ಕೊಡಗು : ಭೂ ಕುಸಿತದ ಭೀತಿ, ಹೋಂ ಸ್ಟೇ ಬುಕ್ಕಿಂಗ್ ಸ್ಥಗಿತ
ಮಡಿಕೇರಿ, ಜೂನ್ 02 : ಮಳೆಗಾಲದ ಮೂರು ತಿಂಗಳು ಕೊಡಗಿನ ಕೆಲವು ರೆಸಾರ್ಟ್ ಮತ್ತು ಹೋಂ ಸ್ಟೇಗಳಲ್ಲಿ ಬುಕ್ಕಿಂಗ್ ಸ್ಥಗಿತಗೊಳಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗುವ ಮುನ್ಸೂಚನೆ ನೀಡಿರುವುದರಿಂದ ಪ್ರವಾಸಿಗರ ಭೇಟಿಗೆ ಅವಕಾಶವಿಲ್ಲ.
ಕೊಡಗು ಜಿಲ್ಲೆಯ 13 ಗ್ರಾಮಗಳನ್ನು ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಭೂ ಕುಸಿತ ಉಂಟಾಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ. ಆದ್ದರಿಂದ, ರೆಸಾರ್ಟ್, ಹೋಂ ಸ್ಟೇಗಳಲ್ಲಿ ಬುಕ್ಕಿಂಗ್ ಸ್ಥಗಿತಗೊಳಿಸಲಾಗಿದೆ.
ಮುಂಗಾರು ಮಳೆ ಆರಂಭ : ಕೊಡಗಿನಲ್ಲಿ 13 ಅಪಾಯಕಾರಿ ಸ್ಥಳ ಗುರುತು
ಮಕ್ಕಂದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೆಂಗಪ್ಪ ಅವರು ಗ್ರಾಮದ ವ್ಯಾಪ್ತಿಯಲ್ಲಿರುವ 21 ಹೋಂ ಸ್ಟೇ ಮತ್ತು 1 ರೆಸಾರ್ಟ್ನಲ್ಲಿ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಬುಕ್ಕಿಂಗ್ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ.
ಮಳೆಗಾಲ ಆರಂಭಕ್ಕೂ ಮುನ್ನ ಕೊಡಗಿಗೆ ಬಂದ ಎನ್ಡಿಆರ್ಎಫ್ ಪಡೆ
ಸೂಕ್ಷ್ಮ ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡರೆ ಪ್ರವಾಸಿಗರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯರು ಸಹ ಜಿಲ್ಲಾಡಳಿತದ ಜೊತೆ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಕೊಡಗಿನಲ್ಲಿ ಮತ್ತೆ ಕಂಪಿಸಿದ ಭೂಮಿ, ಜಲ ಪ್ರಳಯದ ಆತಂಕಕ್ಕೆ ಸಿಲುಕಿದ ಜನರು!
ಅಪಾಯಕಾರಿ ಪ್ರದೇಶಗಳು : ಮಡಿಕೇರಿ, ಸೋಮವಾರ ಪೇಟೆ ತಾಲೂಕಿನ 13 ಸ್ಥಳಗಳನ್ನು ಅಪಾಯಕಾರಿ ಪಟ್ಟಿಗೆ ಸೇರಿಸಲಾಗಿದೆ. ನಿಡುವಟ್ಟು, ಬಾರಿಬೆಳಚ್ಚು, ಹೆಬ್ಬಟ್ಟಗೇರಿ, ದೇವಸ್ತೂರು, ತಂತಿಪಾಲ, ಬಾಡಿಗೇರಿ, ಮುಕ್ಕೊಡ್ಲು, ಮೇಘತ್ತಾಳು, ಮಕ್ಕಂದೂರು, ಉದಯಗಿರಿ, ಕಾಟಕೇರಿ, ಮದೆ, 2ನೇ ಮೊಣ್ಣಂಗೇರಿ, ಜೋಡುಪಾಲ ಅಪಾಯಕಾರಿ ಪಟ್ಟಿಯಲ್ಲಿವೆ.
13 ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆ ತೊಂದರೆ ಇಲ್ಲ. ಮಳೆಗಾಲದಲ್ಲಿಯೂ ಉಳಿದ ಪ್ರದೇಶ ವೀಕ್ಷಿಸಲು ಪ್ರವಾಸಿಗರು ಬರಬಹುದು. ಆದರೆ, 2018ರಲ್ಲಿ ಭೂ ಕುಸಿತವಾಗಿದ್ದ ಪ್ರದೇಶಗಳ ವೀಕ್ಷಣೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.