ಕೊಡಗು ವಿಶೇಷ; 'ಕಕ್ಕಡ ಮಾಸ' ಎಂದರೆ ಬಿಡುವಿಲ್ಲದ ದುಡಿಮೆ ಕಾಲ!
ಮಡಿಕೇರಿ, ಜುಲೈ 22; ಕೊಡಗಿನಲ್ಲಿ ಕಳೆದ ಮೂರು ವರ್ಷಗಳಿಂದೀಚೆಗೆ ಮಹಾ ಮಳೆ ಸುರಿಯುತ್ತಿದೆ. ಹಲವು ದಶಕಗಳ ಹಿಂದಿನ ಮಳೆಗಾಲವನ್ನು ಮತ್ತೆ ನೆನಪಿಗೆ ತರುತ್ತಿದೆ. 2015-16ರಲ್ಲಿ ಮಳೆ ಸಕಾಲದಲ್ಲಿ ಸುರಿಯದೆ, ಜನ ಸಂಕಷ್ಟ ಅನುಭವಿಸುವಂತಾಗಿತ್ತು.
2017ರಲ್ಲಿ ಮುಂಗಾರು ಮಳೆಗಿಂತ ಹಿಂಗಾರು ಮಳೆ ಉತ್ತಮವಾಗಿ ಸುರಿದು ಕೆಆರ್ಎಸ್ ಜಲಾಶಯ ಭರ್ತಿ ಯಾಗುವುದರೊಂದಿಗೆ ಜನ ನೆಮ್ಮದಿಯುಸಿರು ಬಿಡುವಂತೆ ಮಾಡಿತು. ಆ ನಂತರ 2018ರ ಬಳಿಕ ಪ್ರತಿವರ್ಷವೂ ಧಾರಾಕಾರ ಮಳೆ ಕೊಡಗಿನಲ್ಲಿ ಸುರಿಯುವುದರೊಂದಿಗೆ ಹಿಂದಿನ ಮಳೆಗಾಲದ ಆ ದಿನಗಳನ್ನು ಮತ್ತೆ ನೆನಪಿಸುಂತೆ ಮಾಡುತ್ತಿದೆ.
ಕೊಡಗು: ಭಾಗಮಂಡಲದಲ್ಲಿ ಪಿಂಡ ಪ್ರದಾನಕ್ಕೆ ಅವಕಾಶ
ಇದೀಗ ಕೊಡಗಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದು ನಡುಮಳೆಗಾಲದ ದಿನವಾಗಿದ್ದು, ಕೊಡಗಿನವರ ಲೆಕ್ಕಾಚಾರದಲ್ಲಿ ಈ ಕಾಲಾವಧಿಯನ್ನು ಕಕ್ಕಡ ಮಾಸ (ಆಟಿ ತಿಂಗಳು) ಎಂದು ಕೂಡ ಕರೆಯಲಾಗುತ್ತದೆ.
ಮಂಡ್ಯದ ರೈತನ ಮನೆಯೀಗ ಭತ್ತ ವೈವಿಧ್ಯ ಕೇಂದ್ರ!
ಸಾಮಾನ್ಯವಾಗಿ ಕಕ್ಕಡ ತಿಂಗಳೆಂದರೆ ಜುಲೈ 17ರಿಂದ ಆರಂಭವಾಗಿ ಆಗಸ್ಟ್ 16ರವರೆಗಿನ ಒಂದು ತಿಂಗಳ ಅವಧಿಯಾಗಿದೆ. ಈ ಸಮಯ ಕೊಡಗಿನವರಿಗೆ ಬಿಡುವಿಲ್ಲದ ದುಡಿಮೆಯ ಕಾಲವಾಗಿರುತ್ತದೆ. ಭತ್ತವೇ ಪ್ರಧಾನ ಕೃಷಿಯಾಗಿದ್ದ ಕಾಲದಲ್ಲಿ ಭತ್ತದ ನಾಟಿಯನ್ನು ಈ ಅವಧಿಯಲ್ಲಿ ಮಾಡಲಾಗುತ್ತಿತ್ತು. ಅದು ತಿಂಗಳಾನುಗಟ್ಟಲೆ ನಡೆಯುತ್ತಿದ್ದುದರಿಂದ ಜನ ಹೊರಗಿನ ಪ್ರಪಂಚದಿಂದ ದೂರವಿದ್ದು, ಕೆಲಸ ಕಾರ್ಯದಲ್ಲಿ ಮುಳುಗಿ ಹೋಗಿ ಬಿಡುತ್ತಿದ್ದರು.
ಕೊಡಗು ಜಿಲ್ಲೆಯ 5ನೇ ತಾಲ್ಲೂಕಾಗಿ ಕುಶಾಲನಗರ ಅಸ್ತಿತ್ವಕ್ಕೆ
ಸುರಿಯುವ ಮಳೆ, ಕೊರೆಯುವ ಚಳಿ
ಮುಂಜಾನೆ ಐದು ಗಂಟೆಯಿಂದಲೇ ಉಳುಮೆಗೆ ಗದ್ದೆಗೆ ಇಳಿದರೆ ಮತ್ತೆ ಆತ ಮನೆಯತ್ತ ಮುಖ ಮಾಡುತ್ತಿದ್ದದ್ದು ರಾತ್ರಿಯೇ. ಈ ಸಮಯದಲ್ಲಿ ಸುರಿಯುವ ಮಳೆ, ಕೊರೆಯುವ ಚಳಿ. ಎಲ್ಲವನ್ನು ಸಹಿಸಿಕೊಂಡು ನೀರು ತುಂಬಿದ ಕೆಸರು ಗದ್ದೆಯಲ್ಲಿ ಮೈಬಗ್ಗಿಸಿ ದುಡಿಯುತ್ತಿದ್ದರು. ಈ ಸಮಯದಲ್ಲಿ ಎಲ್ಲ ರೀತಿಯ ಶುಭಕಾರ್ಯಗಳಿಗೆ ನಿರ್ಬಂಧವಾಗಿರುತ್ತಿತ್ತು. ಗದ್ದೆ ಮತ್ತು ಮನೆಯಷ್ಟೇ ಅವರ ಪ್ರಪಂಚವಾಗಿರುತ್ತಿತ್ತು.
ಬದುಕಿಗೆ ಭತ್ತದ ಕೃಷಿಯೇ ಆಸರೆ
ಆಗಿನ ಕಾಲದಲ್ಲಿ ಈಗಿನಂತೆ ಯಾವುದೇ ವಾಣಿಜ್ಯ ಬೆಳೆಗಳ ಭರಾಟೆಯಿರಲಿಲ್ಲ. ಹೀಗಾಗಿ ನೀರಿನಾಶ್ರಯವಿರುವ ಸ್ಥಳಗಳಲ್ಲಿ ಭತ್ತದ ಗದ್ದೆಗಳನ್ನು ನಿರ್ಮಿಸಿ ಭತ್ತ ಬೆಳೆಯುತ್ತಿದ್ದರು. ಬಳಿಕ ಭತ್ತವನ್ನು ಮಾರಿ ತಮಗೆ ಬೇಕಾದ ಪದಾರ್ಥಗಳನ್ನು ತೆಗೆದುಕೊಳ್ಳುತ್ತಿದ್ದರು. ಸದಾ ಮಳೆ ಸುರಿಯುತ್ತಿದ್ದರಿಂದ ತರಕಾರಿ ಇನ್ನಿತರ ಯಾವುದೇ ಬೆಳೆಯುವುದು ಇಲ್ಲಿ ಕಷ್ಟವಾಗುತ್ತಿತ್ತು. ಕೆಲವೊಮ್ಮೆ ಮಳೆ ಹನಿತುಂಡಾಗದಂತೆ ವಾರಾನುಗಟ್ಟಲೆ ಸುರಿಯುತ್ತಿತ್ತು.
ಬೇಸಿಗೆಯಲ್ಲಿಯೇ ಮಳೆಗಾಲಕ್ಕೆ ಸಿದ್ಧತೆ
ಆಧುನಿಕ ಸೌಲಭ್ಯಗಳು ಇಲ್ಲದ ಕಾಲದಲ್ಲಿ ಬಹುತೇಕ ಊರುಗಳು ನದಿ ತೊರೆಗಳು ತುಂಬಿ ಹರಿಯುತ್ತಿದ್ದರಿಂದ ಸಂಪರ್ಕ ಕಡಿದು ಕೊಳ್ಳುತ್ತಿತ್ತು. ಆದರೆ ಇದರ ಅರಿವಿದ್ದ ಜನರು ಬೇಸಿಗೆಯ ದಿನಗಳಲ್ಲಿಯೇ ಮಳೆಗಾಲಕ್ಕೆಂದೇ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದರು. ಕಕ್ಕಡ ಮಾಸದಲ್ಲಿ ಎಗ್ಗಿಲ್ಲದೆ ಮಳೆ ಸುರಿಯುತ್ತಿದ್ದರಿಂದ ಇಡೀ ವಾತಾವರಣ ಶೀತಮಯವಾಗಿ ಬಿಡುತ್ತಿತ್ತು. ಜತೆಗೆ ಶೀತದಲ್ಲಿಯೇ ಕೆಲಸಗಳನ್ನು ಮಾಡಬೇಕಾಗಿತ್ತು.
ಕಕ್ಕಡದಲ್ಲಿ ಸೇವಿಸಬೇಕೆಂಬ ಸಂಪ್ರದಾಯ
ಹೀಗಾಗಿ ಅಂತಹ ಪರಿಸ್ಥಿತಿಯಲ್ಲಿ ತಮ್ಮ ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ಹಿರಿಯರು ಕೆಲವೊಂದು ಆಹಾರ ಪದಾರ್ಥಗಳನ್ನು ಕಂಡು ಹಿಡಿದು ಕೊಂಡಿದ್ದರಲ್ಲದೆ, ಅವುಗಳನ್ನು ಕಕ್ಕಡ ಮಾಸದಲ್ಲಿ ಸೇವಿಸಬೇಕೆಂಬ ಸಂಪ್ರದಾಯ ಮಾಡಿಕೊಂಡಿದ್ದರು. ಅವತ್ತಿನ ದಿನಗಳಲ್ಲಿ ಆ ಪದಾರ್ಥಗಳು ಸುಲಭವಾಗಿ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿಯೇ ದೊರೆಯುತ್ತಿತ್ತು. ಹೀಗಾಗಿ ಅವುಗಳನ್ನು ಬಳಸಿಕೊಂಡು ತರಕಾರಿ ಸಮಸ್ಯೆಯನ್ನು ನೀಗಿಸಿಕೊಳ್ಳುತ್ತಿದ್ದುದಲ್ಲದೆ, ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು.
Recommended Video
ಕೊಡಗಿನವರಿಗೊಂದು ಸವಾಲಿನ ಕಾಲ
ಕಕ್ಕಡ ಮಾಸದಲ್ಲಿ ದೇಹದ ಉಷ್ಣಾಂಶವನ್ನು ಕಾಪಾಡಿಕೊಳ್ಳಲೇಂದೇ ನಾಟಿ ಕೋಳಿ, ಏಡಿ, ಅಣಬೆ, ಮರಕೆಸುವಿನ ಪತ್ರೊಡೆ, ಬಿದಿರು ಕಣಿಲೆ, ಮದ್ದುಪಾಯಸ ಮೊದಲಾದವುಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದರು. ಇದು ಅವತ್ತಿನಿಂದ ಇವತ್ತಿನವರೆಗೂ ನಡೆದುಕೊಂಡು ಬಂದಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಕಕ್ಕಡ ಮಾಸ ಕೊಡಗಿನವರಿಗೊಂದು ಸವಾಲಿನ ಕಾಲ ಎಂದರೂ ತಪ್ಪಾಗಲಾರದು.