ಈ ಯೋಜನೆ ಕಾರ್ಯಗತವಾದರೆ ಮಡಿಕೇರಿ-ಬೆಂಗಳೂರು ಸಂಚಾರ ಸುಲಭ!
ಮಡಿಕೇರಿ, ಮೇ.08:ಮಡಿಕೇರಿ-ಬೆಂಗಳೂರು ನಡುವೆ ಸಂಚರಿಸುವವರು ಮೈಸೂರಿಗೆ ತೆರಳದೆ ನೇರವಾಗಿ ಹೋಗಲು ಅನುಕೂಲವಾಗುವಂತೆ ಹೊಸ ಹೆದ್ದಾರಿ ಯೋಜನೆಯನ್ನು ಕೈಗೆತ್ತಿಕೊಳ್ಳಲು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು ಮುಂದಾಗಿದ್ದು, ಈ ಸಂಬಂಧ ಭೂಮಿ ಸ್ವಾಧೀನಕ್ಕೆ ಸಂಬಂಧಪಟ್ಟಂತೆ ಪ್ರಕ್ರಿಯೆ ನಡೆಯುತ್ತಿದೆ.
ಮೈಸೂರು-ಮಡಿಕೇರಿ ಎಕ್ಸ್ಪ್ರೆಸ್ ಹೆದ್ದಾರಿ-275 ಯೋಜನೆ ಇದಾಗಿದ್ದು, ಈ ಯೋಜನೆ ಕಾರ್ಯಗತವಾಗಿದ್ದೇ ಆದರೆ ಮಡಿಕೇರಿಯಿಂದ ಬೆಂಗಳೂರಿಗೆ ನೇರವಾಗಿಯೇ ತೆರಳಬಹುದಾಗಿದೆ. ಇದರಿಂದ ಸಮಯವೂ ಉಳಿತಾಯವಾಗಲಿದೆ. ಅದರಲ್ಲೂ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗಂತು ಇದು ವರದಾನವಾಗಿ ಪರಿಣಮಿಸಲಿದೆ.
17 ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ಸರ್ಕಾರದ ಒಪ್ಪಿಗೆ
ಈಗಾಗಲೇ ಕೇಂದ್ರ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಅದರಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು ಮೈಸೂರು-ಮಡಿಕೇರಿ ಎಕ್ಸ್ಪ್ರೆಸ್ ಹೆದ್ದಾರಿ-275 ಯೋಜನೆ ಕೈಗೆತ್ತಿಕೊಂಡಿದೆ.
ಅಲ್ಲದೆ ಇದಕ್ಕಾಗಿ ಅಗತ್ಯವಿರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗಿರುವ ಕಾರಣದಿಂದ ಮತ್ತು ಎಲ್ಲ ರೀತಿಯ ಪ್ರಕ್ರಿಯೆಗಳಿಗೆ ಚಾಲನೆ ನೀಡಬೇಕಾಗಿರುವುದರಿಂದ ಈಗಾಗಲೇ ಮೈಸೂರಿನ ರಾಮಸ್ವಾಮಿ ವೃತ್ತದ ಬಳಿ ಚಾಮರಾಜಪುರಂನ ಗೀತಾ ರಸ್ತೆಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರದ ಕಚೇರಿಯನ್ನು ತೆರೆಯಲಾಗಿದ್ದು, ಇನ್ನಷ್ಟೆ ಕಾರ್ಯಚಟುವಟಿಕೆಗಳನ್ನು ಆರಂಭಿಸಬೇಕಾಗಿದೆ. ಇಷ್ಟಕ್ಕೂ ಮೈಸೂರು-ಮಡಿಕೇರಿ ಎಕ್ಸ್ಪ್ರೆಸ್ ಹೆದ್ದಾರಿ-275ಯೋಜನೆ ಆರಂಭಿಸಲೂ ಕಾರಣವಿದೆ. ಅದೇನೆಂದರೆ...
ನೂತನ ಹೆದ್ದಾರಿ ನಿರ್ಮಾಣ
ಮೈಸೂರು-ಬಂಟ್ವಾಳ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆಯಲ್ಲದೆ, ಅಲ್ಲಲ್ಲಿ ಬರುವ ತಾಲೂಕು, ಹೋಬಳಿ ಕೇಂದ್ರಗಳ ಮೇಲೆ ಹಾದುಹೋಗುವುದರಿಂದ ಇನ್ನಷ್ಟು ವಾಹನ ದಟ್ಟಣೆಯಿಂದಾಗಿ ಮಡಿಕೇರಿ-ಮೈಸೂರು ನಡುವಿನ ಸಂಚಾರ ಸಮಯ ಹೆಚ್ಚಾಗಿದೆ. ಇದೆಲ್ಲವನ್ನೂ ತಪ್ಪಿಸಲು ಇದೀಗ ನೂತನ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗುತ್ತಿದೆ.
ರಸ್ತೆ ಕುಸಿತಕ್ಕೆ ಶಾಶ್ವತ ಪರಿಹಾರ, ಮಳೆಗಾಲಕ್ಕೂ ಮುನ್ನ ಶಿರಾಡಿಘಾಟ್ ಬಂದ್?
ವಾಹನಗಳು ಸುಗಮವಾಗಿ ಸಂಚರಿಸಲಿವೆ
ಒಟ್ಟು 116 ಕಿ.ಮೀ. ಉದ್ದ ಮತ್ತು 14 ಮೀಟರ್ ಅಗಲ 4 ಪಥದ ಈ ಹೆದ್ದಾರಿಯು ಶ್ರೀರಂಗಪಟ್ಟಣ ಸಮೀಪ ಪಶ್ಚಿಮ ವಾಹಿನಿ ಮತ್ತು ನಗುವನ ಹಳ್ಳಿ ನಡುವೆ ಬೆಂಗಳೂರು-ಮೈಸೂರು ಹೆದ್ದಾರಿಯಿಂದ ತಿರುವು ಪಡೆದು ಹುಣಸೂರು ಸಮೀಪ ಗೋಣಿಕೊಪ್ಪಲುವಿಗೆ ಹೋಗುವ ರಸ್ತೆಗೆ ಸೇರಲಿದೆ. ಅಲ್ಲದೆ ಮುಂದೆ ಕಳ್ಳಬೆಟ್ಟ, ಕಂಪಲಾಪುರ, ಬೈಲಕುಪ್ಪೆ, ಕೊಪ್ಪ, ಕುಶಾಲನಗರ, ಸುಂಟಿಕೊಪ್ಪ ಮೂಲಕ ಮಡಿಕೇರಿಯನ್ನು ಸಂಪರ್ಕಿಸಲಿದೆ. ಈ ಮಧ್ಯೆ ಬರುವ ಪಟ್ಟಣಗಳು, ಹೋಬಳಿ ಕೇಂದ್ರಗಳ ಹೊರ ಭಾಗದಲ್ಲಿ ಬೈಪಾಸ್ ರಸ್ತೆಯಾಗುವುದರಿಂದ ಯಾವುದೇ ಅಡೆ-ತಡೆಯಿಲ್ಲದೆ ವಾಹನಗಳು ಸುಗಮವಾಗಿ ಸಂಚರಿಸಲು ಸಾಧ್ಯವಾಗಲಿದೆ.
ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಹೈಕೋರ್ಟ್ ತಡೆ
516 ಹೆಕ್ಟೇರ್ ಭೂಮಿ ಅಗತ್ಯವಿದೆ
ಈ ಹೆದ್ದಾರಿ ನಿರ್ಮಾಣವಾಗಬೇಕಾದರೆ ಸುಮಾರು 516 ಹೆಕ್ಟೇರ್ ಭೂಮಿ ಅಗತ್ಯವಿದ್ದು, ಸರಕಾರಿ ಜಮೀನು ಹಾಗೂ ಬಳಸಿಕೊಳ್ಳಬಹುದಾದ ಪ್ರಸ್ತುತ ಹೆದ್ದಾರಿಯನ್ನು ಹೊರತುಪಡಿಸಿ ಉಳಿದಂತೆ ಖಾಸಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗಿದ್ದು, ಇದಕ್ಕೆ ಪರಿಹಾರವಾಗಿ ರೂ. 6000 ಕೋಟಿಗಳನ್ನು ತೆಗೆದಿಡಲಾಗಿದೆ ಎನ್ನಲಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯನ್ನು10 ಪಥದ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುತ್ತಿರುವದರಿಂದ ಕಣ್ಣೂರು, ಮಡಿಕೇರಿ, ಸುಳ್ಯ, ಹೊಸ ನರಸೀಪುರ ಕಡೆಯಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಈ ಹೆದ್ದಾರಿಯಿಂದ ಹಲವಷ್ಟು ಅನುಕೂಲವಾಗಲಿದೆ.
ಮೊದಲಿಗೆ ಭೂಸ್ವಾಧೀನ ಪ್ರಕ್ರಿಯೆಯಾಗಬೇಕು
ಹೆದ್ದಾರಿ ಯೋಜನೆಗೆ ಪ್ರಕ್ರಿಯೆಗಳು ನಿಧಾನವಾಗಿ ಚಾಲನೆ ಪಡೆಯುತ್ತಿದ್ದು, ಮೊದಲಿಗೆ ಭೂಸ್ವಾಧೀನ ಪ್ರಕ್ರಿಯೆಯಾಗಬೇಕಿದೆ. ಅದಾದ ಬಳಿಕ ಹೆದ್ದಾರಿ ಲೇನ್ ಅಲೈನ್ಮೆಂಟ್ ಸಿದ್ಧಪಡಿಸಿ, ಸರಕಾರದಿಂದ ಅನುಮೋದನೆ ಪಡೆಯಬೇಕಾಗಿದೆ. ಆ ನಂತರ ರಸ್ತೆ ನಿರ್ಮಾಣಕ್ಕೆ ಅಂದಾಜು ಪಟ್ಟಿ ಮತ್ತು ಸಮಗ್ರ ಯೋಜನಾ ವರದಿ ತಯಾರಿಸಿ ಹಣಕಾಸು ಮತ್ತು ತಾಂತ್ರಿಕ ಅನುಮೋದನೆ ಪಡೆದು ಯೋಜನೆಗೆ ಟೆಂಡರ್ ಕರೆದ ನಂತರವೇ ಹೆದ್ದಾರಿ ನಿರ್ಮಾಣದ ಕಾಮಗಾರಿ ಆರಂಭವಾಗಲಿದೆ. ಇದೆಲ್ಲವೂ ಆಗಲು ಇನ್ನಷ್ಟು ಸಮಯಬೇಕಾಗಬಹುದೇನೋ?