ಡಿ. 3ರಂದು ಕೊಡಗಿನಲ್ಲಿ ಹುತ್ತರಿ ಹಬ್ಬಾಚರಣೆ
ಮಡಿಕೇರಿ, ನವೆಂಬರ್ 19: ಕೊಡಗಿನ ಸುಗ್ಗಿ ಹಬ್ಬ ಎಂದೇ ಕರೆಯುವ ಹುತ್ತರಿ ಹಬ್ಬವನ್ನು ಪ್ರತಿ ವರ್ಷವೂ ಹುಣ್ಣಿಮೆಯ ರೋಹಿಣಿ ನಕ್ಷತ್ರದಲ್ಲಿ ಆಚರಿಸಲಾಗುತ್ತದೆ. ಆದರೆ ಹಬ್ಬದ ಆಚರಣೆಯ ಕುರಿತಂತೆ ಜಿಲ್ಲೆಯ ಮಳೆ ದೇವರು ಎಂದೇ ಕರೆಯಲ್ಪಡುವ ಪಾಡಿ ಇಗ್ಗುತ್ತಪ್ಪ ದೇಗುಲದಲ್ಲಿ ಸಭೆ ನಡೆಸಿ ಸಮಯ ನಿಗದಿಪಡಿಸಲಾಗುತ್ತದೆ.
ಅದರಂತೆ ಈ ಬಾರಿಯೂ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಭಕ್ತ ಜನರು, ನಾಡಿನ 13 ತಕ್ಕರು ಹಾಗೂ ಹಿರಿಯರ ಸಭೆ ನಡೆಸಿ ದಿನ ಮತ್ತು ಸಮಯವನ್ನು ನಿಗದಿಪಡಿಸಿದ್ದು, ಈ ಬಾರಿ ಡಿ.3 ರಂದು ನಡೆಸಲು ತೀರ್ಮಾನಿಸಿದ್ದಾರೆ.
ಸಭೆಯಲ್ಲಿ ನಿರ್ಧಾರವಾದಂತೆ ಅಂದು ರಾತ್ರಿ 8.30ಕ್ಕೆ ಕದಿರು ತೆಗೆಯಲು ಸಕಾಲವೆಂದು ತೀರ್ಮಾನಿಸಲಾಗಿದೆ. ಹಬ್ಬದ ಆಚರಣೆಯಂತೆ ರಾತ್ರಿ 7 ಗಂಟೆಗೆ ನೆರೆ ಕಟ್ಟುವುದು, 8 ಗಂಟೆಗೆ ಕದಿರು ತೆಗೆಯುವುದು, 9 ಗಂಟೆಗೆ ಊಟೋಪಚಾರಕ್ಕೆ ಸಮಯ ನಿಗದಿ ಪಡಿಸಲಾಗಿದೆ.
ಇನ್ನು ಸಾರ್ವಜನಿಕವಾಗಿ 7.30 ಗಂಟೆಗೆ ನೆರೆ ಕಟ್ಟುವುದು, 8.30ಕ್ಕೆ ಕದಿರು ತೆಗೆಯುವುದು, 9.30ಕ್ಕೆ ಊಟೋಪಚಾರಕ್ಕೆ ಶುಭ ಸಂದರ್ಭ ಎಂದು ತೀರ್ಮಾನಿಸಲಾಯಿತು.
ಹಬ್ಬದ ಹಿನ್ನಲೆಯಲ್ಲಿ ಕಟ್ಟು ಹಾಕಲಾಗಿದ್ದು, ಪ್ರಾಣಿ ಹಿಂಸೆ ಮಾಡಬಾರದು, ಮರ ಗಿಡ ಕಡಿಯಬಾರದು, ಬೇಟೆಗೆ ಹೋಗದೆ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಇದೇ ವೇಳೆ ಮನವಿ ಮಾಡಲಾಗಿದೆ.
ಅಮ್ಮಂಗೇರಿಯ ಜೋತಿಷ್ಯರಾದ ಶಶಿ ಕುಮಾರ್, ದೇವ ತಕ್ಕ ಪರದಂಡ ಕಾವೇರಪ್ಪ, ಹಿರಿಯರಾದ ಪರದಂಡ ಚಂಗಪ್ಪ, ಭಕ್ತ ಜನ ಸಂಘದ ಉಪಾಧ್ಯಕ್ಷ ಪರದಂಡ ಡಾಲಿ, ಖಜಾಂಚಿ ನಂಬುಮಂಡ ಸುಬ್ರಮಣಿ, ಪಾಂಡಂಡ ನರೇಶ್, ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಕೆಟೋಳಿರ ಕುಟ್ಟಪ್ಪ, ಮತ್ತು ಕುಲ್ಲೆಟೀರ ದೇವಯ್ಯ, ಕೆಲೇಟೀರ ಮನು ಅಯ್ಯಪ್ಪ, ಬೋಪಣ್ಣ, ಪಾರುಪತ್ತೆದಾರ ತಮ್ಮಪ್ಪ, ವ್ಯೆವಸ್ಥಾಪಕ ಕಾಳಿಂಗ, ಜ್ಯೋತಿಷ್ಯ ಕುಟುಂಬದ ನಾಣಯ್ಯ, ಹರೀಶ್ ಹಾಗೂ ಪದಾಧಿಕಾರಿಗಳು, ಈ ವೇಳೆ ಉಪಸ್ಥಿತರಿದ್ದರು.