ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಮತ್ತೆ ಕಾಣಿಸಿಕೊಂಡಿದೆ "ರೆಡ್ ರೂಬಿ" ದಂಧೆ
ಮಡಿಕೇರಿ, ಜನವರಿ 03: ಭಾಗಮಂಡಲ ಸಮೀಪದ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಸದ್ದಿಲ್ಲದೇ ಮತ್ತೆ ಅಕ್ರಮವಾಗಿ ಹರಳು ಕಲ್ಲು ಹೊರ ತೆಗೆಯುವ ದಂಧೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ದಂಧೆಯ ರೂವಾರಿ, ಮೇಕೇರಿಯ ಜಮ್ಮಾ ಮಸೀದಿಯ ಅಧ್ಯಕ್ಷ ಎಂ.ಕೆ. ಸಲೀಂ ಮತ್ತು ಮಡಿಕೇರಿ ತ್ಯಾಗರಾಜ ಕಾಲೋನಿ ನಿವಾಸಿ ಎಂ.ಡಿ.ಶರೀಫ್ ಬಂಧಿತರಾಗಿದ್ದು, ಇವರಿಂದ ಒಟ್ಟು 25 ಕೆ.ಜಿ ಹರಳು ಕಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಮೂವರು ದಂಧೆಯಲ್ಲಿ ಶಾಮೀಲಾಗಿದ್ದು, ತಲೆ ಮರೆಸಿಕೊಂಡಿರುವ ಅವರಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ.
ದಾವಣಗೆರೆ; ಮಟ್ಕಾ ಜಾಲದ ಕಿಂಗ್ ಪಿನ್ ಗಳ ಮಟ್ಟ ಹಾಕಲು ಸಾಧ್ಯವೇ?
ಭಾಗಮಂಡಲದ ಪಶ್ವಿಮಘಟ್ಟ ಸಾಲಿನಲ್ಲಿ ಬರುವ ಪಟ್ಟಿಘಾಟ್ ಎಂಬ ದಟ್ಟಾರಣ್ಯ ಪ್ರದೇಶ ಮೀಸಲು ಅರಣ್ಯ ಪ್ರದೇಶವಾಗಿದ್ದು, ಇಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಸಂಪೂರ್ಣ ನಿಷೇಧವಿದೆ. ಸುಮಾರು ಹತ್ತು ವರ್ಷಗಳ ಹಿಂದೆ ಈ ಪಟ್ಟಿಘಾಟ್ ಮೀಸಲು ಅರಣ್ಯದ ಆಯ್ದ ಭಾಗಗಳಲ್ಲಿ ಭಾರೀ ಆಳದ ಸುರಂಗಗಳನ್ನು ಕೊರೆದು ಬೆಲೆ ಬಾಳುವ ಹರಳು ಕಲ್ಲುಗಳನ್ನು ತೆಗೆಯುವ ಕೆಲಸ ಕದ್ದುಮುಚ್ಚಿ ನಡೆಯುತ್ತಿತ್ತು.
ನಂತರದ ದಿನಗಳಲ್ಲಿ ಸ್ಥಗಿತಗೊಂಡಿದ್ದ ಹರಳು ಕಲ್ಲು ದಂಧೆ ನಾಲ್ಕು ತಿಂಗಳಿನಿಂದ ಮತ್ತೆ ಆರಂಭವಾಗಿದೆ. ದಂಧೆ ಕುರಿತು ಸಾರ್ವಜನಿಕರಿಂದ ಮಡಿಕೇರಿ ಡಿ.ಎಫ್.ಓ ಪ್ರಭಾಕರನ್ ಅವರಿಗೆ ಖಚಿತ ಮಾಹಿತಿ ಕೆಲವು ದಿನಗಳ ಹಿಂದೆ ದೊರೆತಿತ್ತು. ಅರಣ್ಯ ಅಧಿಕಾರಿಗಳು ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದಾಗ ಸಲೀಂ ಹಾಗೂ ಅನಿಲ್ ಸಂಗ್ರಹಿಸಿದ ಹರಳು ಕಲ್ಲಿನ ಚೀಲಗಳು ಪತ್ತೆಯಾಗಿವೆ. ಮಾತ್ರವಲ್ಲದೇ ಪಟ್ಟಿಘಾಟ್ ಮೀಸಲು ಅರಣ್ಯದಿಂದ ಸಾಗಾಟಕ್ಕೆ ಸಿದ್ಧಪಡಿಸಿ ಅವಿತಿಟ್ಟಿದ್ದ ಹರಳು ಕಲ್ಲಿನ ಚೀಲಗಳು ಪತ್ತೆಯಾಗಿವೆ.
ಈ ಅಕ್ರಮ ಹರಳು ಕಲ್ಲು ಹೊರತೆಗೆಯುವ ದಂಧೆಯಲ್ಲಿ ಇನ್ನಷ್ಟು ಮಂದಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿಸಲಾಗಿದೆ. ಮಡಿಕೇರಿ ವೃತ್ತ ಮತ್ತು ಭಾಗಮಂಡಲ ಅರಣ್ಯ ವಲಯ ವಿಭಾಗದಿಂದ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ.