ಅಂತರ್ ಧರ್ಮೀಯ ಮದುವೆ: 6 ತಿಂಗಳಿಗೇ ಗರ್ಭಿಣಿ ಸಾವು
ಮಡಿಕೇರಿ, ಮೇ 13: ಅಂತರ್ ಧರ್ಮೀಯ ಮದುವೆ ಆದ 6 ತಿಂಗಳಲ್ಲಿ ಗರ್ಭಿಣಿಯೊಬ್ಬಳು ಸಂಶಯಾಸ್ಪದವಾಗಿ ಮೃತಪಟ್ಟಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಸಾವಿನ ಬಗ್ಗೆ ಆಕೆಯ ತಾಯಿ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
""ತಮ್ಮ ಮಗಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಆಕೆಯ ಪತಿ ಹಾಗೂ ಮನೆಯವರು ಕೊಲೆ ಮಾಡಿರುವ ಶಂಕೆ ಇದೆ'' ಎಂದು ಮೃತಳ ತಾಯಿ ವಿ.ಯಶೋಧ ಆರೋಪಿಸಿದ್ದಾರೆ. ಪೊಲೀಸರು ಸೂಕ್ತ ತನಿಖೆ ನಡೆಸಿ ಸತ್ಯವನ್ನು ತಿಳಿಸಬೇಕೆಂದು ಒತ್ತಾಯಿಸಿದ್ದಾರೆ.
ಕೊಡಗಿನತ್ತ ಅಕ್ರಮವಾಗಿ ತೆರಳಲು ತೂಗುಸೇತುವೆ ಬಳಕೆ?
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೃತಳ ತಾಯಿ, ""ತಮ್ಮ ಮಗಳು ಭಾಗ್ಯಶ್ರೀ (18) 6 ತಿಂಗಳ ಹಿಂದೆಯಷ್ಟೇ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುವ ಶಾಹುಲ್ ಹಮೀದ್ ಎಂಬಾತನನ್ನು ಪ್ರೀತಿಸಿ ಮದುವೆ ಆಗಿದ್ದಳು. ಮದುವೆ ಆದ ಕೆಲ ದಿನಗಳ ನಂತರ ಪತಿ ಮನೆಯವರಿಂದ ಕಿರುಕುಳ ಇರುವ ಬಗ್ಗೆ ಹೇಳಿಕೊಂಡಿದ್ದಳು'' ಎಂದು ತಿಳಿಸಿದರು.
""ಕೆಲವು ತಿಂಗಳುಗಳ ಹಿಂದೆ ಪ್ರೀತಿ, ಪ್ರೇಮದ ಹೆಸರಿನಲ್ಲಿ ಮನೆಯವರ ವಿರೋಧದ ನಡುವೆ ವಿವಾಹ ಮಾಡಿಕೊಂಡಿದ್ದ ಆತ, ಮಗಳನ್ನು ಕೆಲವೇ ದಿನಗಳಲ್ಲಿ ಒತ್ತಾಯಪೂರ್ವಕವಾಗಿ ಕೇರಳದ ಪೊನ್ನಾಣಿ ಎಂಬಲ್ಲಿಗೆ ಕರೆದುಕೊಂಡು ಹೋಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿರುವುದಾಗಿ'' ಆರೋಪಿಸಿದರು.
""ಮದುವೆಯಾದ ಒಂದೆರೆಡು ವಾರದಿಂದಲೇ ಶಾಹುಲ್ ಹಮೀದ್ ಹಾಗೂ ಆತನ ಮನೆಯವರಿಂದ ಕಿರುಕುಳವಾಗಿದ್ದು, ತನಗೆ ಕರೆ ಮಾಡಿ ನನ್ನನ್ನು ಹಿಂಸಿಸುತ್ತಿರುವುದಾಗಿ ಮಗಳು ತಿಳಿಸಿದ್ದಳು. ಅಲ್ಲದೆ ಆತ ಗಾಂಜಾ ವ್ಯಸನಿಯಾಗಿದ್ದು, ರಾತ್ರಿ ಹೊತ್ತು ಮನೆಯಲ್ಲಿರದೇ ಬೆಳಗಿನ ಜಾವ ಮನೆಗೆ ಬರುತ್ತಿದ್ದ ಎಂದು ಹೇಳಿಕೊಂಡಿದ್ದಳು.''
ಕೊಡವ ಹಾಕಿ ಉತ್ಸವದ ರೂವಾರಿ ಪಾಂಡಂಡ ಕುಟ್ಟಪ್ಪ ನಿಧನ
ಭಾಗ್ಯಶ್ರೀ ಗರ್ಭಿಣಿಯೆಂದು ಲೆಕ್ಕಿಸದೆ ಹಿಂಸಿಸಿದ್ದಾರೆ, ಅಲ್ಲದೆ ಕಳೆದ ಮೇ 6 ರಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಯಾವುದೇ ಲಕ್ಷಣವೂ ಕಂಡು ಬಂದಿಲ್ಲ. ಸಾಯುವ ಮೊದಲು ನನ್ನೊಂದಿಗೆ ಕರೆ ಮಾಡಿ ಮಾತನಾಡಿದ್ದ ಮಗಳು, ಕೆಲವು ಗಂಟೆಗಳ ಬಳಿಕ ಅಂಗಾತ ಮಲಗಿದ ಸ್ಥಿತಿಯಲ್ಲಿ ಸಾವಿಗೀಡಾಗಲು ಹೇಗೆ ಸಾಧ್ಯ ಎಂದು ತಾಯಿ ಯಶೋಧ ಪ್ರಶ್ನಿಸಿದರು.
ಸಾವಿಗೀಡಾದ ಭಾಗ್ಯಶ್ರೀ ಮೇಲೆ ನೀರು ಹಾಕಿ ವಾಸ್ತವ ವಿಚಾರಗಳನ್ನು ಮರೆಮಾಚುವ ಯತ್ನವನ್ನು ಶಾಹುಲ್ ಹಮೀದ್ ಹಾಗೂ ಆತನ ಮನೆಯವರು ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಯಶೋಧ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮೃತಳ ಸಹೋದರ ವಿ.ಆಕಾಶ್ ಇದ್ದರು.