೂಡ ಸಾಮಾಜಿಕ ಜಾಲ ತಾಣದ ಮೂಲಕ ಜನರನ್ನು ತಲುಪಿಸುವ ಪ್ರಯತ್ನದಲ್ಲಿರುವುದು ಹೊಸ ಬೆಳವಣಿಗೆಯಾಗಿದೆ. ಹಾಗಾಗಿಯೇ ರಾಜಕೀಯ ಪಕ್ಷಗಳ ಮುಖಂಡರು ಸಾಮಾಜಿಕ ಜಾಲತಾಣವನ್ನು ಸಮಗ್ರವಾಗಿ ಬಳಸಿಕೊಳ್ಳುವತ್ತ ಹೆಜ್ಜೆ ಹಾಕುತ್ತಿದ್ದಾರೆ.
ತಾ.ಪಂ- ಜಿ.ಪಂ ಚುನಾವಣೆಗೆ ತಯಾರಿ
ಮುಂದಿನ ದಿನಗಳಲ್ಲಿ ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಬರುತ್ತಿದೆ. ಅಷ್ಟೇ ಅಲ್ಲ ವಿಧಾನಸಭಾ ಚುನಾವಣೆಗೂ ಉಳಿದಿರುವುದು ಬರೀ ಒಂದೂವರೆ ವರ್ಷಗಳು ಮಾತ್ರ. ಹೀಗಾಗಿ ಈಗಿನಿಂದಲೇ ರಾಜಕೀಯ ಪಕ್ಷಗಳು ಮುಂದಿನ ಎಲ್ಲ ಚುನಾವಣೆಗಳನ್ನು ಹೇಗೆ ಗೆಲ್ಲಬೇಕು ಎಂಬ ಲೆಕ್ಕಾಚಾರವನ್ನು ಹಾಕುತ್ತಿದ್ದು, ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಅಧಿಪತ್ಯ ಸಾಧಿಸಲು ಕೈಪಡೆ ತಂತ್ರ
ಇದೆಲ್ಲದರ ನಡುವೆ ಬಿಜೆಪಿಯ ಭದ್ರಕೋಟೆ ಕೊಡಗಿನಲ್ಲಿ ಕಾಂಗ್ರೆಸ್ ಅಧಿಪತ್ಯ ಸಾಧಿಸುವ ಸಲುವಾಗಿ ಹೊಸ ತಂತ್ರಗಳನ್ನು ಹೆಣೆಯುತ್ತಿದೆ. ಅದರಲ್ಲಿ ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣವನ್ನು ಸಕ್ರಿಯಗೊಳಿಸುವತ್ತ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯು ಮುಂದಾಗಿದ್ದು, ಸಾಮಾಜಿಕ ಜಾಲತಾಣ ಘಟಕದ ಕಾರ್ಯಕಾರಿಣಿ ಸಭೆ ನಡೆಸಿ ಮುಂದೆ ಹೂಡಬೇಕಾದ ರಾಜಕೀಯ ತಂತ್ರಗಳಿಗೆ ವೇದಿಕೆಯನ್ನು ನಿರ್ಮಿಸಿಕೊಳ್ಳುತ್ತಿದೆ.
ಸದ್ಯ ಸಾಮಾಜಿಕ ಜಾಲತಾಣ ಘಟಕದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಾಮಾಜಿಕ ಜಾಲತಾಣದ ನಿರ್ವಹಣೆ ಮತ್ತು ಕಾರ್ಯಕರ್ತರ ಸೇರ್ಪಡೆ, ಬ್ಲಾಕ್, ವಲಯ ಮತ್ತು ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಕಾಂಗ್ರೆಸ್ ಪಕ್ಷದ ಪರವಾಗಿ ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ಕಾರ್ಯ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಕಾಂಗ್ರೆಸ್ ಸಾಧನೆಯನ್ನು ಜನರಿಗೆ ತಲುಪಿಸಿ
ಈ ವೇಳೆ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಸಾಮಾಜಿಕ ಜಾಲತಾಣದ ಮೂಲಕ ವೇಗವಾಗಿ ಜನರನ್ನು ತಲುಪಲು ಸಾಧ್ಯವಾಗಲಿದ್ದು, ಕಾರ್ಯಕರ್ತರು ಕಾರ್ಯೋನ್ಮುಖರಾಗಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರೆ, ಕೆಪಿಸಿಸಿ ಪ್ಯಾನಲಿಸ್ಟ್ ಟಿ.ಪಿ. ರಮೇಶ್ ಮಾತನಾಡಿ ಸಾಮಾಜಿಕ ಜಾಲತಾಣದ ಕಾರ್ಯಕರ್ತರ ಸಂವಹನ, ಪದಬಳಕೆ ಮತ್ತು ವಾಸ್ತವತೆಯನ್ನು ಹೇಗೆ ವ್ಯಕ್ತಪಡಿಸಬೇಕೆಂಬುದನ್ನು ತಿಳಿಸಿದರು.
ಕೈ ತಂತ್ರ ಫಲಕೊಡುತ್ತಾ?
ಕಾಂಗ್ರೆಸ್ ನೇತೃತ್ವದ ಸರ್ಕಾರದ ಹಲವು ಯೋಜನೆ, ಸಾಧನೆಗಳನ್ನು ಜನರಿಗೆ ತಲುಪಿಸುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಅದನ್ನು ತಲುಪಿಸುವ ಕೆಲಸ ಮಾಡಬೇಕೆಂಬ ಸಲಹೆಗಳನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣವನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ಸಭೆಯಲ್ಲಿದ್ದ ಸಾಮಾಜಿಕ ಜಾಲತಾಣದ ಜಿಲ್ಲಾ ಉಪಾಧ್ಯಕ್ಷ ಲೋಹಿತ್ ಗೌಡ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹನೀಫ್ ಸಂಪಾಜೆ, ಜಿಲ್ಲಾ ಸಮಿತಿ ಸದಸ್ಯರಾದ ಕೊಟ್ಟಮುಡಿ ಶಾಫಿ, ಮಿನಾಜ್, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮಿಲನ್, ನಾಪೋಕ್ಲುವಿನ ಬಷೀರ್ ಮೊದಲಾದವರು ಹಲವು ರೀತಿಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
Recommended Video