ಕೊಡಗು: "7 ಸಾವಿರ ಆದಿವಾಸಿ ಕುಟುಂಬಗಳಿಗೆ ಕೋವಿಡ್ ಲಸಿಕೆ ಹಾಕಿಸುವ ಗುರಿ''
ಮಡಿಕೇರಿ, ಜೂನ್ 12: ಕೊವೀಡ್- 19ರ ಮೂರನೇ ಅಲೆ ಬರದಂತೆ ನೋಡಿಕೊಳ್ಳುವಲ್ಲಿ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಬೇಕು. ಆ ದಿಸೆಯಲ್ಲಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸುವಂತೆ ಶಾಸಕರಾದ ಕೆ.ಜಿ.ಬೋಪಯ್ಯ ಮನವಿ ಮಾಡಿದ್ದಾರೆ.
ಕೊಡಗು ಜಿಲ್ಲೆಯ ಮಾಲ್ದಾರೆ ಬಳಿಯ ಚೆನ್ನಂಗಿ ಬಸವನಹಳ್ಳಿ ಆಶ್ರಮ ಶಾಲೆಯಲ್ಲಿ ಆದಿವಾಸಿ ಜನರಿಗೆ ಕೋವಿಡ್ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ""ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಇರುವುದಿಲ್ಲ. ಆದ್ದರಿಂದ ತಪ್ಪು ಕಲ್ಪನೆಯಿಂದ ಆದಿವಾಸಿ ಜನರು ಹೊರಬರಬೇಕು. ಚೆನ್ನಂಗಿ ಬಸವನಹಳ್ಳಿ ವ್ಯಾಪ್ತಿಯಲ್ಲಿ 255ಕ್ಕೂ ಹೆಚ್ಚು ಜನರು ಲಸಿಕೆ ಪಡೆಯಲು ಮುಂದೆ ಬಂದಿರುವುದು ಉತ್ತಮ ಬೆಳವಣಿಗೆ, ಆ ದಿಸೆಯಲ್ಲಿ ವಿರಾಜಪೇಟೆ ತಾಲ್ಲೂಕಿನ ಎಲ್ಲಾ ಹಾಡಿಗಳಲ್ಲಿ ಕೊರೊನಾ ಮುಕ್ತ ಮಾಡಬೇಕು'' ಎಂದು ಕೆ.ಜಿ.ಬೋಪಯ್ಯ ಕೋರಿದರು.
ಕೊಡಗು: ಕೋವಿಡ್ 2ನೇ ಅಲೆಯಲ್ಲಿ ಮೂರು ಸಾವಿರ ಮಕ್ಕಳಿಗೆ ಸೋಂಕು
ಕೋವಿಡ್-19 ನಿಯಂತ್ರಣ ಸಂಬಂಧ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಹಾಗೂ ಆಗಾಗ ಕೈ ತೊಳೆದುಕೊಳ್ಳಬೇಕು ಎಂದು ಶಾಸಕರು ಸಲಹೆ ನೀಡಿದರು. ಜ್ವರ, ಕೆಮ್ಮು, ನೆಗಡಿ, ಮೈ-ಕೈ ನೋವು ಹೀಗೆ ಹಲವು ರೀತಿಯ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆ ತೆರಳಿ ವೈದ್ಯರನ್ನು ಭೇಟಿ ಮಾಡಬೇಕು ಎಂದರು.
ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ, ""ಹಿಂದೆ ಆದಿವಾಸಿಗಳು ಸ್ಥಳೀಯವಾಗಿ ದೊರೆಯುವ ಗೆಡ್ಡೆಗೆಣಸು ಉಪಯೋಗಿಸಿ ಗಟ್ಟಿಯಾಗಿದ್ದರೂ, ಆದರೆ ಈಗಿನ ಪರಿಸ್ಥಿತಿ ಬೇರೆಯೇ ಇದೆ. ಆದ್ದರಿಂದ ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ಲಸಿಕೆ ಪಡೆಯಬೇಕು ಎಂದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಸೇರಿದಂತೆ ಜಿಲ್ಲೆಯಲ್ಲಿ ಕೊರೊನಾ ಮುಕ್ತವಾಗಬೇಕು. ಚೆನ್ನಂಗಿ ಬಸವನಹಳ್ಳಿ ಭಾಗದಲ್ಲಿನ ಆದಿವಾಸಿ ಜನರಿಗೆ ಈಗಾಗಲೇ ಅರಣ್ಯ ಹಕ್ಕುಪತ್ರ ನೀಡಲಾಗಿದ್ದು, ಸದ್ಯದಲ್ಲಿಯೇ ಆರ್ಟಿಸಿ ನೀಡಲಾಗುವುದು. ಜೊತೆಗೆ ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡುವಲ್ಲಿ ಶಾಸಕರು ಮುಂದಾಗಿದ್ದಾರೆ ಎಂದರು.
ಚೆನ್ನಯ್ಯನಕೋಟೆ ಗ್ರಾ.ಪಂ ಸದಸ್ಯ ಹಾಗೂ ಆದಿವಾಸಿ ಮುಖಂಡರಾದ ಜೆ.ಕೆ.ಅಪ್ಪಾಜಿ ಮಾತನಾಡಿ, ""ಶಾಸಕ ಕೆ.ಜಿ.ಬೋಪಯ್ಯ ಅವರ ಪ್ರಯತ್ನದಿಂದ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನ ಎಲ್ಲಾ ಹಾಡಿಯ ಆದಿವಾಸಿಗಳಿಗೆ ಕೋವಿಡ್ ನಿರೋಧಕ ಲಸಿಕೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಎರಡು ತಾಲ್ಲೂಕಿನ ಎಲ್ಲಾ ಹಾಡಿಗಳಿಗೆ ಶಾಸಕರು ಭೇಟಿ ನೀಡಿ ಆದಿವಾಸಿ ಜನರನ್ನು ಮನವೊಲಿಸಿ ಲಸಿಕೆ ಕೊಡಿಸುತ್ತಿರುವುದನ್ನು ಯಾರೂ ಮರೆಯುವಂತಿಲ್ಲ ಎಂದು ಜೆ.ಕೆ.ಅಪ್ಪಾಜಿ ಹೇಳಿದರು.
ಕೋವಿಡ್ ಲಸಿಕೆ ಪಡೆಯುವುದರಿಂದ ಮದ್ಯಪಾನ ಮಾಡುವುದನ್ನು ಬಿಡಬೇಕಾಗುತ್ತದೆ ಎಂಬ ಮನೋಭಾವ ಆದಿವಾಸಿ ಜನರಲ್ಲಿದೆ. ಇದು ಹೋಗಬೇಕು. ಆದಿವಾಸಿ ಜನರ ಜೀವ ಮತ್ತು ಜೀವನ ಅತಿ ಮುಖ್ಯ, ಆ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಅವರು ಕೋರಿದರು.
ಐಟಿಡಿಪಿ ತಾಲ್ಲೂಕು ಅಧಿಕಾರಿ ಗುರುಶಾಂತಪ್ಪ ಅವರು ಮಾಹಿತಿ ನೀಡಿ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನಲ್ಲಿ 79 ಹಾಡಿಗಳಿದ್ದು, 38 ಸಾವಿರ ಆದಿವಾಸಿ ಜನರಿದ್ದಾರೆ. 7 ಸಾವಿರ ಗಿರಿಜನ ಕುಟುಂಬಗಳಿಗೆ ಕೋವಿಡ್ ಲಸಿಕೆ ನೀಡುವ ಗುರಿ ಇದ್ದು, ಈಗಾಗಲೇ 29 ಹಾಡಿಯ 600ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.
ಉತ್ಸಾಹದಿಂದ ಕೋವಿಡ್ ಲಸಿಕೆ ಪಡೆದ ಆದಿವಾಸಿ ಜನರು
ಕೊಡಗು ಜಿಲ್ಲೆ ವಿರಾಜಪೇಟೆ ಶಾಸಕರಾದ ಕೆ.ಜಿ. ಬೋಪಯ್ಯ, ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ, ರಮೇಶ್ ಹೊಳ್ಳ, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಜಿಲ್ಲೆಯ ಮಾಲ್ದಾರೆ ಮತ್ತು ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯ ಆದಿವಾಸಿ ಹಾಡಿಗಳಿಗೆ ಶನಿವಾರ ಭೇಟಿ ನೀಡಿ ಕೋವಿಡ್ ನಿರೋಧಕ ಲಸಿಕೆ ಪಡೆಯುವಂತೆ ಮನವೊಲಿಸಿದರು.
ವಿರಾಜಪೇಟೆ ತಾಲ್ಲೂಕಿನ ಹಾಡಿಗೆ ಭೇಟಿ ನೀಡಿ ಅಲ್ಲಿನ ಜನರನ್ನು ಮಾತನಾಡಿಸಿ ಕೋವಿಡ್ ಲಸಿಕೆ ಪಡೆದುಕೊಳ್ಳಿ, ಲಸಿಕೆ ಪಡೆಯುವುದರಿಂದ ಕೊರೊನಾ ಬರದಂತೆ ತಡೆಯಬಹುದಾಗಿದೆ ಎಂದು ಶಾಸಕರು ಹೇಳಿದರು.
ಹಾಗೆಯೇ ಗಿರಿಜನರ ಕುಂದುಕೊರತೆ ಬಗ್ಗೆ ಮಾಹಿತಿ ಪಡೆದ ಶಾಸಕರು, ಅರಣ್ಯ ಹಕ್ಕು ಪತ್ರ ನೀಡಲಾಗಿದೆಯೇ, ಸರ್ಕಾರದ ಸೌಲಭ್ಯಗಳು ದೊರೆಯುತ್ತಿವೆಯೇ ಎಂದು ಅಲ್ಲಿನ ಜನರನ್ನು ಕೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಆದಿವಾಸಿ ಜನರು, ಅರಣ್ಯ ಹಕ್ಕುಪತ್ರ ಸಿಕ್ಕಿದ್ದು, ಮನೆ ನಿರ್ಮಿಸಿಕೊಡಬೇಕಿದೆ ಎಂದು ಶಾಸಕರ ಗಮನಕ್ಕೆ ತಂದರು. ಮತ್ತೊಬ್ಬರು ಒಂಟಿ ಜೀವನ, ಬಂಧು- ಬಳಗ ಯಾರೂ ನೋಡುತ್ತಿಲ್ಲ, ತಮಗೆ ಮನೆ ಇಲ್ಲವೆಂದು ಅಳಲು ತೋಡಿಕೊಂಡರು.
Recommended Video