ಕೊಡಗಿನಲ್ಲಿ 'ಕಮಲ' ಕತ್ತರಿಸಲು 'ಕೈ' ಹವಣಿಕೆ, ಏನಿದರ ಹಿಂದಿನ ಎಣಿಕೆ?
Recommended Video
ಮಡಿಕೇರಿ, ಮಾರ್ಚ್ 28: ಇದುವರೆಗೆ ಬಿಜೆಪಿಯ ಭದ್ರಕೋಟೆ ಎಂದೇ ಹೇಳಲಾಗುತ್ತಿದ್ದ ಕೊಡಗಿನಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗತೊಡಗಿದ್ದು, ಸ್ವಪಕ್ಷದಲ್ಲಿಯೇ ಭಿನ್ನಾಭಿಪ್ರಾಯಗಳು ಹೆಚ್ಚಾಗಿದೆ. ಇದರ ಲಾಭ ಕಾಂಗ್ರೆಸ್ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.
ಕಳೆದೊಂದು ದಶಕಗಳಿಂದ ಇಲ್ಲಿ ಬಿಜೆಪಿಯದ್ದೇ ಪಾರುಪತ್ಯವಾಗಿದ್ದು, ಇದಕ್ಕೆ ಒಗ್ಗಟ್ಟೇ ಮುಖ್ಯ ಕಾರಣವಾಗಿತ್ತು. ಜಾತಿ, ಧರ್ಮ ಎಲ್ಲವನ್ನು ಬದಿಗೊತ್ತಿ ಬಿಜೆಪಿ ಅಭ್ಯರ್ಥಿಯೇ ಗೆಲ್ಲಬೇಕೆಂದು ಕಾರ್ಯಕರ್ತರು ಪಣ ತೊಟ್ಟಿದ್ದರು. ಇದರಿಂದಾಗಿ 2013ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಛಿದ್ರವಾಗಿದ್ದರೂ ಕೊಡಗಿನಲ್ಲಿ ನಿರಾಯಾಸವಾಗಿ ಗೆಲುವು ಪಡೆದಿತ್ತು.
ಕೊಡಗು: 2013ರ ಚುನಾವಣಾ ಫಲಿತಾಂಶದಲ್ಲಿ ಗೆದ್ದವರು, ಸೋತವರು
ಆ ನಂತರ 2014ರಲ್ಲಿ ಲೋಕಸಭಾ ಚುನಾವಣೆ ನಡೆದಾಗಲೂ ರಾಜಕೀಯಕ್ಕೆ ಹೊಸಬರಾಗಿದ್ದ ಪತ್ರಕರ್ತ ಪ್ರತಾಪ್ ಸಿಂಹ ಅವರನ್ನು ಗೆಲ್ಲಿಸುವಲ್ಲಿ ಇಲ್ಲಿನ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸಿದ್ದರು. ಆದಾದ ಬಳಿಕ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳು ಸೇರಿದಂತೆ ಎಲ್ಲದರಲ್ಲಿಯೂ ಬಿಜೆಪಿ ಗಮನಾರ್ಹ ಸಾಧನೆಯನ್ನು ಮಾಡಿ, ಕೊಡಗು ಕಮಲ ಪಕ್ಷದ ಭದ್ರಕೋಟೆ ಎಂಬ ಹೆಸರು ಪಡೆದುಕೊಂಡಿತ್ತು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಬಿಜೆಪಿಗೆ ಹೊಡೆತ ನೀಡುವ ಲಕ್ಷಣಗಳು
ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಹಾಗೂ ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಹೀಗೆ ಒಂದಷ್ಟು ಗೊಂದಲ ಮಾಡಿಕೊಂಡಿದ್ದರಿಂದ ಬಿಜೆಪಿ ಮುಂದೆ ಮಂಕಾಗಿತ್ತು. ಇದರ ಲಾಭ ಪಡೆದ ಬಿಜೆಪಿ ತ್ರಿವಿಕ್ರಮನಾಗಿ ಬೆಳೆದಿತ್ತು. ಆದರೆ ಈಗ ಚುನಾವಣೆ ಬರುತ್ತಿದ್ದಂತೆಯೇ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಬಿಜೆಪಿಗೆ ಹೊಡೆತ ನೀಡುವ ಲಕ್ಷಣಗಳನ್ನು ತೋರಿಸುತ್ತಿವೆ.
ವಿರಾಜಪೇಟೆಯವರಿಗೆ ಟಿಕೆಟ್ ಕೊಡಬೇಕು
ವಿರಾಜಪೇಟೆ ತಾಲೂಕಿನಲ್ಲಿ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಷ್ಟೇ ಅಲ್ಲ ವಿರಾಜಪೇಟೆ ತಾಲೂಕಿನವರಿಗೆ ಟಿಕೆಟ್ ನೀಡಬೇಕು, ಇಲ್ಲದಿದ್ದರೆ ಸ್ವಂತ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡಲು ಭಿನ್ನಮತೀಯ ನಾಯಕರು ಆರಂಭಿಸಿದ್ದಾರೆ. ಸುಮಾರು 15 ವರ್ಷಗಳ ಕಾಲ ಬೋಪಯ್ಯ ಅಧಿಕಾರ ಅನುಭವಿಸಿದ್ದು ಸಾಕು, ಬೇರೆಯವರಿಗೆ ಬಿಟ್ಟುಕೊಡಲಿ ಎಂಬುದು ಹಲವರ ಒತ್ತಾಯವಾಗಿದೆ.
ಬೋಪಯ್ಯ ಪರ ಹಾಗೂ ವಿರುದ್ಧ ಗುಂಪು
ಈ ಮಧ್ಯೆ ಕೆಲವರು ಬೋಪಯ್ಯ ಪರ ಇದ್ದರೆ ಹೆಚ್ಚಿನವರು ವಿರುದ್ಧವಾಗಿದ್ದಾರೆ. ಬಹುತೇಕರು ಹೇಳುವುದೇನೆಂದರೆ ಈಗಿರುವ ಶಾಸಕರಾದ ಅಪ್ಪಚ್ಚು ರಂಜನ್ ಮತ್ತು ಬೋಪಯ್ಯ ಅಧಿಕಾರ ಅನುಭವಿಸಿದ್ದಾರೆ. ಹೀಗಾಗಿ ಅವರಿಗೆ ಟಿಕೆಟ್ ನೀಡುವುದು ಬೇಡ. ಬೇರೆಯವರಿಗೆ ಅವಕಾಶ ಮಾಡಿಕೊಡಲಿ ಎಂಬುದಾಗಿದೆ.
ಸಮಸ್ಯೆ ಹೇಗೆ ಪರಿಹರಿಸುತ್ತಾರೆ ರಾಜ್ಯ ನಾಯಕರು?
ಆದರೆ, ಸದ್ಯದ ಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಹಾಲಿ ಶಾಸಕರು ಸ್ಪರ್ಧೆಯಿಂದ ಹಿಂದೆ ಸರಿದು ಬೇರೆಯವರಿಗೆ ಅವಕಾಶ ಮಾಡಿಕೊಡುವುದಿಲ್ಲ. ಇದೀಗ ಕೊಡಗಿನಲ್ಲಿ ಎದ್ದಿರುವ ಸಮಸ್ಯೆಯನ್ನು ರಾಜ್ಯ ನಾಯಕರು ಹೇಗೆ ಪರಿಹರಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಈ ಬಾರಿ ಬಿಜೆಪಿ ಸ್ವಲ್ಪ ಎಡವಿದರೂ ಅದರ ಲಾಭ ಕಾಂಗ್ರೆಸ್ ಗೆ ಆಗುವುದರಲ್ಲಿ ಸಂಶಯವಿಲ್ಲ.
ಎಂ.ಸಿ.ನಾಣಯ್ಯರನ್ನು ತೆಕ್ಕೆಗೆ ತೆಗೆದುಕೊಂಡ ಕಾಂಗ್ರೆಸ್
ಕಾಂಗ್ರೆಸ್ ಕೂಡ ಮತ್ತೆ ಕೊಡಗಿನಲ್ಲಿ ವಿಧಾನಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳಲು ಹವಣಿಸುತ್ತಿದೆ. ಅದಕ್ಕಾಗಿಯೇ ನಾಯಕ ಎಂ.ಸಿ.ನಾಣಯ್ಯ ಅವರನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಕೊಡಗಿನಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ರಾಜಕೀಯ ವಿದ್ಯಮಾನಗಳು ಒಂದಷ್ಟು ಕುತೂಹಲ ಕೆರಳಿಸಿದೆ.