ದಕ್ಷಿಣ ಭಾರತದಲ್ಲಿ ಐಎಸ್ಐಎಸ್ ಅಡಗುತಾಣ; ಎನ್ಐಎ ಚಾರ್ಜ್ಶೀಟ್
ಮಡಿಕೇರಿ, ಜೂನ್ 24; ದಕ್ಷಿಣ ಭಾರತದ ಕಾಡುಗಳಲ್ಲಿ ಐಎಸ್ಐಎಸ್ ಉಗ್ರರು ಅಡಗುದಾಣಗಳನ್ನು ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದರು ಎಂದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಚೆನ್ನೈನ ಭಯೋತ್ಪದನಾ ನಿಗ್ರಹ ದಳದ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಹೇಳಿದೆ.
ಕಳೆದ ವಾರ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಯಲ್ಲಿ ಉಗ್ರರು ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದ ಕಾಡುಗಳಲ್ಲಿ ಸುಭದ್ರ ಅಡಗುತಾಣಗಳನ್ನು ನಿರ್ಮಿಸಿಕೊಂಡು ವಿಧ್ವಂಸಕ ಕೃತ್ಯವನ್ನು ಎಸಗಲು ಸಂಚು ರೂಪಿಸಲು ಯತ್ನಿಸಿದ್ದರು ಎಂದು ಎನ್ಐಎ ಉಲ್ಲೇಖಿಸಿದೆ.
ಕರ್ನಾಟಕದಲ್ಲಿ ಐಎಸ್ಐಎಸ್ ಚಟುವಟಿಕೆ; ಎನ್ಐಎ ಚಾರ್ಜ್ ಶೀಟ್
2020 ರಲ್ಲಿ ತಮಿಳುನಾಡಿನ ಸೇಲಂ ಮತ್ತು ಚೆನ್ನೈನಲ್ಲಿ ಎನ್ಐಎ ದಾಳಿ ನಡೆಸಿ ಕೆಲ ಶಂಕಿತ ಉಗ್ರರನ್ನು ಬಂಧಿಸಿತ್ತು. ಬಂಧಿತರು ನೂರಾರು ಸಿಮ್ ಕಾರ್ಡ್ಗಳನ್ನು ನಕಲಿ ದಾಖಲಾತಿಗಳ ಮೂಲಕ ಪಡೆದುಕೊಂಡಿದ್ದರು. ಈ ಕುರಿತು ತನಿಖೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.
12 ಮಂದಿ ಐಎಸ್ಐಎಸ್ ಶಂಕಿತ ಉಗ್ರರ ವಿರುದ್ಧ ಎನ್ಐಎ ಚಾರ್ಜ್ಶೀಟ್
ಈ ಮಾದರಿಯ ಭಾಗವಾಗಿದ್ದ ಬೆಂಗಳೂರಿನಲ್ಲಿ ಬಂಧಿಸಲ್ಪಟ್ಟ ಉಗ್ರ ಮೆಹಬೂಬ್ ಪಾಷಾ ಮತ್ತು ತಮಿಳುನಾಡಿನ ಕಡಲೂರಿನಲ್ಲಿ ಬಂಧಿತನಾದ ಉಗ್ರ ಖ್ವಾಜಾ ಮೊಹಿದೀನ್ ಇಬ್ಬರೂ ಕಾರ್ಯ ನಿರ್ವಹಿಸುತ್ತಿದ್ದು. ಇವರಿಬ್ಬರೂ ಆಲ್ ಹಿಂದ್ ಎಂಬ ಉಗ್ರ ಸಂಘಟನೆಯ ಭಾಗವಾಗಿದ್ದರು.
ಉ.ಪ್ರ, ಪಶ್ಚಿಮ ಬಂಗಾಳದಲ್ಲಿ ಐಎಸ್ಐಎಸ್ ಉಗ್ರರ ಸಂಚಾರ
ಈ ಸಂಘಟನೆಯು ಐಎಸ್ಐಎಸ್ಗೆ ಭಾರತದಲ್ಲಿ ಉಗ್ರರನ್ನು ನೇಮಕ ಮಾಡಿಕೊಳ್ಳುತ್ತಿತ್ತು ಎಂಬ ಆರೋಪವಿದೆ. ಈ ಆಲ್ ಹಿಂದ್ ಸಂಘಟನೆಯು ಒಟ್ಟು 20 ಸದಸ್ಯರನ್ನು ನೇಮಕ ಮಾಡಿಕೊಂಡಿದ್ದು, ಇವರು ವಿಧ್ವಂಸಕ ಕೃತ್ಯಗಳನ್ನು ಎಸಗಿ ನಂತರ ಕಾಡಿನೊಳಗೆ ಸೇರಿಕೊಳ್ಳುವ ಯೋಜನೆ ರೂಪಿಸಿದ್ದರು ಎಂದು ಎನ್ಐಎ ಹೇಳಿದೆ.
ಇದೇ ಕಾರಣಕ್ಕೆ ಇವರು ಕರ್ನಾಟಕದ ಶಿವನಸಮುದ್ರಕ್ಕೆ ಭೇಟಿ ನೀಡಿ ಕಾಡಿನೊಳಗೆ ಒಂದು ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದು ತರಬೇತಿ ನೀಡಲು ಯೋಜಿಸಿದ್ದರು. ಕಾಡಿನಲ್ಲಿ ತಂಗಲು ಡೇರೆಗಳು, ಬೂಟುಗಳು, ಮದ್ದು-ಗುಂಡುಗಳು, ಹಗ್ಗ ಮತ್ತು ಏಣಿಗಳನ್ನು ಸಂಗ್ರಹಿಸಿದ್ದರು.
ಉಗ್ರರು ಸುಧಾರಿತ ಸ್ಫೋಟಕಗಳನ್ನು ತಯಾರು ಮಾಡಲು ಭಾರೀ ಪ್ರಮಾಣದ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿದ್ದರು. ಈ ಉಗ್ರರು ಮಹಾರಾಷ್ಟ್ರದ ರತ್ನಗಿರಿ, ಕರ್ನಾಟಕದ ಕೊಡಗು ಮತ್ತು ಕೋಲಾರ, ಪಶ್ಚಿಮ ಬಂಗಾಳದ ಬುರ್ದ್ವಾನ್ ಮತ್ತು ಸಿಲಿಗುರಿ ಹಾಗೂ ಆಂಧ್ರಪ್ರದೇಶದ ಚಿತ್ತೂರಿನ ಅರಣ್ಯಗಳಲ್ಲಿ ಅಡಗುದಾಣ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಿದ್ದರು.
ಈ ಕಾಡುಗಳಲ್ಲಿ ಮೊದಲು ಅಡಗುದಾಣಗಳನ್ನು ನಿರ್ಮಿಸಿಕೊಂಡು ನಂತರ ವ್ಯವಸ್ಥಿತ ದಾಳಿಯ ಮೂಲಕ ಹಿಂದೂ ನಾಯಕರು, ಅಧಿಕಾರಿಗಳು, ಪೊಲೀಸರು ಮತ್ತು ರಾಜಕೀಯ ಮುಖಂಡರನ್ನು ಕೊಲ್ಲುವ ಉದ್ದೇಶ ಹೊಂದಿದ್ದರು ಎಂದು ಎನ್ಐಎ ಉಲ್ಲೇಖಿಸಿದೆ. ಎನ್ಐಎ ತನ್ನ ಪೂರಕ ಚಾರ್ಜ್ಶೀಟ್ನಲ್ಲಿ ತಿರುವನಂತಪುರಂನ ನಿವಾಸಿ ಸೈಯದ್ ಅಲಿಯನ್ನು ಹೆಸರಿಸಿದೆ.
ಅಲಿ ಮತ್ತು ಸಹಚರರು ಐಇಡಿಗಳನ್ನು ತಯಾರಿಸಿ ಪರೀಕ್ಷಿಸುತ್ತಿದ್ದಾರೆ ಮತ್ತು ಜಿಹಾದ್ ಅನ್ನು ಸಾರುವ ಸಿದ್ಧತೆಗಳ ಭಾಗವಾಗಿ ತಮ್ಮ ವಿದೇಶಿ ಹ್ಯಾಂಡ್ಲರ್ ಜೊತೆ ಸಂವಹನಕ್ಕಾಗಿ ಡಾರ್ಕ್ ವೆಬ್ ಅಂತರ್ಜಾಲವನ್ನು ಬಳಸಿದ್ದಾರೆ. ದಕ್ಷಿಣ ಭಾರತದ ಕಾಡುಗಳಲ್ಲಿ ಐಎಸ್ಐಎಸ್ ಪ್ರಾಂತ್ಯವನ್ನು ಸ್ಥಾಪಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಎನ್ಐಎ ಉಲ್ಲೇಖಿಸಿದೆ.
ಸೈಯದ್ ಅಲಿ ಅಲಿಯಾಸ್ ವಿಂಜಾನಿ (ವಿಜ್ಞಾನಿ) ಎಂಬುವವನು ತಂತ್ರಜ್ಞಾನ ಪ್ರಿಯ ಎಂದು ಎನ್ಐಎ ಉಲ್ಲೇಖಿಸಿದೆ. ಇವನು ಡಾರ್ಕ್ ವೆಬ್ ಅಂತರ್ಜಾಲವನ್ನು ಬಳಸುವುದನ್ನು ಇತರ ಉಗ್ರರಿಗೆ ಕಲಿಸಿಕೊಟ್ಟಿದ್ದನಲ್ಲದೆ ಮೊಹಿದೀನ್ ಎಂಬ ಉಗ್ರನಿಗೆ ವಿದೇಶಿ ಹ್ಯಾಂಡ್ಲರ್ನೊಂದಿಗೆ ಮಾತನಾಡಲು ಗೂಢಲಿಪಿ ಮಾಡಿಕೊಂಡು ಸಂವಹನ ನಡೆಸಲು ತಿಳಿಸಿಕೊಟ್ಟಿದ್ದ.
Recommended Video
ಇದಲ್ಲದೆ ಈ ಉಗ್ರರು ಅನೇಕ ಪಿತೂರಿ ಸಭೆಗಳನ್ನು ನಡೆಸಿದ್ದು ವಿಧ್ವಂಸಕ ಕೃತ್ಯ ನಡೆಸಲು ಸೂಕ್ತ ಅವಕಾಶಕ್ಕಾಗಿ ಕಾಯುತಿದ್ದರು. ಒಂದು ವೇಳೆ ಇವರನ್ನು ಬಂಧಿಸದಿದ್ದರೆ ವಿಧ್ವಂಸಕ ಕೃತ್ಯ ನಡೆಸುತ್ತಿದ್ದರು. ವಿದೇಶಿ ಹ್ಯಾಂಡ್ಲರ್ ಪಾಕಿಸ್ತಾನ ಅಥವಾ ಅಫ್ಘಾನಿಸ್ಥಾನದಿಂದ ಇವರನ್ನು ಸಂಪರ್ಕಿಸುತ್ತಿದ್ದ ಎಂದು ಎನ್ಐಏ ಶಂಕಿಸಿದೆ.