ಚುನಾವಣೆ ಹೊತ್ತಲ್ಲಿ ಕೊಡಗಿನಲ್ಲಿ ಕಾಂಗ್ರೆಸ್ ಗೆ ಬಿಗ್ ಶಾಕ್, ಬಿಜೆಪಿಗೆ ಲಾಭ
Recommended Video
ಮಡಿಕೇರಿ ಮೇ 3: ಚುನಾವಣೆಯ ದಿನ ಹತ್ತಿರ ಬರುತ್ತಿದ್ದಂತೆಯೇ ಕೊಡಗಿನಲ್ಲಿ ಕಾಂಗ್ರೆಸ್ ಗೆ ಬಿಗ್ ಶಾಕ್ ವೊಂದು ಎದುರಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗುವುದು ಮಾತ್ರವಲ್ಲ, ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕಿಂತ ಹೆಚ್ಚಾಗಿ ಚುನಾವಣೆ ಸಂದರ್ಭವೇ ಪ್ರಭಾವಿ ನಾಯಕಿ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಾರೆ.
ಪದ್ಮಿನಿ ಪೊನ್ನಪ್ಪ ಈ ಬಾರಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರ ಬದಲಿಗೆ ಮಾಜಿ ಎಂಎಲ್ ಸಿ ಅರುಣ್ ಮಾಚಯ್ಯ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದರ ವಿರುದ್ಧ ಮೊದಲ ಧ್ವನಿ ಎತ್ತಿದವರೇ ಪದ್ಮಿನಿ ಪೊನ್ನಪ್ಪ.
ಕೊಡಗಿನಲ್ಲಿ ಬಿಜೆಪಿಗೆ ವರವಾಯಿತೇ ಕಾಂಗ್ರೆಸ್ ಬಂಡಾಯ?
ಏಕೆಂದರೆ ಕಾಂಗ್ರೆಸ್ ನಲ್ಲಿ ನಿಷ್ಠಾವಂತರಾಗಿ ಕೆಲಸ ಮಾಡಿಕೊಂಡು ಬಂದಿದ್ದ ಪದ್ಮಿನಿ ಪೊನ್ನಪ್ಪ ಅವರಿಗೆ ಅರುಣ್ ಮಾಚಯ್ಯಗೆ ಟಿಕೆಟ್ ನೀಡಿರುವುದನ್ನು ಸಹಿಸಿಕೊಳ್ಳುವಷ್ಟು ತಾಳ್ಮೆಯಿರಲಿಲ್ಲ. ಕಾಂಗ್ರೆಸ್ ನಲ್ಲಿ ಎದ್ದ ಬಂಡಾಯದ ಬಿಸಿ ಬಿಜೆಪಿ ಪಾಲಿಗೆ ಲಾಭವಾಗುವುದಂತೂ ಖಂಡಿತ.
ಮಡಿಕೇರಿಯಲ್ಲಿ 'ಕೈ' ಅಭ್ಯರ್ಥಿಗೆ ಶತ್ರು ಜೆಡಿಎಸ್-ಬಿಜೆಪಿಯಲ್ಲ ಮತ್ಯಾರು?
ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದಿದ್ದವರಿಗೇ ಟಿಕೆಟ್!
ಅರುಣ್ ಮಾಚಯ್ಯ ಅವರು ಒಂದು ಕಾಲದಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದಿದ್ದಲ್ಲದೆ, ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವೇ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅಷ್ಟೇ ಅಲ್ಲ, ಕಾಂಗ್ರೆಸ್ ತೊರೆದು ಜೆಡಿಎಸ್ ಸಂಪರ್ಕ ಮಾಡಿದ್ದರು. ಬದಲಾದ ಕಾಲಘಟ್ಟದಲ್ಲಿ ಮತ್ತೆ ಕಾಂಗ್ರೆಸ್ ಸೇರಿದ್ದರು. ಇಂತಹವರಿಗೆ ಟಿಕೆಟ್ ನೀಡಬೇಡಿ ಎಂದು ರಾಜ್ಯ ನಾಯಕರಲ್ಲಿ ಪದ್ಮಿನಿ ಪೊನ್ನಪ್ಪ ಮನವಿ ಮಾಡಿಕೊಂಡಿದ್ದರು. ಆದರೆ ಅವರ ಮಾತನ್ನು ಯಾವ ನಾಯಕರೂ ಕಿವಿಗೆ ಹಾಕಿಕೊಂಡಿರಲಿಲ್ಲ. ಇದರಿಂದ ನೊಂದ ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವೇ ಬಂಡಾಯವೆದ್ದು ನಾಮಪತ್ರ ಸಲ್ಲಿಸಿದ್ದರು.
ಯಾವಾಗ ಪದ್ಮಿನಿ ಪೊನ್ನಪ್ಪ ಅವರು ನಾಮಪತ್ರ ಸಲ್ಲಿಸಿದರೋ ನಾಯಕರಲ್ಲಿ ಕಳವಳ ಆರಂಭವಾಗಿತ್ತು. ಕ್ಷೇತ್ರದಲ್ಲಿ ಮತಗಳು ಒಡೆದರೆ ಅದರ ಪ್ರಯೋಜನ ಬಿಜೆಪಿ ಪಡೆಯುತ್ತದೆ. ಆದ್ದರಿಂದ ಹಠಕ್ಕೆ ಬಿದ್ದಂತೆ ಪದ್ಮಿನಿ ಪೊನ್ನಪ್ಪ ಅವರ ಮನವೊಲಿಸುವ ಯತ್ನವನ್ನು ಮಾಡಿದ್ದರು. ಇದರ ಹಿಂದೆ ಮತ್ತೊಂದು ಕಾರಣವೂ ಇತ್ತು. ಹತ್ತಿರದಲ್ಲೇ ರಾಹುಲ್ ಗಾಂಧಿ ಕೊಡಗಿಗೆ ಬರುವವರಿದ್ದರು. ಈ ವೇಳೆ ಬಂಡಾಯದ ಬಿಸಿ ಎದ್ದು ಕಾಣಿಸಿದರೆ ರಾಜ್ಯ ನಾಯಕರ ಮುಖಕ್ಕೆ ಅದು ಮಸಿ ಬಳಿದಂತೆ ಭಾಸವಾಗುತ್ತಿತ್ತು!
ಒತ್ತಡಕ್ಕೆ ಮಣಿದು ನಾಮಪತ್ರ ಹಿಂಪಡೆದರು
ಹಾಗಾಗಿ ರಾತ್ರಿಹಗಲೆನ್ನದೆ ಅವರನ್ನು ಮನವೊಲಿಸುವ ಯತ್ನ ಮಾಡಿದ್ದರು. ಖುದ್ದು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅರುಣ್ ಮಾಚಯ್ಯ ಅವರೇ ಭೇಟಿ ಮಾಡಿ ಕಣದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದರು. ಎಲ್ಲರ ಒತ್ತಡದ ಮೇರೆಗೆ ನಾಮಪತ್ರವನ್ನು ಹಿಂಪಡೆದಿದ್ದ ಪದ್ಮಿನಿ ಪೊನ್ನಪ್ಪ ಇದೀಗ ಸದ್ದಿಲ್ಲದೆ ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ಸೇರ್ಪಡೆಗೊಂಡಿದ್ದಾರೆ.
ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ತೆರಳಿದ ಪದ್ಮಿನಿ ಅವರನ್ನು ದೇವೇಗೌಡರು ಪಕ್ಷದ ಶಾಲು ಹಾಕಿ ಸ್ವಾಗತಿಸಿದ್ದಾರೆ. ಈ ವೇಳೆ ಅಲ್ಲಿ ಕುಮಾರಸ್ವಾಮಿ ಕೂಡ ಇದ್ದರು. ಇದೀಗ ಪಕ್ಷಕ್ಕೆ ಸೇರ್ಪಡೆಗೊಂಡ ಬೆನ್ನಲ್ಲೇ ದೇವೇಗೌಡರು ಪಕ್ಷದ ರಾಜ್ಯ ಉಪಾಧ್ಯಕ್ಷೆ ಸ್ಥಾನದ ಜವಾಬ್ದಾರಿಯನ್ನು ನೀಡಿದ್ದಾರೆ.
ಕಾಂಗ್ರೆಸ್ ತಂತ್ರಕ್ಕೆ ಎಳ್ಳುನೀರು
ಪದ್ಮಿನಿ ಪೊನ್ನಪ್ಪ ಜೆಡಿಎಸ್ ಗೆ ಸೇರ್ಪಡೆಗೊಂಡ ಬೆನ್ನಲ್ಲೇ ಜಿಲ್ಲಾ ಕಾಂಗ್ರೆಸ್ ನನಲ್ಲಿ ಅದರಲ್ಲೂ ವೀರಾಜಪೇಟೆ ಕ್ಷೇತ್ರದಲ್ಲಿ ಆತಂಕ ಶುರುವಾಗಿದೆ. ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದ್ದು, ಪದ್ಮಿನಿಪೊನ್ನಪ್ಪ ಅವರು ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ಅವರ ಪರವಾಗಿ ಮತಯಾಚಿಸಲಿದ್ದಾರೆ.
ಕ್ಷೇತ್ರದಲ್ಲಿ ಕೊಡವ ಸಮುದಾಯದ ಮತವೇ ನಿರ್ಣಾಯಕವಾಗಿದ್ದು ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಕೊಡವ ಸಮುದಾಯದ ಅಭ್ಯರ್ಥಿಯಾಗಿ ಬಿ.ಟಿ.ಪ್ರದೀಪ್ ಅವರು ಸ್ಪರ್ಧಿಸಿದ್ದರು. ಉಳಿದಂತೆ ಬಿಜೆಪಿ ಮತ್ತು ದಳದಿಂದ ಗೌಡ ಸಮುದಾಯದ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಗಿಂತ ಕೆಲವೇ ಸಾವಿರ ಮತಗಳ ಅಂತರದಿಂದ ಬಿಜೆಪಿಯ ಕೆ.ಜಿ.ಬೋಪಯ್ಯ ಗೆಲುವು ಸಾಧಿಸಿದ್ದರು.
ಬಿಜೆಪಿ ನಿರಾಳ, ದಳದಲ್ಲಿ ಹುರುಪು
ಈ ಬಾರಿ ಬಿಜೆಪಿಯನ್ನು ಸೋಲಿಸಲೇ ಬೇಕೆಂಬ ಹಠಕ್ಕೆ ಕಾಂಗ್ರೆಸ್ ನಾಯಕರು ಬಂದಿದ್ದರು. ಬಿಜೆಪಿಯಲ್ಲಿ ಕೊಡವ ಸಮುದಾಯವನ್ನು ನಿರ್ಲಕ್ಷ್ಯಿಸಲಾಗಿದೆ. ಈ ಬಾರಿ ಕೊಡವ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಬಾಣಗಳನ್ನು ಬಿಡಲಾಗಿತ್ತು. ಇದರಿಂದಾಗಿ ಕೆ.ಜಿ.ಬೋಪಯ್ಯ ಅವರಿಗೆ ಕಾದು ನೋಡುವ ತಂತ್ರ ಬಳಸಿ ಕೊನೆಗಳಿಗೆಯಲ್ಲಿ ಟಿಕೆಟ್ ನೀಡಲಾಗಿತ್ತು.
ಈಗ ಬಿಜೆಪಿಯಲ್ಲಿ ಅಸಮಾಧಾನ ಶಮನವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಕೊಡವ ಸಮುದಾಯದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಹೀಗಾಗಿ ಮತಗಳು ಹಂಚಿಕೆಯಾಗುವ ಸಾಧ್ಯತೆಯಿದೆ. ಜತೆಗೆ ಪದ್ಮಿನಿ ಪೊನ್ನಪ್ಪ ಅವರು ಜೆಡಿಎಸ್ ಗೆ ಬಂದಿರುವುದರಿಂದ ಅವರ ಕಡೆಯಿಂದಲೂ ಕಾಂಗ್ರೆಸ್ ಗೆ ಹೊಡೆತ ಬೀಳುವ ಸಾಧ್ಯತೆಯಿದ್ದು, ಅದರ ಲಾಭ ಬಿಜೆಪಿಗೆ ಆಗುತ್ತಾ ಎಂಬ ಲೆಕ್ಕಚಾರ ಕ್ಷೇತ್ರದಲ್ಲಿ ಆರಂಭವಾಗಿದೆ.