ಚಿತ್ರಗಳು : ಉಗ್ರಗೊಂಡ ಕಾವೇರಿ ಶಾಂತಳಾಗಲು ತೀರ್ಥ ಪೂಜೆ
ಮಡಿಕೇರಿ, ಜುಲೈ 11 : ಕೊಡಗಿನಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಭಾಗಮಂಡಲ ಸಂಪೂರ್ಣ ಜಲಾವೃತವಾಗಿದ್ದು, ಸಂಪರ್ಕವನ್ನೇ ಕಡಿದುಕೊಂಡಿದೆ.
ಭಾಗಮಂಡಲದ ವ್ಯಾಪ್ತಿಯಲ್ಲಿ ಮತ್ತು ತಲಕಾವೇರಿಯ ಸುತ್ತಮುತ್ತಲು ಇರುವ ಜನರು ಈಗ ಭಾರೀ ಮಳೆಯಿಂದಾಗಿ ಪರದಾಡುವಂತಾಗಿದೆ. ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಪಟ್ಟಣವಲ್ಲದೆ ಗದ್ದೆ, ತೋಟಗಳು ಜಲಾವೃತಗೊಂಡಿವೆ.
ಕರಾವಳಿಯಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ ಸಾಧ್ಯತೆ
ತಲಕಾವೇರಿ ಬಳಿಯ ಬ್ರಹ್ಮಗಿರಿ ಬೆಟ್ಟಶ್ರೇಣಿಗಳು ಸೇರಿದಂತೆ ಸುತ್ತಮುತ್ತ ಸುರಿಯುವ ಮಳೆಯ ನೀರೆಲ್ಲವೂ ಹರಿದು ಬಂದು ಕನ್ನಿಕೆ ಮತ್ತು ಸುಜ್ಯೋತಿ ನದಿಗಳ ಮೂಲಕ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಾವೇರಿಯೊಂದಿಗೆ ಲೀನವಾಗುತ್ತದೆ. ಆದ್ದರಿಂದ ಕಾವೇರಿ ಇನ್ನಷ್ಟು ಅಬ್ಬರಿಸುತ್ತಿದೆ.
ಚಿತ್ರಗಳು : ಹಾರಂಗಿಯಿಂದ ಹಾಲ್ನೊರೆಯುಕ್ಕಿಸುತ್ತಾ ಹರಿದ ನೀರು
ಈ ಬಾರಿ ಕಾವೇರಿ ಭೋರ್ಗರೆದು ಹರಿಯುತ್ತಿದ್ದು ರೌದ್ರತೆಯ ಕಾರಣದಿಂದ ಈಗಾಗಲೇ ಕಾವೇರಿ ನದಿ ತಟದ ವ್ಯಾಪ್ತಿಯಲ್ಲಿ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಇದೇ ರೀತಿ ಮಳೆ ಮುಂದುವರೆದರೆ ಕೊಡಗಿನಲ್ಲಿ ಅಪಾರ ನಷ್ಟವಾಗಲಿದೆ. ಆದ್ದರಿಂದ, ಕಾವೇರಿ ಶಾಂತವಾಗುವಂತೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ತೀರ್ಥಪೂಜೆಯನ್ನು ಮಾಡಲಾಯಿತು.
ಕಾವೇರಿಗೆ ವಿಶೇಷ ಪೂಜೆ
ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಆದ್ದರಿಂದ ಕಾವೇರಿಗೆ ಶಾಂತವಾಗುವಂತೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ತೀರ್ಥಪೂಜೆಯನ್ನು ಮಾಡಲಾಯಿತು. ಆ ಮೂಲಕ ಕಾವೇರಿ ಶಾಂತಳಾಗಿ ಜನ ಮತ್ತು ಜಾನುವಾರುಗಳನ್ನು ರಕ್ಷಿಸುವಂತೆ ಪ್ರಾರ್ಥಿಸಲಾಯಿತು.
ವಿಪತ್ತು ನಿರ್ವಹಣಾ ಪಡೆ ಸಿದ್ಧ
ಈಗಾಗಲೇ ಜಲಾವೃತವಾಗಿರುವ ಭಾಗಮಂಡಲದಲ್ಲಿ ವಿಪತ್ತು ನಿರ್ವಹಣಾ ಪಡೆಯು ಸನ್ನದ್ಧವಾಗಿದ್ದು ಬೋಟ್ ಗಳ ಮೂಲಕ ಸಂತ್ರಸ್ಥರ ರಕ್ಷಣೆಗೆ ಮುಂದಾಗಿದೆ. ಪ್ರವಾಹಪೀಡಿತ ಸ್ಥಳಗಳಾದ ನಾಪೋಕ್ಲು ಬಳಿಯ ಕೊಟ್ಟಮುಡಿ, ಬೊಳಿಬಾಣೆ, ಬಲಮುರಿ, ಬೇತ್ರಿ, ಕೊಂಡಂಗೇರಿ, ಕರಡಿಗೋಡು ಮೊದಲಾದ ಕಡೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಎಚ್ಚರವಾಗಿರುವಂತೆ ಸೂಚಿಸಲಾಗಿದೆ.
ಕಲ್ಯಾಣಿ ತುಂಬಿ ಹರಿಯುತ್ತಿದೆ
ದಕ್ಷಿಣ ಕೊಡಗಿನಲ್ಲಿ ಲಕ್ಷ್ಮಣತೀರ್ಥ ನದಿ ಕೂಡ ಉಕ್ಕಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಡಿಕೇರಿಯ ಓಂಕಾರೇಶ್ವರ ದೇಗುಲದ ಮುಂಭಾಗದ ಕಲ್ಯಾಣಿ ತುಂಬಿ ಹರಿಯುತ್ತಿದ್ದರೆ, ಅಬ್ಬಿ ಜಲಪಾತ ಭೋರ್ಗರೆದು ಧುಮುಕುತ್ತಿದೆ. ಕಳೆದೊಂದು ದಿನದ ಅವಧಿಯಲ್ಲಿ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆಯಾಗಿದೆ.
ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಸರಾಸರಿ 87.30 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 110.66 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 58.40 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 92.85 ಮಿ.ಮೀ. ಮಳೆಯಾಗಿದೆ.
ಕೊಡಗಿನಲ್ಲಿ ದಾಖಲೆಯ ಮಳೆ
ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುರಿದ ಮಳೆಯ ಪ್ರಮಾಣವನ್ನು ಗಮನಿಸಿದೆ 1855.98 ಮಿ.ಮೀ.ನಷ್ಟು ದಾಖಲೆಯ ಮಳೆಯಾಗಿದೆ. ಕಳೆದ ವರ್ಷ ಇದೇ ವೇಳೆಯಲ್ಲಿ ಕೇವಲ 821.09 ಮಿ.ಮೀ.ನಷ್ಟು ಮಳೆಯಾಗಿತ್ತು. ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿಯಲ್ಲಿ ಅತಿಹೆಚ್ಚು 185.20 ಮಿ.ಮೀ. ಹಾಗೂ ಕುಶಾಲನಗರದಲ್ಲಿ ಅತಿ ಕಡಿಮೆ 15.40ಮಿ.ಮೀ. ಮಳೆಯಾಗಿದೆ.
14973 ಕ್ಯುಸೆಕ್ ನೀರು
ಹಾರಂಗಿ ಜಲಾಶಯ ವ್ಯಾಪ್ತಿಯಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ. ಹಾರಂಗಿ ಜಲಾಶಯಕ್ಕೆ 14973 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಗರಿಷ್ಠ 2,859 ಅಡಿಯ ಜಲಾಶಯದಲ್ಲಿ ಬುಧವಾರ ನೀರಿನ ಮಟ್ಟ 2857.45 ಅಡಿಯಷ್ಟಿದ್ದು, 11938 ಕ್ಯೂಸೆಕ್ ನೀರನ್ನು ನದಿಗೆ ಹಾಗೂ 450 ಕ್ಯೂಸೆಕ್ ನೀರನ್ನು ನಾಲೆಗೆ ಬಿಡಲಾಗುತ್ತಿದೆ. ಕೊಡಗಿನಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣವನ್ನು ಗಮನಿಸಿದರೆ ಕೆಆರ್ಎಸ್ ಬಹುಬೇಗ ಭರ್ತಿಯಾಗುವ ಲಕ್ಷಣಗಳು ಗೋಚರಿಸುತ್ತಿದೆ.