ಕೊಡಗಿನಲ್ಲಿ ಸಂತ್ರಸ್ತರಿಗೆ ನಿರ್ಮಿಸಿದ ಮನೆ ನೋಡಿದ್ರೆ ಬೆಚ್ಚಿ ಬೀಳ್ತೀರ...
ಮಡಿಕೇರಿ, ಸೆಪ್ಟೆಂಬರ್ 7: ಇದುವರೆಗೆ ಮಳೆ ಎಂದರೆ ಭಯಪಡದೆ ಮಳೆಯಲ್ಲಿಯೇ ಕಾಯಕ ಮಾಡುತ್ತಾ ಜೀವನ ನಡೆಸುತ್ತಿದ್ದ ಕೊಡಗಿನ ಜನ ಕಳೆದ ವರ್ಷದಿಂದೀಚೆಗೆ ಮಳೆ ಎಂದರೆ ಬೆಚ್ಚಿ ಬೀಳುವಂತಾಗಿದೆ. ಕೃಷಿಯನ್ನೇ ನಂಬಿ ಬದುಕುತ್ತಿದ್ದವರು ಕಳೆದ ವರ್ಷ ಮತ್ತು ಈ ವರ್ಷ ಸಂಭವಿಸಿದ ಭೂಕುಸಿತದಿಂದ ಆಸ್ತಿ ಪಾಸ್ತಿ ಕಳೆದುಕೊಂಡು ಎಲ್ಲ ಇದ್ದರೂ ಇಲ್ಲದಂತೆ ಜೀವನ ನಡೆಸುವಂತಹ ಪರಿಸ್ಥಿತಿ ಎದುರಾಗಿದೆ.
ಈ ಬಾರಿ ಮುಂಗಾರು ಆರಂಭದಲ್ಲಿ ಮಳೆ ಸುರಿಯದೆ ಜನರ ನಿದ್ದೆಗೆಡಿಸಿತ್ತು. ಇದಾದ ನಂತರ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಮಹಾಮಳೆಗೆ ಕಾವೇರಿ ಸೇರಿದಂತೆ ಎಲ್ಲ ನದಿಗಳು ಉಕ್ಕಿಹರಿದಿದ್ದು, ಇದರಿಂದ ಕಷ್ಟ ನಷ್ಟಗಳು ಸಂಭವಿಸಿ, ಸಾವು ನೋವುಗಳಾಗಿವೆ. ಕಳೆದ ವರ್ಷ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಕೆಲವು ಗ್ರಾಮಗಳು ಭೂಕುಸಿತದಿಂದ ಸಂಪೂರ್ಣ ನಾಶವಾಗಿವೆ. ಮಡಿಕೇರಿ ವ್ಯಾಪ್ತಿಯಲ್ಲಿ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವ ಕಾಮಗಾರಿಯನ್ನು ಕಳೆದ ವರ್ಷದಿಂದ ಆರಂಭಿಸಲಾಗಿದ್ದು ಇಲ್ಲಿಯವರೆಗೂ ಅದು ಸಂತ್ರಸ್ತರಿಗೆ ತಲುಪಿಲ್ಲ.
ತಹಶೀಲ್ದಾರ್ ಶ್ರಮದಿಂದ ನಿರ್ಗತಿಕ ಕುಟುಂಬಕ್ಕೆ ಸಿಕ್ಕಿತು 'ಬೆಳಕು'
ಆದರೆ ಸಂತ್ರಸ್ತರಿಗೆಂದು ನಿರ್ಮಿಸಿರುವ ಮನೆಗಳನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ಅವು ಈಗ ಹೇಗಿವೆ ಎಂಬುದನ್ನು ಹತ್ತಿರದಿಂದ ನೋಡಿದರೆ ನಮ್ಮ ವ್ಯವಸ್ಥೆಯ ವಿರುದ್ಧ ಆಕ್ರೋಶ ಬರುತ್ತದೆ. ಈಗಾಗಲೇ ಮಡಿಕೇರಿಯ ಕೆ.ನಿಡುಗಣೆ ಗ್ರಾಮಪಂಚಾಯಿತಿಗೆ ಸೇರುವ ಸಾರಿಗೆ ಇಲಾಖೆ ಕಚೇರಿ ಬಳಿ ಸಂತ್ರಸ್ತರಿಗಾಗಿ ಸರ್ಕಾರ ಜಾಗ ಗೊತ್ತು ಮಾಡಿ ಅಲ್ಲಿ ಮಾದರಿ ಮನೆಗಳನ್ನು ನಿರ್ಮಿಸಲಾಗಿದೆ.
ಈ ಮನೆಗಳನ್ನು ನಿರ್ಮಿಸಿ ಈಗಾಗಲೇ ವರ್ಷ ಕಳೆದು ಹೋಗಿದ್ದು ಇನ್ನೂ ಸಂಬಂಧಿಸಿದವರಿಗೆ ನೀಡದ ಕಾರಣ, ಜತೆಗೆ ನಿರ್ಜನ ಪ್ರದೇಶದಲ್ಲಿ ಈ ಮನೆಗಳು ನಿರ್ಮಾಣಗೊಂಡಿರುವುದರಿಂದ ಕೆಲವು ಪುಂಡ ಪೋಕರಿಗಳಿಗೆ ಅನೈತಿಕ ಚಟುವಟಿಕೆಗೆ ಇವು ಆಶ್ರಯ ತಾಣವಾಗಿವೆ. ಯಾರೂ ಇಲ್ಲದಿರುವುದನ್ನೇ ನೋಡಿಕೊಂಡಿರುವ ಕಳ್ಳರು ಮನೆಯ ಬಾಗಿಲು ಕಿಟಕಿಗಳನ್ನು ಮುರಿದು ಹೊತ್ತೊಯ್ದಿದ್ದಾರೆ. ಮನೆಯೊಳಗೆ ನುಗ್ಗಿ ಕೋಣೆಗಳಿಗೆ ಅಳವಡಿಸಿದ್ದ ವಿದ್ಯುತ್ ಬಲ್ಬು, ಹೊಲ್ಡರ್, ಸ್ವಿಚ್ ಹೀಗೆ ವಿದ್ಯುತ್ ಪರಿಕರವಲ್ಲದೆ, ನಲ್ಲಿಗಳನ್ನು ಕೂಡ ಕದ್ದುಕೊಂಡು ಹೋಗಿದ್ದಾರೆ.
ಹಾವೇರಿಯಲ್ಲಿ ಪ್ರವಾಹ ಸಂತ್ರಸ್ತರಿಗೆ 20*14 ಅಳತೆಯ ಶೆಡ್
ಅಷ್ಟೇ ಅಲ್ಲದೆ ಕೆಲವು ಖಾಲಿ ಮನೆಗಳಲ್ಲಿ ಬೇರೆ ಬೇರೆ ರೀತಿ ಅನೈತಿಕ ಚಟುವಟಿಕೆ ನಡೆಸಲಾಗುತ್ತದೆ ಎಂಬುದು ಸ್ಥಳೀಯರ ಆರೋಪ. ಇಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬುದಕ್ಕೆ ಇಲ್ಲಿ ಬೀಡಿ ಸಿಗರೇಟು ತುಂಡುಗಳು, ಖಾಲಿಯಾದ ಮದ್ಯದ ಬಾಟಲಿಗಳು, ಕಾಂಡೋಮ್ ಗಳು ಕಂಡುಬಂದಿರುವುದೇ ಸಾಕ್ಷಿ.
ಇನ್ನಾದರೂ ಇಲ್ಲಿ ಕಾವಲು ಸಿಬ್ಬಂದಿ ನೇಮಿಸಬೇಕಿದೆ ಅಥವಾ ಪೊಲೀಸರ ಗಸ್ತು ಹಾಕಬೇಕಿದೆ. ಇದೆಲ್ಲದರ ನಡುವೆ ಇಲ್ಲಿ ನಿರ್ಮಿಸಿರುವ ಮನೆಗಳು ಕೂಡ ಕಳಪೆ ಗುಣಮಟ್ಟದಿಂದ ಕೂಡಿದ್ದು ಮಳೆಗೆ ಛಾವಣಿಯಲ್ಲಿ ನೀರು ತೊಟ್ಟಿಕ್ಕುತ್ತಿದೆ. ಇದೇ ರೀತಿ ಮಳೆ ಸುರಿಯುತ್ತಿದ್ದರೆ ಈ ಮನೆಗಳಲ್ಲಿ ವಾಸ್ತವ್ಯ ಹೂಡಲು ಸಾಧ್ಯವೇ ಎಂಬುದು ಕೂಡ ಪ್ರಶ್ನೆಯಾಗಿ ಉಳಿದಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕಿದೆ.