ಗೋಣಿಕೊಪ್ಪಲಿನಲ್ಲಿ ಕೀರೆಹೊಳೆ ಒತ್ತುವರಿ ತೆರವು ಕಾರ್ಯಾಚರಣೆ
ಮಡಿಕೇರಿ, ಡಿಸೆಂಬರ್ 4: ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಪಟ್ಟಣದಲ್ಲಿ ಹಾದು ಹೋಗಿರುವ ಕೀರೆಹೊಳೆಯನ್ನು ಅತಿಕ್ರಮಿಸಿಕೊಂಡಿರುವ ಮನೆ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯವನ್ನು ಆರಂಭಿಸಲಾಗಿದೆ. ಇದರಿಂದ ಹೊಳೆಯ ವಿಸ್ತೀರ್ಣ ಹೆಚ್ಚಾಗುವುದರೊಂದಿಗೆ ಪ್ರವಾಹದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿದೆ.
ಪ್ರತಿ ವರ್ಷವೂ ಮಳೆ ಬಂದಾಗಲೆಲ್ಲ ಗೋಣಿಕೊಪ್ಪಲಿನಲ್ಲಿ ಹರಿಯುವ ಕೀರೆ ಹೊಳೆ ತುಂಬಿ ಹರಿಯುವುದರೊಂದಿಗೆ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸುವುದು ಸಾಮಾನ್ಯವಾಗಿತ್ತು. ಇದಕ್ಕೆ ಹೊಳೆಯನ್ನು ಅತಿಕ್ರಮಿಸಿಕೊಂಡಿರುವುದು ಕಾರಣ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದೀಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿರುವುದು ಈ ವ್ಯಾಪ್ತಿಯ ಜನರಿಗೆ ನೆಮ್ಮದಿ ತಂದಿದೆ.
ಹಾಗೆ ನೋಡಿದರೆ ಗೋಣಿಕೊಪ್ಪಲಿನಲ್ಲಿ ತೋಡುಗಳೊಂದಿಗೆ ಕೀರೆಹೊಳೆಯೂ ಹರಿಯುತ್ತಿದೆ. ಆದರೆ ಬಹಳಷ್ಟು ಮಂದಿ ಕೈಕೇರಿ ಪರಿಮಳ ಮಂಗಳ ವಿಹಾರ ಹಿಂಭಾಗದಿಂದಲೇ ತೋಡು ಒತ್ತುವರಿ ಮಾಡಿದ್ದರೆ, ಮತ್ತೊಂದೆಡೆ ಕೀರೆಹೊಳೆ ಪ್ರದೇಶವನ್ನು ಅಕ್ರಮಿಸಿಕೊಂಡಿದ್ದರಿಂದ ವರ್ಷದಿಂದ ವರ್ಷಕ್ಕೆ ಹೊಳೆಯ ವ್ಯಾಪ್ತಿ ಕಡಿಮೆಯಾಗಿ ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಹೋಗಲು ಸಾಧ್ಯವಾಗದೆ ಪಟ್ಟಣದ ಸುತ್ತಮುತ್ತಲ ಪ್ರದೇಶಗಳ ಮನೆಗಳಿಗೆ ನುಗ್ಗುತ್ತಿತ್ತು.
ಮಳೆಗಾಲದಲ್ಲಿ ಸಂಕಷ್ಟ ಅನುಭವಿಸುತ್ತಿದ್ದ ಜನರು
ಈ ಹೊಳೆಯ ದಡದ ಪ್ರದೇಶವನ್ನು ಒತ್ತುವರಿ ಮಾಡಿಕೊಂಡವರಿಂದ ಜಾಗವನ್ನು ತೆರವುಗೊಳಿಸುವಂತೆ ಹೋರಾಟಗಳು ನಡೆಯುತ್ತಾ ಬಂದಿದ್ದರೂ ಅದಕ್ಕೆ ಯಾರು ಸೊಪ್ಪು ಹಾಕಿರಲಿಲ್ಲ. ಒಂದೆರಡು ದಶಕಗಳಿಂದಲೇ ಸಾರ್ವಜನಿಕರು ಹೋರಾಟ ಮಾಡುತ್ತಲೇ ಬಂದಿದ್ದಾರೆ. 1920ರ ನಕಾಶೆಯಂತೆ ತೋಡು, ಹೊಳೆ ಗಡಿಗಳನ್ನು ಗುರುತು ಮಾಡಿ ಅತಿಕ್ರಮಿತ ಪ್ರದೇಶವನ್ನು ತೆರವು ಮಾಡುವಂತೆ ಎಂ.ವಿ. ಜಯಂತಿ ಕೊಡಗು ಜಿಲ್ಲಾಧಿಕಾರಿಯಾಗಿದ್ದಾಗಲೇ ಮನವಿಯನ್ನು ಮಾಡಲಾಗಿತ್ತು. ನಂತರ ಉಪ ವಿಭಾಗಾಧಿಕಾರಿ ಡಾ.ಎಂ.ಆರ್. ರವಿ ಅವಧಿಯಲ್ಲಿ ಸರ್ವೆ ಕಾರ್ಯಕ್ಕೆ ಚಾಲನೆ ನೀಡಿ ಒತ್ತುವರಿಯಾಗಿರುವ ಭೂಮಿಯನ್ನು ಗುರುತಿಸುವ ಕೆಲಸವನ್ನು ಮಾಡಲಾಗಿತ್ತು. ಆ ನಂತರ ಕಂದಾಯ ಇಲಾಖೆ ಅಧಿಕಾರಿಗಳು ನಿದ್ದೆಗೆ ಜಾರಿದ್ದರಿಂದ ನೆನೆಗುದಿಗೆ ಬಿದ್ದಿತು.
ಒತ್ತುವರಿ ತೆರವಿಗೆ ಆದೇಶ ನೀಡಿದ್ದ ಡಿಸಿ
ಆದರೆ ಕಳೆದ ಮೂರು ವರ್ಷಗಳಿಂದ ಸುರಿಯುತ್ತಿರುವ ಮಳೆಗೆ ಕೀರೆಹೊಳೆಯಲ್ಲಿ ಸೃಷ್ಟಿಯಾದ ಪ್ರವಾಹ ಗೋಣಿಕೊಪ್ಪ ನಗರವನ್ನು ತಲ್ಲಣ ಮಾಡಿದೆ. ಹೊಳೆಯನ್ನು ಕೆಲವರು ನುಂಗಿದ ಪರಿಣಾಮದಿಂದಾಗಿ ಎಲ್ಲೆಂದರಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಯಿತು. ಈ ವೇಳೆ ಎಚ್ಚೆತ್ತುಕೊಂಡ ಸಾರ್ವಜನಿಕರು ಹೋರಾಟಕ್ಕಿಳಿದರು. ಪರಿಣಾಮ ಕೀರೆಹೊಳೆ ಒತ್ತುವರಿ ತೆರವಿಗೆ ಜೀವ ಬಂದಿತು. ಆದರೆ ಒತ್ತುವರಿ ಮಾಡಿಕೊಂಡ ಕೆಲವು ಪ್ರಭಾವಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ನಡುವೆ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಚಾರುಲತಾ ಸೋಮಲ್ ಮಳೆಗಾಲದಲ್ಲಿ ಕೀರೆಹೊಳೆ ತಂದೊಡ್ಡುವ ಅನಾಹುತವನ್ನು ನೋಡಿ ಕೀರೆಹೊಳೆ, ಕೈಕೇರಿ ತೋಡು ಒತ್ತುವರಿ ಸರ್ವೆ ಕಾರ್ಯನಡೆಸಿ ತೆರವು ಕಾರ್ಯವನ್ನು ಮುಲಾಜಿಲ್ಲದೆ ನಡೆಸುವಂತೆ ತಹಶೀಲ್ದಾರ್ ಯೋಗಾನಂದ್ ಅವರಿಗೆ ಆದೇಶಿಸಿದ್ದರು. ಇದರೊಂದಿಗೆ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಬಿ. ಗಿರೀಶ್ ಗಣಪತಿ, ಶಾಸಕ ಬೋಪಯ್ಯ ಸೇರಿದಂತೆ ಹಲವು ಪ್ರಭಾವಿಗಳ ಅತಿಕ್ರಮ ತೆರವಿಗಾಗಿ ಒತ್ತಡ ತಂದಿದ್ದರು.
ನೆಮ್ಮದಿಯುಸಿರುವ ಬಿಟ್ಟಿರುವ ಪಟ್ಟಣದ ಜನ
ಕಾರ್ಯಪ್ರವೃತ್ತರಾದ ತಹಶೀಲ್ದಾರ ಯೋಗಾನಂದ್, 28 ಮಂದಿಗೆ ನೋಟಿಸ್ ನೀಡಿದ್ದರು. ಇದೀಗ ತಹಶೀಲ್ದಾರ ಯೋಗಾನಂದ ನೇತೃತ್ವದಲ್ಲಿ ಗೋಣಿಕೊಪ್ಪಲು ಪೊಲೀಸ್ ವೃತ್ತ ನಿರೀಕ್ಷಕ ಜಯರಾಮ್, ಪೊಲೀಸ್ ಉಪ ನಿರೀಕ್ಷಕ ಸುಬ್ಬಯ್ಯ, ಪೊಲೀಸ್- ಕಂದಾಯ ಇಲಾಖೆ ಸಿಬ್ಬಂದಿ ಸಮಕ್ಷಮದಲ್ಲಿ ಬಿರುಸಿನ ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ಜೆಸಿಬಿಗಳು ಘರ್ಜಿಸುತ್ತಿವೆ. ಎಲ್ಲವೂ ಅಂದುಕೊಂಡಂತೆ ತೆರವು ಕಾರ್ಯಾಚರಣೆ ನಡೆದು ತೋಡು ಮತ್ತು ಹೊಳೆಯ ವ್ಯಾಪ್ತಿ ವಿಸ್ತರಣೆಯಾಗಿದ್ದೇ ಆದರೆ ನೀರು ಸಲೀಸಾಗಿ ಹರಿದು ಹೋಗುವುದರಿಂದ ಮಳೆಗಾಲದಲ್ಲಿ ಸಂಭವಿಸಬಹುದಾದ ಪ್ರವಾಹವನ್ನು ತಡೆಯಲು ಸಾಧ್ಯವಾಗಲಿದೆ.
ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಗೋಣಿಕೊಪ್ಪಲು
ಗೋಣಿಕೊಪ್ಪಲು ಪಟ್ಟಣವು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಕೆಲವೆಡೆ ಬಡಾವಣೆಗಳಾಗುತ್ತಿವೆ. ಕೆಲವು ಪ್ರಭಾವಿಗಳು ಹೊಳೆಯ ದಡವನ್ನೇ ಅಕ್ರಮಿಸಿಕೊಂಡು ನಿವೇಶನಗಳನ್ನಾಗಿ ಮಾಡಿರುವುದು ಗುಟ್ಟಾಗಿ ಉಳಿದಿಲ್ಲ. ಇದೀಗ ಒತ್ತುವರಿ ತೆರವು ಆರಂಭಿಸಿರುವುದು ಹಲವರ ಎದೆ ಢವಢವ ಹೊಡೆದುಕೊಳ್ಳಲು ಆರಂಭಿಸಿದ್ದರೆ, ಮಳೆಗಾಲದಲ್ಲಿ ಮನೆಗೆ ನೀರು ನುಗ್ಗಿ ಸಂಕಷ್ಟ ಅನುಭವಿಸುತ್ತಿದ್ದ ಜನರು ಮಾತ್ರ ನೆಮ್ಮದಿಯುಸಿರು ಬಿಟ್ಟಿದ್ದಾರೆ.
Recommended Video