ಮಂಜಿನ ನಗರಿಯ ದಸರಾ ಕರಗ ಉತ್ಸವ ಈ ಬಾರಿ 2 ದಿನಕ್ಕೆ ಸೀಮಿತ
ಮಡಿಕೇರಿ, ಅಕ್ಟೋಬರ್ 14: ಕೊರೊನಾ ವೈರಸ್ ಕಾರಣದಿಂದಾಗಿ ಈ ಬಾರಿ ಜಿಲ್ಲೆಯಲ್ಲಿ ಸರಳ ದಸರಾ ನಡೆಸುವುದಾಗಿ ಜಿಲ್ಲಾಡಳಿತ ನಿರ್ಧರಿಸಿದ್ದು, ಕರಗ ಮಹೋತ್ಸವವನ್ನು ಕೂಡ ಎರಡು ದಿನಕ್ಕೆ ಸೀಮಿತಗೊಳಿಸಲಾಗಿದೆ.
ಶಕ್ತಿದೇವತೆಗಳ ಕರಗ ಉತ್ಸವದೊಂದಿಗೆ ಮಡಿಕೇರಿ ದಸರಾ ಚಾಲನೆ ಪಡೆದು ಆನಂತರ ಒಂಬತ್ತು ದಿನಗಳ ಕಾಲ ಕರಗವು ನಗರ ಪ್ರದಕ್ಷಿಣೆ ಹಾಕುತ್ತಿತ್ತು. ಮಡಿಕೇರಿ ನಗರದ ನಾಲ್ಕು ದಿಕ್ಕಿನಲ್ಲಿರುವ ಶಕ್ತಿದೇವತೆಗಳಾದ ಕಂಚಿ ಕಾಮಾಕ್ಷಿಯಮ್ಮ, ಕೋಟೆ ಮಾರಿಯಮ್ಮ, ದಂಡಿನಮಾರಿಯಮ್ಮ ಹಾಗೂ ಕುಂದುರುಮೊಟ್ಟೆ ಮಾರಿಯಮ್ಮ ದೇವಾಲಯಗಳ ಕರಗಗಳು ಪ್ರದಕ್ಷಿಣೆ ಹಾಕುತ್ತಿದ್ದವು. ಆದರೆ ಈ ಬಾರಿ ಎರಡು ದಿನ ಮಾತ್ರ ಕರಗ ಉತ್ಸವ ನಡೆಯಲಿದೆ.
ಕೊಡಗಿನಲ್ಲಿ ಈ ಬಾರಿ ತೀರ್ಥೋದ್ಧವ, ದಸರಾ ಆಚರಣೆ ಹೇಗಿರುತ್ತೆ?
ಜಿಲ್ಲೆಯಲ್ಲಿ ದಸರಾ ಉತ್ಸವದ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಈ ಹಿಂದೆಯೇ ಸಭೆ ನಡೆದಿದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ತಲಕಾವೇರಿ ಜಾತ್ರೆ, ಮಡಿಕೇರಿ ದಸರಾ ಆಚರಿಸಲು ಸಭೆಯಲ್ಲಿ ಸೂಚನೆ ನೀಡಲಾಗಿದೆ. ಕರಗ ಉತ್ಸವವನ್ನು ಎರಡು ದಿನಗಳ ಕಾಲ ನಡೆಸಲು ತೀರ್ಮಾನಿಸಲಾಗಿದ್ದು, ಈ ನಿರ್ಧಾರಕ್ಕೆ ದಸರಾ ಸಮಿತಿ ಸದಸ್ಯರು ಸಮ್ಮತಿ ಸೂಚಿಸಿದ್ದಾರೆ.
ಅ.17ರಂದು ಸಂಜೆ ಮಡಿಕೇರಿ ನಗರದ ಪಂಪಿನ ಕೆರೆಯಿಂದ ಕರಗೋತ್ಸವಕ್ಕೆ ಚಾಲನೆ ನೀಡಲಾಗುವುದು. ಅ.17 ಹಾಗೂ 26 ರಂದು ಮಾತ್ರ ಕರಗ ನಗರ ಪ್ರದಕ್ಷಿಣೆ ನಡೆಯಲಿದ್ದು, ಈ ಸಂದರ್ಭ ಹೆಚ್ಚು ಮಂದಿ ಸೇರುವಂತಿಲ್ಲ ಎಂದು ಸೂಚಿಸಲಾಗಿದೆ. ಕರಗ ಹೊರುವವರಿಗೆ ಹಾಗೂ ದೇವಾಲಯದ ಸಮಿತಿ ಸದಸ್ಯರಿಗೆ ಮಡಿಕೇರಿ ನಗರದ ನಗರಸಭೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ.
ಅ.17 ರಂದು ಸಂಜೆ ಆರಂಭಗೊಂಡು ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿದ ಬಳಿಕ ತಮ್ಮ ದೇವಾಲಯಗಳಿಗೆ ನಾಲ್ಕು ಶಕ್ತಿ ದೇವತೆಗಳ ಕರಗಗಳು ತೆರಳಲಿವೆ ಎಂದು ಸಮಿತಿ ಮಾಹಿತಿ ನೀಡಿದೆ.
ಮಡಿಕೇರಿ ದಸರಾದ ಮತ್ತೂ ಒಂದು ಪ್ರಮುಖ ಆಕರ್ಷಣೆಯಾದ ಮಂಟಪ ಮೆರವಣಿಗೆಗೂ ಈ ಬಾರಿ ಬ್ರೇಕ್ ಬಿದ್ದಿದೆ. ಮೆರವಣಿಗೆಯಲ್ಲಿ ಜನರ ನಿಯಂತ್ರಣ ಕಷ್ಟವಾಗುವ ಕಾರಣ ಅ.26ರ ವಿಜಯದಶಮಿಯಂದು ಮಂಟಪ ಸಮಿತಿಗಳು ಕಳಸ ಪ್ರತಿಷ್ಠಾಪನೆ ಮಾಡಲಿವೆ. ಪ್ರತಿ ಮಂಟಪ ಸಮಿತಿಯಿಂದಲೂ ಹತ್ತು ಮಂದಿ ಕಳಸದೊಂದಿಗೆ ಬನ್ನಿ ಮಂಟಪಕ್ಕೆ ತೆರಳಿ, ಬನ್ನಿ ಕಡಿಯುವುದರ ಮೂಲಕ ಮಡಿಕೇರಿ ದಸರಾಗೆ ಮಂಗಳ ಹಾಡಲಾಗುತ್ತದೆ ಎಂದು ದಸರಾ ಸಮಿತಿ ಕಾರ್ಯಧ್ಯಕ್ಷ ರಾಬಿನ್ ದೇವಯ್ಯ ತಿಳಿಸಿದ್ದಾರೆ