ಜಾತಿ ನಿಂದನೆ ಆರೋಪದಡಿ ಪತಿ ಬಂಧನ: ಪತ್ನಿಯಿಂದ ಎಸ್ಪಿ ಕಚೇರಿ ಎದುರು ಧರಣಿ
ಮಡಿಕೇರಿ, ಡಿಸೆಂಬರ್ 26: ಕೊಡಗು ಜಿಲ್ಲೆಯ ಮರಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸ್ಕೇರಿ ಗ್ರಾಮದ ಮಂಡೀರ ಹರೀಶ್ ಎಂಬುವವರನ್ನು ಕುರುಬರ ಮೇಲೆ ದೌರ್ಜನ್ಯ ಮಾಡಿದ್ದಾರೆ ಎಂಬ ಆರೋಪದಡಿ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಅವರ ಪತ್ನಿ ವಿಮಾ ಹರೀಶ್ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಗಂಡನ ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ಗಂಡ ಹಾಗೂ ಮಾವನ ನಡುವಿನ ವ್ಯಾಜ್ಯ ಕೋರ್ಟ್ನಲ್ಲಿ ಇದೆ. ಆದರೆ ಸದರಿ ಆಸ್ತಿಯನ್ನು ಮಾವನವರು ಜಾಗವನ್ನು ಅರೆಕಾಡು ಗ್ರಾಮದ ಸ್ಥಳೀಯ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಲೀಸ್ಗೆ ಕೊಟ್ಟಿದ್ದಾರೆ.
ಕೊಡಗಿನಲ್ಲಿ ಬೇಟೆಗೆ ತೆರಳಿದ್ದ ವ್ಯಕ್ತಿ ಗುಂಡೇಟಿಗೆ ಬಲಿ
ನಮ್ಮ ಜಾಗಕ್ಕೆ ಮೂರನೇ ವ್ಯಕ್ತಿ ಪ್ರವೇಶ ಮಾಡಿರುವುದನ್ನು ನಾವು ಖಂಡಿಸಿ ಅವರ ಕೆಲಸದವರನ್ನು ತೋಟದಿಂದ ಹೊರ ಕಳಿಸಿದ್ದೇವೆ. ಆದರೆ ಅಕ್ರಮ ಪ್ರವೇಶ ಮಾಡಿರುವುದನ್ನು ನಾವು ಖಂಡಿಸಿದಾಗ ನಮಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಲೀಸ್ಗೆ ಪಡೆದಿರುವ ಗೂಂಡಾ ಹಿನ್ನೆಲೆ ಇರುವ ವ್ಯಕ್ತಿಯಿಂದ ನಮಗೆ ಜೀವ ಬೆದರಿಕೆ ಬಂದಿದ್ದು, ರಕ್ಷಣೆ ನೀಡುವಂತೆ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಹಾಗೂ ಡಿವೈಎಸ್ಪಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಆದರೆ ಲೀಸ್ಗೆ ಪಡೆದಿರುವ ವ್ಯಕ್ತಿಯ ಕುರುಬ ಸಮುದಾಯದ ಕಾರ್ಮಿಕರಿಂದ ಸುಳ್ಳು ದೂರು ಪಡೆದು ಬಂಧಿಸಲು ರಾತ್ರಿ ೧ ಗಂಟೆಗೆ ಮನೆಯ ಬಳಿ ಕಾನ್ಸ್ಟೇಬಲ್ಗಳನ್ನು ಕಳುಹಿಸಿದ್ದಾರೆ. ಪೊಲೀಸರು ರಾಜಕಾರಣಿಗಳ ಏಜೆಂಟ್ ರಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಅಲ್ಲದೆ ಸುಳ್ಳು ದೂರಿಗೆ ಸಂಭಂದಿಸಿದಂತೆ ಜಾತಿ ನಿಂದನೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ತಮ್ಮ ಪತಿಯನ್ನು ಜೈಲಿಗೆ ಅಟ್ಟಿರುವುದಾಗಿ ಆರೋಪಿಸಿದರು.
ನಂತರ ಎಸ್ಪಿ ಕಚೇರಿಗೆ ಮಕ್ಕಳೊಂದಿಗೆ ತೆರಳಿದ ವಿಮಾ ಹರೀಶ್ ಮೌನ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ಆಗಮಿಸಿದ ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದಕ್ಕಿಳಿದರು. ಪೊಲೀಸರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ, ಡಿವೈಎಸ್ಪಿ ಅನುಚಿತವಾಗಿ ವರ್ತಿಸಿದ್ದಾರೆ.ಅವರನ್ನು ಅಮಾನತು ಮಾಡುವವರೆಗೆ ನಾನು ಇಲ್ಲಿಂದ ಕದಲುವುದಿಲ್ಲ ಎಂದರು.
Recommended Video
ಮಹಿಳೆಯನ್ನು ಸಮಾಧಾನಪಡಿಸುವಲ್ಲಿ ಅಧಿಕಾರಿ ವಿಫಲರಾದಾಗ ಮಹಿಳಾ ಪೊಲೀಸರನ್ನು ಕರೆಸಿ ಬಂಧಿಸಲಾಯಿತು. ಅಲ್ಲದೆ ಮಹಿಳೆಯ ಮೇಲೆ ಕೂಡ ಜಾತಿ ನಿಂದನೆ ಆರೋಪ ಇರುವುದರಿಂದ ಅವರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.