ವಿಶೇಷ ಲೇಖನ; ಕೊಡಗಿನ ನಾಟಿ ಓಟದ ಹಾದಿ ಬಲು ರೋಚಕ!
ಮಡಿಕೇರಿ, ಜುಲೈ 23; ಇತರೆಡೆಗೆ ಹೋಲಿಸಿದರೆ ಕೊಡಗಿನಲ್ಲಿ ನಡೆಯುವ ಭತ್ತದ ಕೃಷಿ ಕಾರ್ಯ ವಿಭಿನ್ನ ಮತ್ತು ವಿಶಿಷ್ಟವಾಗಿದೆ. ಗದ್ದೆ ಉಳುಮೆಯಿಂದ ಆರಂಭವಾಗಿ ಕೊಯ್ಲು ತನಕವೂ ಹಲವು ಸಂಪ್ರದಾಯ ಮಿಳಿತಗೊಂಡಿರುವುದು ಎದ್ದು ಕಾಣುತ್ತದೆ. ಅದರಲ್ಲೊಂದು ನಾಟಿ ಓಟವಾಗಿದೆ.
ಇವತ್ತು ಅಲ್ಲಲ್ಲಿ ಕೆಸರುಗದ್ದೆ ಕ್ರೀಡಾಕೂಟಗಳು ನಡೆಯುವುದನ್ನು ನಾವು ಕಾಣಬಹುದು. ಆದರೆ ಈ ಕೆಸರುಗದ್ದೆ ಕ್ರೀಡೆಗೆಲ್ಲ ಮೂಲ ಕೊಡಗಿನ ನಾಟಿ ಓಟವಾಗಿದ್ದು, ಇದು ಇಲ್ಲಿನ ಸಾಂಪ್ರದಾಯಿಕ ಕ್ರೀಡೆ ಎಂದರೂ ತಪ್ಪಾಗಲಾರದು.
ಕೊಡಗು ವಿಶೇಷ; 'ಕಕ್ಕಡ ಮಾಸ' ಎಂದರೆ ಬಿಡುವಿಲ್ಲದ ದುಡಿಮೆ ಕಾಲ!
ಎಡೆ ಬಿಡದೆ ಸುರಿಯುವ ಮಳೆಯಲ್ಲಿ ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ನಡೆಯುವುದೇ ಕಷ್ಟವಾಗಿದ್ದ ಕಾಲದಲ್ಲಿ ಭತ್ತದ ಬಯಲ ನಾಟಿ ನೆಟ್ಟ ವಿಶಾಲ ಕೆಸರು ಗದ್ದೆಯಲ್ಲಿ ಒಂದು ಏರಿಯಿಂದ ಮತ್ತೊಂದು ಏರಿಗೆ ಓಡಿ ಗುರಿಮುಟ್ಟುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಅದರಲ್ಲಿ ನೈಪುಣ್ಯತೆ ಬೇಕಾಗುತ್ತಿತ್ತು.
ಕೊಡಗಿನ ಜಿಟಿ ಜಿಟಿ ಮಳೆಯೂ... ಕಕ್ಕಡ ಪದ್ನಟ್ ಆಚರಣೆಯೂ...
ಅಂದಿನ ನಾಟಿ ಓಟದ ಸಂಪ್ರದಾಯವನ್ನು ಇವತ್ತಿಗೂ ಹಲವು ಕುಟುಂಬಗಳು ಮುಂದುವರೆಸಿಕೊಂಡು ಹೋಗುತ್ತಿವೆ. ಗೆಲುವು ಪಡೆದವರಿಗೆ ಉತ್ತಮ ಬಹುಮಾನ ನೀಡಿ ಗೌರವಿಸಲಾಗುತ್ತಿದೆ. ಈ ಕುರಿತ ವಿವರಗಳು ಇಲ್ಲಿವೆ...
ಕೊಡಗು ಜಿಲ್ಲೆಯ 5ನೇ ತಾಲ್ಲೂಕಾಗಿ ಕುಶಾಲನಗರ ಅಸ್ತಿತ್ವಕ್ಕೆ
ಕಠಿಣವಾದ ಭತ್ತದ ನಾಟಿ ಕಾರ್ಯ
ಆಧುನಿಕ ಸೌಲಭ್ಯವೇ ಇಲ್ಲದ ಆ ಕಾಲದಲ್ಲಿ ಭತ್ತದ ನಾಟಿ ಕಠಿಣವಾದ ಕೃಷಿ ಕೆಲಸವಾಗಿತ್ತು. ಆಧುನಿಕ ಉಪಕರಣಗಳು ಇರಲಿಲ್ಲ ಎತ್ತುಗಳಿಂದಲೇ ಉಳುಮೆ ಮಾಡಿ ಸುರಿಯುವ ಮಳೆಯಲ್ಲೇ ನಾಟಿ ಮಾಡಬೇಕಿತ್ತು. ಈ ನಾಟಿ ಕೆಲಸ ಒಂದೆರಡು ದಿನಕ್ಕೆ ಮುಗಿಯುತ್ತಿರಲಿಲ್ಲ ತಿಂಗಳಾನುಗಟ್ಟಲೆ ನಡೆಯುತ್ತಿತ್ತು. ಹೆಚ್ಚಿನವರು ಚಿಕ್ಕಗದ್ದೆಗಳಲ್ಲಿ ಮೊದಲಿಗೆ ನಾಟಿ ನೆಟ್ಟು ದೊಡ್ಡ ಗದ್ದೆಯೊಂದನ್ನು ಉಳಿಸಿಕೊಳ್ಳುತ್ತಿದ್ದರು. ಈ ಗದ್ದೆ ನಾಟಿಗೆ ಹೆಚ್ಚಿನ ಜನ ಸೇರುತ್ತಿದ್ದರು. ಜೊತೆಗೆ ನಾಟಿ ನೆಡಲು ಬರುವವರಿಗೆ ಮಧ್ಯಾಹ್ನ ಬಾಡೂಟವನ್ನು ಏರ್ಪಡಿಸಲಾಗುತ್ತಿತ್ತು. ಇದನ್ನು 'ಕಂಬಳ' ಎಂದು ಕರೆಯುತ್ತಾರೆ.
ಓಟ್ ಕಾರನಿಗೆ ಗೌರವ ಸಲ್ಲಿಕೆ
ನಾಟಿ ಮುಗಿದ ಮೇಲೆ ಸಂಜೆ ನಾಟಿ ನೆಟ್ಟ ಗದ್ದೆಯಲ್ಲಿ ಓಟ ಏರ್ಪಡಿಸಲಾಗುತ್ತಿತ್ತು. ನಾಟಿ ಓಟದಲ್ಲಿ ಸ್ಪರ್ಧಿಸಿ ವಿಜೇತರಾದವರಿಗೆ ನಗದು, ಬಾಳೆಗೊನೆ, ತೆಂಗಿನಕಾಯಿ, ವೀಳ್ಯದೆಲೆ ನೀಡಲಾಗುತ್ತಿತ್ತು. ಇದು ಬಹುಮಾನ ಎನ್ನುವುದಕ್ಕಿಂತ ಪ್ರೋತ್ಸಾಹವಾಗಿತ್ತು. ಜೊತೆಗೆ ನಾಟಿ ಓಟದಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳಿಗೆ ಇದು ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆಯಾಗಿ, ಮನೋರಂಜನೆಯೂ ಸಿಗುತ್ತಿತ್ತು. ಈ ನಾಟಿ ಓಟದಲ್ಲಿ ಗೆಲುವು ಪಡೆಯುವ ವ್ಯಕ್ತಿ ಸುತ್ತಮುತ್ತಲಿನ ಊರುಗಳಲ್ಲಿ ನಾಟಿ (ಓಟ್ ಕಾರ) ಓಟಗಾರ ಎಂಬ ಖ್ಯಾತಿ ಪಡೆಯುತ್ತಿದ್ದನಲ್ಲದೆ, ಇತರೆಡೆಗಳಲ್ಲಿ ನಡೆಯುತ್ತಿದ್ದ ನಾಟಿ ಓಟದಲ್ಲಿ ತಪ್ಪದೆ ಭಾಗವಹಿಸಿ ತನ್ನ ಪ್ರತಿಭೆ ಮೆರೆಯುತ್ತಿದ್ದನು.
ರೋಚಕವಾದ ನಾಟಿ ಓಟದ ಹಾದಿ
ಇನ್ನು ನಾಟಿ ಓಟ ನಡೆದು ಬಂದ ಹಾದಿಯನ್ನೊಮ್ಮೆ ಮೆಲುಕು ಹಾಕುತ್ತಾ ಹೋದರೆ ಇದು ಇವತ್ತು ನಿನ್ನೆ ಹುಟ್ಟಿಕೊಂಡಿದ್ದಲ್ಲ. ಹಲವು ತಲೆಮಾರುಗಳಿಂದ ಬಂದಿದೆ ಎಂಬುದಂತು ಸತ್ಯ. ನಾಟಿ ಓಟ ರಾಜಮಹಾರಾಜರ ಕಾಲದಲ್ಲಿಯೂ ಪ್ರಚಲಿತದಲ್ಲಿತ್ತು ಎಂದು ಹೇಳಲಾಗುತ್ತದೆ. ಅವತ್ತಿನ ಕಾಲದಲ್ಲಿ ಸೈನಿಕರು ಭತ್ತದ ಗದ್ದೆಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡು ಗುರಿಮುಟ್ಟಲು ಓಡುತ್ತಿದ್ದರೆ ರಾಜ ಗದ್ದೆಯ ಏರಿಯಲ್ಲಿ ನಿಂತು ವೀಕ್ಷಿಸುತ್ತಿದ್ದರಂತೆ.
ಕ್ರೀಡಾಪಟ್ಟುಗಳಿಗೆ ನಾಟಿಗದ್ದೆಯೇ ಕ್ರೀಡಾಂಗಣ
ನಂತರದ ಕಾಲಮಾನದಲ್ಲಿನ ಬೆಳವಣಿಗೆಯನ್ನು ಗಮನಿಸಿದ್ದೇ ಆದರೆ ಅವತ್ತಿನ ದಿನಗಳಲ್ಲಿ ಕೊಡಗಿನಲ್ಲಿ ಭತ್ತದ ಕೃಷಿಯೇ ಪ್ರಧಾನವಾಗಿತ್ತು. ಹೀಗಾಗಿ ಜೂನ್ ತಿಂಗಳ ಪ್ರಾರಂಭದಲ್ಲಿ ರೈತರು ನೇಗಿಲು ಹಿಡಿದು ಗದ್ದೆಗಿಳಿದರೆ ನಾಟಿ ಕೆಲಸ ಮುಗಿಸಿ ಈಚೆಗೆ ಬರುವ ವೇಳೆಗೆ ತಿಂಗಳುಗಳೇ ಕಳೆದು ಹೋಗುತ್ತಿತ್ತು. ಈ ಸಂದರ್ಭ ಪೇಟೆ, ಪಟ್ಟಣದ ರಂಗು ರಂಗಿನ ಬದುಕಾಗಲೀ, ಮನೋರಂಜನೆಯಾಗಲೀ ಅವರಿಗೆ ದೊರಕುತ್ತಿರಲಿಲ್ಲ. ಆದ್ದರಿಂದ ಆಯಾ ಗ್ರಾಮದ ಕೆಲವು ಕುಟುಂಬಗಳು ನಾಟಿ ಓಟವನ್ನು ಏರ್ಪಡಿಸುತ್ತಿದ್ದರು. ಇದರಲ್ಲಿ ಸ್ಥಳೀಯರು ಸೇರಿದಂತೆ ಬೇರೆ ಊರಿನ ನಾಟಿ ಓಟಗಾರರು ಭಾಗವಹಿಸುತ್ತಿದ್ದರು. ಕೆಲವರು ಓಡಿ ತಮ್ಮ ಪ್ರತಿಭೆ ಪ್ರದರ್ಶಿಸಿದರೆ ಮತ್ತೆ ಕೆಲವರು ಓಡಿ, ನೋಡಿ ಮನೋರಂಜನೆ ಪಡೆಯುತ್ತಿದ್ದರು. ಇನ್ನು ನಾಟಿ ಓಟದೊಂದಿಗೆ ಹಲವು ಕುಟುಂಬಗಳು ತಮ್ಮ ನಾಟಿ ಕಾರ್ಯಕ್ಕೆ ತೆರೆ ಎಳೆದು ಬಿಡುತ್ತಿದ್ದರು.
ಮುಂದುವರೆಯುತ್ತಿರುವ ನಾಟಿ ಓಟ
ಅಂದಿನ ನಾಟಿ ಓಟದ ಸಂಪ್ರದಾಯವನ್ನು ಇವತ್ತಿಗೂ ಹಲವು ಕುಟುಂಬಗಳು ಮುಂದುವರೆಸಿಕೊಂಡು ಹೋಗುತ್ತಿವೆ. ಗೆಲುವು ಪಡೆದವರಿಗೆ ಉತ್ತಮ ಬಹುಮಾನ ನೀಡಿ ಗೌರವಿಸಲಾಗುತ್ತಿದೆ. ಅದರ ಜತೆಗೆ ಕಳೆದ ಒಂದೆರಡು ದಶಕಗಳಂದೀಚೆಗೆ ಸಾಂಪ್ರದಾಯಿಕ ನಾಟಿ ಓಟದ ಜತೆಯಲ್ಲಿಯೇ ಕೆಸರು ಗದ್ದೆ ಕ್ರೀಡೆಗಳು ಹುಟ್ಟಿಕೊಂಡು ಜನಪ್ರಿಯವಾಗುತ್ತಿದ್ದು, ಅದಕ್ಕೆಲ್ಲ ಮೂಲ ನಾಟಿ ಓಟ ಎಂಬುದಂತು ಸತ್ಯ.