ಪುನರ್ವಸು ಮಳೆ ಅಬ್ಬರಕ್ಕೆ ಕೊಡಗಿನಲ್ಲಿ ಆರೆಂಜ್ ಆಲರ್ಟ್
ಮಡಿಕೇರಿ, ಜುಲೈ 07; ಕೊಡಗು ಜಿಲ್ಲೆಯಲ್ಲಿ ಪುನರ್ವಸು ಮಳೆ ಆರಂಭದಿಂದಲೇ ಅಬ್ಬರ ತೋರುತ್ತಿದ್ದು, ಎಡೆಬಿಡದೆ ಮಳೆ ಸುರಿಯುತ್ತಿದೆ. ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾಗಮಂಡಲ ತಲಕಾವೇರಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಒಂದೇ ದಿನದ ಅವಧಿಯಲ್ಲಿ 143.40 ಮಿ.ಮೀ. ಮಳೆ ಸುರಿದಿದ್ದು ತ್ರಿವೇಣಿ ಸಂಗಮ ಜಲಾವೃತಗೊಂಡಿದೆ.
ಅಲ್ಲಲ್ಲಿ ಗುಡ್ಡಗಳು ಕುಸಿಯುತ್ತಿದ್ದರೆ, ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳುತ್ತಿವೆ. ಆರೆಂಜ್ ಆಲರ್ಟ್ ಘೋಷಣೆ ಮಾಡಲಾಗಿದ್ದು, ಶಾಲಾ ಕಾಲೇಜುಗಳಿಗೆ ಜುಲೈ 7ರ ಗುರುವಾರ ರಜೆ ಘೋಷಿಸಲಾಗಿದೆ. ಮಳೆ ಸುರಿಯುತ್ತಿರುವ ಕಾರಣ ಮಡಿಕೇರಿ- ಮಂಗಳೂರು ಹೆದ್ದಾರಿಯ ಮದೆನಾಡು ಸಮೀಪ ಅಲ್ಪ ಪ್ರಮಾಣದ ಬರೆ ಕುಸಿತವಾಗಿದ್ದರೆ ಮತ್ತೊಂದೆಡೆ ಕೊಡ್ಲಿಪೇಟೆ ಹೋಬಳಿ ಶಿವರಳ್ಳಿ ಗ್ರಾಮದಲ್ಲಿ ಸುಶೀಲ ಎಂಬುವರ ಮನೆ ಮರ ಬಿದ್ದು ಹಾನಿಯಾಗಿದೆ.
ಕಾವೇರಿ ಜಲಾಶಯದಲ್ಲಿ ವ್ಯಾಪಕ ಮಳೆ: ನಿಧಾನವಾಗಿ ಮೈದುಂಬುತ್ತಿರುವ ಕೆಆರ್ಎಸ್
ಇದೆಲ್ಲದರ ನಡುವೆ ಮಳೆಹಾನಿ ಸಂಬಂಧ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಜಿಲ್ಲಾ, ತಾಲ್ಲೂಕು ಮತ್ತು ಗ್ರಾ.ಪಂ.ಮಟ್ಟದಲ್ಲಿ ಕಾರ್ಯಪಡೆ ಸಮಿತಿ ರಚಿಸಲಾಗಿದ್ದು, ಕಾರ್ಯಪಡೆಯು ಮಳೆಹಾನಿಗೆ ಸಂಬಂಧಿಸಿದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸಜ್ಜಾಗಿದೆ. ಇನ್ನು ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದ ಪರಿಣಾಮ ತಜ್ಞರ ತಂಡವು ಜಿಲ್ಲೆಗೆ ಭೇಟಿ ನೀಡಲಿದ್ದು, ಅಧ್ಯಯನ ನಡೆಸಲಿದೆ.
ದಕ್ಷಿಣ ಕನ್ನಡದಲ್ಲಿ ಮುಂದುವರೆದ ಮಳೆ ಆರ್ಭಟ: ಬಂಟ್ವಾಳ ತಾಲೂಕಿನಲ್ಲಿ ಮನೆ ಮೇಲೆ ಕುಸಿದ ಗುಡ್ಡ, ಇಬ್ಬರ ರಕ್ಷಣೆ
ಭೂಕುಸಿತ ಸಂಭವಿಸುವ ಸಾಧ್ಯತೆ
ಮಡಿಕೇರಿ ನಗರದ ಚಾಮುಂಡೇಶ್ವರಿ ನಗರ, ಮಂಗಳಾದೇವಿ ನಗರವು ಬೆಟ್ಟಗುಡ್ಡಗಳಿಂದ ಆವೃತವಾಗಿದ್ದು, ಈ ಪ್ರದೇಶದಲ್ಲಿ ಈ ಹಿಂದೆ ಸಂಭವಿಸಿದ ಭೂಕುಸಿತದ ವೇಳೆ ಅವಘಡಗಳು ಸಂಭವಿಸಿದ್ದು, ಈಗಲೂ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಇಲ್ಲಿ ನೆಲೆಸಿರುವವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆಯೂ ನಡೆಯುತ್ತಿದೆ.
ಈ ನಡುವೆ ಮಳೆಹಾನಿ ಪ್ರದೇಶಗಳಿಗೆ ಮಡಿಕೇರಿ ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಉಪಾಧ್ಯಕ್ಷರಾದ ಸವಿತಾ ರಾಕೇಶ್, ನಗರಸಭೆ ಪೌರಾಯುಕ್ತರಾದ ಎಸ್.ವಿ.ರಾಮದಾಸ್, ಲೋಕೋಪಯೋಗಿ ಇಲಾಖೆ ಇಇ ನಾಗರಾಜು, ನಗರಸಭಾ ಸದಸ್ಯರೊಂದಿಗೆ ತೆರಳಿದ ಶಾಸಕರಾದ ಎಂ. ಪಿ. ಅಪ್ಪಚ್ಚುರಂಜನ್ ಪರಿಶೀಲನೆ ನಡೆಸಿದ್ದಾರೆ.
ಮಳೆಹಾನಿ ಪರಿಶೀಲಿಸಿದ ಶಾಸಕರು
ಮಂಗಳೂರು ರಸ್ತೆಯ ಜಿಲ್ಲಾಡಳಿತ ಭವನದ ಬಳಿ ತಡೆಗೋಡೆ ನಿರ್ಮಿಸಿರುವ ಕಾಮಗಾರಿ ವೀಕ್ಷಿಸಿದ ಅವರು, ಮಳೆಹಾನಿಗೊಳಗಾದ ಮದೆನಾಡಿನ ಕರ್ತೋಜಿ, ಮಡಿಕೇರಿ ನಗರದ ಚಾಮುಂಡೇಶ್ವರಿ ನಗರ ಹಾಗೂ ಕೊಡಗು ಗೌಡ ಸಮಾಜದ ಬಳಿ ಬರೆ ಕುಸಿದಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ಶಾಸಕ ಎಂ. ಪಿ. ಅಪ್ಪಚ್ಚುರಂಜನ್, "ಜಿಲ್ಲಾಡಳಿತ ಭವನದ ಬಳಿ ಮಂಗಳೂರು ರಸ್ತೆಯಲ್ಲಿ ತಡೆಗೋಡೆ ನಿರ್ಮಾಣ ಮಾಡಿದ್ದು, ಸಮರ್ಪಕವಾಗಿಲ್ಲ. ಆದ್ದರಿಂದ ತಾಂತ್ರಿಕ ತಜ್ಞರನ್ನು ಕರೆಸಿ ತಡೆಗೋಡೆಯನ್ನು ಸರಿಪಡಿಸುವಂತಾಗಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ಮುಂಗಾರು ಆರಂಭವಾಗಿದೆ. ಜಿಲ್ಲೆಯಲ್ಲಿ ಇನ್ನೂ ಮಳೆಯಾಗುವುದರಿಂದ ಹೆಚ್ಚಿನ ಮುನ್ನೆಚ್ಚರ ವಹಿಸಬೇಕಿದೆ. ಮಳೆಹಾನಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚಿಸಲಾಗಿದ್ದು ಜನರು ಗಾಬರಿಯಾಗುವುದು ಬೇಡ ಎಂದಿದ್ದಾರೆ" ಎಂದು ತಿಳಿಸಿದರು.
ತಾತ್ಕಾಲಿಕ ಸ್ಥಳಾಂತರಕ್ಕೆ ನೋಟಿಸ್
ಈಗಾಗಲೇ ಕರ್ಣಂಗೇರಿಯಲ್ಲಿ 35, ಮದೆನಾಡು ಗ್ರಾಮದಲ್ಲಿ 80, ಜಂಬೂರು ಗ್ರಾಮದಲ್ಲಿ 383, ಬಿಳಿಗೇರಿ ಗ್ರಾಮದಲ್ಲಿ 22 ಹಾಗೂ ಗಾಳಿಬೀಡು ಗ್ರಾಮದಲ್ಲಿ 140 ಮನೆಗಳನ್ನು ಅರ್ಹರಿಗೆ ಹಸ್ತಾಂತರಿಸಲಾಗಿದೆ. ಉಳಿದಂತೆ ಪ್ರಾದೇಶಿಕ ಸಾರಿಗೆ ಕಚೇರಿ ಬಳಿ (ಕೆ.ನಿಡುಗಣೆ) ನಿರ್ಮಿಸಿರುವ 76 ಮನೆಗಳ ಹಸ್ತಾಂತರಕ್ಕೆ ಬಾಕಿ ಇರುವುದಾಗಿ ಹೇಳಿದರಲ್ಲದೆ, ಮಡಿಕೇರಿ ನಗರ ವ್ಯಾಪ್ತಿಯ ಚಾಮುಂಡೇಶ್ವರಿ ನಗರ ಮತ್ತು ಇಂದಿರಾ ನಗರ ಮತ್ತಿತರ ಕಡಿದಾದ ಪ್ರದೇಶದಲ್ಲಿ ವಾಸಿಸುವ ಜನರಿಗೆ ಮನೆ ನಿರ್ಮಿಸಿಕೊಡಲು ಪ್ರಯತ್ನಿಸಲಾಗುವುದು. ಸದ್ಯ ಇಲ್ಲಿನ 250 ಕುಟುಂಬಗಳಿಗೆ ತಾತ್ಕಾಲಿಕ ಸ್ಥಳಾಂತರ ಮಾಡುವಂತೆ ನಗರಸಭೆಯಿಂದ ನೋಟೀಸು ನೀಡಲಾಗಿದೆ ಎಂದು ಇದೇ ವೇಳೆ ಹೇಳಿದರು.
ಒಂದೇ ದಿನದಲ್ಲಿ 68.01 ಮಿ.ಮೀ. ಮಳೆ
ಇನ್ನು ಜಿಲ್ಲೆಯಲ್ಲಿ ಕಳೆದ ಒಂದು ದಿನದ ಅವಧಿಯಲ್ಲಿ ಸರಾಸರಿ 68.01 ಮಿ.ಮೀ. ಮಳೆಯಾಗಿದೆ. ಒಟ್ಟಾರೆ ಜನವರಿಯಿಂದ ಇಲ್ಲಿಯವರೆಗಿನ 1024.84 ಮಿ.ಮೀ ಮಳೆ ಸುರಿದಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 951.56 ಮಿ. ಮೀ. ಮಳೆಯಾಗಿತ್ತು ಮಡಿಕೇರಿ ವ್ಯಾಪ್ತಿಯಲ್ಲಿ ಮಳೆ ಸುರಿಯುತ್ತಿರುವ ಕಾರಣ ಹಾರಂಗಿ ಜಲಾಶಯದ ಒಳಹರಿವು ಹೆಚ್ಚಾಗಿದ್ದು, 12644 ಕ್ಯುಸೆಕ್ ನೀರು ಹರಿದು ಬರುತ್ತಿದ್ದು ಜಲಾಶಯದಿಂದ 12,040 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಸದ್ಯ 2,859 ಅಡಿಯ ಜಲಾಶಯದಲ್ಲೀಗ 2854.54 ಅಡಿಗಳಷ್ಟು ನೀರಿದೆ. ಮಳೆ ಇದೇ ರೀತಿ ಸುರಿದರೆ ಜಲಾಶಯ ಬಹುತೇಕ ಭರ್ತಿಯಾಗುವ ಮತ್ತು ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರುವ ಸಾಧ್ಯತೆ ಹೆಚ್ಚಾಗಿದೆ.
Recommended Video