ಮಡಿಕೇರಿಯಲ್ಲಿ ಭಾರೀ ಮಳೆ; ನಾಪೋಕ್ಲು–ಭಾಗಮಂಡಲ ರಸ್ತೆ ಮೇಲೆ ನೀರು
Recommended Video
ಮಡಿಕೇರಿ, ಜುಲೈ 22: ಆರೆಂಜ್ ಅಲರ್ಟ್ ಘೋಷಣೆ ನಡುವೆಯೇ ಮಡಿಕೇರಿಯಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 30 ಮಿ.ಮೀ. ಮಳೆಯಾಗಿದೆ. ಮಡಿಕೇರಿಯ ವ್ಯಾಪ್ತಿಯಲ್ಲಿ ಹಲವೆಡೆ ಸದ್ಯಕ್ಕೆ ಉತ್ತಮ ಮಳೆಯಾಗುತ್ತಿದೆ.
ಮಡಿಕೇರಿಯ ಸೋಮವಾರಪೇಟೆ ಹಾಗೂ ವಿರಾಜಪೇಟೆಯಲ್ಲಿ ಕಡಿಮೆ ಮಳೆಯಾಗಿದೆ. ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಸುತ್ತ ಹೆಚ್ಚು ಮಳೆಯಾಗಿದ್ದು, 24 ಗಂಟೆಗಳಲ್ಲಿ 75.6 ಮಿ.ಮೀ. ನಷ್ಟು ಮಳೆ ಸುರಿದ ಪರಿಣಾಮ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ತ್ರಿವೇಣಿ ಸಂಗಮ ಹಾಗೂ ಭಾಗಮಂಡಲ ಸಂಪೂರ್ಣ ಭರ್ತಿಯಾಗಿದೆ. ನಾಪೋಕ್ಲು - ಭಾಗಮಂಡಲ ರಸ್ತೆಯ ಮೇಲೆ ನೀರು ಹರಿಯಲಾರಂಭಿಸಿದೆ.
ಕೊಡಗಿನಲ್ಲಿ ರೆಡ್ ಅಲರ್ಟ್: ಮಡಿಕೇರಿಯಲ್ಲಿ ತಕ್ಕಮಟ್ಟಿಗೆ ಮಳೆ!
ಈ ವರ್ಷ ಇದೇ ಮೊದಲ ಬಾರಿಗೆ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಇದೇ ರೀತಿ ಮಳೆ ಆರ್ಭಟ ಹೆಚ್ಚಾದರೆ, ಪ್ರತಿ ವರ್ಷದಂತೆ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಕೂಡ ಹೆಚ್ಚಾಗುವ ಭೀತಿಯಿದೆ.ತ್ರಿವೇಣಿ ಸಂಗಮ ಭರ್ತಿಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸ್ಥಳದಲ್ಲಿ ದೋಣಿ ವ್ಯವಸ್ಥೆ ಸಹ ಮಾಡಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿ ನಿಯೋಜಿಸಲಾಗಿದೆ.
ಸಾರ್ವಜನಿಕರು ಹಾಗೂ ನದಿ ಪಾತ್ರದ ಜನರಿಗೆ ಎಚ್ಚರಿಕೆ ಸೂಚನೆ ನೀಡಲಾಗಿದೆ. ಮಡಿಕೇರಿಯ ಹಲವು ಭಾಗ ಮಳೆ ಅಧಿಕಗೊಳ್ಳುತ್ತಿದ್ದಂತೆ ಹಲವೆಡೆ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿಯಲಾರಂಭಿಸಿದೆ. ಕೆಲ ದಿನಗಳ ಹಿಂದೆ ಕುಸಿತ ಕಂಡಿದ್ದ ಮಡಿಕೇರಿ ಹಳೇ ಖಾಸಗಿ ನಿಲ್ದಾಣದ ಬಳಿಯ ಮಣ್ಣು ನಿನ್ನೆ ಕೂಡ ಅಲ್ಪಮಟ್ಟದಲ್ಲಿ ಕುಸಿತ ಕಂಡಿದೆ.
ಹೆಚ್ಚಿದೆ ಮಳೆ; ನಾಗರಹೊಳೆ ಸಫಾರಿ ಸದ್ಯಕ್ಕೆ ರದ್ದು
ಇನ್ನು ಹವಾಮಾನ ಇಲಾಖೆಯು ಜುಲೈ 25ರ ವರೆಗೆ ಜಿಲ್ಲೆಯಾದ್ಯಂತ ಮಳೆ ಮುಂದುವರಿಯುವ ಮುನ್ಸೂಚನೆಯನ್ನು ನೀಡಿದೆ. 115.5 ರಿಂದ 204.4 ಮಿ.ಮೀ. ಮಳೆ ಸುರಿಯುವ ಮುನ್ಸೂಚನೆ ನೀಡಿದೆ.