ಅನ್ಲಾಕ್ ಆದರೂ ಪ್ರವಾಸೋದ್ಯಮಕ್ಕೆ ನಿರ್ಬಂಧ ಹೇರಲು ಒತ್ತಾಯ
ಮಡಿಕೇರಿ, ಜೂನ್ 12: ಕಳೆದ ಎರಡು ತಿಂಗಳಿನ ಲಾಕ್ಡೌನ್ನಿಂದಾಗಿ ಕೊಡಗಿನ ಪ್ರವಾಸೋದ್ಯಮ ನೆಲಕಚ್ಚಿದೆ. ಮುಂದಿನ ಜೂನ್ 21ರ ನಂತರ ಜಿಲ್ಲೆಯಲ್ಲಿ ಲಾಕ್ಡೌನ್ ತೆರವುಗೊಳ್ಳುವ ಅವಕಾಶ ಹೆಚ್ಚಾಗಿದೆ.
ಕೊಡಗಿನಲ್ಲಿ ಮಳೆಗಾಲ ಪ್ರಾರಂಭವಾಗುವ ಕಾರಣ ಕೊಡಗಿನ ಜಲತೊರೆಗಳನ್ನು ವೀಕ್ಷಿಸಲು ಹಾಗೂ ಇಲ್ಲಿನ ಪ್ರಕೃತಿ ಸೌಂದರ್ಯ ಅನುಭವಿಸಲು ಮತ್ತೆ ಜನಸಾಗರ ಹರಿದು ಬರುವ ಸಾದ್ಯತೆ ಹೆಚ್ಚಾಗಿದ್ದು, ಇದಕ್ಕೆ ಈಗಲೇ ಕಡಿವಾಣ ಹಾಕಬೇಕಿದೆ. ಯಾವುದೇ ಕಾರಣಕ್ಕೂ ಮಳೆಗಾಲ ಮುಗಿಯುವವರೆಗೂ ಪ್ರವಾಸೋದ್ಯಮಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯಿಸಿದೆ.
ಕೊಡಗು ಪ್ರವಾಸಿ ತಾಣಗಳಿಗೆ ನಿರ್ಬಂಧ; ವಿವರ ನೀಡಿದ ಜಿಲ್ಲಾಡಳಿತ
ಈ ಕುರಿತು ಮಾತನಾಡಿದ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, ""ಯಾವುದೇ ಕಾರಣಕ್ಕೂ ಮಳೆಗಾಲ ಮುಗಿಯುವವರೆಗೂ ಪ್ರವಾಸೋದ್ಯಮವನ್ನು ಕೊಡಗಿನಲ್ಲಿ ಆರಂಭಿಸಬಾರದು, ಪ್ರವಾಸೋದ್ಯಮಕ್ಕೆ ಅವಕಾಶ ಮಾಡಿಕೊಟ್ಟರೆ ಕೊಡಗಿನಾದ್ಯಂತ ಸಂಘಟಿತ ಹೋರಾಟ ಮಾಡಬೇಕಾಗುತ್ತದೆ'' ಎಂದು ಎಚ್ಚರಿಸಿದ್ದಾರೆ.
"ಈಗಾಗಲೇ ಕೊಡಗಿನ ಜನರು ಕಳೆದ ಮೂರು ವರ್ಷಗಳಿಂದ ನಿರಂತರ ನೆರೆಹಾವಳಿ, ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಸಂಕಷ್ಟದಲ್ಲಿದ್ದು, ಇದೀಗ ಕೊರೊನಾ ಸಾವು-ನೋವುಗಳು ಹಾಗೂ ಲಾಕ್ಡೌನ್ನಿಂದ ಜನರು ತತ್ತರಿಸಿದ್ದಾರೆ. ಅನೇಕ ಜನರು ತಮ್ಮವರನ್ನು ಕಳೆದುಕೊಂಡು ನೋವಿನಲ್ಲಿದ್ದು, ಇದೀಗ ಒಂದಷ್ಟು ಚೇತರಿಸಿಕೊಳ್ಳುತ್ತಿದ್ದಾರೆ, ಹೀಗಿರುವಾಗ ಮತ್ತೆ ಪ್ರವಾಸೋದ್ಯಮ ತೆರೆದುಕೊಂಡರೆ ಹೆಮ್ಮಾರಿ ಕೊರೊನಾ ಅಲೆ ಬಂದು ಅಪ್ಪಳಿಸಲಿದೆ, ಇದಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅವಕಾಶ ಮಾಡಿಕೊಡಬಾರದು'' ಎಂದು ಅವರು ಒತ್ತಾಯಿಸಿದ್ದಾರೆ.
ಇಂದು ಪ್ರವಾಸೋದ್ಯಮದಿಂದಲೇ ಪುಟ್ಟ ಜಿಲ್ಲೆ ಕೊಡಗು ಡೇಂಜರ್ ವಲಯಕ್ಕೆ ತಲುಪಿದ್ದು, ಇದೀಗ ಜಿಲ್ಲೆ ಒಂದಷ್ಟು ಚೇತರಿಸಿಕೊಂಡಿದೆ ಹೊರತು ಸಂಪೂರ್ಣವಾಗಿ ಕೊರೊನಾ ಮುಕ್ತವಾಗಿಲ್ಲ. ಹಳ್ಳಿಹಳ್ಳಿಗಳಿಗೂ ವ್ಯಾಪಿಸಿರುವ ಕೊರೊನಾ ಸೋಂಕು ಅದೆಷ್ಟೋ ಮುಗ್ಧ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಮತ್ತೆ ನಮ್ಮವರನ್ನು ಸಾವಿನ ದವಡೆಗೆ ತಳ್ಳಲು ನಾವು ಸಿದ್ಧರಿಲ್ಲ ಯಾವುದೇ ಕಾರಣಕ್ಕೂ ಮಳೆಗಾಲ ಮುಗಿಯುವವರೆಗೂ ಹೋಂಸ್ಟೇ, ರೆಸಾರ್ಟ್ ಸೇರಿದಂತೆ ಪ್ರವಾಸೋದ್ಯಮಗಳು ಸಂಪೂರ್ಣ ಬಂದ್ ಆಗಿಯೇ ಇರಬೇಕು ಎಂದು ಹೇಳಿದರು.
ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿರುವವರಿಗೆ ಸರಕಾರವೇ ಸಹಕಾರ ನೀಡಲಿ ಹೊರತು, ಜಿಲ್ಲೆಯ ಜನರನ್ನು ಬಲಿಕೊಡುವುದು ಬೇಡ. ರಾಜ್ಯದಲ್ಲಿ ಅನ್ಲಾಕ್ ಆದರೂ, ಜಿಲ್ಲೆಯಲ್ಲಿ ಲಾಕ್ಡೌನ್ ಒಂದಿಷ್ಟು ಸಡಿಲಿಕೆ ಇರಲಿ. ಆದರೆ, ಮಳೆಗಾಲ ಮುಗಿಯುವವರೆಗೂ ಗಡಿ ತಪಾಸಣೆ ವ್ಯವಸ್ಥೆ ಮಳೆಗಾಲ ಮುಗಿಯುವವರೆಗೂ ಮುಂದುವರಿಯಲಿ. ಕೇವಲ ಹೊರಜಿಲ್ಲೆಯಲ್ಲಿರುವ ಕೊಡಗು ಮೂಲದವರಿಗೆ ಕೃಷಿಕರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಿದ್ದರೆ ಮಾತ್ರ ಸಾಕು ಎಂದರು.
ಕೊಡಗು ಜಿಲ್ಲೆಯ ಜನರ ಆರೋಗ್ಯದ ಕಡೆ ಕೂಡ ಗಮನ ಹರಿಸಬೇಕಿದೆ. ಹೊರ ಜಿಲ್ಲೆಯಲ್ಲಿರುವ ಕೊಡಗು ಮೂಲದ ಕೃಷಿಕರಿಗೆ ಹೊರತುಪಡಿಸಿ ಪ್ರವಾಸಕ್ಕಾಗಿ ಬರುವವರಿಗೆ ಸಂಪೂರ್ಣ ಕಡಿವಾಣ ಹಾಕಬೇಕಾಗಿದೆ. ಒಂದು ವೇಳೆ ಪ್ರವಾಸೋದ್ಯಮ ಲಾಬಿಗೆ ಮಣಿದು ಸರ್ಕಾರ ಪ್ರವಾಸೋದ್ಯಮಕ್ಕೆ ಅವಕಾಶ ನೀಡಿದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನೂ ಚಮ್ಮಟೀರ ಪ್ರವೀಣ್ ಉತ್ತಪ್ಪ ನೀಡಿದರು.