ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಬಂಡಾಯದ ಸೂಚನೆ..?!
ಮಡಿಕೇರಿ, ಏಪ್ರಿಲ್ 21: ಇಲ್ಲಿಯವರೆಗೆ ಬಿಜೆಪಿಯ ಭದ್ರಕೋಟೆ ಕೊಡಗಿನಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಮಡಿಕೇರಿ ಕ್ಷೇತ್ರಕ್ಕೆ ಅಪ್ಪಚ್ಚುರಂಜನ್ ಅವರಿಗೆ ಟಿಕೆಟ್ ನೀಡಲಾದ ಹಿನ್ನಲೆಯಲ್ಲಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ಇದೀಗ ಒಂದಷ್ಟು ರಾಜಕೀಯ ಕಳೆ ಬಂದಂತಾಗಿದೆ.
ಬಿಜೆಪಿ ಅಭ್ಯರ್ಥಿಗಳ 3ನೇ ಪಟ್ಟಿ : ಒಂದಷ್ಟು ಅಚ್ಚರಿ, ಕೆಲವರಿಗೆ ನಿರಾಸೆ!
ನಗರದ ಮಹದೇವಪೇಟೆಯ ಶ್ರೀಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಪ್ಪಚ್ಚುರಂಜನ್ ಸಾವಿರಾರು ಕಾರ್ಯಕರ್ತರೊಂದಿಗೆ ಜಿಲ್ಲಾಡಳಿತದ ಭವನಕ್ಕೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.
ಬಂಡಾಯ ಬಾವುಟ ಹಾರಿಸಿದ ಕಾಂಗ್ರೆಸ್ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ
ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನನಗೆ ಈ ಬಾರಿ ಕೂಡ ಜನ ಆಶೀರ್ವಾದ ಮಾಡಲಿದ್ದಾರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ವೇಳೆ ಈ ಸಂದರ್ಭ ಸಂಸದರಾದ ಪ್ರತಾಪ್ ಸಿಂಹ, ವಿರಾಜಪೇಟೆ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷರಾದ ಬಿ.ಬಿ.ಭಾರತೀಶ್ ಜೊತೆಗಿದ್ದರು.
ವೀರಾಜಪೇಟೆಯಲ್ಲಿ ಬೋಪಯ್ಯ
ಇದೆಲ್ಲದರ ನಡುವೆ ವೀರಾಜಪೇಟೆ ಕ್ಷೇತ್ರದಲ್ಲಿ ಹಾಲಿ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಹಾಗೆನೋಡಿದರೆ ವೀರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ಒಡೆದ ಮನೆಯಾಗಿದೆ. ಒಂದು ವೇಳೆ ಕೆ.ಜಿ.ಬೋಪಯ್ಯ ಅವರಿಗೆ ಟಿಕೆಟ್ ನೀಡಿದ್ದೇ ಆದರೆ ನಾವು ಅದನ್ನು ವಿರೋಧಿಸುತ್ತೆವೆ ಎಂದು ಈಗಾಗಲೇ ಹಲವರು ಹೇಳಿದ್ದು, ಭೊಪಯ್ಯ ಅವರಿಗೆ ಟಿಕೇಟ್ ಸಿಕ್ಕ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಹಲವರು ಬಂಡಾಯವೆದ್ದರೂ ಅಚ್ಚರಿಯಿಲ್ಲ. ಆದರೆ ಬೋಪಯ್ಯ ಅವರಿಗೆ ಟಿಕೇಟ್ ನೀಡಿದನ್ನು ಸ್ವಾಗತಿಸಿದವರೂ ಸಾಕಷ್ಟು ಜನರಿರುವುದರಿಂದ, ಈ ಭಾಗದಲ್ಲಿ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿರುವ ಬೋಪಯ್ಯ ಗೆದ್ದರೆ ಅಚ್ಚರಿಯಿಲ್ಲ.
ಎರಡು ದಶಕದಿಂದ ಬಿಜೆಪಿಯದ್ದೇ ಆಟ
ಈಗಾಗಲೇ ರಾಜ್ಯದಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಗೆದ್ದು ಅಧಿಕಾರ ಹಿಡಿಯುವ ಕನಸು ಕಾಣುತ್ತಿರುವ ರಾಜ್ಯ ನಾಯಕರಿಗೆ ಈ ಬಾರಿ ಕೊಡಗಿನಲ್ಲಿ ಉಂಟಾಗಿರುವ ಗೊಂದಲ ಭಾರೀ ತಲೆನೋವಿಗೆ ಕಾರಣವಾಗಿದೆ. ಕಳೆದ ಎರಡು ದಶಕಗಳಿಂದ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದೆ. ಮಡಿಕೇರಿಯಲ್ಲಿ ಪಕ್ಷಗಳಿಂದ ಟಿಕೆಟ್ ಆಕಾಂಕ್ಷಿಗಳಿದ್ದರಾದರೂ ಅಪ್ಪಚ್ಚು ರಂಜನ್ ಗೆ ಟಿಕೆಟ್ ನೀಡದಂತೆ ವಿರೋಧಿಸುವಷ್ಟರ ಮಟ್ಟಿಗೆ ಮತ್ತು ಬಂಡಾಯ ಏಳುವಷ್ಟರ ಮಟ್ಟಿಗೆ ಯಾವುದೇ ವಿರೋಧವಿರಲಿಲ್ಲ. ಹೀಗಾಗಿಯೇ ಸುಲಭವಾಗಿ ಟಿಕೆಟ್ ನೀಡಿ ಗೊಂದಲ ಪರಿಹಾರ ಮಾಡಿಕೊಳ್ಳಲಾಗಿತ್ತು. ಆದರೆ ವೀರಾಜಪೇಟೆ ಕ್ಷೇತ್ರದ ಪರಿಸ್ಥಿತಿ ಮಾತ್ರ ಭಿನ್ನವಾಗಿದೆ. ಹೀಗಾಗಿ ಅಲ್ಲಿ ತೂಗಿಅಳೆದು ಟಿಕೆಟ್ ನೀಡಬೇಕಾದ ಪರಿಸ್ಥಿತಿ ಬಂದಿತ್ತು.
ಪಕ್ಷದೊಳಗೆ ಹೊಗೆಯಾಡಿದ ಭಿನ್ನಾಭಿಪ್ರಾಯ
ಈ ಹಿಂದೆಯೇ ಎರಡು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಾಲಿ ಶಾಸಕರುಗಳಿಗೆ ಟಿಕೆಟ್ ನೀಡುವ ಬಗ್ಗೆ ರಾಜ್ಯ ನಾಯಕರು ಹೇಳಿದ್ದರು. ಅಷ್ಟೇ ಅಲ್ಲದೆ ಸಭೆ ನಡೆಸಿ ಹಾಲಿ ಶಾಸಕರೇ ಅಭ್ಯರ್ಥಿಗಳು ಎಂಬ ತೀರ್ಮಾನವನ್ನು ಮಾಡಿದ್ದರು. ಆದರೆ ಆ ನಂತರದ ಬೆಳವಣಿಗೆಗಳು ಪಕ್ಷದಲ್ಲಿ ಒಂದಷ್ಟು ಭಿನ್ನಾಭಿಪ್ರಾಯವನ್ನು ಸೃಷ್ಟಿಸಿತ್ತು. ಪ್ರತಿ ಬಾರಿಯೂ ಹಾಲಿ ಶಾಸಕರಿಗೆ ಟಿಕೆಟ್ ನೀಡುತ್ತಾ ಹೋದರೆ ಪಕ್ಷಕ್ಕಾಗಿ ದುಡಿದವರಿಗೆ ಏನಿದೆ? ಆದ್ದರಿಂದ ಯುವ ನಾಯಕರಿಗೆ ಟಿಕೆಟ್ ನೀಡಿ ಎಂಬಂತಹ ಮಾತುಗಳು ಪಕ್ಷದೊಳಗೆ ಕೇಳಿಬರತೊಡಗಿತು. ಆದರೂ ಬಿಜೆಪಿ ಹೈಕಮಾಂಡ್ ಬೋಪಯ್ಯ ಅವರಿಗೇ ಟಿಕೇಟ್ ನೀಡಿದೆ.
ಬಿಜೆಪಿ ಹವಾ ಮುಂದುವರೆಯುತ್ತಾ?
ಜಿಲ್ಲೆಯಲ್ಲಿ ಗ್ರಾಮಪಂಚಾಯಿತಿಯಿಂದ ಆರಂಭವಾಗಿ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ. ಅಷ್ಟೇ ಅಲ್ಲದೆ ಎರಡು ವಿಧಾನಸಭಾ ಕ್ಷೇತ್ರವೂ ಬಿಜೆಪಿ ಹಿಡಿತದಲ್ಲಿದೆ. ಹೀಗಿರುವಾಗ ಇಲ್ಲಿ ಬಿಜೆಪಿ ಗೆಲುವಿಗೆ ಪೂರಕ ವಾತಾವರಣವಿದೆ. ಆದರೂ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ರಾಜ್ಯ ನಾಯಕರು ಖಡಕ್ ನಿರ್ಧಾರ ತೆಗೆದುಕೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ.