ಕೊಡಗಿನಲ್ಲಿ ಮಳೆ ಹಾನಿ, ಶೀಘ್ರ ಪರಿಹಾರ ವಿತರಣೆಗೆ ದೇಶಪಾಂಡೆ ಸೂಚನೆ
ಮಡಿಕೇರಿ, ಜೂನ್ 18: ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಧಾರಾಕಾರ ಮಳೆಗೆ ಅತಿವೃಷ್ಟಿ ಉಂಟಾಗಿ ಜಿಲ್ಲೆಯಲ್ಲಿ ಸಾಕಷ್ಟು ಬೆಳೆ, ವಾಸದ ಮನೆಗಳಿಗೆ ಹಾನಿಯಾಗಿದೆ. ಈ ಸಂಬಂಧ 72 ಗಂಟೆಯೊಳಗೆ ಪರಿಹಾರ ವಿತರಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಕಂದಾಯ ಸಚಿವರಾದ ಆರ್.ವಿ.ದೇಶಪಾಂಡೆ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಳೆಯಿಂದ ಉಂಟಾದ ಹಾನಿ ಸಂಬಂಧಿಸಿದಂತೆ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ
ಜಿಲ್ಲೆಯಲ್ಲಿ ಕಳೆದ 25 ವರ್ಷಗಳಲ್ಲಿಯೇ ಅಧಿಕ ಮಳೆ, ಕಳೆದ ಒಂದು ವಾರದಲ್ಲಿ ಸುರಿದಿದೆ. ಆದ್ದರಿಂದ ಮಳೆ ಹಾನಿ ಸಂಬಂಧ ತುರ್ತು ಪರಿಹಾರ ವಿತರಣೆ ಮಾಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಕಂದಾಯ ಸಚಿವರು ನಿರ್ದೇಶನ ನೀಡಿದರು.
ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯಲ್ಲಿ ಬೆಳೆ, ವಾಸದ ಮನೆ ಹಾನಿ, ರಸ್ತೆ, ಸೇತುವೆಗಳ ಕುಸಿತ, ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರಂಗಳು ಬಿದ್ದು ಹೋಗಿರುವುದು, ಸರ್ಕಾರಿ ಕಟ್ಟಡಗಳು, ಅಂಗನವಾಡಿಗಳು, ಕೆರೆ-ಕಟ್ಟೆಗಳು ಸೇರಿ ಮಳೆಯಿಂದ ಸಾಕಷ್ಟು ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ. ಈ ಸಂಬಂಧ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಮಳೆ ಹಾನಿ ಸಂಬಂಧ ಈಗಾಗಲೇ ನೀಡಿರುವ ಅಂದಾಜು ಪಟ್ಟಿಯನ್ನು ಮರು ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಕಂದಾಯ ಸಚಿವರು ಸೂಚನೆ ನೀಡಿದರು.
ಕರ್ನಾಟಕ ಯಾವ ಜಲಾಶಯದಲ್ಲಿ ಎಷ್ಟು ನೀರಿದೆ?
ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಮಾತ್ರ ವಾಸ್ತದ ಅರಿವು ಆಗಲಿದೆ. ಅದನ್ನು ಬಿಟ್ಟು ಕುಳಿತಲ್ಲಿಯೇ ಮಾಹಿತಿ ಸಂಗ್ರಹಿಸಿದರೆ ಯಾವುದೇ ಉಪಯೋಗವಿಲ್ಲ. ಸಂಬಂಧಪಟ್ಟ ಎಲ್ಲಾ ಹಂತದ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಬೇಕು ಎಂದು ಕಂದಾಯ ಸಚಿವರು ತಾಕೀತು ಮಾಡಿದರು.
ಪ್ರಕೃತಿ ವಿಕೋಪದಡಿ ಈಗಾಗಲೇ ಸರ್ಕಾರ ಜಿಲ್ಲಾಡಳಿತಕ್ಕೆ 10 ಕೋಟಿ ರೂ. ಬಿಡುಗಡೆ ಮಾಡಿದ್ದು, ಹಣದ ಕೊರತೆ ಇಲ್ಲ. ಆದರೆ ಸಾರ್ವಜನಿಕರಿಗೆ ಸ್ಪಂದಿಸಿ ಕೆಲಸ ಮಾಡುವುದು ಅತೀ ಮುಖ್ಯ ಎಂದು ಆರ್.ವಿ. ದೇಶಪಾಂಡೆ ಅವರು ನುಡಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು, "ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಧಾರಾಕಾರ ಮಳೆಯಿಂದ ಉಂಟಾದ ಹಾನಿ ಸಂಬಂಧ ವೀಕ್ಷಣೆ ಮಾಡಿ ತಕ್ಷಣ ಪರಿಹಾರ ವಿತರಿಸಬೇಕು," ಎಂದು ತಿಳಿಸಿದರು.
ದಕ್ಷಿಣ ಕೊಡಗಿನ ವಿ.ಬಾಡಗ, ಬಾಳೆಲೆ, ಹುದಿಕೇರಿ, ಶ್ರೀಮಂಗಲ ಸೇರಿದಂತೆ ನಾನಾ ಕಡೆಗಳಲ್ಲಿ ಕಾಫಿ ಬೆಳೆ ನಷ್ಟ ಉಂಟಾಗಿದ್ದು, ಸ್ಥಳ ಪರಿಶೀಲಿಸಿ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಹೇಳಿದರು. ಮಳೆ ಹಾನಿಗೊಳಗಾದ ಜನರ ಗೋಳನ್ನು ನೇರವಾಗಿ ನೋಡಬೇಕು. ನಾಗರಿಕರು ಎಷ್ಟು ಕಷ್ಟದಲ್ಲಿ ಬದುಕು ಸವೆಸುತ್ತಿದ್ದಾರೆ ಎಂಬುದು ಅರಿವಾಗಲಿದೆ ಎಂದರು.
ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಅವರು, ಜಿಲ್ಲೆಯ ಶಾಂತಳ್ಳಿ, ಬೆಟ್ಟದಳ್ಳಿ, ಮುಟ್ಲು, ಹಮ್ಮಿಯಾಲ, ಕಾಲೂರು, ಕುಮಾರಹಳ್ಳಿ, ಸೇರಿದಂತೆ ಹಲವು ಗ್ರಾಮಗಳಲ್ಲಿ ಇಂದಿಗೂ ವಿದ್ಯುತ್ ಸಂಪರ್ಕವಿಲ್ಲದೇ ಪ್ರತಿನಿತ್ಯ ಜನರು ಪರಿತಪಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೆಸ್ಕ್ ಎಂಜಿನಿಯರ್ ಅವರಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ 1,384 ವಿದ್ಯುತ್ ಕಂಬಗಳು ಹಳೆಯದಾಗಿದ್ದವು. ಇವುಗಳಲ್ಲಿ 1,110 ಕಂಬಗಳನ್ನು ಹೊಸದಾಗಿ ಅಳವಡಿಸಲಾಗಿದೆ. ಹಾಗೆಯೇ 93 ಟ್ರಾನ್ಸ್ ಫಾರಂಗಳು ಸುಟ್ಟು ಹೋಗಿದ್ದವು. ಇವುಗಳಲ್ಲಿ 80 ಟ್ರಾನ್ಸ್ಫಾರಂಗಳನ್ನು ಸರಿಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಅತಿವೃಷ್ಟಿಯಿಂದಾಗಿ ಪೆರುಂಬಾಡಿ-ಮಾಕುಟ್ಟ ರಸ್ತೆಯಲ್ಲಿ ರಸ್ತೆ ಕುಸಿತ ಸರಿಪಡಿಸಬೇಕು, ರಸ್ತೆ ಬದಿ ಮರಗಳನ್ನು ತೆರವುಗೊಳಿಸಬೇಕು. ಹಾಗೆಯೇ ಈಗಾಗಲೇ ಬೀಳುವ ಹಂತದಲ್ಲಿರುವ ಮರಗಳನ್ನು 48 ಗಂಟೆಯೊಳಗೆ ತೆರವುಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಂದಾಯ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.