ರಾಜಾಸೀಟ್ನಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆದಿದೆಯೇ?
ಮಡಿಕೇರಿ, ಜೂನ್ 19: ವಾರ್ಷಿಕವಾಗಿ ಲಕ್ಷಾಂತರ ಜನ ಪ್ರವಾಸಿಗರು ಭೇಟಿ ನೀಡುವ ಕೊಡಗು ಜಿಲ್ಲೆಯ ಮೊದಲ ಪ್ರವಾಸಿ ತಾಣ ರಾಜಾಸೀಟ್ನ ಗುಡ್ಡದಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕಾಮಗಾರಿಯನ್ನು ನಡೆಸುತ್ತಿರುವುದೂ ತೋಟಗಾರಿಕಾ ಇಲಾಖೆಯೇ ಎಂಬುದು ವಿಶೇಷ.
"ಹಚ್ಚ ಹಸಿರಿನಿಂದ ಕಂಗೊಳಿಸುವ ಈ ಪ್ರವಾಸಿ ತಾಣವು ಗುಡ್ಡದ ಮೇಲಿದ್ದು, ಈಗ ಅಭಿವೃದ್ಧಿಯ ಹೆಸರಿನಲ್ಲಿ ಸುತ್ತಮುತ್ತಲ ಹಸಿರು ಬೆಟ್ಟ, ಗುಡ್ಡಗಳನ್ನು ಅಗೆದು ಕಾಂಕ್ರೀಟ್ಮಯಗೊಳಿಸಲಾಗಿದೆ. ಈ ಪರಿಸರ ವಿರೋಧಿ ಕಾಮಗಾರಿಯಿಂದಾಗಿ ರಾಜಾಸೀಟ್ ಪ್ರದೇಶ ಮಂಗಳೂರು ರಸ್ತೆಗೆ ಕುಸಿಯುವ ಎಲ್ಲಾ ಸಾಧ್ಯತೆಗಳಿದ್ದು, ಅಪಾಯ ಕಟ್ಟಿಟ್ಟ ಬುತ್ತಿ,'' ಎಂದು ವೀರನಾಡು ರಕ್ಷಣಾ ವೇದಿಕೆ ಆತಂಕ ವ್ಯಕ್ತಪಡಿಸಿದೆ.
ಅನ್ಲಾಕ್ ಆದರೂ ಪ್ರವಾಸೋದ್ಯಮಕ್ಕೆ ನಿರ್ಬಂಧ ಹೇರಲು ಒತ್ತಾಯ
ಅಪಾಯವನ್ನು ಆಹ್ವಾನಿಸುವ ಕಾರ್ಯ
ಈ ಕುರಿತು ಮಾತನಾಡಿದ ವೇದಿಕೆಯ ಅಧ್ಯಕ್ಷ ಹರೀಶ್ ಜಿ.ಆಚಾರ್ಯ, "ಪ್ರಕೃತಿಗೆ ವಿರುದ್ಧವಾಗಿ ಗುಡ್ಡವನ್ನು ಅಗೆದು ಹಾಕಿರುವುದರಿಂದ ಮತ್ತು ಕಾಂಕ್ರೀಟ್ ಕಾಮಗಾರಿ ನಡೆಸಿರುವುದರಿಂದ ಮಹಾಮಳೆಯ ಸಂದರ್ಭ ಕುಸಿಯುವುದು ಖಚಿತವೆಂದು ಅಭಿಪ್ರಾಯಪಟ್ಟಿದ್ದಾರೆ. ಭಾಗಮಂಡಲದ ಗಜಗಿರಿ ಬೆಟ್ಟದಲ್ಲಿ ಇಂಗು ಗುಂಡಿಗಳನ್ನು ತೆಗೆದು ದೊಡ್ಡ ಅನಾಹುತವೇ ನಡೆದು ಹೋಯಿತು. ಇದೀಗ ರಾಜಾಸೀಟ್ನಲ್ಲಿ ಇಂತಹದ್ದೇ ಅಪಾಯವನ್ನು ಆಹ್ವಾನಿಸುವ ಕಾರ್ಯ ನಡೆದಿದೆ. ಮಂಗಳೂರು ರಸ್ತೆಗೆ ಗುಡ್ಡ ಕುಸಿದರೆ ಕೆಳ ಭಾಗದಲ್ಲಿರುವ ಮನೆಗಳಿಗೆ ಹಾನಿಯಾಗುವುದಲ್ಲದೆ, ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆಗಳಿದೆ.''
ಕೋಟ್ಯಂತರ ರೂಪಾಯಿ ಹಣ ಪೋಲು
"ಪ್ರವಾಸೋದ್ಯಮದ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ದಬ್ಬಾಳಿಕೆ ನಡೆಸಿ ಸಾರ್ವಜನಿಕರ ಕೋಟ್ಯಂತರ ರೂಪಾಯಿ ಹಣವನ್ನು ಪೋಲು ಮಾಡಲಾಗುತ್ತಿದೆ. ಮಡಿಕೇರಿ ನಗರದಲ್ಲಿ ಒಂದು ರಸ್ತೆ ಕೂಡ ನಡೆದಾಡಲು ಸಮರ್ಪಕವಾಗಿಲ್ಲ. ಆದರೆ ರಾಜಾಸೀಟ್ ಗುಡ್ಡದಲ್ಲಿ ಕಾಂಕ್ರಿಟ್ ರಸ್ತೆ, ಮೆಟ್ಟಿಲು, ವ್ಯೂವ್ ಪಾಯಿಂಟ್, ತಡೆಗೋಡೆಯನ್ನು ನಿರ್ಮಿಸಲಾಗಿದೆ. ಇದು ಅತ್ಯಂತ ಅಪಾಯಕಾರಿ ಬೆಳೆವಣಿಗೆಯಾಗಿದ್ದು, ಕಾಂಕ್ರಿಟ್ ಕಾಡಿನ ಮೂಲಕ ರಭಸವಾಗಿ ಹರಿಯುವ ನೀರು ಗುಡ್ಡ ಕುಸಿಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ,'' ಎಂದು ಅವರು ಆರೋಪಿಸಿದ್ದಾರೆ.
ಮೌನಕ್ಕೆ ಶರಣಾಗಿರುವ ಸ್ಥಳೀಯ ಜನಪ್ರತಿನಿಧಿಗಳು
"ಬೆಟ್ಟ-ಗುಡ್ಡಗಳಲ್ಲಿ ಮರ, ಗಿಡ, ಹುಲ್ಲಿದ್ದರೆ ಮಳೆಯ ನೀರಿನಿಂದ ಅಪಾಯ ಸಂಭವಿಸುವುದಿಲ್ಲ. ಆದರೆ ಅಗೆದು ಸಮತೋಲನವನ್ನು ಹದಗೆಡಿಸಿದರೆ ಕುಸಿಯುವ ಭೀತಿ ಹೆಚ್ಚು. ಪರಿಸ್ಥಿತಿ ಹೀಗಿದ್ದರೂ ಈ ಕಾಮಗಾರಿಗಳನ್ನು ಕೈಗೊಳ್ಳಲು ಭೂವಿಜ್ಞಾನಿಗಳು ಅನುಮತಿ ನೀಡಿದ್ದಾರೆಯೇ? ಮೂಲಭೂತ ಸೌಲಭ್ಯಗಳನ್ನು ನೀಡದೆ ಪ್ರಕೃತಿ ವರವಾಗಿ ನೀಡಿರುವ ಪ್ರವಾಸಿ ತಾಣಗಳನ್ನು ಕುರೂಪಗೊಳಿಸುತ್ತಿರುವುದು ಖಂಡನೀಯ. ರಾಜಾಸೀಟ್ನಲ್ಲಿ ನಡೆದಿರುವ ಕಾಂಕ್ರೀಟ್ ಕಾಮಗಾರಿಯಿಂದ ಅನಾಹುತ ಸಂಭವಿಸಿದರೆ ಜಿಲ್ಲಾಡಳಿತ, ಸಂಬಂಧಿಸಿದ ಅಧಿಕಾರಿಗಳು ಹಾಗೂ ಮೌನಕ್ಕೆ ಶರಣಾಗಿರುವ ಸ್ಥಳೀಯ ಜನಪ್ರತಿನಿಧಿಗಳು ಹೊಣೆಗಾರರಾಗಬೇಕಾಗುತ್ತದೆ,'' ಎಂದು ಹರೀಶ್ ಜಿ.ಆಚಾರ್ಯ ಎಚ್ಚರಿಕೆ ನೀಡಿದ್ದಾರೆ.
Recommended Video
ಉನ್ನತ ಮಟ್ಟದ ತನಿಖೆಯಾಗಬೇಕು
"ಈ ಹಿಂದೆ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಅಂದಿನ ಜಿಲ್ಲಾಧಿಕಾರಿ ಶ್ರೀವಿದ್ಯಾ ಬೆಟ್ಟ, ಗುಡ್ಡಗಳಲ್ಲಿ ಕಾಂಕ್ರೀಟ್ ಕಾಮಗಾರಿಗಳನ್ನು ಕೈಗೊಳ್ಳಬಾರದೆಂದು ಆದೇಶಿಸಿದ್ದರು. ಆದರೆ ಇಂದು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ದುರುದ್ದೇಶದ ಕಾಮಗಾರಿಗಳು ನಡೆಯುತ್ತಿದೆ ಎಂದು ಟೀಕಿಸಿದ್ದಾರೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕೈಗೊಂಡಿರುವ ಕಾಮಗಾರಿ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಮತ್ತು ಈ ಯೋಜನೆಗೆ ಪರಿಸರ ಇಲಾಖೆ ಅನುಮತಿ ನೀಡಿದೆಯೇ ಎನ್ನುವ ಬಗ್ಗೆ ಜನರಿಗೆ ಸ್ಪಷ್ಟತೆ ನೀಡಬೇಕು,'' ಎಂದು ಒತ್ತಾಯಿಸಿದ್ದಾರೆ.