ಕರ್ನಾಟಕ ಬಜೆಟ್ 2021: ಪ್ರವಾಸಿ ಜಿಲ್ಲೆ ಕೊಡಗು ಜನತೆಯ ನಿರೀಕ್ಷೆಗಳೇನು?
ಮಡಿಕೇರಿ, ಮಾರ್ಚ್ 2: ಪುಟ್ಟ, ವಿಶಿಷ್ಟ ಸಂಸ್ಕೃತಿಯ ಪ್ರವಾಸಿ ಜಿಲ್ಲೆ ಕೊಡಗು ರಾಜ್ಯ ಸರ್ಕಾರದ ಪ್ರತೀ ಬಜೆಟ್ ನಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಜನತೆಯ ಅಭಿಪ್ರಾಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಅಥವಾ ಬಿಜೆಪಿ ಸರ್ಕಾರವೇ ಇರಲಿ ಕೊಡಗಿಗೆ ನೀಡಿದ್ದು ಮಾತ್ರ ಕಡಿಮೆಯೇ ಎಂದು ಯಾರು ಬೇಕಾದರೂ ಹೇಳುತ್ತಾರೆ.
ಕಾಫಿಯು ಈ ಜಿಲ್ಲೆಯ ಜೀವನಾಡಿ ಆಗಿದೆ. ದೇಶದಲ್ಲಿ ಉತ್ಪಾದನೆ ಆಗುವ ಒಟ್ಟು ಕಾಫಿಯ ಶೇ.30 ರಷ್ಟು ಪಾಲು ಕೊಡಗು ಜಿಲ್ಲೆಯದ್ದು ಎಂಬ ಹೆಗ್ಗಳಿಕೆ ಹೊಂದಿದೆ.
ಕರ್ನಾಟಕ ರಾಜ್ಯ ಬಜೆಟ್ 2021: ದಾವಣಗೆರೆ ಜಿಲ್ಲೆಯ ನಿರೀಕ್ಷೆಗಳೇನು?
ಆದರೆ, ಕಾಫಿ ಬೆಳೆಗಾರರ ಬದುಕು ಇಂದು ಸಂಕಷ್ಟದಲ್ಲಿದೆ. ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಸತತ ಅತಿವೃಷ್ಟಿ, ಭೂ ಕುಸಿತ ಇದರ ಜತೆಗೆ ಕಾಫಿಯ ಬೆಲೆ ಕುಸಿತ ಜನರನ್ನು ಹೈರಾಣಾಗಿಸಿದೆ. ಕಾಫಿ ಜತೆಗೆ ಹೋಂ ಸ್ಟೇ ವ್ಯವಹಾರ ಒಂದಷ್ಟು ಜನರ ಕೈ ಹಿಡಿದಿದೆಯಾದರೂ, ಅಂಥವರ ಸಂಖ್ಯೆ ಕೆಲ ನೂರು ಇರಬಹುದಷ್ಟೆ. ಪ್ರವಾಸಿ ಜಿಲ್ಲೆ ಕೊಡಗು ಜನತೆಯ ನಿರೀಕ್ಷೆಗಳೇನು? ಮುಂದೆ ಓದಿ...
ಕರ್ನಾಟಕ ಬಜೆಟ್ ನಲ್ಲಿ ಕಾಫಿ ಬೆಳೆಗಾರರ ನಿರೀಕ್ಷೆ
ಈ ಬಾರಿಯ ಕರ್ನಾಟಕ ಬಜೆಟ್ ನಲ್ಲಿ ಕಾಫಿ ಬೆಳೆಗಾರರ ನಿರೀಕ್ಷೆಯ ಕುರಿತು ಒನ್ಇಂಡಿಯಾ ಕನ್ನಡ ಪ್ರತಿನಿಧಿ ಕಾಫಿ ಮಂಡಳಿಯ ಮಾಜಿ ಉಪಾದ್ಯಕ್ಷ ಹಾಗೂ ಕಾಫಿ ಬೆಳೆಗಾರ ನಾಪೋಕ್ಲಿನ ಡಾ.ಸಣ್ಣುವಂಡ ಕಾವೇರಪ್ಪ ಅವರನ್ನು ಮಾತಾಡಿಸಿದಾಗ, ಅವರು ಮೊದಲು ಸರ್ಕಾರವನ್ನು ಒತ್ತಾಯಿಸಿದ್ದು ಕಾಫಿಗೆ ವಿಶೇಷ ಪ್ಯಾಕೇಜ್ ಘೋಷಣೆ.
ಬೆಳೆಗಾರರು ಸಂಕಷ್ಟದಲ್ಲಿದ್ದಾರೆ
"ಇಂದು ಬಹುತೇಕ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಒಟ್ಟು ಬೆಳೆಗಾರರಲ್ಲಿ ಸಣ್ಣ ಮತ್ತು ಅತೀ ಸಣ್ಣ ಕಾಫಿ ಬೆಳೆಗಾರರ ಸಂಖ್ಯೆಯೇ ಶೇ.90 ರಷ್ಟಿದೆ ಎಂದ ಕಾವೇರಪ್ಪ ಅವರು, ಕಾಫಿ ಉತ್ಪಾದನೆ ವೆಚ್ಚ ಮೂರು ಪಟ್ಟು ಏರಿಕೆ ದಾಖಲಾಗಿದೆ. ಆದರೆ ಕಾಫಿ ದರ ಮಾತ್ರ ಏರಿಕೆಯನ್ನೇ ಕಂಡಿಲ್ಲ. ಅಪಾರ ಪ್ರಮಾಣದ ವಿದೇಶಿ ವಿನಿಮಯವನ್ನೂ ಗಳಿಸಿಕೊಡುವ ಕಾಫಿ ಬೆಳೆಗಾರರ ನೆರವಿಗೆ ಸರ್ಕಾರ ಧಾವಿಸಲೇಬೇಕಿದೆ. ನೆರೆಯ ಕೇರಳ ಸರ್ಕಾರವು ಕಾಫಿಗೆ ಬೆಂಬಲ ಬೆಲೆಯನ್ನು ಘೋಷಿಸಿದೆ. ರಾಜ್ಯ ಸರ್ಕಾರ ಕಾಫಿಗೆ ಬೆಂಬಲ ಬೆಲೆ ನೀಡುವ ಆಲೋಚನೆಯನ್ನೇ ಮಾಡಿಲ್ಲ ಅಲ್ಲದೆ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಬಜೆಟ್ ನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿದರೆ ಸಂಕಷ್ಟದಲ್ಲಿರುವ ಬೆಳೆಗಾರರು ಬದುಕಬಹುದು'' ಎಂದರು.
ಸಂಪೂರ್ಣ ಮನ್ನಾ ಮಾಡಬೇಕು
ಸೋಮವಾರಪೇಟೆ ತಾಲ್ಲೂಕಿನ ಯಡೂರಿನ ಕಾಫಿ ಬೆಳೆಗಾರ ಎ.ಜಿ ಚಿದಾನಂದ ಅವರು, ""ಕಾಫಿ ಬೆಳೆಗಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು'' ಎಂದು ಆಗ್ರಹಿಸಿದರು. ಕಳೆದ 10 ವರ್ಷಗಳಿಂದ ಕಾಫಿಯ ಬೆಲೆ ಅರೇಬಿಕಾ ಕಾಫಿಯ 50 ಕೆಜಿ ಚೀಲವೊಂದಕ್ಕೆ 10 ಸಾವಿರ ರೂಪಾಯಿ ದಾಟಿಲ್ಲ. ಆದರೆ, ಈ ಅವಧಿಯಲ್ಲಿ ಕಾರ್ಮಿಕರ ಸಂಬಳ ದ್ವಿಗುಣವಾಗಿದೆ, ಗೊಬ್ಬರ, ಕ್ರಿಮಿನಾಶಕಗಳ ಬೆಲೆ ದುಪ್ಪಟ್ಟಾಗಿದೆ'' ಎಂದರು.
Recommended Video
ಬಹುಮುಖ್ಯ ಬೇಡಿಕೆ ಎಂದರೆ ಸುಸಜ್ಜಿತ ಆಸ್ಪತ್ರೆ
ಈ ಹಿಂದೆ ಬೆಳೆಗಾರ ಸಂಘಟನೆಗಳು ವಿಶೇಷ ಪ್ಯಾಕೇಜ್ ಘೋಷಣೆಗೆ ಒತ್ತಾಯಿಸಿದ್ದವು. ಆದರೆ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಜಿಲ್ಲೆಗೆ ನೀಡಿದ್ದು ಹೆಚ್ಚೆಂದರೆ ನೂರು ಕೋಟಿ ರೂಪಾಯಿಗಳ ಪ್ಯಾಕೇಜ್ ಮಾತ್ರ. ಅದೂ ಕೂಡ ಸೂಕ್ತವಾದ ರೀತಿಯಲ್ಲಿ ಹಣ ಬಿಡುಗಡೆ ಆಗಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿ ಕಾರ್ಯ ಆಗಿಲ್ಲ. ಕೊಡಗಿನ ಜನತೆಯ ಬಹುಮುಖ್ಯ ಬೇಡಿಕೆ ಎಂದರೆ ಸುಸಜ್ಜಿತ ಆಸ್ಪತ್ರೆ. ರಾಜ್ಯ ಸರ್ಕಾರ ಇಲ್ಲಿನ ಆಸ್ಪತ್ರೆಯನ್ನೆ ಮೇಲ್ದರ್ಜೆಗೆ ಏರಿಸಿದ್ದರೂ, ತುರ್ತು ಸಂದರ್ಭಗಳಲ್ಲಿ ನೆರೆಯ ಮೈಸೂರು ಅಥವಾ ಮಂಗಳೂರಿಗೆ ತೆರಳಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ರಾಜ್ಯ ಸರ್ಕಾರ ಸುಸಜ್ಜಿತ ಆಸ್ಪತ್ರೆಗೆ ಕನಿಷ್ಟ ನೂರು ಕೋಟಿ ಮೀಸಲಿಟ್ಟು, ರೋಗಿಗಳನ್ನು ಆಪತ್ಕಾಲದಲ್ಲಿ ಬದುಕಿಸಬೇಕಿದೆ.