ಕೊಡಗಿನ ಯುವಕ ಪಾಕಿಸ್ತಾನದ ಜೈಲಿನಲ್ಲಿ ಬಂಧಿ?: ತಂದೆ-ತಾಯಿ ಗೋಳಾಟ
ಮಡಿಕೇರಿ, ಅಕ್ಟೋಬರ್ 13: ಕೊಡಗಿನ ಯುವಕನೊಬ್ಬ ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿದ್ದಾನೆ ಎಂದು ಹೇಳಲಾಗಿದೆ. ಆದರೆ ಅಲ್ಲಿನ ಜೈಲಿನಲ್ಲಿರುವ ಯುವಕ ಈತನೇ ಎಂದು ಇನ್ನೂ ದೃಢಪಟ್ಟಿಲ್ಲ. ಗೋಣಿಕೊಪ್ಪ ಸಮೀಪದ ಕೈಕೇರಿ ಗ್ರಾಮದ ನಿವಾಸಿಗಳಾದ ಪಿ.ಎಂ ಕುಶಾಲಪ್ಪ-ಮೀನಾಕ್ಷಿ ದಂಪತಿ ಪುತ್ರ ಯಶ್ವಂತ್ ಎಂಬಾತನು 2006 ರಲ್ಲಿಮೈಸೂರಿನಿಂದ ಕಾಣೆಯಾಗಿದ್ದನು. ಆಗ ಆತನಿಗೆ 18 ವರ್ಷ ವಯಸ್ಸು. ಇತ್ತೀಚೆಗೆ ಪಾಕಿಸ್ತಾನದಿಂದ ಬಂದಿರುವ ಭಾವಚಿತ್ರ ಮಗನದ್ದೇ ಎಂದು ದಂಪತಿ ಹೇಳುತ್ತಿದ್ದಾರೆ. ಡಿಎನ್ಎ ಪರೀಕ್ಷೆ ಮೂಲಕ ಅದನ್ನು ದೃಢಪಡಿಸುವ ಪ್ರಯತ್ನ ನಡೆಯುತ್ತಿದೆ. ಆದರೆ, ಉಭಯ ರಾಷ್ಟ್ರಗಳ ನಡುವಿನ ಪ್ರತಿಕೂಲ ಪರಿಸ್ಥಿತಿಯಿಂದ ಈ ಪ್ರಯತ್ನಕ್ಕೆ ಹಿನ್ನಡೆಯಾಗುತ್ತಿದೆ.
ಗೋಣಿಕೊಪ್ಪ ಕಾವೇರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯಶ್ವಂತನನ್ನು ಹಾಜರಾತಿ ಕಡಿಮೆ ಎಂಬ ಕಾರಣಕ್ಕೆ ಕಾಲೇಜಿನಿಂದ ಬಿಡಿಸಿ, ಮೈಸೂರಿನ ಜನಶಿಕ್ಷಣ ಸಂಸ್ಥೆಗೆ ಸೇರಿಸಿದ್ದರು. ನಂತರ ಮೈಸೂರಿನಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದ ಯಶ್ವಂತ, ಮನೆಯ ಸಂಪರ್ಕ ಕಡಿಮೆ ಮಾಡಿಕೊಂಡಿದ್ದ. ದೂರವಾಣಿ ಕರೆ ಸ್ವೀಕರಿಸುತ್ತಿರಲಿಲ್ಲ. ಆತ ಮನೆಗೆ ಬರುವ ನಿರೀಕ್ಷೆಯೂ ಹುಸಿಯಾದಾಗ, 2007 ರಲ್ಲಿ ಆತ ಕಾಣೆಯಾಗಿರುವ ಬಗ್ಗೆ ಮೈಸೂರಿನಲ್ಲಿ ದೂರು ದಾಖಲಿಸಿದ್ದರು.
ಕೊರೊನಾ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಕ್ಕೆ ಅಂಗಡಿ ಖಾಲಿ ಮಾಡಿಸಿದ ಮಾಲೀಕ
ಹೈಕೋರ್ಟ್ನಲ್ಲಿ ದಾವೆ
ಈ ನಡುವೆ, ಪಾಕಿಸ್ತಾನದಲ್ಲಿ ಭಾರತೀಯರು ಬಂಧಿಗಳಾಗಿರುವ ಕುರಿತು ಮಾಧ್ಯಮಗಳಲ್ಲಿ ಭಿತ್ತರವಾದ ವರದಿಯಲ್ಲಿ ಯಶ್ವಂತ್ನನ್ನು ಹೋಲುವ ಚಿತ್ರ ಇದ್ದಿದ್ದರಿಂದ ಆತ ತಮ್ಮ ಮಗನೇ ಎಂಬ ನಿರ್ಧಾರಕ್ಕೆ ಪಾಲಕರು ಬಂದಿದ್ದಾರೆ. ಈ ಬಗ್ಗೆ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದು, ಅವರ ಪ್ರಯತ್ನಕ್ಕೆ ಪೂರಕ ತೀರ್ಪು ಬಂದಿದೆ.
ಲಾಹೋರ್ನ ಹೂದೋಟದಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯಶ್ವಂತ್ ತನ್ನ ಹೆಸರನ್ನು ರಮೇಶ್ ಎಂದು ಹೇಳಿಕೊಂಡಿದ್ದು, ಪಾಲಕರ ಹೆಸರು ನೀಡಿಲ್ಲ. ಹೆಸರಿನ ಗೊಂದಲದಿಂದಾಗಿ ತಾಂತ್ರಿಕ ಸಮಸ್ಯೆಯಾಗಿದ್ದು, ರಮೇಶ್ ತಮ್ಮ ಮಗನೆ ಎಂದು ಪಾಲಕರು ಹೇಳುತ್ತಿದ್ದಾರೆ.
ಪ್ರಧಾನಿ ಮೋದಿ ಮೂಲಕ ಮತ್ತಷ್ಟು ಒತ್ತಡ
ರಮೇಶ್ ಲಾಹೋರ್ನ ಜೈಲಿನಲ್ಲಿದ್ದು, ಅಲ್ಲಿಗೆ ಹೇಗೆ ತಲುಪಿದ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಕುರಿತು ಹಿಂದೆ ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಹೆಚ್ಚು ಮುತುವರ್ಜಿ ವಹಿಸಿದ್ದರು. ವೈದ್ಯಕೀಯ ಪರೀಕ್ಷೆ ಮೂಲಕ ವಾರಸುದಾರನ ಪತ್ತೆ, ಭಾರತೀಯ ಎಂಬುದನ್ನು ದೃಢಪಡಿಸಿಕೊಳ್ಳಲು ಪತ್ರ ವ್ಯವಹಾರ ನಡೆಯುತ್ತಿದೆ. ಶಾಸಕ ಕೆ.ಜಿ ಬೋಪಯ್ಯ, ಸಂಸದ ಪ್ರತಾಪ್ ಸಿಂಹ, ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದೆ. ಪ್ರಧಾನಿ ಮೋದಿ ಮೂಲಕ ಮತ್ತಷ್ಟು ಒತ್ತಡ ಹೇರಲು ಪಾಲಕರು ಮುಂದಾಗಿದ್ದಾರೆ.
ಪಾಕಿಸ್ತಾನದೊಂದಿಗೆ ಪತ್ರ ವ್ಯವಹಾರ
ಭಾರತೀಯ ವಿದೇಶಾಂಗ ಸಚಿವಾಲಯದ ಉಪ ಕಾರ್ಯದರ್ಶಿ ಶ್ವೇತಾ ಸಿಂಗ್ ಪಾಕಿಸ್ತಾನದೊಂದಿಗೆ ಪತ್ರ ವ್ಯವಹಾರ ನಡೆಸುತ್ತಿದ್ದಾರೆ ಎಂದು ಬೆಂಗಳೂರಿನ ವಕೀಲ ಸಿ.ಎನ್ ಶ್ರೀನಿವಾಸ್ರಾವ್ ಅವರಿಗೆ ಅಧಿಕೃತ ಮಾಹಿತಿ ಬಂದಿದೆ. ಭಾರತೀಯ ಎಂಬುದನ್ನು ನಿರ್ಧರಿಸಬೇಕಿದ್ದು, ಈ ಬಗ್ಗೆ ಪಾಕಿಸ್ತಾನ ಸರ್ಕಾರದ ಅನುಮತಿಗಾಗಿ ಕಾಯುತ್ತಿರುವುದಾಗಿ ತಿಳಿಸಿದೆ. ಅದರಂತೆ, ಭಾರತೀಯ ವೈದ್ಯಕೀಯ ತಂಡಕ್ಕೆ ಅಲ್ಲಿಗೆ ತೆರಳಲು ಅನುಮತಿ ಕೇಳಲಾಗುತ್ತಿದೆ.
Recommended Video
ಭಾವಚಿತ್ರ ನನ್ನ ಮಗನನ್ನು ಹೋಲುವಂತೆ ಇದೆ
ಯಶ್ವಂತ್ನನ್ನು ಪಾಕಿಸ್ತಾನದಿಂದ ಬಿಡಿಸಿಕೊಂಡು ಬಂದು ವರದಿ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ಇಲ್ಲಿಂದ ಒಂದು ತಂಡ ಕೂಡ ಅಲ್ಲಿಗೆ ತೆರಳಿ, ಅವನ ಪರಿಸ್ಥಿತಿ ತಿಳಿದುಕೊಂಡು ಬಂದಿದೆ. ಆತನು ಮಾನಸಿಕವಾಗಿ ಅಸ್ವಸ್ಥಗೊಂಡಿರುವ ಬಗ್ಗೆ ತಿಳಿಸಿದೆ. ಆತನ ಶಿಕ್ಷೆಯ ಅವಧಿ ಕೂಡ ಮುಗಿದಿದೆ ಎಂದು ಬೆಂಗಳೂರಿನ ವಕೀಲ ಶ್ರೀನಿವಾಸ ರಾವ್ ಹೇಳುತ್ತಾರೆ.
ಪಾಕಿಸ್ತಾನ ಜೈಲಿನಿಂದ ಬಂದಿರುವ ಭಾವಚಿತ್ರ ನನ್ನ ಮಗನನ್ನು ಹೋಲುವಂತೆ ಇದೆ. ಕಾಣೆಯಾಗುವಾಗ 18 ವರ್ಷ ವಯಸ್ಸಾಗಿತ್ತು. ಈಗ 32 ವರ್ಷ ವಯಸ್ಸಾಗಿದೆ. ಅವನನ್ನು ಬಿಡಿಸಿಕೊಂಡು ಬರಲು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಯಶ್ವಂತನ ತಂದೆ ಪಿ.ಎಂ ಕುಶಾಲಪ್ಪ ತಿಳಿಸಿದರು.