ಆಧುನಿಕತೆಯ ಹೊಡೆತದಲ್ಲಿ ಮರೆಯಾಗದಿರಲಿ ಕೊಡಗಿನ ಜೇನು
ಮಡಿಕೇರಿ, ಆಗಸ್ಟ್ 10: ಕೊಡಗಿನ ಜೇನಿಗೆ ಇವತ್ತಿಗೂ ತನ್ನದೇ ಆದ ಮಹತ್ವ ಮತ್ತು ಬೇಡಿಕೆ ಇದೆ. ಆದರೆ ಇತ್ತೀಚೆಗೆ ಕೊಡಗಿನ ಜೇನು ಎಂಬ ಹೆಸರಲ್ಲಿ ಕಲಬೆರಕೆ ಜೇನುಗಳು ಮಾರುಕಟ್ಟೆಯನ್ನು ಆವರಿಸಿದ್ದು, ದೂರದಿಂದ ಬರುವ ಪ್ರವಾಸಿಗರು ಇದನ್ನೇ ಶುದ್ಧ ಜೇನು ಎಂದು ಭಾವಿಸಿ ಕೊಂಡೊಯ್ಯುವಂತಾಗಿದೆ.
ಮೊದಲೆಲ್ಲ ಮನೆಗಳ ಮುಂದೆ, ಆವರಣ, ತೋಟಗಳಲ್ಲಿ ಜೇನುಪೆಟ್ಟಿಗೆಯನ್ನಿಟ್ಟು ಸಾಕಾಣಿಕೆ ಮಾಡುತ್ತಿದ್ದರು. ಅದು ಮನೆಗೆ ಶೋಭೆಯನ್ನು ತರುತ್ತಿತ್ತಲ್ಲದೆ, ಒಂದಷ್ಟು ಜೇನು ಉತ್ಪಾದನೆಯೂ ಆಗುತ್ತಿತ್ತು. ಇಷ್ಟೇ ಅಲ್ಲದೆ ಕಾಡು, ಏಲಕ್ಕಿ ತೋಟಗಳ ಮರಗಳ ಪೊಟರೆ, ಹುತ್ತ, ಕಲ್ಲಿನಡಿಯಲ್ಲಿ ಜೇನು ಹುಳುಗಳು ಸೇರಿ ಜೇನು ಉತ್ಪಾದಿಸುತ್ತಿದ್ದವು. ಡಿಸೆಂಬರ್ ನಂತರ ಕಾಣಿಸುತ್ತಿದ್ದ ಜೇನು ಕುಟುಂಬಗಳು ಬೇಸಿಗೆಯಲ್ಲಿ ಸಿಗುತ್ತಿದ್ದ ಹೂಗಳ ಮಕರಂದ ಹೀರಿ ಮೇ ತಿಂಗಳ ಕೊನೆಯ ವೇಳೆಗೆ ಜೇನು ಉತ್ಪಾದಿಸಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ವಲಸೆ ಹೋಗಿಬಿಡುತ್ತಿದ್ದವು.
ಜೇನು ನೊಣಗಳೊಂದಿಗೆ ಪುತ್ತೂರಿನ ಮಹಿಳೆಯ ಸ್ನೇಹ
ಆದರೆ ಬದಲಾದ ಕಾಲಘಟ್ಟದಲ್ಲಿ ರಾಸಾಯನಿಕ ಸಿಂಪರಣೆ ಮತ್ತು ಕಾಯಿಲೆಗಳಿಂದಾಗಿ ಜೇನುಹುಳುಗಳ ಕುಟುಂಬ ನಾಶವಾಗಿ ಈಗ ಜೇನು ಹುಳುಗಳು ಕಾಣುವುದೇ ಅಪರೂಪವಾಗುತ್ತಿದೆ.
ಕೊಡಗು ಜಿಲ್ಲೆಯ ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರ ಜೇನು ಕಾಣಸಿಗುತ್ತಿವೆ. ಹೀಗಿರುವಾಗಿ ಯಥೇಚ್ಛವಾಗಿ ಜೇನು ಮಾರಾಟಕ್ಕೆ ಹೇಗೆ ಬರುತ್ತಿವೆ ಎಂಬುದು ಯಕ್ಷ ಪ್ರಶ್ನೆಯಾಗಿದ್ದು, ಕಲಬೆರಕೆ ಜೇನುಗಳು ಕೊಡಗು ಜಿಲ್ಲೆಯನ್ನು ಆವರಿಸಿದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.
ನಾಲ್ಕೈದು ದಶಕಗಳ ಹಿಂದೆ ಪ್ರತಿ ವರ್ಷ ಜನವರಿ ತಿಂಗಳಿನಿಂದ ಮೇ ತಿಂಗಳಿನವರೆಗೆ ಜಿಲ್ಲೆಯಲ್ಲಿ ಯಥೇಚ್ಛವಾಗಿ ಜೇನು ಉತ್ಪಾದನೆಯಾಗುತ್ತಿತ್ತು. ಕಾರಣ ಈ 5 ತಿಂಗಳುಗಳಲ್ಲಿ ಸುಮಾರು 120 ಬಗೆಯ ಹೂವುಗಳು ಕೊಡಗಿನ ಹಸಿರ ಪರಿಸರದಲ್ಲಿ ಅರಳಿ ನಿಲ್ಲುತ್ತಿದ್ದವು. ಪರಾಗ ಸ್ಪರ್ಶದ ಮೂಲಕ ಮಕರಂದವನ್ನು ಹೀರುವ ಜೇನು ನೊಣಗಳು ಜೇನನ್ನು ಯಥೇಚ್ಛವಾಗಿ ಉತ್ಪಾದಿಸುತ್ತಿದ್ದವು.
ಆಗ ಕಾಡುಗಳು ಹೆಚ್ಚಾಗಿದ್ದವು. ಜತೆಗೆ ಕಾಫಿ ತೋಟಗಳು ಕಡಿಮೆ ಪ್ರಮಾಣದಲ್ಲಿದ್ದವು. ಹೆಚ್ಚಿನ ಪ್ರದೇಶ ಏಲಕ್ಕಿ ತೋಟವಾಗಿತ್ತು. ಏಲಕ್ಕಿ ತೋಟಕ್ಕೆ ನೆರಳು ಮತ್ತು ನೀರಿನ ಅವಶ್ಯಕತೆಯಿದ್ದ ಕಾರಣದಿಂದಾಗಿ ಹೆಮ್ಮರಗಳು ಒತ್ತೊತ್ತಾಗಿ ಇದ್ದವಲ್ಲದೆ, ಈ ಮರಗಳ ಪೈಕಿ ಹೂ ಬಿಡುವ ಹಲವು ಮರಗಳಿದ್ದವು. ಇವುಗಳು ಜೇನು ಉತ್ಪಾದನೆಗೆ ಪೂರಕವಾಗಿದ್ದವು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಏಲಕ್ಕಿ ತೋಟಗಳು ಕಣ್ಮರೆಯಾಗಿವೆ. ಜತೆಗೆ ಕಾಡು ಮರಗಳು ಕೂಡ ನಾಶವಾಗಿವೆ. ಇದೆಲ್ಲದರ ನಡುವೆ ಜೇನು ಕೃಷಿ ಮಾಡುವ ತಾಳ್ಮೆಯೂ ಇಲ್ಲದಾಗಿದೆ.
ಹಿಂದಿನಂತೆ ಜೇನುಕುಟುಂಬಗಳು ಹೆಚ್ಚಾಗಿ ಕಂಡು ಬರುತ್ತಿಲ್ಲ. ಮೊದಲೆಲ್ಲ ಜೇನು ಪೆಟ್ಟಿಯನ್ನು ಜೇನುಪೆಟ್ಟಿಗೆಗೆ ಜೇನು ಮೇಣವನ್ನು ಕಾಯಿಸಿ ಚೆನ್ನಾಗಿ ಉಜ್ಜಿ ಘಮಘಮಿಸುವಂತೆ ಮಾಡಿ ತೋಟದಲ್ಲಿ ಮರಗಳ ನೆರಳಿನಲ್ಲಿಟ್ಟರೆ ಜೇನು ಹುಳುಗಳು ತಾನಾಗಿಯೇ ಬಂದು ಅದರಲ್ಲಿ ಸೇರಿಕೊಂಡು ಜೇನು ಕಟ್ಟುತ್ತಿದ್ದವು. ಈಗ ಅಂತಹ ಪರಿಸ್ಥಿತಿ ಇಲ್ಲವಾಗಿದೆ. ಮುಂದಿನ ದಿನಗಳಲ್ಲಿ ಒಂದಷ್ಟು ಆಸಕ್ತಿ ವಹಿಸಿ ಜೇನು ಕೃಷಿ ಮಾಡದೆ ಹೋದರೆ ಕೊಡಗಿನ ಜೇನಿಗೆ ಭಾರೀ ಹೊಡೆತ ಬೀಳುವುದಂತೂ ಖಚಿತ.