ಕೊಡಗಿನಲ್ಲಿ ಕೇರಳ ಲಾಟರಿ ಟಿಕೆಟ್ ಪತ್ತೆ, ಒಬ್ಬ ಪೊಲೀಸರ ವಶಕ್ಕೆ
ಮಡಿಕೇರಿ, ನವೆಂಬರ್ 16: ಕೊಡಗಿನಲ್ಲಿಯೂ ಕೇರಳ ಲಾಟರಿ ಟಿಕೆಟ್ ಮಾರಾಟ ದಂಧೆ ನಡೆಯುತ್ತಿರುವ ಬಗ್ಗೆ ಗುಮಾನಿ ಇತ್ತಾದರೂ ಅದು ಬೆಳಕಿಗೆ ಬಂದಿರಲಿಲ್ಲ. ಆದರೆ ಇದೀಗ ಸುಂಟಿಕೊಪ್ಪದಲ್ಲಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿ ಪೊಲೀಸರಿಗೆ ಸಿಕ್ಕಿಬೀಳುವ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ.
ಕೆಲವರು ಕೇರಳದಿಂದ ಟಿಕೆಟ್ ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ. ತಮಗೆ ಬೇಕಾದವರಿಗೆ ಮಾತ್ರ ಇದನ್ನು ನೀಡುತ್ತಾ ಗೋಪ್ಯವಾಗಿ ವ್ಯವಹಾರ ನಡೆಸುತ್ತಿದ್ದರು. ಕೇರಳದ ಕೆಲಸಗಾರರು ಇಲ್ಲಿರುವ ಕಾರಣದಿಂದ ಬೇಡಿಕೆ ಹೆಚ್ಚಾಗಿತ್ತು. ಅಲ್ಲದೆ, ಲಾಟರಿಯ ಫಲಿತಾಂಶಗಳನ್ನು ವಾಟ್ಸ್ ಅಪ್, ಇ ಮೇಲ್, ವೆಬ್ ಸೈಟ್ ಗಳ ಮೂಲಕ ತಿಳಿದುಕೊಳ್ಳುತ್ತಿದ್ದರು.[ಗುಂಡ್ಲುಪೇಟೆಯಲ್ಲಿ ಎಗ್ಗಿಲ್ಲದೆ ಸಾಗಿದ ಕೇರಳ ಲಾಟರಿ ದಂಧೆ]
ಈ ಮಧ್ಯೆ ಕೇರಳ ಲಾಟರಿ ಟಿಕೆಟ್ ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರ ಗಮನಕ್ಕೂ ಬಂದಿತ್ತು. ಹೀಗಾಗಿಯೇ ಸುಂಟಿಕೊಪ್ಪ ಪೊಲೀಸ್ ಠಾಣೆಯ ಅನೂಪ್ ಮಾದಪ್ಪ ದಾಳಿ ನಡೆಸಿದ್ದರು. ದಾಳಿಯ ಸಂದರ್ಭದಲ್ಲಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ಶೇಖರ್ ಎಂಬಾತ ಸಿಕ್ಕಿಬಿದ್ದಿದ್ದಾನೆ.
ಲಾಟರಿ ಟಿಕೆಟ್ ಸೇರಿದಂತೆ 17,500 ರು. ನಗದು ವಶಕ್ಕೆ ಪಡೆಯಲಾಗಿದೆ. ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಎಎಸ್ ಐ ಪಾರ್ಥ, ಸಿಬ್ಬಂದಿ ಪುಂಡರೀಕಾಕ್ಷ, ದಯಾನಂದ ಇದ್ದರು.