ಕೊಡಗಿನಲ್ಲಿ ಹೆಲಿಪೋರ್ಟ್ ನಿರ್ಮಾಣ; ಏನಿದು ಯೋಜನೆ?
ಮಡಿಕೇರಿ, ಜೂನ್ 01; ಕರ್ನಾಟಕದ ಪ್ರವಾಸಿ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸಲು ಸರ್ಕಾರ ಈ ವರ್ಷದ ಬಜೆಟ್ನಲ್ಲಿ ಕೊಡಗು, ಚಿಕ್ಕಮಗಳೂರು ಮತ್ತು ಹಂಪಿಯಲ್ಲಿ ಹೆಲಿಪೋರ್ಟ್ ನಿರ್ಮಿಸುವುದಾಗಿ ಘೋಷಣೆ ಮಾಡಿದೆ. ಕೊಡಗು ಜಿಲ್ಲೆಯಲ್ಲಿ ಸೈನಿಕ ಶಾಲೆ ಬಳಿಯಲ್ಲಿ ಹೆಲಿಪೋರ್ಟ್ ನಿರ್ಮಾಣ ಕುರಿತು ಒಂದು ಸುತ್ತಿನ ಸಭೆ ನಡೆಯಿತು.
ಹೆಲಿಪೋರ್ಟ್ ನಿರ್ಮಾಣದ ಕುರಿತು ಶಾಸಕರಾದ ಎಂ. ಪಿ. ಅಪ್ಪಚ್ಚು ರಂಜನ್, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎಂ. ಆರ್. ರವಿ ಸೋಮವಾರ ಸ್ಥಳ ಪರಿಶೀಲಿನೆ ಮಾಡಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೊಡಗು ಜಿಲ್ಲಾಧಿಕಾರಿ ಡಾ. ಬಿ. ಸಿ. ಸತೀಶ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಕೊಪ್ಪಳ ವಿಮಾನ ನಿಲ್ದಾಣ; ಸ್ಥಳ ಪರಿಶೀಲಿಸಿ ವರದಿ ತಯಾರಿಕೆಗೆ ಸೂಚನೆ
ಸಭೆಯಲ್ಲಿ ಮಾತನಾಡಿದ ಡಾ. ಎಂ. ಆರ್. ರವಿ, "ಹೆಲಿಪೋರ್ಟ್ ನಿರ್ಮಾಣ ಸಂಬಂಧ ತಜ್ಞರ ತಂಡವು ಕೊಡಗು ಜಿಲ್ಲೆಗೆ ಜೂನ್ 6ರಂದು ಆಗಮಿಸಿ ಪರಿಶೀಲನೆ ನಡೆಸಿ ವರದಿ ನೀಡಲಿದೆ. ಹೆಲಿಪೋರ್ಟ್ ಜೊತೆಗೆ ಹೆಚ್ಚಿನ ಜಾಗ ಇರುವುದರಿಂದ 20 ಮಂದಿ ಪ್ರಯಾಣಿಸುವ ಏರ್ ಸ್ಟ್ರಿಪ್ ಸ್ಥಾಪನೆಗೂ ಕ್ರಮವಹಿಸಲಾಗುವುದು. ಹಾರಂಗಿ ಜಲಾಶಯದಲ್ಲಿ ಸೀಪ್ಲೇನ್ ಯೋಜನೆ ರೂಪಿಸಲು ಚಿಂತಿಸಲಾಗಿದೆ" ಎಂದು ಹೇಳಿದರು.
ದಾವಣಗೆರೆ ಏರ್ಪೋರ್ಟ್ ಬೇಡಿಕೆಗೆ ಮನ್ನಣೆ, ಅಧಿಕಾರಿಗಳ ಭೇಟಿ
"ಕೊಡಗು ಜಿಲ್ಲೆಯಲ್ಲಿ ಸಣ್ಣ ವಿಮಾನ ನಿಲ್ದಾಣ ಸ್ಥಾಪಿಸಬೇಕು ಎಂದು ಹಲವು ವರ್ಷಗಳಿಂದ ಪ್ರಯತ್ನಗಳು ನಡೆದಿವೆ. 2018ರಲ್ಲಿ ಪ್ರವಾಹ ಬಂದಿತ್ತು, ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೆಲಿಪೋರ್ಟ್ ನಿರ್ಮಾಣ ಮಾಡುವ ಕುರಿತು ಕ್ರಮಗಳನ್ನು ಕೈಗೊಳ್ಳಬೇಕಿದೆ" ಎಂದು ತಿಳಿಸಿದರು.
ಹಾಸನ ವಿಮಾನ ನಿಲ್ದಾಣ ಕಾಮಗಾರಿ ಮಾರ್ಕಿಂಗ್ ಕಾರ್ಯ ಆರಂಭ: ಆರ್.ಗಿರೀಶ್
ಹೆಲಿಪೋರ್ಟ್ಗೆ ಸ್ಥಳ ಪರಿಶೀಲನೆ
ಕೊಡಗು ಜಿಲ್ಲೆಯ ಸೈನಿಕ ಶಾಲೆ ಬಳಿ ಹೆಲಿಪೋರ್ಟ್ ನಿರ್ಮಾಣ ಸಂಬಂಧ ಸೋಮವಾರ ಸ್ಥಳ ಪರಿಶೀಲನೆ ನಡೆದಿದೆ. ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಎಂ. ಆರ್. ರವಿ ನೇತೃತ್ವದ ತಂಡ ಸ್ಥಳ ಪರಿಶೀಲಿಸಿತು. ಹೆಲಿಪೋರ್ಟ್ ನಿರ್ಮಾಣ ಸಂಬಂಧ ತಜ್ಞರ ತಂಡವು ಕೊಡಗು ಜಿಲ್ಲೆಗೆ ಶೀಘ್ರ ಆಗಮಿಸಿ ಪರಿಶೀಲಿಸಿ ವರದಿ ನೀಡಲಿದೆ. ಈ ಹಿಂದೆ ಕೆ. ನಿಡುಗಣೆ ಬಳಿ 4 ಎಕರೆಗಿಂತ ಹೆಚ್ಚು ಜಾಗ ಗುರುತಿಸಲಾಗಿತ್ತು, ಸದ್ಯ ಆ ಸ್ಥಳದಲ್ಲಿ ಮನೆ ನಿರ್ಮಾಣ ಆಗಿರುವುರಿಂದ ಕೊಡಗು ಜಿಲ್ಲಾ ಕೇಂದ್ರದಲ್ಲಿ ಜಾಗ ಇಲ್ಲದಿರುವುದರಿಂದ ಕೂಡಗು ಸೈನಿಕ ಶಾಲೆ ಬಳಿ ಗುರುತಿಸಲಾಗಿರುವ ಜಾಗದಲ್ಲಿ ಹೆಲಿಪೋರ್ಟ್ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ.
ಪ್ರವಾಹ ಪರಿಸ್ಥಿತಿ ಬಗ್ಗೆ ವರದಿ ಕೊಡಿ
ಡಾ. ಎಂ. ಆರ್. ರವಿ ಸ್ಥಳ ಪರಿಶೀಲನೆ ಬಳಿಕ ಹಾರಂಗಿ ನದಿ ನೀರು ಪಕ್ಕದಲ್ಲಿ ಹರಿಯುವುದರಿಂದ ತಡೆಗೋಡೆ ನಿರ್ಮಾಣ ಮಾಡಬೇಕಾಗುತ್ತದೆ. ಜೊತೆಗೆ ಕಳೆದ 50 ವರ್ಷದಲ್ಲಿ ಯಾವ ರೀತಿ ಪ್ರವಾಹ ಇತ್ತು ಎಂಬ ಬಗ್ಗೆ ಮಾಹಿತಿ ಒದಗಿಸುವಂತೆ ಹಾರಂಗಿ ಕಾರ್ಯಪಾಲಕ ಎಂಜಿನಿಯರ್ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಿದರು.
ಕರ್ನಾಟಕ ಸರ್ಕಾರ ಭವಿಷ್ಯದಲ್ಲಿ ಪ್ರವಾಸಿ ಕೇಂದ್ರಗಳನ್ನು ಆಕರ್ಷಣೀಯಗೊಳಿಸುವ ನಿಟ್ಟಿನಲ್ಲಿ ಹೆಲಿಪೋರ್ಟ್ ನಿರ್ಮಾಣಕ್ಕೆ ಉತ್ತೇಜನ ನೀಡುತ್ತಿದೆ. ಈ ಕುರಿತು 2022-23ನೇ ಸಾಲಿನ ಬಜೆಟ್ನಲ್ಲಿ ಘೋಷಣೆಗಳನ್ನು ಮಾಡಲಾಗಿದೆ.
ಜಿಲ್ಲಾಧಿಕಾರಿಗಳ ಹೇಳಿಕೆ
ಕೊಡಗು ಜಿಲ್ಲಾಧಿಕಾರಿ ಡಾ. ಬಿ. ಸಿ. ಸತೀಶ ಮಾತನಾಡಿ, "ಕೃಷಿ ಇಲಾಖೆ ಭೂಮಿಯನ್ನು ಸರ್ಕಾರದ ಮಟ್ಟದಲ್ಲಿ ಅನುಮತಿ ಪಡೆದು ನಿಗಮಕ್ಕೆ ಹಸ್ತಾಂತರಿಸಲಾಗುವುದು. ಕೊಡಗು ಜಿಲ್ಲೆಯಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು" ಎಂದರು.
ಹೆಲಿಪೋರ್ಟ್ ಮತ್ತು ಏರ್ ಸ್ಪ್ರಿಪ್ಟ್ ನಿರ್ಮಾಣ ಮಾಡಲು ಸುಮಾರು 100 ರಿಂದ 120 ಕೋಟಿ ವೆಚ್ಚವಾಗಲಿದ್ದು, ಸರ್ಕಾರದಿಂದ ಹಣ ಬಿಡುಗಡೆ ಮಾಡಿಸುವಂತಾಗಬೇಕು. ಹಾಗೆಯೇ ಕೃಷಿ ಭೂಮಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿಕೊಂಡು ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮಕ್ಕೆ ಭೂಮಿಯನ್ನು ವರ್ಗಾಯಿಸಬೇಕು. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
ಎಂ. ಪಿ. ಅಪ್ಪಚ್ಚು ರಂಜನ್ ಹೇಳಿಕೆ
ಮಡಿಕೇರಿ ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ಮಾತನಾಡಿ, "ಹಲವು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಮಿನಿ ವಿಮಾನ ನಿಲ್ದಾಣ ಆಗಬೇಕು ಎಂಬ ಬೇಡಿಕೆ ಇದೆ. ಸರ್ಕಾರದ ವಶದಲ್ಲಿ 49 ಎಕರೆ ಜಾಗವಿದೆ. ಆ ನಿಟ್ಟಿನಲ್ಲಿ ಸರ್ಕಾರ ಹೆಲಿಪೋರ್ಟ್ ನಿರ್ಮಿಸಲು ಮುಂದಾಗಿದ್ದು, ಸದ್ಯ ಸೈನಿಕ ಶಾಲೆ ಬಳಿಯ ಸರ್ಕಾರಿ ಜಮೀನನ್ನು ಗುರುತಿಸಲಾಗಿದೆ. ಜಿಲ್ಲೆಗೆ ವಾರಾಂತ್ಯದಲ್ಲಿ 25 ರಿಂದ 30 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಹೆಲಿಪೋರ್ಟ್ ಜೊತೆ ಮಿನಿ ವಿಮಾನ ನಿಲ್ದಾಣ ನಿರ್ಮಿಸಲು ಸಿದ್ಧತೆಗಳು ನಡೆದಿವೆ" ಎಂದು ಹೇಳಿದರು.
"ಭೂಮಿ ಹಸ್ತಾಂತರ, ಸರ್ಕಾರದಿಂದ ಹಣ ಬಿಡುಗಡೆ ಸಂಬಂಧ ಶೀಘ್ರ ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಅಗತ್ಯ ಕ್ರಮ ವಹಿಸಲಾಗುವುದು, ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು. ಹೆಲಿಪೋರ್ಟ್ ಹಾಗೂ ಏರ್ ಸ್ಪ್ರಿಪ್ಟ್ ನಿರ್ಮಾಣ ಆಗುವುದರಿಂದ ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ" ಎಂದು ಶಾಸಕರು ತಿಳಿಸಿದರು.