ಕೊಡಗಿನ ಶನಿವಾರಸಂತೆ ಸುತ್ತಮುತ್ತ ಭಾರೀ ಆಲಿಕಲ್ಲು ಮಳೆ
ಮಡಿಕೇರಿ, ಫೆಬ್ರವರಿ 19: ಕೊಡಗು ಜಿಲ್ಲೆಯ ಗಡಿ ಭಾಗ ಶನಿವಾರಸಂತೆಯ ಸುತ್ತಮುತ್ತ ಶುಕ್ರವಾರ ಅಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ಅದರಲ್ಲೂ ಶನಿವಾರಸಂತೆ ಸಮೀಪದ ಅಂಕನಳ್ಳಿಯಲ್ಲಿ ಭಾರೀ ಗಾತ್ರದ ಆಲಿಕಲ್ಲು ಸಹಿತ ಮಳೆ ಆಗಿದ್ದು ರಸ್ತೆ ಮೇಲೆ ಅರ್ಧ ಅಡಿಯಷ್ಟು ಅಲಿಕಲ್ಲುಗಳು ಬಿದ್ದಿದ್ದನ್ನು ನೂರಾರು ಗ್ರಾಮಸ್ಥರು ಮೊಬೈಲ್ ಗಳಲ್ಲಿ ಸೆರೆ ಹಿಡಿದಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಗುಡುಗು ಗಾಳಿ ಸಹಿತ ಅಕಾಲಿಕ ಮಳೆ
ಈ ಕುರಿತು ಒನ್ಇಂಡಿಯಾ ಕನ್ನಡ ಜತೆ ಮಾತನಾಡಿದ ರುದ್ರಪ್ಪ (72) ಎಂಬ ರೈತ, ತಾನು ಜೀವಮಾನದಲ್ಲಿ ಇಷ್ಟೊಂದು ಆಲಿಕಲ್ಲು ಬಿದ್ದಿದ್ದನ್ನು ನೋಡೇ ಇಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಬೆಳಿಗ್ಗೆ 11 ಗಂಟೆಗೆ ಆರಂಭಗೊಂಡ ಮುಸಲಧಾರೆ ಒಂದೂವರೆ ಗಂಟೆಗಳ ಕಾಲ ಸುರಿದಿದೆ.
ಶುಕ್ರವಾರ ಸುಮಾರು ಒಂದೂವರೆ ಇಂಚಿನಷ್ಟು ಮಳೆ ಸುರಿದಿದ್ದು, ಇದರಿಂದ ಕಾಳು ಮೆಣಸು ಬೆಳೆಗೆ ಹಾನಿಯಾಗಿದೆ ಎಂದು ಮತ್ತೊಬ್ಬ ರೈತ ಬಸವರಾಜು ಹೇಳಿದರು. ಕಾಳು ಮೆಣಸಿಗೆ ಈಗ ಕೊಯ್ಲಿನ ಸಮಯವಾಗಿದ್ದು, ಬಳ್ಳಿಯಲ್ಲಿದ್ದ ಮೆಣಸು ಕೆಳಕ್ಕೆ ಬಿದ್ದಿದೆ ಎಂದು ಅವರು ಹೇಳಿದರಲ್ಲದೆ, ಈಗ ಕಾಳುಮೆಣಸಿಗೂ ಬೆಲೆ ಕೆಜಿಗೆ 330 ರೂಪಾಯಿಗಳಿಗೆ ಕುಸಿದಿದೆ. ಈ ಸಂದರ್ಭದಲ್ಲಿ ಬೆಳೆಗೂ ಹಾನಿ ಆದರೆ ರೈತರ ಬದುಕು ಕಷ್ಟ ಎಂದು ಅವರು ಹೇಳಿದರು.
ಸಾಮಾಜಿಕ ತಾಣಗಳಲ್ಲಿ ರಸ್ತೆಯ ಮೇಲೆ, ಮನೆಗಳ ಸುತ್ತ ಮುತ್ತ ಬಿದ್ದಿರುವ ಭಾರೀ ಪ್ರಮಾಣದ ಆಲಿಕಲ್ಲುಗಳು ಹರಡಿಕೊಂಡಿರುವ ದೃಶ್ಯ ವೈರಲ್ ಆಗಿದೆ.