ಕೊಡಗಿನಲ್ಲಿ ಬಿಜೆಪಿಗೆ ವರವಾಯಿತೇ ಕಾಂಗ್ರೆಸ್ ಬಂಡಾಯ?
ಮಡಿಕೇರಿ, ಏಪ್ರಿಲ್ 25: ಕೊಡಗಿನ ರಾಜಕೀಯದಲ್ಲಿ ಹೊಸ ಬೆಳವಣಿಗೆ ಆಗುತ್ತಾ? ಬಿಜೆಪಿಯ ಅಭ್ಯರ್ಥಿಗಳು ಹಾಲಿ ಶಾಸಕರೂ ಆಗಿರುವ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಕೆ.ಜಿ.ಬೋಪಯ್ಯ, ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಅಪ್ಪಚ್ಚು ರಂಜನ್ ಹ್ಯಾಟ್ರಿಕ್ ಗೆಲುವು ಸಾಧಿಸುತ್ತಾರಾ? ಅವರಿಗೆ ಕಾಂಗ್ರೆಸ್ ಅಭ್ಯರ್ಥಿಗಳಾದ ಕೆ.ಪಿ.ಚಂದ್ರಕಲಾ ಮತ್ತು ಅರುಣ್ ಮಾಚಯ್ಯ ಸೆಡ್ಡು ಹೊಡೆಯುತ್ತಾರಾ? ಎಂಬ ಕುತೂಹಲ ಜನರನ್ನು ಕಾಡತೊಡಗಿದೆ.
ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ಮೊದಲು ಇದ್ದ ಗೊಂದಲಕ್ಕೆ ನಾಯಕರು ತಿಲಾಂಜಲಿ ಹಾಡಿದ್ದಾರೆ. ಹೀಗಾಗಿ ಬಿಜೆಪಿಯ ಅಭ್ಯರ್ಥಿಗಳಾದ ಕೆ.ಜಿ.ಬೋಪಯ್ಯ ಮತ್ತು ಅಪ್ಪಚ್ಚುರಂಜನ್ ಅವರನ್ನು ಗೆಲ್ಲಿಸಲು ಕಾರ್ಯಕರ್ತರು ಕಾರ್ಯಪ್ರವೃತ್ತರಾದಂತೆ ಕಂಡು ಬರುತ್ತಿದೆ.
ಕೊಡಗಿನಲ್ಲಿ 'ಕಮಲ' ಕತ್ತರಿಸಲು 'ಕೈ' ಹವಣಿಕೆ, ಏನಿದರ ಹಿಂದಿನ ಎಣಿಕೆ?
ಆದರೆ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಬೇಕಾಗಿದ್ದ ಕಾಂಗ್ರೆಸ್ ನಲ್ಲಿ ಟಿಕೆಟ್ ಗೆ ಸಂಬಂಧಿಸಿದಂತೆ ಇದ್ದ ಅಸಮಾಧಾನ ಭುಗಿಲೆದ್ದಿದ್ದು ರಾಜ್ಯನಾಯಕರು ಮಧ್ಯಸ್ಥಿಕೆ ವಹಿಸಿ ಸಮಾಧಾನಗೊಳಿಸದ ಕಾರಣ ಎರಡು ಕ್ಷೇತ್ರಗಳಲ್ಲೂ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿದಿರುವುದು ಮತ್ತು ಟಿಕೆಟ್ ಘೋಷಣೆ ಮಾಡಿ ಬಳಿಕ ಹಿಂಪಡೆದ ಅಸಮಾಧಾನ ಎಲ್ಲವೂ ಪಕ್ಷದ ಸುತ್ತಲೂ ಗಿರಕಿ ಹೊಡೆಯುತ್ತಿರುವುದರಿಂದಾಗಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ಮೇಲೆ ಪರಿಣಾಮ ಬೀರುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ.
ಒಡೆದ ಮನೆಯಾದ ಕೊಡಗಿನ ಕಾಂಗ್ರೆಸ್
ಹಾಗೆನೋಡಿದರೆ ಕೊಡಗಿನ ಕಾಂಗ್ರೆಸ್ ಒಡೆದ ಮನೆ ಎಂಬುದು ಇದುವರೆಗೆ ನಡೆದ ಹಲವು ಘಟನೆಗಳಿಂದ ರುಜುವಾತಾಗಿದೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾಯಕರನ್ನು ಆಯ್ಕೆ ಮಾಡಲು ವರ್ಷಾನುಗಟ್ಟಲೆ ಸಮಯ ಬೇಕಾಯಿತು. ಇದೀಗ ಕೆಪಿಸಿಸಿಗೆ ಜಿಲ್ಲೆಯ ಎರಡು ಕ್ಷೇತ್ರದಿಂದ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಾಧ್ಯವಾಗದೆ, ಬಂಡಾಯವನ್ನು ಶಮನಗೊಳಿಸಲು ಸಾಧ್ಯವಾಗದಿರುವುದನ್ನು ನೋಡಿದರೆ ಕಾಂಗ್ರೆಸ್ ಒಳಗಿನ ಮುಸುಕಿನ ಗುದ್ದಾಟ ಬಿಜೆಪಿಗೆ ವರದಾನವಾಗುವುದರಲ್ಲಿ ಎರಡು ಮಾತಿಲ್ಲ.
ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಬಂಡಾಯದ ಸೂಚನೆ..?!
ಬಂಡಾಯದ ಬಾವುಟ
ಇದೀಗ ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಬಂಡಾಯವಾಗಿ ನಾಪಂಡ ಎಂ.ಮುತ್ತಪ್ಪ ಸ್ಪರ್ಧಿಸಿದ್ದರೆ, ವೀರಾಜಪೇಟೆಯಲ್ಲಿ ಕದ್ದಣಿಯಂಡ ಹರೀಶ್ ಬೋಪಯ್ಯ ಮತ್ತು ಪದ್ಮಿನಿಪೊನ್ನಪ್ಪ ಅವರು ಸ್ಪರ್ಧಿಸಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಅರುಣ್ ಮಾಚಯ್ಯ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಆ ಕ್ಷೇತ್ರದ ಕಾಂಗ್ರೆಸ್ವೊಳಗೆ ಅಸಮಾಧಾನವಿದೆ. ಕಾರಣ ಒಂದು ಕಾಲದಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದು ವಿಧಾನಪರಿಷತ್ ಚುನಾವಣೆಯಲಿ ಟಿ.ಜಾನ್ ಅವರನ್ನೇ ಸೋಲಿಸಿದ್ದರು. ಬಳಿಕ ಜೆಡಿಎಸ್ ಸೇರಿದ್ದರಾದರೂ ಮರಳಿ ಕಾಂಗ್ರೆಸ್ ಗೆ ಬಂದಿದ್ದಾರೆ.
ವಿರೋಧದ ನಡುವೆಯೂ ಟಿಕೆಟ್
ಇಂತಹ ವ್ಯಕ್ತಿಗೆ ಟಿಕೆಟ್ ಕೊಡುವುದಕ್ಕೆ ಮುಖ್ಯವಾಗಿ ಪದ್ಮಿನಿಪೊನ್ನಪ್ಪ ಅವರೇ ವಿರೋಧ ವ್ಯಕ್ತಪಡಿಸಿದ್ದರು. ಆದರೆ ರಾಜ್ಯ ನಾಯಕರು ಸೊಪ್ಪು ಹಾಕದೆ ಅರುಣ್ ಮಾಚಯ್ಯ ಅವರನ್ನು ಅಭ್ಯರ್ಥಿಯನ್ನಾಗಿ ಅಂತಿಮ ಮಾಡಿದಾಗ ಸಿಡಿದೆದ್ದ ಪದ್ಮಿನಿಪೊನ್ನಪ್ಪ ಬಂಡಾಯವಾಗಿ ಸ್ಪರ್ಧಿಸುವ ತೀರ್ಮಾನ ಮಾಡಿದರು. ಈ ಬೆಳವಣಿಗೆಗಳು ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮಾರಕವಾಗಿ ಪರಿಣಮಿಸಿದಂತೆ ಗೋಚರವಾಗುತ್ತಿದೆ.
ಮತ ಪಕ್ಷಕ್ಕೋ ವ್ಯಕ್ತಿಗೋ?
ಕೊಡಗಿನಲ್ಲಿ ಒಂದು ವರ್ಗ ಪಕ್ಷವನ್ನು ನೋಡಿ ಮತ ಹಾಕುತ್ತದೆ. ಅಂತಹವರು ಅಭ್ಯರ್ಥಿ ಯಾರು ಎನ್ನುವುದಕ್ಕಿಂತ ಪಕ್ಷ ಮುಖ್ಯ ಎನ್ನುತ್ತಾರೆ. ಇನ್ನು ವ್ಯಕ್ತಿಯನ್ನು ನೋಡಿ ಮತಹಾಕುವವರು ಪಕ್ಷ ನೋಡುವುದಿಲ್ಲ. ಇಂತಹ ಮತದಾರರ ಮತಗಳು ಹಂಚಿ ಹೋಗುತ್ತವೆ. ಇನ್ನು ಬಂಡಾಯ ನಿಂತಿರುವ ಅಭ್ಯರ್ಥಿಗಳು ಪಡೆಯುವ ಮತಗಳ ಪೈಕಿ ಹೆಚ್ಚಿನ ಮತಗಳು ತಾವು ಹಿಂದೆ ಕೆಲಸ ಮಾಡಿದ್ದ ಮಾತೃ ಪಕ್ಷದ ಮತಗಳೇ ಎನ್ನುವುದರಲ್ಲಿ ಸಂಶಯವಿಲ್ಲ.
ಕಾಂಗ್ರೆಸ್ ಬಂಡಾಯದಿಂದ ಬಿಜೆಪಿಗೆ ಲಾಭ!
ಈಗ ಕಾಂಗ್ರೆಸ್ ನಲ್ಲಿ ಮಾತ್ರ ಬಂಡಾಯ ಕಂಡು ಬರುತ್ತಿರುವುದರಿಂದ ಬಿಜೆಪಿಗೆ ಹೆಚ್ಚಿನ ಲಾಭವಾಗುವ ಸಾಧ್ಯತೆಯಿದೆ. ಬಂಡಾಯ ಸ್ಪರ್ಧಿಗಳು ಒಂದು ವೇಳೆ ಉಮೇದುವಾರಿಕೆಯನ್ನು ಹಿಂಪಡೆದರೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಒಳಿತಾಗಲಿದೆ. ಇಲ್ಲದೆ ಹೋದರೆ ಇದರ ಲಾಭ ಬಿಜೆಪಿ ಹಾಗೂ ಜೆಡಿಎಸ್ ಗೆ ಆಗುವುದಂತು ಖಚಿತ.