ಸಾಂಪ್ರದಾಯಿಕ ಮಡಿಕೇರಿ ದಸರಾ ಮೇಲೆ ಪ್ರವಾಹದ ಕರಿನೆರಳು
ಮಡಿಕೇರಿ, ಸೆಪ್ಟೆಂಬರ್ 11: ಮಹಾಮಳೆಯಿಂದಾಗಿ ಕೊಡಗು ಸಂಕಷ್ಟಕ್ಕೀಡಾಗಿದ್ದು ಇಂತಹ ಪರಿಸ್ಥಿತಿಯಲ್ಲಿ ಅದ್ಧೂರಿ ದಸರಾ ಆಚರಣೆಗೆ ಕಡಿವಾಣ ಹಾಕಿ ಸರಳ ಸಾಂಪ್ರದಾಯಿಕವಾಗಿ ದಸರಾ ಆಚರಿಸಲು ಮಡಿಕೇರಿ ದಸರಾ ಸಮಿತಿ ತೀರ್ಮಾನ ಕೈಗೊಂಡಿದೆ.
ಭೂಕುಸಿತದಿಂದಾಗಿ ಸಾವಿರಾರು ಜನ ಸಂಕಷ್ಟದಲ್ಲಿದ್ದರೆ, ಮಳೆ, ಪ್ರವಾಹದಿಂದ ಆಸ್ತಿಪಾಸ್ತಿ ನಷ್ಟವಾಗಿದ್ದಲ್ಲದೆ, ಕಾಫಿ ಬೆಳೆಗೂ ಹಾನಿಯಾಗಿರುವ ಕಾರಣ ಮುಂದಿನ ದಿನಗಳಲ್ಲಿ ಫಸಲು ಕಡಿಮೆಯಾಗಿ ತೊಂದರೆಯಾಗುವ ಸಂಭವ ಹೆಚ್ಚಿದೆ. ಹೀಗಿರುವಾಗ ಈಗಾಗಲೇ ಕೊಡಗಿನಲ್ಲಿ ಆಚರಿಸಲ್ಪಡುವ ಎಲ್ಲ ಅದ್ಧೂರಿ ಉತ್ಸವಗಳಿಗೆ ಕಡಿವಾಣ ಹಾಕಿ ಕೇವಲ ಸಂಪ್ರದಾಯಕ್ಕಷ್ಟೆ ಆಚರಣೆ ಮಾಡುವ ಉದ್ದೇಶವೂ ಕಂಡು ಬರುತ್ತದೆ. ಹೀಗಿರುವಾಗ ಪ್ರತಿವರ್ಷವೂ ಅದ್ಧೂರಿಯಾಗಿ ಆಚರಿಸಲ್ಪಡುವ ಮಡಿಕೇರಿ ದಸರಾವನ್ನು ಸಂಪ್ರದಾಯದಂತೆ ಆಚರಿಸಲು ಇದೀಗ ಒಮ್ಮತದಿಂದ ತೀರ್ಮಾನಿಸಲಾಗಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಆನೆಗಳ ದಿನಚರಿ ಹೇಗಿದೆ ನೋಡಿ...
ಹಾಗೆನೋಡಿದರೆ ಮಡಿಕೇರಿ ದಸರಾಕ್ಕೆ ಶತಮಾನಗಳ ಇತಿಹಾಸವಿದೆ. ಎಂತಹ ಸಂಕಷ್ಟದ ಸಂದರ್ಭಗಳಲ್ಲಿಯೂ ಇಲ್ಲಿನ ದಸರಾ ನಿಂತಿಲ್ಲ. ಹೀಗಾಗಿ ಈ ಬಾರಿಯೂ ದಸರಾ ಜನೋತ್ಸವವನ್ನು ಸಂಪ್ರದಾಯದಂತೆ ಅರ್ಥಪೂರ್ಣವಾಗಿ ಆಚರಿಸಲು ಮಡಿಕೇರಿ ದಸರಾ ಸಮಿತಿ ಸಭೆ ನಿರ್ಧರಿಸಿದೆ. ಜತೆಗೆ ದಸರಾ ಆಚರಣೆಗೆ ಹೆಚ್ಚಿನ ಅನುದಾನ ಕೋರುವ ನಿಟ್ಟಿನಲ್ಲಿ ಶೀಘ್ರವೇ ಸರಕಾರದ ಬಳಿ ಜನಪ್ರತಿನಿಧಿಗಳೊಂದಿಗೆ ನಿಯೋಗ ತೆರಳಲು ದಸರಾ ಸಮಿತಿ ಮುಂದಾಗಿದೆ.
ಈಕುರಿತಂತೆ ಮಾಹಿತಿ ನೀಡಿರುವ ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಸಮಿತಿ ಪ್ರಮುಖರು ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆ ಸಂಕಷ್ಟದಲ್ಲಿರುವುದರಿಂದ ಮಡಿಕೇರಿ ದಸರಾವನ್ನು ಸರಳವಾಗಿ ಆಚರಿಸಬೇಕೆಂದು ಸಲಹೆ ನೀಡಿದ್ದಾರೆ.. ಮನರಂಜನೆ, ಕ್ರೀಡಾಕೂಟ, ಕವಿಗೋಷ್ಟಿಯಂಥ ಕಾರ್ಯಕ್ರಮಗಳಿಗೆ ಅವಕಾಶ ನೀಡದೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಕೊನೇ ಎರಡು ದಿನಗಳು ಗಾಂಧಿ ಮೈದಾನದಲ್ಲಿ ಶಾಮಿಯಾನ ಹಾಕಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗಿರುವುದಾಗಿ ಹೇಳಿದ್ದಾರೆ.
ದಸರೆಯಲ್ಲಿ ಭಾಗವಹಿಸುವ ಮೊದಲ ತಂಡದ ಆನೆಗಳ ಸಂಪೂರ್ಣ ವಿವರ
ಈಗಾಗಲೇ ದಶಮಂಟಪಗಳು ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ದಸರಾ ಮಂಟಪ ಹೊರಡಿಸಲು ನಿರ್ಧರಿಸಿಯಾಗಿದೆ. ಹೀಗಿರುವಾಗ ದಸರಾವನ್ನೂ 9 ದಿನಗಳು ಸರಳವಾಗಿ ಆಚರಿಸುವುದು ಅನಿವಾರ್ಯವಾಗಬಹುದು. ಸರಕಾರ ನೀಡುವ ಅನುದಾನವನ್ನು ಅವಲಂಭಿಸಿ ದಸರಾ ಆಚರಿಸೋಣ, ವೆಚ್ಚ ಕಡಿಮೆ ಮಾಡೋಣ ಎಂದು ಹಿರಿಯ ಸದಸ್ಯರು ಸಲಹೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ಶೀಘ್ರದಲ್ಲಿಯೇ ಸರಕಾರದ ಬಳಿ ಜನಪ್ರತಿನಿಧಿಗಳೊಂದಿಗೆ ದಸರಾ ಜನೋತ್ಸವಕ್ಕೆ ಅನುದಾನ ಕೋರಿ ನಿಯೋಗ ತೆರಳಲಾಗುತ್ತದೆ. ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ದಸರಾ ಆಚರಿಸಲಾಗುತ್ತದೆ. ಸರಕಾರ ಎಷ್ಟು ಅನುದಾನ ನೀಡುತ್ತದೆ ಎಂಬುದನ್ನು ಅವಲಂಭಿಸಿ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ರೂಪಿಸಲಾಗುತ್ತದೆ ಎಂದು ಹೇಳಿದ್ದಾರೆ.
ಅರಮನೆ ಅಂಗಳಕ್ಕೆ ಹೆಜ್ಜೆ ಹಾಕಿದ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ
ಸಂಪ್ರದಾಯದಂತೆ ದಸರಾ ಸಮಿತಿ ವತಿಯಿಂದ ಸಭೆಗೂ ಮುನ್ನ ದಸರಾ ಸಮಿತಿ ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀಪೇಟೆ ರಾಮಮಂದಿರದಲ್ಲಿ ಪೂಜೆ ಯಾವುದೇ ತೊಂದರೆಯಾಗದಂತೆ ನಿರ್ವಿಘ್ನವಾಗಿ ದಸರಾ ಆಚರಣೆ ನಡೆಸಲು ಅನುಗ್ರಹಿಸುವಂತೆ ಪ್ರಾರ್ಥನೆ ಸಲ್ಲಿಸಲಾಯಿತು.