ಕೊಡಗಿನಲ್ಲಿ ಮಳೆಯ ರೌದ್ರನರ್ತನ : ಕುಶಾಲನಗರ ಜಲಾವೃತ
ಮಡಿಕೇರಿ, ಆಗಸ್ಟ್ 17 : ಕೊಡಗಿನಲ್ಲಿ ಪ್ರವಾಹ ತಗ್ಗುವ ಯಾವ ಮುನ್ಸೂಚನೆ ಕಂಡು ಬರುತ್ತಿಲ್ಲ. ಮಡಿಕೇರಿಯಲ್ಲಿ ಸ್ವಲ್ಪಮಟ್ಟಿಗೆ ಮಳೆ ಕಡಿಮೆಯಾದಂತೆ ಕಂಡು ಬಂದರೂ ಪ್ರವಾಹ ಮಾತ್ರ ತಗ್ಗಿಲ್ಲ.
ಕೊಡಗು ಪ್ರವಾಹ ಸಂತ್ರಸ್ತರಿಗೆ ಸಹಾಯವಾಣಿ ಆರಂಭ
ಕುಶಾಲನಗರದಲ್ಲಿ ಕಾವೇರಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಮೈಸೂರು ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ನೀರು ಹರಿಯಲು ಕೆಲವೇ ಅಡಿ ಬಾಕಿಯಿದೆ. ಧಾರಾಕಾರ ಮಳೆಯಿಂದಾಗಿ ಹಾರಂಗಿ ಜಲಾಶಯದ ನೀರಿನ ಒಳಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಜಲಾಶಯದ ಭದ್ರತಾ ದೃಷ್ಟಿಯಿಂದ 85 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.
ಕೊಡಗಿಗೆ ನೆರವಾಗಿ ಎಂದು ದರ್ಶನ್, ಕಿಚ್ಚ ಸುದೀಪ ಮನವಿ
ಭಾರಿ ಮಳೆಯ ಕಾರಣ ಯಾವಾಗ ಏನಾಗುತ್ತದೆಯೋ? ಎಂಬ ಭಯ ಜನರನ್ನು ಕಾಡುತ್ತಿದೆ. ಮತ್ತೊಂದೆಡೆ ವಸತಿ ಪ್ರದೇಶಗಳು ಜಲಾವೃತಗೊಂಡ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದ್ದು ಕೆಲವರನ್ನು ರಕ್ಷಿಸಿ ಗಂಜಿ ಕೇಂದ್ರಕ್ಕೆ ಕಳುಹಿಸಲಾಗಿದೆ.
ಕಾವೇರಿ ನದಿ ಈಗಾಗಲೇ ಅಪಾಯದ ಮಟ್ಟ ಮೀರಿ ಹರಿದ ಪರಿಣಾಮ ಹೆಚ್ಚುವರಿ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದ್ದು, ಪಟ್ಟಣ ಭಾಗಶಃ ಮುಳುಗಡೆಯಾಗಿದೆ. ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ 296 ಮನೆಗಳು, ಎರಡು ಅಂಗನವಾಡಿಗಳು ನೀರಿನಲ್ಲಿ ಮುಳುಗಿವೆ.
ಅಪಾಯಮಟ್ಟದಲ್ಲಿ ಕಾವೇರಿ ನದಿ
ಕಾವೇರಿ ನದಿ ಈಗಾಗಲೇ ಅಪಾಯದ ಮಟ್ಟ ಮೀರಿ ಹರಿದ ಪರಿಣಾಮ ಹೆಚ್ಚುವರಿ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದ್ದು, ಪಟ್ಟಣ ಭಾಗಶಃ ಮುಳುಗಡೆಯಾಗಿದೆ. ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ 296 ಮನೆಗಳು, ಎರಡು ಅಂಗನವಾಡಿಗಳು ನೀರಿನಲ್ಲಿ ಮುಳುಗಿದ್ದು, 6 ಕ್ಕೂ ಹೆಚ್ಚಿನ ಮನೆಗಳು ನೀರಿನಲ್ಲಿ ಕುಸಿದು ಬಿದ್ದಿವೆ. ಹಲವು ಕಡೆಗಳಲ್ಲಿ ಮನೆಗಳ ಕಾಂಪೌಂಡ್ ನೆಲಸಮಗೊಂಡಿವೆ.
ಬಡಾವಣೆಗಳು ಜಲಾವೃತ
ಕೂಡಿಗೆ, ಗುಡ್ಡೆಹೊಸೂರು, ಕುಡುಮಂಗಳೂರು ಗ್ರಾ.ಪಂ.ವ್ಯಾಪ್ತಿಯ ನದಿದಡದಲ್ಲಿರುವ ಮನೆಗಳು, ಕೈಗಾರಿಕಾ ಪ್ರದೇಶಗಳಿಗೆ ನೀರು ನುಗ್ಗಿದ್ದು ಶ್ರೀಸಾಯಿಬಾಬ ಲೇಔಟ್, ಕುವೆಂಪು ಬಡಾವಣೆ, ರಸಲ್ ಲೇಔಟ್,ಸೀಗಾರಮ್ಮ ಬಡಾವಣೆ, ಇಂದಿರಾ ಬಡಾವಣೆ, ದಂಡಿನಪೇಟೆ, ವಿವೇಕಾನಂದ ಬಡಾವಣೆ, ಯೋಗಾನಂದ ಬಡಾವಣೆ, ಆದಿ ಶಂಕರಚಾರ್ಯ ಬಡಾವಣೆಗಳು ನೀರಿನಲ್ಲಿ ಮುಳುಗಡೆಯಾಗಿವೆ.
ಇನ್ನು ಗಂಧದಕೋಟೆ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ಹಾಗೂ ಅರಣ್ಯ ತರಬೇತಿ ಕೇಂದ್ರಗಳಿಗೂ ಸೇರಿದಂತೆ ಹತ್ತಾರೂ ಮನೆಗಳಿಗೆ ನೀರು ನುಗ್ಗಿದ್ದು ಸಂಪೂರ್ಣ ಜಲಾವೃತ್ತಗೊಂಡಿವೆ. ಜನವಸತಿ ಪ್ರದೇಶಗಳು ಸೇರಿದಂತೆ ಹಳ್ಳಕೊಳ್ಳಗಳು ಹಾಗೂ ಹೊಲಗದ್ದೆಗಳು ಸಂಪೂರ್ಣ ಜಲಾವೃತ್ತಗೊಂಡಿವೆ. ನೀರಿನಲ್ಲಿ ಮುಳುಗಿರುವ ಮನೆಗಳ ಜನರು ತಮ್ಮ ಸಂಬಂಧಿಕರ ಮನೆಗಳಿಗೆ, ಸ್ನೇಹಿತರ ಮನೆಗಳಿಗೆ ತೆರಳುತ್ತಿರುವ ದೃಶ್ಯಗಳು ಕಂಡು ಬರುತ್ತಿದೆ.
ಕುಶಾಲನಗರದೊಂದಿಗೆ ಸಂಪರ್ಕ ಕಡಿತ
ಕುಶಾಲನಗರ ವ್ಯಾಪ್ತಿಯ ಗೊಂದಿಬಸವನಹಳ್ಳಿ ರೊಂಡೆಕೆರೆ ಮತ್ತು ತಾವರೆಕೆರೆಗಳು ಕೋಡಿ ಹರಿದ ಕಾರಣದಿಂದ ಕುಶಾಲನಗರ ಮಡಿಕೇರಿ ಮಾರ್ಗ ಕೂಡ ಬಂದ್ ಆಗಿದೆ. ಹಾರಂಗಿ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಸಿದ ಪರಿಣಾಮ ಮಡಿಕೇರಿ ಹಾಸನ ರಾಜ್ಯ ಹೆದ್ದಾರಿಯ ರಸ್ತೆಗಳು ಜಲಾವೃತ್ತಗೊಂಡು ಸಂಪರ್ಕ ಇಲ್ಲದಂತಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಾಹಣಾ ಪಡೆ ಹಾಗೂ ನಾಗರಿಕ ರಕ್ಷಣಾ ಪಡೆ, ಅಗ್ನಿ ಶಾಮಕ ದಳ ಸಿಬ್ಬಂದಿಗಳು ಹಾಗೂ ದುಬಾರೆ ರಾಫ್ಟಿಂಗ್ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಹೆಲಿಕಾಪ್ಟರ್ನಲ್ಲಿ ರಕ್ಷಣಾ ಕಾರ್ಯ
ಕಾಲೂರು ವ್ಯಾಪ್ತಿಯಲ್ಲಿ ಬೆಟ್ಟ ಕುಸಿಯುತ್ತಿದ್ದ ಕಾರಣ ಸುರಕ್ಷಿತ ಪ್ರದೇಶಗಳತ್ತ ತೆರಳಿ ಪಟ್ಟಣದ ಸಂಪರ್ಕದಿಂದ ದೂರವಾಗಿ ಸಿಲುಕಿಕೊಂಡಿದ್ದ ಕೆಲವು ಕುಟುಂಬಗಳ ಸದಸ್ಯರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣಾಪಡೆಗಳು ರಕ್ಷಿಸಿದ್ದು ಗಂಜಿ ಕೇಂದ್ರಕ್ಕೆ ಬಿಡಲಾಗುತ್ತಿದೆ.
ಇಲ್ಲಿ ಮನೆಗಳು ವಿರಳವಾಗಿದ್ದು, ಒಂದು ಮನೆಯಿಂದ ಮತ್ತೊಂದು ಮನೆಗಳಿಗೆ ತುಂಬಾನೇ ಅಂತರವಿರುವುದರಿಂದಾಗಿ ಹುಡುಕಾಟ ನಡೆಸುತ್ತಾ ಜನರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ
ಸಹಾಯಹಸ್ತ ಚಾಚಿರುವ ಜನ
ಪ್ರವಾಹದಲ್ಲಿ ಸಿಲುಕಿರುವ ಸಂತ್ರಸ್ತರಿಗೆ ಸಹಾಯ ಹಸ್ತವನ್ನು ಹಲವರು ಚಾಚಿದ್ದಾರೆ. ಕರ್ನಾಟಕ ಕಾವಲು ಪಡೆ, ಹಿಂದೂ ಜಾಗರಣ ವೇದಿಕೆ, ಎಸ್.ಡಿ.ಪಿ ಸಂಘಟನೆಗಳು ಸೇರಿದಂತೆ ವಿವಿಧ ಸಮಾಜಗಳು ನೀರಿನಲ್ಲಿ ಮುಳುಗಿರುವ ಮನೆಗಳ ಜನರ ನೆರವಿಗೆ ಧಾವಿಸಿದ್ದು, ಜನರನ್ನು ತಮ್ಮ ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಿ ಆಶ್ರಯ ನೀಡಿದ್ದಾರೆ. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನೆರೆಯಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಿದ್ದಾರೆ.
ಭಾರೀ ನೀರು ಹೊರಕ್ಕೆ
ಧಾರಾಕಾರ ಮಳೆಯಿಂದಾಗಿ ಹಾರಂಗಿ ಜಲಾಶಯದ ನೀರಿನ ಒಳಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಜಲಾಶಯದ ಭದ್ರತಾ ದೃಷ್ಟಿಯಿಂದ 85 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿರುವುದರಿಂದ ಕೂಡಿಗೆ ಮತ್ತು ಹೆಬ್ಬಾಲೆ ಬಳಿ ಮಡಿಕೇರಿ ಹಾಸನ ರಾಜ್ಯ ಹೆದ್ದಾರಿ ರಸ್ತೆ ಸಂಪೂರ್ಣ ನೀರಿನಿಂದ ಮುಳುಗಡೆಯಾಗಿದ್ದು ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಹಾರಂಗಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದು, ವಾಹನ ಸಂಚಾರ ನಿಷೇಧಿಸಿ, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.
ನಿಸರ್ಗಧಾಮ ಬಂದ್
ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ನದಿಯ ದ್ವೀಪದಲ್ಲಿರುವ ಪ್ರವಾಸಿ ತಾಣ ಕಾವೇರಿ ನಿಸರ್ಗಧಾಮವನ್ನು ಬಂದ್ ಮಾಡಲಾಗಿದೆ. ಹಳೆಯ ತೂಗು ಸೇತುವೆ ಮುಳುಗಿದ್ದು, ಹೊಸ ಸೇತುವೆಯ ಮಟ್ಟದಲ್ಲಿ ನೀರು ಹರಿಯುತ್ತಿದ್ದು, ನಿಸರ್ಗಧಾಮದ ಒಳಕ್ಕೂ ನದಿ ನೀರು ನುಗ್ಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ.