ಮಡಿಕೇರಿಯಲ್ಲಿ ಟಿಪ್ಪು ಜಯಂತಿಗೆ ಸಚಿವ ಸಾರಾ ಮಹೇಶ್ ಗೈರು, ಖಾಲಿ ಖಾಲಿ ಚೇರು
ಮಡಿಕೇರಿ, ನವೆಂಬರ್ 10 : ಭಾರೀ ವಿರೋಧದ ನಡುವೆಯೂ ಮಡಿಕೇರಿಯಲ್ಲಿ ಜಿಲ್ಲಾಡಳಿತ ಶನಿವಾರ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಮಾಡಿ, ಕೈ ತೊಳೆದುಕೊಳ್ಳುವ ಮೂಲಕ ನಿಟ್ಟುಸಿರು ಬಿಟ್ಟಿದೆ. ಆದರೆ ಈ ಕಾರ್ಯಕ್ರಮದಲ್ಲಿ ಪ್ರಮುಖರಾಗಿ ಉಪಸ್ಥಿತರಿರಬೇಕಾದ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರೇ ಗೈರು ಹಾಜರಾಗಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಸಾಮಾನ್ಯವಾಗಿ ಜಿಲ್ಲಾಡಳಿತ ಆಚರಿಸುವ ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಪಾಲ್ಗೊಳ್ಳುತ್ತಾರೆ. ಆದರೆ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಹೆಚ್ಚಿನ ಜನಪ್ರತಿನಿಧಿಗಳಿಲ್ಲದೆ, ಬೆರಳೆಣಿಕೆಯ ಜನಪ್ರತಿನಿಧಿಗಳು, ಅಧಿಕಾರಿಗಳ ಸಮ್ಮುಖದಲ್ಲಿ ಸರಕಾರದ ಕಾರ್ಯಕ್ರಮವಾಗಿ ನಡೆಸಿ, ಸದ್ಯ ಮುಗಿತಲ್ಲ ಎಂದು ನಿಟ್ಟುಸಿರು ಬಿಡುವಂತಾಗಿದೆ.
ಕೊಡಗಿನಲ್ಲಿ ಟಿಪ್ಪು ಜಯಂತಿ, ಮೃತ ಕುಟ್ಟಪ್ಪ ನೆನಪಿಗಾಗಿ ಹುತಾತ್ಮ ದಿನಾಚರಣೆ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 2015ರಲ್ಲಿ ಪ್ರಥಮ ಬಾರಿಗೆ ಟಿಪ್ಪು ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಮಾಡಲು ಆರಂಭಿಸಲಾಯಿತು. ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಿಸದಂತೆ ಆ ವರ್ಷವೇ ವಿರೋಧ ವ್ಯಕ್ತವಾಯಿತು. ಇದನ್ನು ಮೀರಿಯೂ ಕಾರ್ಯಕ್ರಮ ಆಯೋಜಿಸಲಾಯಿತು.
ದೂರ ಉಳಿದರು ಉಸ್ತುವಾರಿ ಸಚಿವ ಸಾರಾ ಮಹೇಶ್
ಬಿಗಿ ಪೊಲೀಸ್ ಬಂದೋಬಸ್ತ್ ಮಾಡದ ಕಾರಣದಿಂದಾಗಿ ಗಲಭೆ, ಕಲ್ಲು ತೂರಾಟ ನಡೆದು ಇಬ್ಬರು ಪ್ರಾಣ ಕಳೆದುಕೊಳ್ಳುವಂತಾಯಿತು. ಆ ನಂತರ ಎಚ್ಚೆತ್ತುಕೊಂಡ ಸರಕಾರ ಎರಡು ವರ್ಷಗಳಿಂದ ಭಾರೀ ಪೊಲೀಸ್ ಬಂದೋಬಸ್ತ್ ನಲ್ಲಿ ಟಿಪ್ಪು ಜಯಂತಿಯನ್ನು ಆಚರಿಸುತ್ತಿದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮೈತ್ರಿ ಸರ್ಕಾರದಿಂದ ಇದೇ ಮೊದಲ ಬಾರಿಗೆ ಟಿಪ್ಪು ಜಯಂತಿಯನ್ನು ಆಚರಿಸುತ್ತಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ದೂರ ಉಳಿದಿದ್ದರೆ, ಇತ್ತ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸಾ.ರಾ.ಮಹೇಶ್ ಕೂಡ ಟಿಪ್ಪು ಜಯಂತಿಯಿಂದ ದೂರ ಉಳಿದಿರುವುದು ಗೋಚರಿಸಿದೆ.
ಪರ-ವಿರೋಧ ಕೇಳಿಬಂದಿದೆ
ನವೆಂಬರ್ 7ರಂದು (ಬುಧವಾರ) ಅಧಿಕಾರಿಗಳ ಸಭೆ ನಡೆಸಿದ ಉಸ್ತುವಾರಿ ಸಚಿವರು, ಟಿಪ್ಪು ಜಯಂತಿ ಆಚರಣೆ ಸಂಬಂಧ ಕೈಗೊಂಡ ಸಿದ್ಧತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿದ್ದರು. ಅಲ್ಲದೆ, ಒಂದಷ್ಟು ಸಲಹೆಗಳನ್ನು ನೀಡಿದ್ದರು. ಈ ಸಂದರ್ಭ ಕೊಡಗಿನಲ್ಲಿ ಟಿಪ್ಪು ಜಯಂತಿಗೆ ವಿರೋಧವಿರುವುದು ಗೊತ್ತಾಗಿತ್ತು. ಆದರೆ ಎಲ್ಲವೂ ಸುಗಮವಾಗಿ ನಡೆಯುವಂತೆ ವ್ಯವಸ್ಥೆ ಮಾಡಿದ ಅವರು, ಕೊನೆ ಗಳಿಗೆಯಲ್ಲಿ ಕಾರ್ಯಕ್ರಮದಿಂದ ದೂರವುಳಿದು ಹಲವರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ಸಚಿವರ ಈ ನಡೆಯನ್ನು ಕೆಲವರು ವಿರೋಧಿಸಿದರೆ, ಮತ್ತೆ ಕೆಲವರು ಬೆಂಬಲಿಸಿದ್ದಾರೆ.
ಪರಂ, ಎಚ್ ಡಿಕೆ ವಿರುದ್ಧ ಮೈಸೂರಲ್ಲಿ ಕಿಡಿ ಕಾರಿದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್
ಗೈರುಹಾಜರಿಗೆ ಕಾರಣ ಈಗಲೂ ಗೋಪ್ಯ
ಇಡೀ ಜಿಲ್ಲೆಯ ಜನ ವಿರೋಧ ವ್ಯಕ್ತಪಡಿಸುತ್ತಿರುವಾಗ ತಾನು ಭಾಗವಹಿಸಿ ನಿಷ್ಠುರರಾಗುವುದು ಬೇಡ ಎಂದು ಅವರು ದೂರ ಉಳಿದರೋ ಅಥವಾ ಬೇರೆ ಇನ್ನೇನಾದರೂ ಪ್ರಬಲ ಕಾರಣವಿತ್ತೇ ಎಂಬುದು ಮಾತ್ರ ಗೋಪ್ಯವಾಗಿಯೇ ಉಳಿದಿದೆ. ಮಡಿಕೇರಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಪಂ ಅಧ್ಯಕ್ಷರು ಸೇರಿದಂತೆ ಹೆಚ್ಚಿನ ಜನಪ್ರತಿನಿಧಿಗಳು ಬಿಜೆಪಿಯವರೇ ಆಗಿದ್ದು, ಅವರೆಲ್ಲರೂ ವಿರೋಧ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಆಗಮಿಸದೆ ದೂರವೇ ಉಳಿದಿದ್ದಾರೆ. ಈ ವಿಚಾರ ಕೂಡ ಈಗಾಗಲೇ ಖಾತ್ರಿ ಆಗಿತ್ತು. ಆದರೂ ಸರಕಾರದ ಆದೇಶವಾದ್ದರಿಂದ ಪಾಲಿಸಲೇಬೇಕಿದೆ.
'ಟಿಪ್ಪು' ಜಪದಲ್ಲಿ ಕಳೆದುಕೊಂಡಿದ್ದೇ ಹೆಚ್ಚು: ರಾಜಕಾರಣಿಗಳಲ್ಲಿ ಕಾಡುತ್ತಿದೆಯೇ ಭಯ?
ಕೆಲವು ಜನರ ಸಮ್ಮುಖದಲ್ಲಿ ಕಾರ್ಯಕ್ರಮ ಮುಗಿಸಿದರು
ಇದೇ ಕಾರಣದಿಂದ ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಜಿ.ಪಂ ಸಿಇಒ ಪ್ರಿಯಾ, ಜಿ.ಪಂ.ಸದಸ್ಯರಾದ ಕೆ.ಪಿ.ಚಂದ್ರಕಲಾ, ಸುನೀತಾ, ಕುಮುದಾ ಧರ್ಮಪ್ಪ, ನಗರಸಭಾ ಸದಸ್ಯರಾದ ಜುಲೇಕಾಬಿ ಅಮಿನ್ ಮೊಹಿಸಿನ್, ಪೀಟರ್, ಮನ್ಸೂರ್, ಉದಯ ಕುಮಾರ್, ಯತೀಶ್ ಕುಮಾರ್, ಉಸ್ಮಾನ್, ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಪ್ರವೀಣ್ ಕುಮಾರ್, ಜಗದೀಶ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರ ರಾಜ್, ದರ್ಶನ್, ಧಾರ್ಮಿಕ ಮುಖಂಡರು ಸೇರಿದಂತೆ ಕೆಲವು ಅಧಿಕಾರಿಗಳ ಸಮ್ಮುಖದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿ ಮುಗಿಸಲಾಗಿದೆ. ಇನ್ನು ಕಾರ್ಯಕ್ರಮದಲ್ಲಿ ಟಿಪ್ಪು ಬಗ್ಗೆ ವಾಗ್ಮಿ ಚಟ್ನಳ್ಳಿ ಮಹೇಶ್ ಅವರು ಉಪನ್ಯಾಸ ನೀಡಿದರಾದರೂ ಅದನ್ನು ಕೇಳಲು ಜನರೇ ಇರಲಿಲ್ಲ.
ಟಿಪ್ಪು ಜಯಂತಿ:LIVE:ಯಾರನ್ನು ಮೆಚ್ಚಿಸಲು ಟಿಪ್ಪು ಜಯಂತಿ ಮಾಡುತ್ತಿಲ್ಲ: ಶಿವಕುಮಾರ್