ಮಹಿಳೆಯರ ಬದುಕು ಬದಲಾಯಿಸಿದ 'ಕಾಲೂರು ಸ್ಟೋರ್ಸ್' ಕಥೆ ಕೇಳಿ!
ಮಡಿಕೇರಿ, ಏಪ್ರಿಲ್ 15: ಕಳೆದ ಆಗಸ್ಟ್ ನಲ್ಲಿ ನಡೆದ ಜಲಪ್ರಳಯದ ಬಳಿಕ ಕೊಡಗಿನ ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದ ಜನ ತತ್ತರಿಸಿ ಹೋಗಿದ್ದರು. ತಮ್ಮದೇ ಕೃಷಿ ಭೂಮಿಯಲ್ಲಿ ಕಾಫಿ, ಕರಿಮೆಣಸು, ಏಲಕ್ಕಿ, ಭತ್ತ ಮುಂತಾದ ಬೆಳೆಗಳನ್ನು ಬೆಳೆದು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದವರು ಬೀದಿಗೆ ಬಂದಿದ್ದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇಂತಹವರಿಗೆ ಬದುಕು ಕಟ್ಟಿಕೊಡುವುದು ಕೂಡ ಅಷ್ಟು ಸುಲಭದ್ದಾಗಿರಲಿಲ್ಲ. ಏಕೆಂದರೆ ತಲ ತಲಾಂತರದಿಂದ ಬಾಳಿಕೊಂಡು ಬಂದಿದ್ದ ಮನೆ ನೆಲಸಮವಾಗಿತ್ತು. ಕಷ್ಟಪಟ್ಟು ದುಡಿದು ಮಾಡಿದ್ದ ತೋಟ ಮಣ್ಣುಪಾಲಾಗಿತ್ತು. ಎಲ್ಲ ಕಳೆದುಕೊಂಡು ಉಳಿದಿದ್ದು ಜೀವ ಮಾತ್ರ. ಕೆಲವರಿಗೆ ಅವರದ್ದು ಎನ್ನಲು ಏನೂ ಇರಲಿಲ್ಲ. ಹೀಗಾಗಿಯೇ ಖಾಲಿ ಕೈನಲ್ಲಿದ್ದ ಜನರಿಗೆ ಬದುಕು ಕಟ್ಟಿಕೊಡುವ ಕಾರ್ಯಕ್ಕೆ ಅದರಲ್ಲೂ ಮಹಿಳೆಯರಿಗೆ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರವು ಮುಂದಾಗಿತ್ತು.
ಮಳವಳ್ಳಿಯ ಮಗ ಮುಟ್ಟಿದ ಎತ್ತರ, ಮಾಡಿದ ಸಾಧನೆ ಅಸಾಮಾನ್ಯ
ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಸ್ವಉದ್ಯೋಗ ಕಲ್ಪಿಸಿಕೊಡುವ ಉದ್ದೇಶದಿಂದ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಪ್ರಾಜೆಕ್ಟ್ ಕೂರ್ಗ್ ವತಿಯಿಂದ ಯೋಜನೆ ರೂಪಿಸಲಾಯಿತು.
ಅದರಂತೆ ಮಸಾಲೆ ಪದಾರ್ಥಗಳ ಉತ್ಪನ್ನಗಳ ತಯಾರಿಕೆಯ ಕೌಶಲ್ಯ ತರಬೇತಿಯನ್ನು ಕಾಲೂರಿನ ಮಹಿಳೆಯರಿಗೆ ನೀಡಲಾಯಿತು. ಜತೆಗೆ ಕಾಲೂರು ಪ್ರಾಡೆಕ್ಟ್ ಹೆಸರಿನಲ್ಲಿ ಮಸಾಲೆ ಪದಾರ್ಥಗಳನ್ನು ತಯಾರಿಸಿ ಮಾರುಕಟ್ಟೆಗೂ ಬಿಡುಗಡೆ ಮಾಡುವ ಚಿಂತನೆಯನ್ನು ಮಾಡಲಾಯಿತು. ಮುಂದೇನಾಯ್ತು...
ಕಾಲೂರು ಸ್ಟೋರ್ಸ್ ಹೆಸರಿನಲ್ಲಿ ಮಳಿಗೆ
ಈ ಯೋಜನೆ ಅಡೆ ತಡೆಯಿಲ್ಲದೆ ನಡೆದ ಕಾರಣ ಮತ್ತು ಮಹಿಳೆಯರು ಇದಕ್ಕೆ ಹೆಚ್ಚಿನ ಆಸಕ್ತಿ ತೋರಿದ್ದರಿಂದಾಗಿ ಯೋಜನೆ ಸಫಲಗೊಳ್ಳಲು ಕಾರಣವಾಯಿತು. ಹೀಗಾಗಿ ಮೊದಲ ಬಾರಿಗೆ ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರವು ಯಶಸ್ವಿ ಹೆಸರಿನಲ್ಲಿ ಜಿಲ್ಲಾಡಳಿತದ ನೆರವಿನೊಂದಿಗೆ ರಾಜಾಸೀಟ್ ಮುಂಬದಿಯಲ್ಲಿ ಕಾಲೂರು ಸ್ಟೋರ್ಸ್ ಎಂಬ ಹೆಸರಿನಲ್ಲಿ ಮಳಿಗೆ ತೆರೆಯಲಾಯಿತು. ಇದಕ್ಕೆ ಉತ್ತಮ ಸ್ಪಂದನೆಯೂ ದೊರೆಯಿತು.
ಮತ್ತೊಂದು ಮಳಿಗೆ ಉದ್ಘಾಟನೆ
ಇದರಿಂದ ಪ್ರೇರಣೆಗೊಂಡು ಇದೀಗ ಮತ್ತೊಂದು ಮಳಿಗೆಯನ್ನು ಮಡಿಕೇರಿಯ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿಯ ಶಿಶುಕಲ್ಯಾಣ ಸಂಸ್ಥೆಯ ಮುಂಬದಿ ಮಳಿಗೆ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಈ ಮಳಿಗೆ ಏ.14ರಂದು ಭಾನುವಾರ ಉದ್ಘಾಟನೆಯಾಗಿದೆ.
ನಿರುದ್ಯೋಗಿಗಳಿಗೆ ದಾರಿದೀಪವಾದ ಮೈಸೂರಿನ ಅಚ್ಯುತಾನಂದ
ಹೆಚ್ಚಿದ ಮಹಿಳೆಯರ ಉತ್ಸಾಹ
ಈ ಮಳಿಗೆಗಳ ಹಿಂದೆ ಕಾಲೂರು ಮಹಿಳೆಯರ ಶ್ರಮ, ಆಸಕ್ತಿ ಎಲ್ಲವೂ ಇರುವುದನ್ನು ನಾವು ಕಾಣಬಹುದಾಗಿದೆ. ಅಷ್ಟೇ ಅಲ್ಲ ಮಸಾಲೆ ಪದಾರ್ಥಗಳನ್ನು ತಯಾರಿಸಲು ತರಬೇತಿ ಪಡೆದ ಕೇವಲ 180 ದಿನಗಳಲ್ಲಿಯೇ ಅವರು ತಯಾರಿಸಿದ ಮಸಾಲೆ ಪದಾರ್ಥಗಳ ಮಾರಾಟದ ಎರಡನೇ ಮಳಿಗೆ ಪ್ರಾರಂಭವಾಗುತ್ತಿರುವುದು ಮಹಿಳೆಯರಲ್ಲಿ ಉತ್ಸಾಹ ಹೆಚ್ಚಿಸಿದೆ.
ಬಾಲಾಜಿ ಕಶ್ಯಪ್ ರಿಂದ ಶ್ಲಾಘನೆ
ಉತ್ಸಾಹ ಮತ್ತು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾದ ಕಾಲೂರು ಮಹಿಳೆಯರನ್ನು ಪ್ರಾಜೆಕ್ಟ್ ಕೂರ್ಗ್ ಮುಖ್ಯಸ್ಥ ಬಾಲಾಜಿ ಕಶ್ಯಪ್ ಶ್ಲಾಘಿಸಿದ್ದಾರೆ.