ಕೊಡಗಿನಲ್ಲಿ ಕೊಂಗಾಳ್ವರ ಕಾಲದ ವೀರಗಲ್ಲು ಶಾಸನಗಳು ಪತ್ತೆ
ಮಡಿಕೇರಿ, ಜೂನ್ 12: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ವಿವಿಧೆಡೆ ಕೊಂಗಾಳ್ವರ ಕಾಲದ ಮೂರು ವೀರಗಲ್ಲು ಶಾಸನಗಳು ಪತ್ತೆಯಾಗಿವೆ. ಬಳಗುಂದ ಗ್ರಾಮದ ಕೆ.ಆರ್.ಪೂವಯ್ಯ ಎಂಬುವರ ಕಾಫಿ ತೋಟದಲ್ಲಿ ಶಾಸನವೊಂದು ಕಂಡುಬಂದಿದೆ.
Recommended Video
ಈ ವೀರಗಲ್ಲು ಶಾಸನ ಕ್ರಿ.ಶ.11-12ನೇ ಶತಮಾನಕ್ಕೆ ಸೇರಿದ್ದಾಗಿದೆ. ಈ ಪ್ರಕಾರ ವೀರದುದ್ದ ಎಂಬಾತ ಕೊಂಗಾಳ್ವ ದೊರೆಯಾಗಿದ್ದು, ಈತನಿಗೂ ಹೊಯ್ಸಳ ದೊರೆ ಒಂದನೆಯ ನರಸಿಂಹನಿಗೂ ಮೊಳತೆ ಎಂಬಲ್ಲಿ ಹೋರಾಟ ನಡೆದಿತ್ತು. ಆ ಹೋರಾಟದಲ್ಲಿ ಮೃತಪಟ್ಟ ವೀರ ಬಂಮಗೌಡನಿಗಾಗಿ ಹಾಕಿಸಿದ ವೀರಗಲ್ಲು ಶಾಸನ ಇದಾಗಿದೆ ಎಂದು ತಿಳಿದು ಬಂದಿದೆ.
ಕೊಡಗಿನಲ್ಲಿ ವಿಜಯನಗರ ಅರಸರ ಕಾಲದ ಶಾಸನ ಪತ್ತೆ
ಇದೇ ತಾಲೂಕಿನ ನಗರೂರು ಗ್ರಾಮದ ನಿವಾಸಿ ತಾರಾ ಅವರ ತೋಟದಲ್ಲಿ ದೊರೆತ ವೀರಗಲ್ಲು 9 ಸಾಲುಗಳ ಶಾಸನವಾಗಿದ್ದು, ಕೊಂಗಾಳ್ವ ದೊರೆ ಮನಿಜನ ತರುವಾಯ ಬಂದ ದೊರೆ ಬಡಿವ ಅಥವಾ ಕಾಡವ ಈತನ ಆಳ್ವಿಕೆಗೆ ಸೇರಿದ ವೀರಗಲ್ಲು ಇದು ಎಂಬ ಮಾಹಿತಿ ಲಭ್ಯವಾಗಿದೆ. ಇದರ ಜತೆಗೆ ಮಹಾಲಿಂಗೇಶ್ವರ ದೇವಾಲಯದ ಸಮೀಪವೊಂದು ವೀರಗಲ್ಲು ದೊರೆತಿದ್ದು, ಅದರಲ್ಲಿನ ಶಾಸನ ಸವೆದು ಹೋಗಿರುವುದರಿಂದ ಹೆಚ್ಚಿನ ವಿವರಗಳು ತಿಳಿಯದಾಗಿದೆ. ಆದರೆ ಕೊನೆಯ ಪಟ್ಟಿಕೆಯಲ್ಲಿನ ಅಕ್ಷರಗಳನ್ನು ಆಧರಿಸಿ ಇದು ಕ್ರಿ.ಶ.12ನೇ ಶತಮಾನಕ್ಕೆ ಸೇರಿದ್ದಾಗಿದೆ ಎಂದು ಹೇಳಬಹುದಾಗಿದೆ.
ಕೆ.ಆರ್.ನಗರ ವ್ಯಾಪ್ತಿಯಲ್ಲಿ ಸಿಕ್ಕಿವೆ ಶಿಲಾಯುಗದ ದೊಡ್ಡ ನಿಲಸುಕಲ್ಲುಗಳು
ಈ ಮೂರು ಶಾಸನಗಳ ಪತ್ತೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚನ್ನಕೇಶವ ಹಾಗೂ ಸ್ಥಳೀಯರು ಸಹಕರಿಸಿದ್ದಾರೆ. ಶಾಸನವನ್ನು ಡಾ. ಎಚ್.ಎಂ.ನಾಗರಾಜ್ ರಾವ್ ಅವರು ಓದಿಕೊಟ್ಟಿರುವುದಾಗಿ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಕ್ಯುರೇಟರ್ ಬಿ.ಪಿ.ರೇಖಾ ಅವರು ತಿಳಿಸಿದ್ದಾರೆ. ಒಟ್ಟಾರೆ ಸೋಮವಾರ ಪೇಟೆಯಲ್ಲಿ ದೊರೆತ ಈ ಶಾಸನಗಳು ಇತಿಹಾಸದ ಕಥೆ ಹೇಳುವುದರೊಂದಿಗೆ ಕೊಡಗಿನಲ್ಲಿ ಕೊಂಗಾಳ್ವರು ಆಡಳಿತ ನಡೆಸಿದ್ದರು ಎಂಬುದು ಇವತ್ತಿನ ಜನತೆಗೆ ಗೊತ್ತಾಗುವಂತೆ ಮಾಡಿವೆ.