ಕೊನೆಯಾಯ್ತು ಐಟಿ ರೈಡ್; ರಶ್ಮಿಕಾ ಮನೆಯಿಂದ 4 ಬಾಕ್ಸ್ ದಾಖಲೆ ಸಂಗ್ರಹ
ಕೊಡಗು, ಜನವರಿ 17: ದಕ್ಷಿಣ ಭಾರತದ ನಟಿ, ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ನಿವಾಸದಲ್ಲಿ ಐಟಿ ದಾಳಿ ಅಂತ್ಯವಾಗಿದೆ. ಗುರುವಾರ ಬೆಳಗ್ಗೆ 7.30ರಿಂದ ಶುಕ್ರವಾರ ಮಧ್ಯಾಹ್ನದವರೆಗೆ, ಅಂದರೆ ಸತತ 29 ಗಂಟೆಗಳ ಕಾಲ ತನಿಖೆ ನಡೆದಿದೆ.
ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ಅಧಿಕಾರಿಗಳ ಶೋಧ ಕಾರ್ಯ ಮುಗಿದಿದೆ.
4 ಬಾಕ್ಸ್ ದಾಖಲೆ ಸಂಗ್ರಹ
ರಶ್ಮಿಕಾ ಮಂದಣ್ಣರವರ ಕೊಡಗು ಜಿಲ್ಲೆ ವಿರಾಜಪೇಟೆ ನಿವಾಸದಲ್ಲಿ ಗುರುವಾರ ಬೆಳಗ್ಗೆಯಿಂದ ನಡೆಯುತ್ತಿದ್ದ ಐಟಿ ದಾಳಿ ಶುಕ್ರವಾರ ಮಧ್ಯಾಹ್ನ ಅಂತ್ಯವಾಗಿದೆ. ದಕ್ಷಿಣ ಭಾರತದ ನಟಿ ರಶ್ಮಿಕಾ ಮಂದಣ್ಣ ನಿವಾಸದಲ್ಲಿ ಐಟಿ ಅಧಿಕಾರಿಗಳು ಶೋಧ ಕಾರ್ಯ ಮುಗಿಸಿದ್ದಾರೆ. ಐಟಿ ದಾಳಿ ಬಳಿಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 4 ಬಾಕ್ಸ್ ದಾಖಲೆ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಒಂದು ಸೂಟ್ಕೇಸ್, ಎರಡು ಬ್ಯಾಗ್ ಮತ್ತೊಂದು ವೈಟ್ ಬಾಕ್ಸ್ನಲ್ಲಿ ಐಟಿ ಅಧಿಕಾರಿಗಳು ದಾಖಲೆ ಸಂಗ್ರಹ ಮಾಡಿದ್ದಾರೆ.
ಐಟಿ ದಾಳಿ; ರಶ್ಮಿಕಾ ಮಂದಣ್ಣ ಕುಟುಂಬದ ಒಟ್ಟು ಆಸ್ತಿ ವಿವರ
ಇಂದು ನಡೆದ ರಶ್ಮಿಕಾ ತಾಯಿ ಸುಮನ್ ಮಂದಣ್ಣ ವಿಚಾರಣೆ
ಗುರುವಾರ ಬೆಳಗ್ಗೆಯಿಂದ ಶುಕ್ರವಾರ ಮಧ್ಯಾಹ್ನದವರೆಗೆ ಐಟಿ ಅಧಿಕಾರಿಗಳ ಎರಡು ತಂಡ ರಶ್ಮಿಕಾ ನಿವಾಸದಲ್ಲಿ ಹಾಗೂ ಮಂದಣ್ಣ ಸೆರೆನಿಟಿ ಹಾಲ್ನಲ್ಲಿ ಶೋಧ ಕಾರ್ಯ ನಡೆಸಿದ್ದರು. ಜತೆಗೆ, ಶೂಟಿಂಗ್ ನಲ್ಲಿದ್ದ ರಶ್ಮಿಕಾ ಮಂದಣ್ಣ ಗುರುವಾರ ರಾತ್ರಿ ಕೊಡಗು ಜಿಲ್ಲೆಯ ತಮ್ಮ ನಿವಾಸಕ್ಕೆ ಆಗಮಿಸಿದ್ದರು. ಅವರನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಜತೆಗೆ, ತಡರಾತ್ರಿ ಮನೆಗೆ ಆಗಮಿಸಿದ ರಶ್ಮಿಕಾ ತಾಯಿ ಸುಮನ್ ಮಂದಣ್ಣರನ್ನೂ ಐಟಿ ಅಧಿಕಾರಿಗಳು ಶುಕ್ರವಾರ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ವಿಚಾರಣೆ ಮುಗಿಸಿ ಬೆಂಗಳೂರಿನತ್ತ ರಶ್ಮಿಕಾ ಪ್ರಯಾಣ
ಇನ್ನೊಂದೆಡೆ, ಬೆಳಗ್ಗೆಯಷ್ಟೇ ನಟಿ ರಶ್ಮಿಕಾ ಮಂದಣ್ಣ ತಮ್ಮ ಮನೆಯಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿತ್ತು. 'ಕಿರಿಕ್ ಪಾರ್ಟಿ'ಯ ಸಾನ್ವಿ ಪಾತ್ರದ ಮೂಲಕ ಮನೆ ಮಾತಾದ ರಶ್ಮಿಕಾ ಮಂದಣ್ಣ ಸ್ಯಾಂಡಲ್ ವುಡ್ ಚಿತ್ರಗಳ ಜತೆ ಟಾಲಿವುಡ್ ಹಾಗೂ ಕಾಲಿವುಡ್ ಚಿತ್ರಗಳಲ್ಲೂ ಹೆಸರು ಗಳಿಸಿದ್ದಾರೆ. ಇತ್ತೀಚೆಗೆ ಮಹೇಶ್ ಬಾಬು ಹಾಗೂ ನಟಿ ರಶ್ಮಿಕಾ ಮಂದಣ್ಣರ ತೆಲುಗಿನ 'ಸರಿಲೇರು ನೀ ಕೆವ್ವರು' ಚಿತ್ರ ಬಿಡುಗಡೆಯಾಗಿ ದೊಡ್ಡ ಹೆಸರು ಮಾಡುತ್ತಿದೆ. ಅಲ್ಲದೆ, ಕನ್ನಡದಲ್ಲಿ ನಟ ಧ್ರುವ ಸರ್ಜಾ ಜತೆಗಿನ 'ಪೊಗರು' ಚಿತ್ರ ಸದ್ಯದಲ್ಲೇ ರಿಲೀಸ್ ಗೆ ರೆಡಿಯಾಗಿದೆ.
ಐಟಿ ಅಧಿಕಾರಿಗಳ ಮುಂದೆ ಹಾಜರಾದ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಕುಟುಂಬದ ಆಸ್ತಿ ವಿವರ
ಗುರುವಾರ ಐಟಿ ದಾಳಿ ನಂತರ ರಶ್ಮಿಕಾ ಮಂದಣ್ಣ ಕುಟುಂಬದ ಆಸ್ತಿ ವಿವರ ದೊರಕಿತ್ತು. ಕೊಡಗಿನ ವೀರಾಜಪೇಟೆಯ ಕುಕ್ಲೂರು ಗ್ರಾಮದಲ್ಲಿ ಎರಡು ಅಂತಸ್ತಿನ ಕೋಟಿ ರೂ, ಮೌಲ್ಯದ ಐಷಾರಾಮಿ ಕಟ್ಟಡ, ಜೊತೆಗೆ ಎರಡು ಐಷಾರಾಮಿ ಕಾರುಗಳನ್ನು ರಶ್ಮಿಕಾ ತಂದೆ ಮದನ್ ಮಂದಣ್ಣ ಹೊಂದಿದ್ದಾರೆ ಎಂಬುದು ತಿಳಿದುಬಂದಿತ್ತು. ವಿರಾಜಪೇಟೆ ಸಮೀಪದ ಮೈತಾಡಿ ಗ್ರಾಮದಲ್ಲಿ 24 ಎಕರೆ ಕಾಫಿ ತೋಟ ಹೊಂದಿದ್ದು, ಇತ್ತೀಚೆಗೆ ಬಿಟ್ಟಂಗಾಲದಲ್ಲಿ 5.50 ಎಕರೆ ಜಾಗವನ್ನು ಖರೀದಿ ಮಾಡಿದ್ದರು ಎಂದು ತಿಳಿದುಬಂದಿದೆ. ಪೆಟ್ರೋಲ್ ಬಂಕ್ ಹಾಗೂ ಶಾಲೆ ನಿರ್ಮಾಣಕ್ಕೆ ಜಾಗ ಖರೀದಿ ಮಾಡಿದ್ದರು ಎನ್ನಲಾಗಿದೆ.