ಕೊಡಗಿನಲ್ಲಿ ಮಳೆ ಆರ್ಭಟ, ಈ ಬಾರಿಯಾದರೂ ಭರ್ತಿಯಾಗುತ್ತಾ ಕೆಆರ್ ಎಸ್?
Recommended Video
ಮಡಿಕೇರಿ, ಜೂನ್ 12: ಕೊಡಗಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಕಾವೇರಿ ನದಿ ಸೇರಿದಂತೆ ಲಕ್ಷ್ಮಣತೀರ್ಥ, ಇನ್ನಿತರ ಸಣ್ಣಪುಟ್ಟ ನದಿಗಳು ಉಕ್ಕಿ ಹರಿಯುತ್ತಿವೆ. ಕಾವೇರಿ ನದಿ ಉಗಮ ಸ್ಥಾನ ತಲಕಾವೇರಿ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.
ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮ ಜಿಲ್ಲೆಯ ಹಲವೆಡೆ ವಿದ್ಯುತ್ ಇಲ್ಲದೆ ಕಗ್ಗತ್ತಲಲ್ಲಿ ಜನ ದಿನ ಕಳೆಯುತ್ತಿದ್ದಾರೆ. ಜೂನ್ ತಿಂಗಳ ಮೊದಲ ವಾರದಲ್ಲೇ ಮಳೆ ಚೇತರಿಸಿಕೊಂಡು ಇದೀಗ ಭೋರ್ಗರೆದು ಸುರಿಯತೊಡಗಿದೆ. ಇದರಿಂದಾಗಿ ನದಿ ತೊರೆಗಳು ಉಕ್ಕಿ ಹರಿಯುತ್ತಿರುವುದಲ್ಲದೆ, ಮಳೆ ಗಾಳಿಗೆ ಕಾಫಿ ತೋಟಗಳು, ರಸ್ತೆ ಬದಿಗಳಲ್ಲಿದ್ದ ಮರಗಳು ನೆಲಕ್ಕುರುಳುತ್ತಿವೆ. ಇದರಿಂದ ಸಾವು ನೋವುಗಳಲ್ಲದೆ, ಮನೆಗಳು ಕುಸಿದು ಬಿದ್ದು ಸಾಕಷ್ಟು ನಷ್ಟಕಷ್ಟಗಳು ಸಂಭವಿಸಿವೆ.
ಜಿಲ್ಲೆಯಲ್ಲಿ ಕಾವೇರಿ ನದಿ ಹರಿದು ಹೋಗುವ ಪ್ರದೇಶಗಳಾದ ನಾಪೋಕ್ಲು, ಮೂರ್ನಾಡು, ಸಿದ್ದಾಪುರ, ನೆಲ್ಯಹುದಿಕೇರಿ ಕುಶಾಲನಗರ ವ್ಯಾಪ್ತಿಯಲ್ಲಿ ಮಳೆಯಾಗಿ ಕಾವೇರಿ ನದಿ ತುಂಬಿ ಹರಿದರೆ ನೆರೆ ಪರಿಸ್ಥಿತಿ ಉಂಟಾಗಲಿದ್ದು ಈ ಸಂಬಂಧ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ.
ಪ್ರವಾಹ ಏರ್ಪಡುವ ಪ್ರದೇಶಗಳಲ್ಲಿರುವ ಜನ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆಯೂ ಸೂಚಿಸಲಾಗಿದೆ. ಮೂರ್ನಾಡು ಬಳಿಯ ಬಲಮುರಿಯ ಹಳೆಯ ಸೇತುವೆ ಮುಳುಗಡೆಯಾಗಿದೆ. ಸಿದ್ದಾಪುರದ ಕರಡಿಗೋಡು, ನೆಲ್ಯಹುದಿಕೇರಿಯ ಎಡದಂಡೆ ಮತ್ತು ಬಲದಂಡೆಯಲ್ಲಿರುವ ನಿವಾಸಿಗಳು ಆತಂಕದಲ್ಲಿದ್ದಾರೆ.
ಭಾಗಮಂಡಲದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಅಗ್ನಿಶಾಮಕ ದಳವನ್ನು ನಿಯೋಜಿಸಲಾಗಿದೆ. ಅಲ್ಲದೆ ನದಿ ದಾಟಲು ದೋಣಿಯ ವ್ಯವಸ್ಥೆಯನ್ನು ಮಾಡಲಾಗಿದೆ.
ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 104.56 ಮಿ.ಮೀ ಮಳೆಯಾಗಿದೆ. ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣವು ಹೆಚ್ಚಾಗಿದ್ದು, 4780 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಸದ್ಯ 2806.80 ಅಡಿ ಭರ್ತಿಯಾಗಿದೆ.
ಕೊಡಗಿನಲ್ಲಿ ಮಳೆಯಾಗುತ್ತಿದ್ದಂತೆಯೇ ಅತ್ತ ಕೆಆರ್ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಸೋಮವಾರ 80.70 ಅಡಿ ನೀರು ಭರ್ತಿಯಾಗಿದೆ. 11495 ಕ್ಯೂಸೆಕ್ ಒಳಹರಿವು ಇದ್ದು, 342 ಕ್ಯೂಸೆಕ್ ನೀರನ್ನು ವಿವಿಧ ಉದ್ದೇಶಗಳಿಗೆ ಹೊರಗೆ ಬಿಡಲಾಗುತ್ತಿದೆ.
ಕಳೆದ ತಿಂಗಳು ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ತೀವ್ರ ಕುಸಿದಿತ್ತು. ಇದರಿಂದ ಈ ಬಾರಿಯೂ ಬರಗಾಲ ಕಾಡಬಹುದೆಂಬ ಆತಂಕ ರೈತರನ್ನು ಕಾಡಿತ್ತು. ಆದರೆ ಇದೀಗ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಬಹುಬೇಗ ಜಲಾಶಯ ತುಂಬುವ ನಿರೀಕ್ಷೆಯಿದ್ದು, ಇದು ರೈತರಲ್ಲಿ ಹರ್ಷ ತಂದಿದೆ.