ಚಿತ್ರಗಳು : ಮಳೆ, ಗುಡ್ಡ ಕುಸಿತದ ಬಳಿಕ ಕೊಡಗಿನ ರಸ್ತೆಗಳು
ಮಡಿಕೇರಿ, ಆಗಸ್ಟ್ 30 : ಮಳೆ ಮತ್ತು ಗುಡ್ಡ ಕುಸಿತದಿಂದಾಗಿ ಕೊಡಗು ಜಿಲ್ಲೆಯಲ್ಲಿ 4,500 ಕಿ.ಮೀ.ನಷ್ಟು ರಸ್ತೆ ಹಾನಿಯಾಗಿದೆ. ಸುಮಾರು 250 ಕಿ.ಮೀ.ನಷ್ಟು ಗ್ರಾಮೀಣ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಹೊಸ ರಸ್ತೆಯನ್ನು ನಿರ್ಮಾಣ ಮಾಡಬೇಕಿದೆ.
ಕೊಡಗು ಜಿಲ್ಲೆಯ ವಿವಿಧ ರಸ್ತೆಗಳನ್ನು ಅಭಿವೃದ್ದಿ ಮಾಡುವ ಕಾರ್ಯವನ್ನು ಜಿಲ್ಲಾಡಳಿತ ಕೈಗೆತ್ತಿಕೊಂಡಿದೆ. ಮಡಿಕೇರಿ ನಗರದ ರಾಷ್ಟ್ರೀಯ ಹೆದ್ದಾರಿ 275ರ 98.5 ಕಿ.ಮೀ.ರಸ್ತೆಯನ್ನು ದುರಸ್ಥಿ ಮಾಡಲಾಗುತ್ತಿದೆ. ಹಲವು ಕಡೆ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಚಿತ್ರಗಳು : ಮಳೆ, ಗುಡ್ಡ ಕುಸಿತ, ಅಪಾರ ನಷ್ಟದ ಬಳಿಕ ಕೊಡಗು
ಪ್ರಕೃತಿ ವಿಕೋಪ ನಿಧಿಯಡಿ ಕೊಡಗು ಜಿಲ್ಲೆಗೆ 12 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಸಂಪರ್ಕ ಕಡಿತಗೊಂಡಿರುವ ರಸ್ತೆಗಳನ್ನು ಆದ್ಯತೆಯ ಮೇಲೆ ಅಭಿವೃದ್ಧಿ ಮಾಡಲು ಸೂಚನೆ ನೀಡಲಾಗಿದೆ. ಜಿಲ್ಲೆಯ ರಸ್ತೆ ಅಭಿವೃದ್ಧಿಗೆ ಎಲ್ಲಾ ರೀತಿಯ ಆರ್ಥಿಕ ಮತ್ತು ತಾಂತ್ರಿಕ ಸಹಕಾರ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬದ್ಧವಾಗಿದೆ.
ರಾಜಕೀಯ ಬದಿಗೊತ್ತಿ ಹೊಸ ಕೊಡಗಿನ ನಿರ್ಮಾಣಕ್ಕೆ ಮುಂದಾಗಿ...
ಹಾಲೇರಿ ಎಂಬಲ್ಲಿ ಗುಡ್ಡ ಕುಸಿತದಿಂದಾಗಿ ಮಡಿಕೇರಿ-ಸೋಮವಾರ ಪೇಟೆ ಹೆದ್ದಾರಿಯೇ ನಾಪತ್ತೆಯಾಗಿದೆ. ಈ ಹೆದ್ದಾರಿಯನ್ನು ಸರಿಪಡಿಸಲು ವರ್ಷಗಟ್ಟಲೇ ಸಮಯ ಬೇಕಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಕೊಡಗನ್ನು ಮತ್ತೆ ಕಟ್ಟುವುದು ಸರ್ಕಾರದ ಸದ್ಯದ ಸವಾಲು
22.50 ಕೋಟಿ ವೆಚ್ಚ
ಕೊಡಗಿನಲ್ಲಿ ಮಳೆ, ಗುಡ್ಡ ಕುಸಿತದಿಂದಾಗಿ ಹಲವು ಕಡೆ ರಸ್ತೆಗಳು ಹಾಳಾಗಿವೆ. ಇವುಗಳನ್ನು ದುರಸ್ಥಿ ಮಾಡಲು ಸುಮಾರು 22.50 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಮೊದಲ ಹಂತದಲ್ಲಿ 12 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ಎಷ್ಟು ಹಣ ಖರ್ಚು ಮಾಡಿದರೂ ಕೆಲವು ಗ್ರಾಮಗಳಿಗೆ ರಸ್ತೆಯನ್ನೇ ನಿರ್ಮಾಣ ಮಾಡಲಾಗದ ಪರಿಸ್ಥಿತಿ ಇದೆ. ದುರಸ್ತಿಗೊಳಿಸಲು ಸಾಧ್ಯವಿರುವ ರಸ್ತೆಗಳನ್ನು ಮೊದಲ ಹಂತದಲ್ಲಿ ಅಭಿವೃದ್ಧಿ ಮಾಡಲು ಜಿಲ್ಲಾಡಳಿತ ಮುಂದಾಗಿದೆ.
ತಂತ್ರಜ್ಞರಿಂದ ರಸ್ತೆ ದುರಸ್ಥಿ
'ಕೊಡಗು ಜಿಲ್ಲೆಯಲ್ಲಿ ರಸ್ತೆ ಕಾಮಗಾರಿಗಾಗಿ ಜಿಲ್ಲಾ ಪಂಚಾಯಿತಿಯ 11.50 ಕೋಟಿ ಮತ್ತು ಎಸ್ಡಿಆರ್ಎಫ್ನ 11 ಕೋಟಿ ಹಣವನ್ನು ಬಳಸಿಕೊಳ್ಳಲಾಗುತ್ತದೆ. ನುರಿತ ತಂತ್ರಜ್ಞರನ್ನು ಕರೆಸಿ ರಸ್ತೆ ರಿಪೇರಿ ಮಾಡಿಸಲಾಗುತ್ತದೆ' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
'ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ರಸ್ತೆಗಳ ದುರಸ್ಥಿತಿಗೆ ಎಲ್ಲಾ ರೀತಿಯ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಲು ಸಿದ್ಧವಿರುವುದಾಗಿ' ಸಚಿವರು ಭರವಸೆ ನೀಡಿದ್ದಾರೆ.
4500 ಕಿ.ಮೀ. ರಸ್ತೆಗೆ ಹಾನಿ
ಮಳೆ ಮತ್ತು ಭೂ ಕುಸಿತದಿಂದಾಗಿ ಜಿಲ್ಲೆಯಲ್ಲಿ 4500 ಕಿ.ಮೀ.ರಸ್ತೆಗೆ ಹಾನಿಯಾಗಿದೆ. ಮಕ್ಕಂದೂರು, ದೇವಸ್ತೂರು, ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ರಸ್ತೆಗಳು ಸಂಪೂರ್ಣವಾಗಿ ಕುಸಿದು ಹೋಗಿವೆ.
ಗ್ರಾಮೀಣ ಪ್ರದೇಶದಲ್ಲಿ 250 ಕಿ.ಮೀ.ರಸ್ತೆ ದುರಸ್ಥಿ ಮಾಡಲು ಸಾಧ್ಯವಾಗದ ಮಟ್ಟಿಗೆ ಹಾನಿಯಾಗಿದೆ. ಇವುಗಳನ್ನು ಹೊಸ ರಸ್ತೆಯಂತೆ ನಿರ್ಮಾಣ ಮಾಡಬೇಕಿದೆ. ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ಇನ್ನೂ ಒಂದು ವರ್ಷಗಳಾದರೂ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಹೆಚ್ಚುವರಿ ಸಂಚಾರ ಅನಿವಾರ್ಯ
ಮಡಿಕೇರಿ-ಮಂಗಳೂರು ಮಾರ್ಗಕ್ಕೆ ಹಾನಿ ಆಗಿರುವುದರಿಂದ ಕೆಎಸ್ಆರ್ಟಿಸಿಯ ಮಿನಿ ಬಸ್ಸುಗಳು ಮಡಿಕೇರಿ, ಭಾಗಮಂಡಲ, ಕರಿಕೆ ಮಾರ್ಗವಾಗಿ ಸುಮಾರು 56 ಕಿ.ಮೀ. ಹೆಚ್ಚುವರಿಯಾಗಿ ಸಂಚಾರ ನಡೆಸುತ್ತಿವೆ.
ಹಾಲೇರಿ ಗುಡ್ಡ ಕುಸಿದಿದ್ದರಿಂದ ರಸ್ತೆ ಎಲ್ಲಿದೆ ಎಂದು ಹುಡುಕಬೇಕಾಗಿದೆ. ಎಲ್ಲಾ ಕಡೆ ಕೆಂಪು ಮಣ್ಣು ಬಂದು ಆವೃತ್ತವಾಗಿದ್ದು, ಮಣ್ಣು ಬಿಟ್ಟು ಬೇರೆನೋ ಕಾಣುತ್ತಿಲ್ಲ. ಈ ರಸ್ತೆಯನ್ನು ಪುನರ್ ನಿರ್ಮಿಸಲು ಮಣ್ಣನ್ನು ತೆರವುಗೊಳಿಸಬೇಕಾಗಿದೆ.