ಕೊಡಗು : ತುಂಬಿ ಹರಿವ ನದಿಯಲ್ಲೇ ಹೆಣಹೊತ್ತು ಸಾಗಿದರು
ಕೊಡಗು, ಆಗಸ್ಟ್ 13 : ಕೊಡಗಿನಲ್ಲಿ ಸುರಿಯುತ್ತಿರುವ ಮಳೆಗೆ ಹತ್ತಾರು ಸಮಸ್ಯೆಗಳು ಎದುರಾಗಿದ್ದು, ಅದರಲ್ಲೂ ಸಾವನ್ನಪ್ಪಿದವರ ಅಂತ್ಯಕ್ರಿಯೆ ನಡೆಸುವುದು ಮಾತ್ರ ಬಹುದೊಡ್ಡ ಸಮಸ್ಯೆಯಾಗಿದೆ.
ರಸ್ತೆಗಳು ನೀರಿನಲ್ಲಿ ಮುಳುಗಡೆಯಾದ ಪರಿಣಾಮ ಕೆಲವೆಡೆ ಹೆಣವನ್ನು ಸಾಗಿಸುವುದೇ ಸಮಸ್ಯೆಯಾಗಿ ಪರದಾಡುವಂತಾಗಿದ್ದು ಮಡಿಕೇರಿಗೆ ಸಮೀಪವಿರುವ 1ನೇ ಮೊಣ್ಣಂಗೇರಿಯಲ್ಲಿ ಜಲಾವೃತಗೊಂಡ ರಸ್ತೆಯಲ್ಲಿ ಹೆಣವನ್ನು ಕಷ್ಟಪಟ್ಟು ಹೊತ್ತೊಯ್ದ ಘಟನೆ ನಡೆದಿದೆ.
ನದಿ ತೀರದ ಜನರಿಗೆ ಕೊಡಗು ಜಿಲ್ಲಾಡಳಿತ ಎಚ್ಚರಿಕೆ ಸಂದೇಶ
1ನೇ ಮೊಣ್ಣಂಗೇರಿ ನಿವಾಸಿ ಅಚ್ಚಪಟ್ಟೀರ ಮಾಚಮ್ಮ (92) ಎಂಬುವರು ಮಡಿಕೇರಿಯ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಹೆಣವನ್ನು ಸ್ವಗ್ರಾಮಕ್ಕೆ ಸಾಗಿಸುವುದು ಅನಿವಾರ್ಯವಾಗಿತ್ತು. ಆದರೆ ಈ ಮಾರ್ಗದಲ್ಲಿ ನದಿ ಹರಿಯುತ್ತಿದ್ದು ಪ್ರವಾಹಕ್ಕೆ ಸೇತುವೆ ಮುಳುಗಡೆಗೊಂಡ ಕಾರಣ ಉಕ್ಕಿ ಹರಿಯುವ ನದಿಯಲ್ಲೇ ಹೆಣವನ್ನು ಪ್ಲಾಸ್ಟಿಕ್ನಿಂದ ಸುತ್ತಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೆಣವನ್ನು ಸಾಗಿಸಿದ್ದಾರೆ.
ಹಾಗೆ ನೋಡಿದರೆ 1ನೇ ಮೊಣ್ಣಂಗೇರಿ ಅಂತಹ ಕುಗ್ರಾಮವೇನಲ್ಲ ಇಲ್ಲಿ ಪಂಚತಾರಾ ರೆಸಾರ್ಟ್ಗಳಿವೆ. ಆದರೆ ಸಾರ್ವಜನಿಕರಿಗೆ ಇಲ್ಲಿ ಯಾವುದೇ ಸೌಲಭ್ಯ ಕಲ್ಪಿಸದೆ ಇರುವುದರಿಂದ ಗ್ರಾಮಸ್ಥರು ಸಂಕಟ ಅನುಭವಿಸುವಂತಾಗಿದೆ.
ಕೊಡಗಿನಲ್ಲಿ ಮತ್ತೆ ಬಿರುಸುಗೊಂಡ ಮುಂಗಾರು: ಶೀತಗಾಳಿಗೆ ತತ್ತರ!
ಗ್ರಾಮಕ್ಕೆ ರಸ್ತೆಯಿಲ್ಲ, ವಿದ್ಯುತ್ ಇಲ್ಲ. ಇಲ್ಲಿ ಹೊಳೆ ಹರಿಯುತ್ತಿದ್ದರೂ ಸುಸಜ್ಜಿತ ಸೇತುವೆಯಿಲ್ಲ. ಜನರೇ ಸೇರಿ ನಿರ್ಮಿಸಿದ ಕಾಲು ಸೇತುವೆಯೇ ಇಲ್ಲಿನವರಿಗೆ ಪ್ರಮುಖ ಸಂಪರ್ಕ ಸಾಧನ. ಆದರೆ, ಅದು ಕೂಡ ಈಗ ನೀರಿನಲ್ಲಿ ಮುಳುಗಿ ಹೋಗಿದ್ದರಿಂದ ಜನ ಪರದಾಡುವಂತಾಗಿದೆ.
ಇಲ್ಲಿ 80ಕ್ಕೂ ಹೆಚ್ಚು ಕುಟುಂಬಗಳ 400ಕ್ಕೂ ಹೆಚ್ಚು ಜನರು ಇದೇ ಸೇತುವೆ ಮೂಲಕ ತೆರಳುತ್ತಾರೆ. ಇಲ್ಲಿ ಸೇತುವೆಯೊಂದನ್ನು ಎಂಟು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದರೂ ಅದರಿಂದ ಯಾವುದೇ ಪ್ರಯೋಜನವಿಲ್ಲ.
ಮಳೆ ಬಂದು ನದಿಯಲ್ಲಿ ನೀರು ತುಂಬಿ ಹರಿದರೆ ಸೇತುವೆ ಮುಳುಗಡೆಯಾಗುತ್ತದೆ. ಸೇತುವೆ ನಿರ್ಮಾಣದ ವೇಳೆ ಇನ್ನಷ್ಟು ಎತ್ತರ ಏರಿಸಿ ಕಟ್ಟಿದ್ದರೆ ಉಪಯೋಗಕ್ಕೆ ಬರುತ್ತಿತ್ತೇನೋ ಆದರೆ ಕೆಲವೇ ಕೆಲವು ಕುಟುಂಬಗಳು ಮಾತ್ರ ಇರುವ ಕಾರಣ ಹೆಚ್ಚಿನ ಖರ್ಚು ಮಾಡಿ ಸೇತುವೆ ನಿರ್ಮಿಸಲು ಸರ್ಕಾರ ಹಿಂದೇಟು ಹಾಕುತ್ತಿದ್ದು, ಇದರಿಂದ ಈ ವ್ಯಾಪ್ತಿಯ ಜನಕ್ಕೆ ಪ್ರತಿ ವರ್ಷ ಮಳೆಗಾಲ ಬಂದಾಗಲೂ ತೊಂದರೆ ಮಾತ್ರ ತಪ್ಪುತ್ತಿಲ್ಲ.
ಇದೆಲ್ಲ ಕಾರಣದಿಂದ ಈಗ ಅಚ್ಚಪಟ್ಟೀರ ಮಾಚಮ್ಮ ಅವರ ಶವವನ್ನು ಕುಟುಂಬಸ್ಥರು ಪ್ರಾಣವನ್ನು ಪಣಕ್ಕಿಟ್ಟು ನದಿಯೊಳಗೆ ಹೊತ್ತು ಸಾಗುವಂತಾಗಿದೆ. ಇನ್ನು ಮುಂದೆಯಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಇದೇ ಸಮಸ್ಯೆ ಮರುಕಳಿಸದಂತೆ ನೋಡಿಕೊಳ್ಳಬೇಕಾಗಿದೆ.